ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ..
(www.vknews.in) : ಕೆಲ ಮಕ್ಕಳಿಗೆ 14 ವರ್ಷ ವಯಸ್ಸಾಗಿದ್ದರೂ ಒಂದು ರಸ್ತೆಯನ್ನು ದಾಟುವಷ್ಟು ಸಹ ಧೈರ್ಯ ಇರುವುದಿಲ್ಲ. ಬೇರೆಯವರಿಗೆ ಅವಲಂಬಿತರಾಗಿರುತ್ತಾರೆ. ಇದಕ್ಕೆ ಮೂಲ ಕಾರಣ ತಂದೆ ತಾಯಿಯೇ ಹೊರತು ಬೇರಾರು ಅಲ್ಲ. ಮಕ್ಕಳ ಬಗ್ಗೆ ಅತಿಯಾದ ಕಾಳಜಿ, ಏನಾದರು ಅನಾಹುತ ಸಂಭವಿಸಿಬಿಡುತ್ತದೋ ಎಂಬ ಕಳವಳ. ಮಕ್ಕಳಿಗೆ ಪ್ರೀಸುವುದು ತಪ್ಪೇನಲ್ಲ. ಆದರೆ ಆ ಪ್ರೀತಿ ಮಕ್ಕಳ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯಾಗಬಾರದು. ಪೋಷಕರು ಮಕ್ಕಳಿಗೆ ಯಾವ ರೀತಿಯ ವಾತಾವರಣ ಕಲ್ಪಿಸಿಕೊಡುತ್ತಾರೆಯೋ ಮಕ್ಕಳ ಬೆಳವಣಿಗೆ ಅಷ್ಟೇ ಪ್ರಮಾಣದಲ್ಲಿ ಸಾಗುವುದು. ಮಕ್ಕಳು ಅಂತರ್ಮುಖಿ ಅಥವಾ ಬಹುರ್ಮುಖಿಗಳಾಗಿ ಬೆಳೆಯಲು ಮನೆಯ ವಾತಾವರಣ, ಶಾಲೆಯ ವಾತಾವರಣ ಮತ್ತು ನೆರೆಹೊರೆಯವರ ಪ್ರಭಾವ ಬಹಳ ಸೂಕ್ಷ್ಮವಾಗಿ ಅವರ ಸುಪ್ತ ಮನಸ್ಸುಗಳ ಮೇಲೆ ಬೀರುತ್ತದೆ. ವಯಸ್ಸಿಗೆ ತಕ್ಕಂತೆ ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬೆಳೆಯಲು ಬಿಡಬೇಕು.
ಪಕ್ಕದ ಮನೆಯ ಹುಡುಗಿ ಈಜು ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡರೆ, ನನ್ನ ಮಕ್ಕಳು ಯಾವುದರಲ್ಲೂ ಗೆಲ್ಲುತ್ತಿಲ್ಲವಲ್ಲ ಎಂಬ ಆತಂಕ. ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟು ಚಿಕ್ಕಂದಿನಿಂದಲೇ ಧೈರ್ಯ ಹೇಳಿ, ಅವರಿಗೆ ಇಷ್ಟ ಇರುವ ಕೆಲಸ ಕಾರ್ಯಗಳಲ್ಲಿ , ಸ್ಪರ್ಧೆಗಳಲ್ಲಿ ಅಥವಾ ಅವರ ಅಭಿರುಚಿ ಇರುವ ಕೋರ್ಸುಗಳಲ್ಲಿ, ಅರಳಲು ಸಹಾಯ ಮಾಡಿದರೆ, ಪ್ರತಿಭೆ ಚಿಲುಮೆಯಂತೆ ಹೊರಹೊಮ್ಮುತ್ತದೆ. ಚಿಕ್ಕಂದಿನಿಂದಲೇ ನೀನು ಮನೆಯಿಂದ ಆಚೆ ಹೋಗಬಾರದು, ಅವರ ಇವರ ಜೊತೆ ಸೇರಬಾರದು, ಆಟವಾಡಬಾರದು, ಚೆನ್ನಾಗಿ ಓದಿ ಉದ್ಧಾರ ಆಗಬೇಕು, ಇದನ್ನು ಮಾಡಬಾರದು ಅದನ್ನು ಮಾಡಬಾರದು ಅಂತ ಹತ್ತಾರು ಕಡಿವಾಣಗಳನ್ನು ಹಾಕಿ ಪಂಜರದ ಗಿಳಿಯನ್ನಾಗಿ ಮಾಡಿಬಿಟ್ಟರೆ, ಮಕ್ಕಳ ಭವಿಷ್ಯದ ಗತಿ ಏನು ?, ಕೇವಲ ಪುಸ್ತಕಗಳ ಹುಳುಗಳಾಗಿಬಿಟ್ಟರೆ ಪ್ರಾಪಂಚಿಕ ಜ್ಞಾನ ಬೆಳೆದು ಬಿಡುತ್ತದೆಯೇ ? ದಾರಿಯಲ್ಲಿ ಒಂದು ಸಣ್ಣ ವಿಳಾಸ ಕೇಳಕ್ಕೂ ಅಂಜಿಕೊಳ್ಳುತ್ತಾರೆ. ಆತ್ಮಸ್ಥೈರ್ಯದ ಕೊರತೆ ಎದುರಾಗುತ್ತದೆ.
ಹುಟ್ಟಿನಿಂದಲೇ ಯಾರು ಲೀಡರುಗಳಾಗಿ ಹುಟ್ಟಲ್ಲ. ಅವರು ನಡೆದು ಬಂದ ಜೀವನದ ಹಾದಿಯಲ್ಲಿ ಅವರಿಗೆ ಧೈರ್ಯ ತುಂಬಿದ ಅನೇಕ ವ್ಯಕ್ತಿಗಳಿರುತ್ತಾರೆ. ಆ ವ್ಯಕ್ತಿಗಳು ಪೋಷಕರಾಗಿರಬಹುದು, ಶಿಕ್ಷಕರಾಗಿರಬಹುದು, ಸ್ನೇಹಿತರಾಗಿರಬಹುದು, ಹಿತೈಷಿಗಳಾಗಿರಬಹುದು ಅಥವಾ ಅವರ ನೆಚ್ಚಿನ ವ್ಯಕ್ತಿಗಳ ಜೀವನ ಚರಿತ್ರೆಗಳಾಗಿರಬಹುದು. ಮಕ್ಕಳಲ್ಲಿ ಪ್ರಗತಿ ಕಾಣಬೇಕಾದರೆ ನಾವು ನೀವು ಮಾಡಬೇಕಾದ ಮೊದಲ ಕೆಲಸ ಮಕ್ಕಳಲ್ಲಿ ಧೈರ್ಯ ತುಂಬುವುದು. ಒಂಟಿಯಾಗಿ ಸಣ್ಣ ಸಣ್ಣ ಜವಾಬ್ದಾರಿಗಳನ್ನು ನಿಭಾಯಿಸಲು ಪ್ರೋತ್ಸಾಹಿಸುವುದು. ಅವರ ಆತ್ಮಸ್ಥೈರ್ಯ ಕುಗ್ಗಿದಾಗ ಸಕಾರಾತ್ಮಕ ವಿಷಯಗಳ ಬಗ್ಗೆ ಚರ್ಚಿಸುವುದು. ಉತ್ತಮ ಉದಾಹರಣೆಗಳನ್ನು ಕೊಡುವುದು ನೈಜ ಜೀವನದ ಪರಿಚಯ ಮಾಡಿಸುವುದು. ಇತ್ಯಾದಿ.
