(www.vknews.in) : ಮುಸಲ್ಮಾನರಲ್ಲಿ ಗಂಡುಮಕ್ಕಳಿಗೆ ಮುಂಜಿ/ಖತ್ನಾ ಮಾಡಿಸುವುದು ಕಡ್ಡಾಯ. ಮಕ್ಕಳು ಹುಟ್ಟಿದ ಏಳು ದಿನಗಳ ನಂತರ ಖತ್ನಾ ಮಾಡಿಸಬಹುದು. ಕೆಲವು ಕಡೆ ಖತ್ನಾ ಕ್ರಿಯೆಗೆ ಸುನ್ನತಿ ಎಂದು ಸಹ ಕರೆಯಲಾಗುತ್ತದೆ. ಬಾಲ್ಯಾವಸ್ಥೆ ಮುಗಿಯುವ ಮುನ್ನ ಎಲ್ಲಾ ಮಕ್ಕಳಿಗೂ ಖತ್ನಾ ಮಾಡಿಸಲಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನನ್ನ ಗೋವಿಂದ ಮೇಷ್ಟ್ರು, ನಿನಗೆ ABC ಆಗಿದೆ ಏನೋ ಎಂದು ತಮಾಷೆಯಿಂದ ಕೇಳುತ್ತಿದ್ದರು. ABC ಎಂದರೆ ಆದ **** ಕಟ್. ಸಹಪಾಠಿಗಳು ನನ್ನತ್ತ ನೋಡುತ್ತಿದ್ದರು. ಸ್ವಲ ಮುಜುಗರ ಆಗುತ್ತಿತ್ತು.
ಖತ್ನಾ ಏತಕ್ಕೆ ಮಾಡಿಸುತ್ತಾರೆ ಎಂದು ಆಗ ನನಗೆ ತಿಳಿದಿರಲಿಲ್ಲ. ಮುಸಲ್ಮಾನರು ಮಾತ್ರ ಖತ್ನಾ ಮಾಡಿಸಿಕೊಳ್ಳುತ್ತಾರೆ, ಅಷ್ಟು ಮಾತ್ರ ಗೊತ್ತಿತ್ತು. ಬೇಸಿಗೆ ರಜಗಳು ಬಂದರೆ ಸಾಕು ಪೋಷಕರು ತಮ್ಮ ಮಕ್ಕಳನ್ನು ಖತ್ನಾ ಮಾಡಿಸುತ್ತಿದ್ದರು. ಖತ್ನಾ ಸಮಾರಂಭಕ್ಕೆ ಸಂಬಂಧಿಕರು ಅಕ್ಕಪಕ್ಕದವರೆಲ್ಲ ಸೇರುತ್ತಿದ್ದರು. ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ, ಹೂವಿನ ಹಾರ ಹಾಕಿ, ಮುದ್ದಾಡಿ ಮದುವೆ ಗಂಡಿನಂತೆ ಸಿದ್ಧಪಡಿಸುವರು. ನಂತರ ಬಿಳಿ ಬನಿಯಾನು ಮತ್ತು ಕೆಂಪು ಪಂಚೆ ತೊಡಿಸಿ ಸಿಂಹಾಸನಕ್ಕೆ ಏರಿಸಲು ಕರೆದುಕೊಂಡು ಹೋಗುವರು. ಆ ಸಿಂಹಾಸನ ಬೇರೇನೂ ಅಲ್ಲ, ನೀರು ತುಂಬಿಡುವ ಖಾಲಿ ಬಿಂದಿಗೆ. ಉಲ್ಟಾ ಬಿಂದಿಗೆ ಮೇಲೆ ಕುಳ್ಳರಿಸುತ್ತಿದ್ದರು. ಈ ಕೆಂಪು ಲುಂಗಿಯ ಸಂಪ್ರದಾಯ ಯಾರು ಪ್ರಾರಂಭ ಮಾಡಿದರೋ ಗೊತ್ತಿಲ್ಲ. ಆದರೆ ಇನ್ನೂ ಚಾಲ್ತಿಯಲ್ಲಿದೆ.
