ಕೊರೋನಾ ಮಹಾಮಾರಿಗೆ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡಿದವರ ಮರೆತ ಕಲ್ಲಿನ ಸೌಧದ ಸರ್ಕಾರಕೆ ಬಿಳಿ ಸಮವಸ್ತ್ರದಾರಿ ಮಹಿಳೆಯರ ಆರ್ತನಾದ ಕೇಳುತ್ತಿಲ್ಲವೇಕೆ?
ಹಾಡಿ ಹೊಗಳಿ ವಿಮಾನದಿಂದ ಹೂ ಮಳೆ ಸುರಿಸಿ ತಟ್ಟೆ ಲೋಟ ಚೊಂಬಿನ ಜಾಗಟೆ ಬಾರಿಸಿಸಿದ ವಿಶ್ವಗುರುವಿನ ಅನುಯಾಯಿಗಳಿಗೆ ಅಂತಃಕರಣ ಮಿಡಿಯುತ್ತಿಲ್ಲವೇಕೆ?
ಮನೆಮಠ ಹಸುಗೂಸು ಕಂದಮ್ಮಗಳ ಮರೆತು ಕೊರೋನಾದಲಿ ಬೀದಿ ಬೀದಿ ಅಲೆದಾಡಿ ಜನಗಳ ಜೀವ ಉಳಿಸಿ ಬದುಕಲಿ ನಗೆ ತಂದವರ ಬಾಳಿಗೆ ಹೊರೆಯಲ್ಲದ ಸಂಬಳವ ಅನುಮತಿಸಲು ಮನಸ್ಸು ಮಾಡುತ್ತಿಲ್ಲವೇಕೆ?
ಲಕ್ಷ ಲಕ್ಷ ಖರ್ಚು ಮಾಡಿ ಜೀವ ಉಳಿಸುವ ವಿದ್ಯೆ ಕಲಿತ ಕೈಗಳು ರೋಗಿಯ ಕೊಳಕು ಬಾಚಿ ಸಮಾಜೋದ್ದಾರಕೆ ಸೆಣಸಾಡುವ ಸಹೃದಯಿಗಳನ್ನೇ ಆಕ್ರೋಶಕೆ ಬಲಿ ಮಾಡಿದ್ದೇಕೆ?
ಚುನಾವಣೆಯ ಗುಂಗಿನಲಿ ವಿಜಯ ಸಂಕಲ್ಪದಿ ನಾವು ಇರುವುದೇ ನಿಮಗಾಗಿ ಎಂದು ಡಂಗುರ ಸಾರುವ ವೀರರಿಗೆ ವನಿತೆಯರ ವನವಾಸ ಕೇಳುತ್ತಿಲ್ಲವೇಕೆ?
ಜಯ ಸಾಧಿಸಿದರೆ ಪಂಚರತ್ನದ ಉಡುಗೊರೆಯ ನೀಡುವೆನೆನ್ನುವ ವಚನದ ಮೋಡಿಗಾರರಿಗೆ ಮಹಿಳೆಯರ ಅಂತಃಕರಣಕ್ಕೆ ಕರುಗುತ್ತಿಲ್ಲವೇಕೆ?
ಸದಾ ನಾವು ಪ್ರಜೆಗಳಿಗೆ ಧ್ವನಿಯಾಗುವೆವು ಎಂಬ ಪ್ರಜಾಧ್ಬನಿಯ ಧಣಿಗಳಿಗೆ ತಮ್ಮದೇ ರಾಜ್ಯದ ನಾರಿಯರ ನರಳಾಟ ಕೇಳಿಸುತ್ತಿಲ್ಲವೇಕೆ?
ಮಹಿಳಾ ದಿನಾಚರಣೆಯಲಿ ನಗರ ಸುತ್ತಲೂ ಉಚಿತ ಟಿಕೆಟ್ಟು ಕೊಡಿಸಿದ ತಲೆಕೆಟ್ಟ ಸರ್ಕಾರಕ್ಕೆ ಮೈ ಮುರಿದ ದುಡಿವ ಸ್ರ್ತೀಯರ ಅರಚಾಟಕ್ಕೆ ಮನಸ್ಸು ಕಳವಳಗೊಳ್ಳುತ್ತಿಲ್ಲವೇಕೆ?
ಸಾವಿರಾರು ಮಹಿಳೆಯರು ಹಸುಗೂಸುಗಳೊಂದಿಗೆ ತಮ್ಮ ನೆಲೆಯ ಮರೆತು ಕಾದಿಹರು ನಿಮ್ಮ ಸಾಂತ್ವನದ ನುಡಿಗಾಗಿ;
ಇಡೀ ಮನುಜರಿಗೆ ಮಾನವತೆಯ ಮೂರ್ತಿಯೆಂದು ಹಾಡಿ ಹೊಗಳಿದವರು ನೀವು ನೋಯಿಸದಿರಿ ಅವರನ್ನು ರೋಗಿಗಳಿಗೆ ಔಷದಿ ಕೊಡುವ ಪರಿಣಿತೆಯರು ಅವರು ನಿಮ್ಮ ಜಂಬತನದ ಅಹಂಕಾರಕ್ಕೆ ಮದ್ದು ಕೊಡದಿರುವರೇ?
✍️ ದಿವಾಕರ್.ಡಿ.ಮಂಡ್ಯ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.