ಮಕ್ಕಳಲ್ಲಿ ಧೈರ್ಯವನ್ನು ಮತ್ತು ಚುರುಕುತನವನ್ನು ಹೆಚ್ಚಿಸುವುದು ಹೇಗೆ ? ವಯಸ್ಸಿಗೆ ಅನುಗುಣವಾಗಿ ಅವರಿಗೆ ಜವಾಬ್ದಾರಿಯನ್ನು ಕೊಡಿ. ಒಂಟಿಯಾಗಿ ಹೊರಗೆ ಶಾಪಿಂಗ್ ಮಾಡಲು ಕಳುಹಿಸಿ. ಅವನು ಅಥವಾ ಅವಳು ತರಕಾರಿ ಅಥವಾ ಇನ್ನೇನೋ ಖರೀದಿಸಲು ಹೋದರೆ ಅವರಿಗೆ ಬೇರೆಯವರ ಜೊತೆ ಮಾತನಾಡುವ ಅವಕಾಶ ಸಿಗುತ್ತದೆ. ಸಣ್ಣಪುಟ್ಟ ಹಣಕಾಸಿನ ವ್ಯವಹಾರ ಗೊತ್ತಾಗುತ್ತದೆ. ಬೆಲೆಗಳು ಗೊತ್ತಾಗುತ್ತವೆ. ಯಾವ ಬಟ್ಟೆಗಳು, ಯಾವ ಸಾಮಗ್ರಿಗಳು, ಯಾವ ಪದಾರ್ಥಗಳು ಎಲ್ಲಿ ಸಿಗುತ್ತವೆ, ಹೇಗೆ ಮಾರಾಟವಾಗುತ್ತವೆ, ವ್ಯವಹಾರ ಹೇಗೆ ನಡೆಯುತ್ತದೆ – ಇಂತಹ ಅನೇಕ ವಿಷಯಗಳು ಮಕ್ಕಳಿಗೆ ಅರಿವಾಗುತ್ತಾ ಹೋದಂತೆ ಅವರಲ್ಲಿ ಧೈರ್ಯ ಹೆಚ್ಚಾಗುತ್ತಾ ಹೋಗುತ್ತದೆ. ವಿಷಯ ಸಣ್ಣದಾಗಿ ಕಾಣಬಹುದು ಆದರೆ ಅದರ ಪ್ರಭಾವ ದೀರ್ಘಕಾಲದಲ್ಲಿ ಗೊತ್ತಾಗುತ್ತದೆ. ಯಾರಿಗೆ ಗೊತ್ತು ನಿಮ್ಮ ಮಕ್ಕಳು ದೊಡ್ಡ ವ್ಯಾಪಾರಿಗಳಾಗಿ ಬೆಳೆಯಬಹುದು.
ಹೋಟೆಲ್ಲುಗಳಲ್ಲಿ, ಬ್ಯಾಂಕುಗಳಲ್ಲಿ, ಅಂಚೆ ಕಚೇರಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಇನ್ನಿತರೆ ಜಾಗಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಂದಲೇ ಕೆಲಸಗಳನ್ನು ಮಾಡಿಸಿ. ಅವರ ಧೈರ್ಯ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಜ್ಞಾನ ಬೆಳೆಯುತ್ತದೆ. ಸಂಕೋಚ ಮನೋಭಾವ ಕ್ರಮೇಣವಾಗಿ ಮಾಯವಾಗುತ್ತದೆ. ಬ್ಯಾಂಕುಗಳಲ್ಲಿ ಎಷ್ಟೋ ಸಲ ನೀವು ಗಮನಿಸಿರಬಹುದು, ಅವಿದ್ಯಾವಂತರು ಬಂದು ಚಟಚಟನೆ ಕಾರ್ಯವನ್ನು ಮುಗಿಸಿಕೊಂಡು ಹೊರಟು ಹೋಗುತ್ತಾರೆ. ಎಷ್ಟು ಚೆನ್ನಾಗಿ ಹಣ ಎಣಿಸುತ್ತಾರೆ ಎಂದರೆ ನೋಡಕ್ಕೆ ಆನಂದವಾಗುತ್ತದೆ. ಕೆಲವೊಮ್ಮೆ ವಿದ್ಯಾವಂತರು ಕ್ಯಾಶ್ ಸ್ಲೀಪ್ಪಿನಲ್ಲಿ ಎಲ್ಲಿ ಏನು ಬರೆಯಬೇಕು ಎಂದು ಒದ್ದಾಡುತ್ತಿರುತ್ತಾರೆ. ಅವಿದ್ಯಾವಂತರು ಚುರುಕಾಗಿರಲು ಅವರ ಪ್ರಾಪಂಚಿಕ ಜ್ಞಾನ ಮತ್ತು ಅನುಭವವೇ ಕಾರಣ. ಮಕ್ಕಳಿಗೆ ಹಣ ಎನಿಸುವುದನ್ನು ಕಲಿಸಿಕೊಡಿ. ಅವರಿಗೆ ಎಷ್ಟು ಸಂತೋಷವಾಗುತ್ತದೆ ಎಂಬುದನ್ನು ಗಮನಿಸಿ.