ಕೆಲವು ಮಕ್ಕಳಿಗೆ ತನಗೆ ಏನು ಮಾಡುತ್ತಿದ್ದಾರೆ ಎನ್ನುವುದೇ ತಿಳಿದಿರುವುದಿಲ್ಲ. ಸುಮ್ಮನೆ ಕುಳಿತಿರುತ್ತಾರೆ. ಕೆಲವು ಚೂಟಿ ಮಕ್ಕಳಿಗೆ ನನ್ನ ಗುಪ್ತಾಂಗಕ್ಕೆ ಕತ್ತರಿ ಹಾಕಲಾಗುತ್ತದೆ ಎಂದು ಗೊತ್ತಿರುತ್ತದೆ. ಆತಂಕ, ಕಿರುಚಾಟ, ರಂಪ , ಅಳು ಪ್ರಾರಂಭ. ಮಕ್ಕಳ ತಾಯಿಯ ತಮ್ಮ ಮಗುವನ್ನು ಅಥವಾ ಮಕ್ಕಳನ್ನು ಫುಸಲಾಯಿಸಿ ಗಟ್ಟಿಯಾಗಿ ಹಿಡಿದುಕೊಂಡು ವೈದ್ಯರು ಹೇಳಿದ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಪೋಷಕರಿಗೆ ಒಂದು ರೀತಿಯ ಸಂತೋಷ, ಇನ್ನೊಂದುಕಡೆ ಮಗುವಿಗೆ ನೋವಾಗುತ್ತದಲ್ಲ ಎಂಬ ದುಃಖ. ತಾಯಿಯಂದಿರು ಖತ್ನಾ ಆದ ಬಳಿಕ ಇಡೀ ರಾತ್ರಿ ಮಲಗುವುದಿಲ್ಲ. ನಿದ್ದೆಯಲ್ಲಿ ಮಕ್ಕಳು ಎಲ್ಲಿ ಆ ಜಾಗದಲ್ಲಿ ಏಟು ಮಾಡಿಕೊಳ್ಳುತ್ತಾರೋ ಎಂಬ ಆತಂಕ. ಕೆಲವು ಮಕ್ಕಳಂತೂ ಪೋಷಕರಿಗೆ ತುಂಬಾ ತೊಂದರೆ ಕೊಟ್ಟು ಬಿಡುತ್ತಾರೆ. ಊಟ ಸರಿಯಾಗಿ ಮಾಡಲ್ಲ, ನಮ್ಮ ಮೂತ್ರ ಮಾಡುವ ಜಾಗಕ್ಕೆ ಗಾಯ ಮಾಡಿಬಿಟ್ಟರಲ್ಲ ಎಂಬ ಕೋಪ, ಬೇರೆ ಬೇರೆ ರೀತಿಯ ಹಠಮಾರಿತನದಲ್ಲಿ ವ್ಯಕ್ತ ಪಡಿಸುತ್ತಾರೆ.
ಏಕೆಂದರೆ ಮೂತ್ರ ಮಾಡುವಾಗ ಮಕ್ಕಳಿಗೆ ಸ್ವಲ್ಪ ಕಷ್ಟ ಎನಿಸುತ್ತದೆ. ನೋವು ಮತ್ತು ಉರಿ ರೀತಿಯ ಅನುಭವ ಆಗುತ್ತದೆ. ಆಟದ ಸಾಮಾನುಗಳನ್ನು ಕೊಟ್ಟು, ನಾನಾ ರೀತಿಯಲ್ಲಿ ಮಕ್ಕಳ ಗಮನವನ್ನು ಬೇರೆಡೆಗೆ ಪರಿವರ್ತಿಸಲು ಪ್ರಯತ್ನಿಸಲಾಗುತ್ತದೆ. ತುಪ್ಪದಲ್ಲಿ ಒಣ ಕೊಬ್ಬರಿಯನ್ನು ಹಾಕಿ ಅದರ ಜೊತೆ 21 ದಿನ ಹಾಲು ಬಾದಾಮಿ ಸೂಪನ್ನು ಸಹ ಕೊಡಲಾಗುತ್ತದೆ. ಮಕ್ಕಳು ಇಷ್ಟಪಟ್ಟ ವಿವಿಧ ತಿಂಡಿತಿನಿಸುಗಳನ್ನು ಮಾಡಿ ಕೊಡಲಾಗುತ್ತದೆ. ಮಕ್ಕಳು ತಿಂದು ತೇಗಿ ಶಕ್ತಿವಂತರಾಗಬೇಕು ಎನ್ನುವುದೇ ಪೋಷಕರ ಆಸೆ.
