ಅಂತೆ-ಕಂತೆಗಳ ಸಂತೆಯಲಿ ನಿಂತಿರುವ ಪಾಪಿ ನಾನು…!! ಗತಿಸಿಹೋದ ಕಾಲದ ಬಗ್ಗೆ ಚಿಂತಿಸಿ ಫಲವೇನು…???
ಕಂತೆ-ಕಂತೆ ನೋಟುಗಳಿದ್ದಾಗ ಇರುವೆಯಂತೆ ಮುತ್ತಿದರು…!! ಕುಂತಿರುವೆ ಒಂಟಿಯಾಗಿ, ಜಂಟಿಯಾಗಲು ಹೆದರುತಿಹರು…!!!
ಅಂದೊಮ್ಮೆ ದಾಸನಾಗಿದ್ದೆ, ಬಳಿಯಿತ್ತು ಪಾನ್, ಸಿಗರೇಟು…!! ಇಂದೀಗ ಯೋಚಿಸುತಿರುವೆ, ಗೆಳೆಯರೆಲ್ಲಿ ಹೋದರು ನನ್ನ ಬಿಟ್ಟು…!!!
ಹುಡುಗಿಯರ ಖಯಾಲಿ ಹುಟ್ಟಿಸಿದ್ದು, ಅವರೇ, ನನ್ನ ಪ್ರಾಣಸ್ನೇಹಿತರು…!! ಮೊನ್ನೆಯಿಂದ ಕಾಯುತಿರುವೆ, ಒಮ್ಮೆ ನೋಡಲಾದರೂ ಬಂದಾರು…!!!
ಕಣ್ಣೀರು ಬತ್ತಿಹೋಗಿದೆ ನನ್ನಮ್ಮನ, ಬಹುಶಃ ನನಗಾಗಿ ಅತ್ತು-ಅತ್ತು…!! ಗುಟುಕು ಜೀವವಿದೆ ನನ್ನಲಿ, ಬಹುಶಃ ಅದಕೆ ಕಾರಣವದೇ, ಅವಳ ಕೈತುತ್ತು…!!!
ಅಂದು ನನಗಾಗಿ ಅತ್ತಿದ್ದಳವಳು, ಕೆಟ್ಟ ಚಟಗಳ ಬಿಟ್ಟುಬಿಡು ಎಂದು…!! ಇಂದೂ ಬಳಿಕೂತು ನಿದ್ದೆಗೆಟ್ಟಿರುವಳು, ತೆರೆದ ಕಂಗಳಲಿ ಅಶ್ರುವಿನ ಬಿಂಧು…!!!
ಅಪ್ಪನೇಕೆ ಒಳಬರುತಿಲ್ಲ… ನನ್ನ ಮುಖನೋಡಲು ಅಸಹ್ಯವೇನು…?? ಬಿಕ್ಕಿ-ಬಿಕ್ಕಿ ಅಳುವಂತಿದೆಯಲ್ಲ… ಆಗಿರುವಂತಿದೆ ಅವನೂ ಹೈರಾಣು…!!!
ನನಗೇನೋ ದೊಡ್ಡರೋಗವಂತೆ, ಬಂಧುಬಳಗದವರ ಗುಸುಗುಸು…!! ಎದೆಯ ಬಳಿ ಎಳೆದಂತಾಗಿದೆ, ಬಳಿಕೂತು ಸವರಬಾರದೇ ತುಸು…!!!
ನನ್ನ ಗೆಳೆಯರನ್ನೊಮ್ಮೆ ಕರೆಯಿರಿ, ಕೂಗಿ ಹೇಳಬೇಕಿದೆ ಕಿವಿಮಾತೊಂದನ್ನು…!! ಕೆಟ್ಟ ಚಟಗಳ ದಾಸರಾಗದಿರಿ, ಯೌವ್ವನ ಕಳೆದುಹೋದರೆ ಮರಳಿಸಿಗದಿನ್ನು…!!!
✍🏻 ಹಕ್ಕಿ ಬಜಪೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.