ಒಂಟಿಯಾಗಿ ಪ್ರಯಾಣ ಮಾಡಲು ಹೇಳಿ. ಅದು ಪಕ್ಕದ ಬೀದಿಯಾರಿಗಬಹುದು, ಪಕ್ಕದ ಬಡಾವಣೆಯಾಗಿರಬಹುದು, ಪಕ್ಕದ ರಾಜ್ಯ ಅಥವಾ ಪರದೇಶವಾಗಿರಬಹುದು. ಮನೆಯಿಂದ ಹೊರಟ ಮೇಲೆ ಅವರ ಪ್ರತಿ ಹೆಜ್ಜೆಗೂ ಒಂದೊಂದು ಹೊಸ ಅನುಭವ ಆಗುತ್ತಾ ಹೋಗುತ್ತದೆ. ಹೊಸ ಜನ,ಹೊಸ ಭಾಷೆ, ವಿಭಿನ್ನ ಊಟ, ವಿಭಿನ್ನ ಸಂಸ್ಕೃತಿ, ವಿಭಿನ್ನ ಜೀವನ ಶೈಲಿ ಇತ್ಯಾದಿ. ಮನೆಯಿಂದ ಹೊರಟ ಮಕ್ಕಳು ಖಾಲಿ ತಲೆಯಲ್ಲಿ ಬರಲು ಸಾಧ್ಯವೇ ಇಲ್ಲ. ಅಪಾರ ಜ್ಞಾನವನ್ನು,ಅನುಭವಗಳನ್ನು ಮತ್ತು ಆತ್ಮಸ್ಥೈರ್ಯವನ್ನು ತಮ್ಮ ಜೊತೆಯಲ್ಲಿ ತರುತ್ತಾರೆ. ಎಷ್ಟೋ ಜನರನ್ನು ನೀವು ಕೇಳಿರಬಹುದು, ನಾವು ಒಮ್ಮೆಯೂ ರೈಲಿನಲ್ಲಿ ಪ್ರಯಾಣ ಮಾಡಿಲ್ಲ, ವಿಮಾನ ನಿಲ್ದಾಣವಂತೂ ನೋಡಿಯೇ ಇಲ್ಲ ಎನ್ನುತ್ತಾರೆ. ಅದು ಈ ಯುಗದಲ್ಲಿ. ಇದಕ್ಕೆ ಯಾರು ಹೊಣೆ. ಕೆಲವೊಮ್ಮೆ ನಾವು, ಕೆಲವೊಮ್ಮೆ ನಮ್ಮ ಹಿರಿಯರು.
ಮಕ್ಕಳನ್ನು “ವರ್ಲ್ಡ್ ಕ್ಲಾಸ್ ಸಿಟಿಜನ್”ಗಳನ್ನಾಗಿ ಮಾಡಲು ಪ್ರಯತ್ನಿಸಿ. ಅಂದರೆ ಅವರು ಎಲ್ಲಿ ಹೋದರೂ, ಯಾವ ದೇಶಕ್ಕೇ ಹೋದರು ಬದುಕಲು ಬರಬೇಕು. ಕೊನೆಪಕ್ಷ ಯಾವ ರಾಜ್ಯಕ್ಕೂ ಹೋದರು ಜೀವನವನ್ನು ಕಟ್ಟಿಕೊಳ್ಳಬೇಕು. ಅದಕ್ಕೆ ವಿದ್ಯೆ ಒಂದೇ ಅಲ್ಲ, ಪ್ರಪಂಚ ಜ್ಞಾನವೂ ಬೇಕು. ವಿದ್ಯಾವಂತರಾದರೆ ಯೂನಿವರ್ಸಲ್ ವಿದ್ಯಾವಂತರಾಗಬೇಕು. ಅಂದರೆ ಎಲ್ಲಿ ಹೋದರೂ ನಿಮ್ಮ ಓದಿಗೆ, ಉದ್ಯೋಗಕ್ಕೆ, ಕಲೆಗೆ, ನಿಪುಣತೆಗೆ, ಕುಶಲತೆಗೆ ಬೆಲೆ ಇರಬೇಕು.