ಖತ್ನಾ ಏತಕ್ಕೆ ಮಾಡಿಸುತ್ತಾರೆ ಎಂಬ ಪ್ರಶ್ನೆಯನ್ನು ನನ್ನ ಮಗ ಮುಗ್ಧ ಮನಸ್ಸಿನಿಂದ ಕೇಳಿದ. ಅವನಿಗೆ ಸಾಮಾನ್ಯ ಭಾಷೆಯಲ್ಲಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಉತ್ತರಿಸಿದೆ. ನೋಡು ಮಗನೇ… ಮನುಷ್ಯನಿಗೆ ಸುಗಂಧ ಇಷ್ಟವೋ ದುರ್ಗಂಧ ಇಷ್ಟವೋ? ಸುಗಂಧ ಇಷ್ಟ ಅಲ್ಲವೇ. ಮನೆಯ ಶೌಚಾಲಯಗಳನ್ನು ಪ್ರತಿದಿನ ಶುದ್ಧ ಮಾಡುತ್ತೇವೆ ಏಕೆ ? ದುರ್ವಾಸನೆ ಬರದೆ ಇರಲಿ ಅಂತ ತಾನೆ. ಬಸ್ಸು ನಿಲ್ದಾಣಗಳಲ್ಲಿ ನೀನು ನೋಡಿರಬಹುದು, ಮೂತ್ರದ ದುರ್ಗಂಧ ಅತೀ ಹೆಚ್ಚಾಗಿರುತ್ತದೆ. ಏಕೆ ? ಮಲಮೂತ್ರ ಏನು ? ನಾವು ತಿಂದಿರುವ, ಕುಡಿದಿರುವ ಆಹಾರದಿಂದ ನಮ್ಮ ಶರೀರ ಬೇಕಾದ ಶಕ್ತಿಯನ್ನು ಹೀರಿಕೊಂಡು, ಬೇಡವಾದ ವಸ್ತುಗಳನ್ನು ಮಲಮೂತ್ರ ಮತ್ತು ಬೆವರಿನ ರೂಪದಲ್ಲಿ ಹೊರ ಹಾಕುತ್ತದೆ.
ಮಾನವನ ಶರೀರ ಅದ್ಭುತ ಯಂತ್ರ. ಮನೆಯಲ್ಲಿ ನಾವು ವಾಟರ್ ಫಿಲ್ಟರ್ ಬಳಸುವುದಿಲ್ಲವೇ. ಅದೇ ರೀತಿ ನಮ್ಮ ಮೂತ್ರಪಿಂಡಗಳು ಫಿಲ್ಟರ್ ಕೆಲಸ ಮಾಡುತ್ತವೆ. ನಾವು ಆಹಾರದಲ್ಲಿ ಏನು ಸೇವಿಸುತ್ತೇವೋ ಅದನ್ನು ಫಿಲ್ಟರ್ ಮಾಡುತ್ತವೆ. ಬೇಡವಾದುದ್ದನ್ನು, ಅತಿಯಾದುದ್ದನ್ನು ಹೊರಹಾಕುತ್ತವೆ. ನೀರಿನ ಫಿಲ್ಟರ್ ಕೆಲಸ ಮಾಡುತ್ತಿಲ್ಲವೆಂದರೆ ಏನು ಮಾಡುತ್ತೇವೆ ? ಸರ್ವಿಸ್ ಮಾಡಿಸುತ್ತೇವೆ. ಮನುಷ್ಯರಿಗೆ ಕಾಯಿಲೆ ಬಂದರೆ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ ಮಾಡಿಸುತ್ತೇವೆ. ನುರಿತ ವೈದ್ಯರು ಮೂತ್ರದಲ್ಲಿ ಬದಲಾವಣೆ ಕಂಡು ಬಂದರೆ ತಕ್ಕ ಕ್ರಮ ತೆಗೆದುಕೊಳ್ಳುತ್ತಾರೆ.