ಮಕ್ಕಳಿಗೆ ಅನ್ಯ ಧರ್ಮಗಳ ಬಗ್ಗೆ, ಸಂಸ್ಕೃಗಳ ಬಗ್ಗೆ, ಭಾಷೆಗಳ ಬಗ್ಗೆ ಪರಿಚಯ ಮಾಡಿಕೊಡಬೇಕು. ಕನಿಷ್ಠಪಕ್ಷ ನಾಡಭಾಷೆ, ನೆರೆಹೊರೆಯ ರಾಜ್ಯಗಳ ಭಾಷೆಗಳನ್ನು ಪರಿಚಯಿಸಬೇಕು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳನ್ನು ಕಲಿತರೆ ಇನ್ನೂ ಒಳಿತು. ಮುಂದಿನ ದಿನಗಳಲ್ಲಿ ಬಾವಿಯ ಕಪ್ಪೆಯಂತೆ ಬದುಕುವುದು ಕಷ್ಟಕರವಾಗಬಲ್ಲದು.
ಓದಿದವರಿಗೆಲ್ಲ ಒಳ್ಳೆ ಕೆಲಸ ಸಿಗಲೇಬೇಕೆಂದೇನಿಲ್ಲ. ಏಕೆಂದರೆ ಪ್ರತಿದಿನ ಕೃತಕ ತಂತ್ರಜ್ಞಾನ ಬೆಳೆಯುತ್ತಿದೆ. ಯಂತ್ರಗಳು, ಸಾಫ್ಟ್ ವೇರ್ ಗಳು, ಮಾನವನಿಗಿಂತ ಹೆಚ್ಚು ನಿಖರವಾಗಿ, ಸುಲಭವಾಗಿ, ರಜಾ ಕೇಳದೆ, ಆಯಾಸಗೊಳ್ಳದೆ ಕಾರ್ಯನಿರ್ವಹಿಸುತ್ತಿವೆ. ೧೦೦ ಜನರು ಮಾಡುವ ಕೆಲಸ ಒಂದು ಗಣಕ ಯಂತ್ರ ಮಾಡಬಲ್ಲದು. ಆ ಯಂತ್ರಗಳ ತಂತ್ರ ಜ್ಞಾನಿಯಾಗಲು ಬೇಕಾಗುವ ವಿದ್ಯೆಗೆ ಆದ್ಯತೆ ಹೆಚ್ಚು. ನಾವು ಕೇವಲ ಬೇರೆಯರಿಗಾಗಿ ದುಡಿಯುವುದಕ್ಕೆ ಅಂದರೆ ಗುಲಾಮಗಿರಿಯನ್ನು ಹೆಚ್ಚು ಇಷ್ಟ ಪಡುತ್ತೇವೆ.
ಮಾಲೀಕರಾಗಲು ಯೋಚಿಸುವುದೇ ಇಲ್ಲ. ಬಂಡವಾಳಶಾಹಿಗಳು ಇದರ ಲಾಭ ಪಡೆದುಕೊಳ್ಳುತ್ತಾರೆ. ಆದರೆ ಪ್ರತಿಯೊಂದಕ್ಕೂ ಹಣವೇ ಬಂಡವಾಳವಲ್ಲ. ಪ್ರತಿಭೆ ಇದ್ದವರು ಮಾರುಕಟ್ಟೆಯ ಅಧಿಪತಿಗಳಾಗುತ್ತಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ, ಕಾಲ್ಪನಿಕ ಶಕ್ತಿ ಮತ್ತು ಯುಕ್ತಿ ವೃದ್ಧಿಸಬೇಕಾಗುತ್ತದೆ. ಉದಾಹರಣೆಗೆ ಅಮೆಜಾನ್ ಏನನ್ನು ಮಾರಾಟ ಮಾಡುತ್ತದೆ? ನೀವು ಹೇಳಬಹುದು ಎಲ್ಲವನ್ನೂ ಮಾರಾಟ ಮಾಡುತ್ತದೆ. ಅಲ್ಲ. ಅಮೆಜಾನ್ ಒಂದು ಕಲ್ಪನೆ. ಗ್ರಾಹಕರಿಗೆ ಘಳಿಗೆಗಳಲ್ಲಿ ಕುಂತಲ್ಲಿ ಅವರ ನೆಚ್ಚಿನ, ಬೇಕಾದ ವಸ್ತುಗಳನ್ನು ತಲುಪಿಸುವ ಕಲ್ಪನೆ. ಬೆರಳಂಚಲಿ ಕ್ರಿಯಾಶೀಲರಾಗುವ ಕಲ್ಪನೆ. ಈಗ ಕೋಟ್ಯಾಂತರ ರೂಗಳ ಕಂಪನಿಯಾಗಿ ಹಿಮಾಲಯದಂತೆ ಬೆಳೆದು ನಿಂತಿದೆ.
ಇನ್ನೊಂದು ಉದಾಹರಣೆ: ಕೋವಿಡ್ ಕಾಲದಲ್ಲಿ ನಮ್ಮ ದೇಶದಲ್ಲಿ ವೈದ್ಯರನ್ನು ನೇರವಾಗಿ ಭೇಟಿಯಾಗುವುದು ಕಷ್ಟಕರ ವಿಷಯವಾಗಿತ್ತು. ಎಲ್ಲರಿಗೂ ಸಾವಿನ ಭಯ. ಯಾರೋ ಪುಣ್ಯಾತ್ಮ ಆನ್ಲೈನ್ ಕನ್ಸಲ್ಟೇಶನ್ ಸಾಫ್ಟ್ ವೇರ್ ಕಲ್ಪನೆಯನ್ನು ಮಾರುಕಟ್ಟೆಗೆ ತಂದ, ಎಲ್ಲರು ಗೂಗಲ್ ಮೀಟ್ ಮರೆತು ಅದರತ್ತ ಹೆಚ್ಚಿನ ಒಲವನ್ನು ತೋರಿಸಿದರು. ಬೇಡಿಕೆ ಹೆಚ್ಚಾಯಿತು. ಬೇಡಿಕೆ ಅಂದರೆ ಹಣ. ಇಂದು ಮಾರುಕಟ್ಟೆಯಲ್ಲಿ ಎಲ್ಲವೂ ಆನ್ಲೈನ್. ನೀವು ಕುಳಿತ ಕಡೆ ಊಟ, ವ್ಯಾಯಾಮ, ಅರೋಗ್ಯ, ಹಣ, ವಾಹನ, ಸಂಬಂಧ ಇತ್ಯಾದಿ. ಎಲ್ಲವೂ ಸಿಗುತ್ತದೆ.