ಮೂತ್ರ ಎಂದರೆ : ನೀರು (H2O) 95% ಯೂರಿಯಾ (H2NCONH2) 9.3 g/L ಯಿಂದ 23.3 g/L . ಮೂತ್ರದಲ್ಲಿ ಕ್ರಿಯಾಟಿನೈನ್ ಪ್ರಮಾಣವನ್ನು ಅಳೆಯಲಾಗುತ್ತದೆ. ಅದರ ಸಾಮಾನ್ಯ ಪ್ರಮಾಣ ಗಂಡಸರಲ್ಲಿ 0.74 ಯಿಂದ 1.35 mg /dL ಹೆಂಗಸರಲ್ಲಿ 0.59 ಯಿಂದ 1.04 mg/dL ಇರಬೇಕು. ಈ ಅಳತೆಯಿಂದ ಮೂತ್ರಪಿಂಡಗಳ ಸ್ವಸ್ಥತೆಯನ್ನು ಗಮನಿಸಲಾಗುತ್ತದೆ.
ಮೂತ್ರ ಬಣ್ಣರಹಿತ ಸ್ಪಟಿಕದಂತಹ ಸಂಯುಕ್ತ. ಇದು ಸಸ್ತನಿಗಳಲ್ಲಿನ ಪ್ರೊಟೀನ್ ಚಯಾಪಚಯ ಕ್ರಿಯೆಯ ಮುಖ್ಯ ಸಾರಜನಕ ಸ್ಥಗಿತ ಉತ್ಪನ್ನವಾಗಿದೆ ಮತ್ತು ಮೂತ್ರದಲ್ಲಿ ಹೊರಹಾಕಲ್ಪಡುತ್ತದೆ. ಸಸ್ತನಿ ಮೂತ್ರದ ಮುಖ್ಯ ಘನ ಅಂಶ; ಅಮೋನಿಯಾ ಮತ್ತು ಇಂಗಾಲದ ಡೈಆಕ್ಸಿಡ್ ನಿಂದ ಸಂಶ್ಲೇಷಿಸಲಾಗುತ್ತದೆ ಎಂದು ಮೂತ್ರ ತಜ್ಞರು ಹೇಳುತ್ತಾರೆ. ಮೂತ್ರದಲ್ಲಿ ಯುರೋಕ್ರೊಮ್ ಎಂಬ ರಾಸಾಯನಿಕ ಇರುವ ಕಾರಣ ಅದು ಹಳದಿಯಾಗಿ ಕಾಣುತ್ತದೆ.
ಖತ್ನಾ:- ಶಿಶ್ನದ ಮುಂದಿನ ತುದಿ ಒಂದೆರಡು ಅಂಗುಲ ಚರ್ಮದಿಂದ ಆವರಿಸಿಕೊಂಡಿರುತ್ತದೆ. ಮೂತ್ರ ಮಾಡಿದ ನಂತರ ಆ ಜಾಗದಲ್ಲಿ ಮೂತ್ರದ ಕೆಲ ಹನಿಗಳು ಉಳಿಯುವುದುಂಟು. ಕೆಲವರಿಗೆ ಅಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಕಾರಣ ಸೋಂಕು ತಗಲುವ ಸಾಧ್ಯತೆಗಳು ಉಂಟು. ಮೂತ್ರದ,ವೀರ್ಯದ,ಅಂಡಾಣುವಿನ ಹನಿಗಳು ಅಲ್ಲಿ ಉಳಿಯಬಾರದು ಎಂದು ಶಿಶ್ನವನ್ನು ಮುಚ್ಚಿಕೊಂಡಿರುವ ಮುಂಬದಿಯ ಬೇಡವಾದ ಚರ್ಮವನ್ನು ಕತ್ತರಿಸಲಾಗುತ್ತದೆ. ಅದುವೇ ಖತ್ನಾ ಅಥವಾ Circumcision. ಖತ್ನಾ ಮಾಡುವ ನಾಟಿ ವೈದ್ಯರು ಕೇವಲ ಹೆಸರಿಗೆ ಮಾತ್ರ ವೈದ್ಯರು. ಖತ್ನಾ ಮಾಡುವ ಕಲೆಯನ್ನು ಮಾತ್ರ ಅವರು ಕಲಿತಿರುತ್ತಾರೆ.