ಅಮೆಜಾನ್, ಸ್ವಿಗ್ಗಿ, ಗೂಗಲ್ – ಇಂತಹ ಹತ್ತಾರು ಕಂಪನಿಗಳು ಡಿಗ್ರಿಗಳಿಗೆ ಬೆಲೆ ಕೊಡುವುದಿಲ್ಲ. ಕಲ್ಪನೆಗಳಿಗೆ ಟ್ಯಾಲೆಂಟಿಗೆ ಬೆಲೆ. ಹೊಸ ಹೊಸ ಉಪಾಯಗಳನ್ನು ಸೃಷ್ಟಿಸುವವರಿಗೆ ಎಲ್ಲಿಲ್ಲದ ಬೇಡಿಕೆ. ಮಕ್ಕಳಲ್ಲಿ ಪ್ರಪಂಚ ಜ್ಞಾನವೇ ಇಲ್ಲ, ಮೆದುಳಲ್ಲಿ
ಕಲ್ಪನೆಗಳೇ ಇಲ್ಲ, ಅಂದ ಮೇಲೆ ಅವರಿಂದ ಯಾವ ಸಾಧನೆಗಳನ್ನು ಅನ್ವೇಷಣೆಗಳನ್ನು ನಿರೀಕ್ಷಿಸಲು ಸಾಧ್ಯ…! ಚಿಕ್ಕಂದಿನಿಂದಲೇ ಅವರಿಗೆ ಪೋಷಕರು ಪ್ರೋತ್ಸಾಹ ಕೊಟ್ಟರೆ ಏನಾದರು ಒಂದು ಸಾಧನೆ ಮಾಡಬಲ್ಲರು. ನಾಲ್ಕು ಜನರಿಗೆ ಕೆಲಸ ಕೊಡಬಲ್ಲರು. ದೇಶದ ಕೀರ್ತಿ ಹೆಚ್ಚಿಸಬಲ್ಲರು. ಕೊನೆ ಪಕ್ಷ ಅವರ ಬದುಕನ್ನು ಸುಗಮವಾಗಿ ಸಾಗಿಸಿಕೊಳ್ಳಬಲ್ಲರು. ವ್ಯಕ್ತಿತ್ವ ವಿಕಸನದ ಅನೇಕ ಕೋರ್ಸುಗಳಿವೆ. ೮ ನೇಯ ತರಗತಿಯಿಂದಲೇ ಅವರಿಗೆ ನುರಿತ ಮಾರ್ಗದರ್ಶಿಗಳ ಬಳಿ ಕಳುಹಿಸಿದರೆ, ಅವರ ಗರಿಗೆದರಿ ಹೊಸ ಗುರಿಗಳನ್ನು ಸಾಧಿಸಬಹುದಾಗಿದೆ.
ಕೆಲವು ಮಕ್ಕಳಿಗೆ ಶಾಲಾಕಾಲೇಜು ಎಂದರೆ ಜಿಗುಪ್ಸೆ. ಅಂತಹ ಮಕ್ಕಳಿಗೆ ತೊಂದರೆ ಕೊಡಬೇಡಿ. ಅವರ ಮುಂದಿನ ಜೀವನಕ್ಕೆ ಅನುಕೂಲಕರವಾಗುವಂತಹ ಏನಾದರು ಒಂದು ಕುಶಲತೆಯನ್ನು ಕಲಿಯಲು ಬಿಡಿ. ಅದರಲ್ಲಿ ನಿಪುಣತೆ ಪಡೆದು ಹಣ ಸಂಪಾದಿಸಿಕೊಳ್ಳುವವರಂತಾಗುತ್ತಾರೆ. ಮಕ್ಕಳಿಗೆ ಜವಾಬ್ದಾರಿ ಕೊಡಲಿಲ್ಲವೆಂದರೆ, ಇರುವ ಆಸ್ತಿ ಪಾಸ್ತಿ ಮಾರಿ ಪೋಲಿಪುಂಡರಾಗಿ, ವಾಟ್ಸ್ ಆಪ್ ಯೂನಿವರ್ಸಿಟಿಯ ಕೀಟಾಣುಗಳಾಗಿ, ಅಶ್ಲೀಲತೆಯಲ್ಲಿ ಮುಳುಗಿ, ಸಮಾಜಕ್ಕೆ ಕಳಂಕವಾಗಿ, ರೌಡಿಗಳಾಗಿ, ಡ್ರಗ್ಗಿಸ್ಟ್ ಗಳಾಗಿ, ಕುಡುಕರಾಗಿ ಹೋಗುತ್ತಾರೆ. ನಿರುದ್ಯೋಗಿಗಳಿಗೆ ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಕೆಲ ಸಂಘನೆಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತು. ಸಂಪಾದನೆಯನ್ನು ಮಾಡುವ ವಯಸ್ಸಿನಲ್ಲಿ ದುರ್ಬಳಕೆಯಾಗಿ ಬೇರೆಯವರ ಮಚ್ಚಿಗೋ ಗುಂಡಿಗೋ ಬಲಿಯಾಗಿ, ತಂದೆತಾಯಿಗೆ ಸದಾ ನೋವು ಕೊಡುವ ದೃಶ್ಯವಾಗಿ ಅದೃಶ್ಯವಾಗಿ ಹೋಗುತ್ತಾರೆ. ಇದೆಲ್ಲಾ ಬೇಕೆ ?