ಖತ್ನಾ ಸಮಯದಲ್ಲಿ ಅನೇಕ ಅನಾಹುತಗಳು ಸಂಭವಿಸಿರುವುದುಂಟು. ಅವರು ಹಳ್ಳಿಗಳಿಗೆ ಬಂದರೆ ಬೇಸಿಗೆ ರಜೆಯಲ್ಲಿ ನೂರಾರು ಮಕ್ಕಳ ಖತ್ನಾ ಮಾಡಿ ಹೋಗುತ್ತಾರೆ. ಮಕ್ಕಳಿಗೆ ಗೊತ್ತಿರುವುದಿಲ್ಲ. ಅಳುತ್ತಲೋ ಅಥವಾ ನಗುತ್ತಲೋ ಕುರ್ಚಿಯ ಮೇಲೆ ಬಂದು ಹಿರಿಯರ ಮಡಿಲಲ್ಲಿ ಕುಳಿತುಕೊಳ್ಳುತ್ತಾರೆ. ಖತ್ನಾ ವೈದ್ಯರು ಮಗುವಿನ ಶಿಶ್ನದ ಚರ್ಮ ಎಷ್ಟು ಕತ್ತರಿಸಬೇಕು ಎಂದು ಗುರುತು ಹಾಕಿ, ಅವರದೇ ಆದಂತಹ ಶಸ್ತ್ರಚಿಕಿತ್ಸಾ ಅಸ್ತ್ರಗಳನ್ನು ಬಳಸಿ ಮಕ್ಕಳ ಶಿಶ್ನದ ಮುಂಬದಿಯ ಚರ್ಮವನ್ನು ಕತ್ತರಿಸಿ, ಬ್ಯಾಂಡೇಜನ್ನು ಶಿಶ್ನದ ಸುತ್ತ ಕಟ್ಟಲಾಗುತ್ತದೆ.
ಮಕ್ಕಳ ಗಮನ ಬೇರೆ ಕಡೆ ಸೆಳೆಯಲು ಹಿರಿಯರು ಏನೇನೋ ಮಾತನಾಡಿಸುತ್ತಿರುವಾಗಲೇ ಖತ್ನಾ ವೈದ್ಯರು ತಮ್ಮ ಕೆಲಸವನ್ನು ಮಾಡಿ ಮುಗಿಸಿಬಿಡುತ್ತಾರೆ. ಖತ್ನಾ ಮಾಡಿದ ನಂತರ ಬತ್ತಾಸು (ಬತಾಷೆ) ಸಿಹಿ ಹಂಚಲಾಗುತ್ತದೆ. ಕೆಲವು ಮಕ್ಕಳ ಅಳು ಕಿರುಚಾಟ ಕೇಳಬೇಡಿ….! ಮತ್ತೆ ಕೆಲವು ಮಕ್ಕಳು ಹೆದರುವುದೇ ಇಲ್ಲ. ಖತ್ನಾ ಆದ ಮಕ್ಕಳನ್ನು ಕರೆದುಕೊಂಡು ಹೋಗಿ ದೂರ ದೂರ ಮಲಗಿಸಿ ಅತಿ ಜಾಗೃತೆಯಿಂದ ನೋಡಿಕೊಳ್ಳುತ್ತಾರೆ.
ಫಿಮೋಸಿಸ್, ಪ್ಯಾರಫಿಮೋಸಿಸ್ ಬಗ್ಗೆ ನೀವು ಕೇಳಿರಬಹುದು. ಜನನೇಂದ್ರಿಯಕ್ಕೆ ಸೋಂಕು ತಗಲುವ ಅನೇಕ ಕಾರಣಗಳಿವೆ. ಮುಖ್ಯ ಕಾರಣವೆಂದರೆ ಶುಚಿತ್ವ ಕಪಾಡಿಕೊಳ್ಳದೇ ಇರುವುದು. ಕೆಲವರು ಒಳ ಉಡುಪುಗಳನ್ನು ವಾರಗಟ್ಟಲೆ ಬದಲಾಯಿಸುವುದೇ ಇಲ್ಲ. ಆ ಜಾಗವನ್ನು ಶುದ್ಧ ಮಾಡಿಕೊಳ್ಳದೆ ನಿರ್ಲಕ್ಷಿಸುತ್ತಾರೆ. ವಾರಗಳು ಕಳೆದರೂ ನಾಭಿಯ ಕೆಳಭಾಗದ ಕೇಶಗಳನ್ನು ಕ್ಷೌರ ಮಾಡುವುದಿಲ್ಲ. ಪ್ಯಾಂಟಿನ ಜಿಪ್ ಹಾಕುವಾಗ ಜಾಗರೂಕತೆ ವಹಿಸಬೇಕು. ಅಕಸ್ಮಾತ್ ಶಿಶ್ನದ ಮುಂದೊಗಲು (Foreskin) ಜಿಪ್ ನಲ್ಲಿ ಸಿಕ್ಕಿಹಾಕಿಕೊಂಡರೆ ಗಾಯವಾಗುವ ಸಾಧ್ಯತೆಗಳೇ ಹೆಚ್ಚು.
ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ, ರೈಲ್ವೆ ಸ್ಟೇಷನ್ನುಗಳಲ್ಲಿ ಮಲಮೂತ್ರದ ದುರ್ವಾಸನೆ ಅತಿ ಹೆಚ್ಚಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾರಿಗೆ ಏನು ಕಾಯಿಲೆಗಳಿರುತ್ತವೋ ಯಾರಿಗೆ ಗೊತ್ತು. ಸಾರ್ವಜನಿಕ ಸ್ಥಳಗಳ ವಿಷಯ ಹಾಗಿರಲಿ, ಕಾರ್ಪೊರೇಟ್ ಕಂಪನಿಗಳಲ್ಲಿ ನಾನು ಕಂಡ ಹಾಗೆ, ನೇರವಾಗಿ ಫ್ರೆಶ್ ರೂಮಿಗೆ ಹೋಗುತ್ತಾರೆ, ಮೂತ್ರದ ಕಾರಂಜಿ ಬಿಡುತ್ತಾರೆ, ಕೈಗಳನ್ನು ತೊಳೆಯುವುದಿಲ್ಲ, ಅಲ್ಲಿಂದ ನೇರವಾಗಿ ಬಂದು ಕೀ ಬೋರ್ಡ್ ಕುಟ್ಟುತ್ತಾರೆ. ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ಮಾಡುವವರಿಗೆ ಆ ಕೀಲಿಮಣೆ ಬಗ್ಗೆ ಏನು ತಾನೇ ಗೊತ್ತು…! ಅದೇ ಕೈಗಳಿಂದ ಸ್ನೇಹಿತರಿಗೆ ಹಸ್ತಲಾಘವ ಮಾಡುತ್ತಾರೆ, ತಿನ್ನುತ್ತಾರೆ.
ನಾನು ಶಿಶ್ನ ಮುಟ್ಟಿದ ಕೈಗಳನ್ನು ತೊಳೆಯಬೇಕು ಎಂಬ ಸಾಮಾನ್ಯ ತಿಳುವಳಿಕೆಯೇ ಇರಲ್ಲ, ಇದ್ದರೂ ಚಾಚೂತಪ್ಪದೆ ಎಲ್ಲರೂ ಪಾಲಿಸುವುದಿಲ್ಲ. ಕೆಲವರು ಸಹಜೀವನದಲ್ಲಿರುವವರು ಸ್ನಾನ ಮಾಡಿದ ಬಳಿಕವೂ ಸಂಭೋಗ ಕ್ರಿಯೆ ನಡೆಸಿ ನೆರೆವಾಗಿ ಆಫೀಸಿಗೆ ಬಂದಿರುತ್ತಾರೆ. ಪುನಃ ಸ್ನಾನ ಮಾಡಿರುವುದಿಲ್ಲ. ಮುಚ್ಚುಮರೆ ಇಲ್ಲದೆ ಸ್ನೇಹಿತರ ಬಳಿ ಹಂಚಿಕೊಳ್ಳುತ್ತಾರೆ. ಥೂ ಛೀ ಗೆ ಜಾಗವೇ ಇಲ್ಲ. ಅದೆಲ್ಲ ಪ್ರಾಕೃತಿಕ, ಸ್ನಾನ ಮಾಡಲು ಸಮಯ ಇರಲಿಲ್ಲ ಎನ್ನುತ್ತಾರೆ.
ಮುಸಲ್ಮಾನರಲ್ಲಿ ಖತ್ನಾ ಕಡ್ಡಾಯ. ಮೂತ್ರ ಮಾಡಿದ ನಂತರ ಜನನಾಂಗ ನೀರಿನಿಂದ ತೊಳೆಯಲೇ ಬೇಕು. ನಂತರ ಕೈಗಳನ್ನು ಶುದ್ಧವಾಗಿ ತೊಳೆಯಬೇಕು. ನೀರಿಲ್ಲದ ಕಡೆ ಬೇರೆ ಬೇರೆ ವಿಧಿವಿಧಾನಗಳಿವೆ. ಯಹೂದಿಯರು ಮತ್ತು ಪಾರ್ಸಿಯರು ಸಹ ಖತ್ನಾ ಮಾಡಿಸಿಕೊಳ್ಳುತ್ತಾರೆ. ಅಮೇರಿಕಾದಲ್ಲಿ ಕ್ರಿಶ್ಚಿಯನ್ನರಿಗೆ ಮಗು ಹುಟ್ಟಿದಾಕ್ಷಣ ಆಸ್ಪತ್ರೆಯಲ್ಲಿ ವೈದ್ಯರು ಮಗುವಿಗೆ ಖತ್ನಾ ಮಾಡಬೇಕೆ ಎಂದು ಕೇಳುತ್ತಾರೆ. ಕೆಲ ಪೋಷಕರು ಮಾಡಿ ಎನ್ನುತ್ತಾರೆ. ಕೆಲವರು ಬೇಡ ಎನ್ನುತ್ತಾರೆ.
ಪಾಶ್ಚಿಮಾತ್ಯ ದೇಶಗಲ್ಲಿ ಕೆಲವರು ಧರ್ಮದ ಆಧಾರದ ಮೇಲೆ ಖತ್ನಾ ಮಾಡಿಸಿಕೊಂಡರೆ ಕೆಲವರು ಅರೋಗ್ಯ ಕಾಪಾಡಿಕೊಳ್ಳಲು ಮಾಡಿಸಿಕೊಳ್ಳುತ್ತಾರೆ. ನನ್ನ ಸ್ನೇಹಿತ ರಮೇಶ್ ಎಂಬಿಬಿಯಸ್ ವೈದ್ಯ. ಮೂತ್ರಕ್ಕೆ ಹೋಗುವ ಮುನ್ನ ಕೈ ತೊಳೆಯುತ್ತಿದ್ದ. ನಾವು ಏನೇನನ್ನೋ ಮುಟ್ಟಿರುತ್ತೇವೆ, ನಮ್ಮ ಗುಪ್ತಾಂಗ ಆ ಕೈಗಳಿಂದ ಮುಟ್ಟಿದರೆ ಸೋಂಕು ತಗಲುವುದಿಲ್ಲವೇ ಎನ್ನುತ್ತಿದ್ದ. ಕೆಲವರಿಗೆ ಅವರದೇ ಆದ ಆಚಾರವಿಚಾರಗಳಿರುತ್ತವೆ. ಎಲ್ಲರು ಅರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿದರೆ ಸಾಕು.
ಈಗ ಕಾಲ ಬದಲಾಗಿದೆ. ಕೇವಲ 12 ರೂಗಳಿಗೆ “ಖತ್ನಾ ನಾಟಿ ವೈದ್ಯರು” ಖತ್ನಾ ಮಾಡಿ ಸಂತೋಷದಿಂದ ಹೋಗುತ್ತಿದ್ದರು. ಇನ್ನಡುವೆ ನಾಟಿ ವೈದ್ಯರ ಬಳಿ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ನಾಟಿ ವೈದ್ಯರ ಖತ್ನಾ ಕಸಬು ಅಂತ್ಯ ಕಾಣುವ ಮಟ್ಟದಲ್ಲಿದೆ. ಜನರು ಆಸ್ಪತ್ರೆಗಳಲ್ಲಿ ಸುರಕ್ಷಿತವಾಗಿ ನೋವಿಲ್ಲದೆ ಖತ್ನಾ ಕ್ರಿಯೆ ಮಾಡಲಾಗುತ್ತದೆ ಎನ್ನುತ್ತಾರೆ. ವೈದ್ಯರು ಮಗುವಿಗೆ ಅರವಳಿಕೆ ಚುಚ್ಚುಮದ್ದು ಕೊಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಖತ್ನಾ ಮಾಡಿ ಮುಗಿಸುತ್ತಾರೆ. ಪ್ಯಾಮ್ಪರ್ ಹಾಕಿಸಿ, ಅದರ ಮೇಲೆ ಪ್ಯಾಂಟ್ ತೊಡಿಸಿ ಆರಾಮಾಗಿ ಮನೆಗೆ ಕಳುಹಿಸುತ್ತಾರೆ. ಕ್ಲಿನಿಕ್ ಗಳಲ್ಲಿ ಮಾಡಿಸಿದರೆ 2 ರಿಂದ 6 ಸಾವಿರ ಖರ್ಚು ಆಗುತ್ತದೆ. ದೊಡ್ಡ ಆಸ್ಪತ್ರೆಗಳಿಗೆ ಹೋದರೆ 10 ರಿಂದ 30 ಸಾವಿರ ರೂಗಳನ್ನು ಗಿರಾಕಿ ನೋಡಿ ಕಿತ್ತುಕೊಳ್ಳುತ್ತಾರೆ.