ಗ್ರಾಮಾಂತರ ಮಕ್ಕಳಿಗೆ ಆಧುನಿಕ ಸವಲತ್ತುಗಳು ಸಿಗುವುದು ಬಹಳ ಕಷ್ಟ. ಶಿಕ್ಷಕರು ಅವರ ಏಳಿಗೆಗೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಮಾರ್ಗದರ್ಶನ ನೀಡಬೇಕಾಗಿದೆ. ಇಂಟೆರ್ ನೆಟ್ ಅಂತು ಇದ್ದೇ ಇದೆ. ಅದರ ಸದ್ಬಳಕೆಯಿಂದ ಮಕ್ಕಳ ಜ್ಞಾನಾರ್ಜನೆಗೆ ಅಡಿಪಾಯ ಹಾಕಿಕೊಟ್ಟರೆ, ಅವರ ಹುಮ್ಮಸ್ಸಿದೆ ರೆಕ್ಕೆಪುಕ್ಕ ಕಟ್ಟಿದರೆ, ಗ್ರಾಮಾಂತರ ಪ್ರದೇಶಲ್ಲಿದ್ದುಕೊಂಡೇ ಹೊಸ ಸಾಧನಗಳನ್ನು ಮಾಡಬಹುದಾಗಿದೆ. ಕ್ರಿಯಾಶೀಲತೆಯನ್ನು ಆಧುನಿಕ ಕಲ್ಪನೆಗಳನ್ನು ದಡಕ್ಕೆ ಸೇರಿಸಲು ಮಾರುಕಟ್ಟೆಯಲ್ಲಿ ನೂರಾರು ಕೈಗಳು ಕಾಯುತ್ತಿರುತ್ತವೆ.
ಇಷ್ಟೆಲ್ಲಾ ಸರಿ. ಇದಕ್ಕೆಲ್ಲಾ ಮುಖ್ಯವಾಗಿ ಏನು ಬೇಕು? ಮಕ್ಕಳ ಅರೋಗ್ಯ. ಶಾರೀರಿಕ ಮತ್ತು ಮಾನಸಿಕ ಅರೋಗ್ಯವಿದ್ದರೆ ಮಾತ್ರ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದೇ ಹೋದರೆ, ಅವರಲ್ಲಿ ಮಂಕುತನ, ನಿರುತ್ಸಾಹ, ಹಿಂಜರಿಕೆ, ಸೋಮಾರಿತನ ಇತ್ಯಾದಿ ಆವರಿಸಕೊಳ್ಳುತ್ತದೆ. ಮೆದುಳಿಗೆ ಮತ್ತು ಶರೀರಕ್ಕೆ ಬೇಕಾದ ಪೌಷ್ಠಿಕತೆ ಸಿಕ್ಕಿದರೆ ಮಕ್ಕಳಲ್ಲಿ ಅರೋಗ್ಯ, ಹುಮ್ಮಸ್ಸು, ತೇಜಸ್ಸು, ಚೈತನ್ಯ, ಉಲ್ಲಾಸ ಮತ್ತು ಉತ್ಸಾಹ ದ್ವಿಗುಣಗೊಳ್ಳುತ್ತದೆ.
ಸರ್ಕಾರಗಳು, ಶಿಕ್ಷಕ ವೃಂದ, ಶ್ರೀಮಂತರು ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ ದೇಶದ ಮಕ್ಕಳ ಭವಿಷ್ಯದ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಅದರ ಪ್ರಮಾಣ ಬಹಳ ಕಡಿಮೆ. ಈ ದಿಕ್ಕಿನತ್ತ ಇನ್ನೂ ಹೆಚ್ಚು ಗಮನ ಹರಿಸಬೇಕಾಗಿದೆ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.