ನನ್ನ ಮಗ ಕೇಳಿದ ಒಂದು ಪ್ರಶ್ನೆಗೆ ಇಷ್ಟೆಲ್ಲಾ ಬರೆಯುವ ಅವಕಾಶ ಸಿಕ್ಕಿತು. ಅವನಿಗೆ ಧನ್ಯವಾದಗಳು. ಆದಷ್ಟು ಶುಚಿತ್ವ ಕಾಪಾಡಿಕೊಳ್ಳಿ ಆರೋಗ್ಯವಂತರಾಗಿರಿ. ನಮ್ಮ ದೇಶದಲ್ಲಿ ದೊಡ್ಡ ಸಮಸ್ಯೆ ಏನೆಂದರೆ ವಯಸ್ಸು ಮತ್ತು ರೋಗವನ್ನು ಮುಚ್ಚಿಡುವುದು. ಅಂತಿಮ ಘಟ್ಟದಲ್ಲಿ ವೈದ್ಯರ ಬಳಿ ಹೋಗುತ್ತಾರೆ. ಎಷ್ಟೋ ಜನರು ಇದು ಸಾಮಾನ್ಯ ಸಮಸ್ಯೆ ಸರಿ ಹೋಗುತ್ತದೆ ಎಂದು ನಿರ್ಲಕ್ಷಿಸಿ ನಂತರ ಪೆನಿಸ್ ಕ್ಯಾನ್ಸರಿಗೆ ಗುರಿಯಾಗಿರುವುದುಂಟು.
ಅಗತ್ಯಕ್ಕಿಂತ ಹೆಚ್ಚಾಗಿ ವೈದ್ಯರ ಸಲಹೆ ಇಲ್ಲದೆ ನಿಗುರುವಿಕೆಯ ಔಷಧಿಗಳನ್ನು ಸೇವಿಸಿ, ಅನೇಕ ಅನೈತಿಕ ವ್ಯಾಘ್ರ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ನಾನಾ ರೋಗಗಳಿಗೆ ಬರಮಾಡಿಕೊಳ್ಳುತ್ತಾರೆ. ವೈದ್ಯರ ಬಳಿ ಹೋಗಲು ನಾಚಿಕೆ. ನಿಮ್ಮ ಸ್ನೇಹಿತರಲ್ಲಿ, ಮಕ್ಕಳಲ್ಲಿ ಅಂತಹ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಲ್ಲಿ, ಅಂಥವರಿಗೆ ಧೈರ್ಯ ಹೇಳಿ, ಪ್ರೀತಿಯಿಂದ ವೈದ್ಯರ ಬಳಿ ಕರೆದುಕೊಂಡು ಹೋಗಿ. ಎಷ್ಟೋ ಕಾಯಿಲೆಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಸರಿ ಹೋಗುತ್ತವೆ. ಸಂಕೋಚ ಬಿಡಬೇಕು. ನುರಿತ ವೈದ್ಯರ ಬಳಿ ಹೋಗಬೇಕು. ಅರೋಗ್ಯ ಕಾಪಾಡಿಕೊಳ್ಳಬೇಕು.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.