رزانة العلم من كانت تثقله يمشي بها خاضعامقدار اثقال ويسجدالغصن بالاثماراذحملت اشجاره داليامن بعدادلال
(www.vknews.com) : ಎತ್ತರಕ್ಕೆ ಬೆಳೆದ ಮರಗಳಲ್ಲಿ ಹಣ್ಣು ಹಂಪಲು ತುಂಬಿದಾಗ ಅದರ ಕೊಂಬೆಗಳು ಕೆಳಭಾಗಕ್ಕೆ ವಾಲುತ್ತವೆ. ಅದೇ ರೀತಿ ವಿದ್ಯೆಯ ಗಾಂಭೀರ್ಯತೆಯ ಭಾರದಿಂದ ವಿದ್ಯಾವಂತ ಮನುಷ್ಯನು ವಿನಯಾ ಶೀಲನಾಗಿ ನಡೆಯುವನು
ಕವಿಯ ಮಾತು ಅತ್ಯಂತ ಅರ್ಥಪೂರ್ಣ. ವಿದ್ಯೆಯೆಂಬುದು ಅತ್ಯಂತ ಅಮೂಲ್ಯವಾದುದು. ಅಲ್ಲದೆ ಅದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನೈಜ ಮನುಷ್ಯನನ್ನಾಗಿ ಮಾರ್ಪಡಿಸುವ ವಸ್ತುವೂ ಆಗಿರುತ್ತದೆ. ಆದ್ದರಿಂದ ವಿದ್ಯಾವಂತ ಮನುಷ್ಯ ಯಾವಾಗಲೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಂಡಿರುತ್ತಾನೆಯೇ ಹೊರತು ಅಮಾನವೀಯ ಗುಣಗಳು ಅವನಲ್ಲಿ ದರ್ಶಿಸಲು ಸಾಧ್ಯವೇ ಇಲ್ಲ.
ಮಾನವೀಯ ಗುಣಗಳಲ್ಲಿ ಅತಿ ಮಹತ್ತರವಾದದು ವಿನಯ, ವಿನಮ್ರತೆ, ಸರಳತೆ ಗಳಾಗಿರುತ್ತದೆ.ಈ ಮಹತ್ಗುಣಗಳಿಂದ ಮಾನವ ಸಮೂಹಕ್ಕೆ ಮಾದರಿಯಾಗ ಬೇಕಾದ ವಿದ್ಯಾವಂತ ಮನುಷ್ಯನೇ ಯಾವಾಗ ಈ ಗುಣಗಳಿಗೆ ವಿದಾಯ ಹೇಳಿ ಅಹಂಕಾರಿಯಾಗುತ್ತಾನೋ ಅವಾಗ ಮಾನವ ಸಮೂಹದ ದುರಂತ ಪ್ರಾರಂಭವಾಗುತ್ತದೆ.ಇದು ಮಹಾ ದುರಂತ ಎಂಬುದರಲ್ಲಿ ಅನುಮಾನಕ್ಕೆ ಅವಕಾಶವೇ ಇಲ್ಲ.
ಕಳೆದ ಸಂಚಿಕೆಗಳಲ್ಲಿ ಚರ್ಚಿಸಿದಂತೆ ತನ್ನ ದಾಸರು ತನ್ನ ಪವಿತ್ರ ಭವನಗಳಾದ ಮಸ್ಜಿದ್ ಗಳಲ್ಲಿರುವುದನ್ನೇ ಬಯಸುವ ಭವನದ ಯಜಮಾನನಾದ ಅಲ್ಲಾಹು ದಾಸರಿಗೆ ಆ ಭವನದ ಬಾಗಿಲುಗಳನ್ನು ಯಾಕೆ ಮುಚ್ಚಿದ ಎಂಬ ಗಂಭೀರ ವಿಷಯದ ಬಗ್ಗೆ ಚರ್ಚಿಸುತ್ತಾ ಹೋಗುವಾಗ ಯಜಮಾನನು ಇಷ್ಟಪಡದ ತನ್ನ ದಾಸರಿಂದ ಉಂಟಾದ ಅಶಿಸ್ತುಗಳಲ್ಲಿ ಮುಖ್ಯವಾದದ್ದು ಎಲ್ಲಾ ವಲಯದಲ್ಲೂ ವ್ಯಾಪಿಸಿರುವ ಅಹಂಭಾವವೆಂಬ ಪಿಡುಗಾಗಿದೆ ಎಂದು ಚರ್ಚಿಸಿದ್ದೆವು
ಮನುಷ್ಯನನ್ನು ಅಹಂಕಾರಿ ಯಾಗಿ ಮಾಡುವ ಕಾರ್ಯಗಳಲ್ಲಿ ಇಮಾಮ್ ಗಝ್ಝಾಲಿ ರಹ್ಮತುಲ್ಲಾಹಿ ಅಲೈಹಿ ರವರು ಮೊದಲನೆಯದಾಗಿ ಪರಿಗಣಿಸಿರುವುದು ಅಲ್ಲಾಹು ನೀಡಿದ ಅತ್ಯಮೂಲ್ಯ ಅನುಗ್ರಹವಾಗಿರುವ ವಿದ್ಯೆಯನ್ನಾಗಿದೆ ಎಂದೂ ಚರ್ಚಿಸಿದ್ದೆವು.
ಇದು ಅತ್ಯಂತ ಚರ್ಚಾರ್ಹ ವಿಷಯ
ಯಾಕೆಂದರೆ ಅಹಂಕಾರ ಯಾವ ಮನುಷ್ಯನಿಗೂ ಇರಬಾರದಂತಹ ಅಪಾಯಕಾರಿ ಗುಣವಾಗಿದೆ. ಆದರೆ ವಿದ್ಯಾವಂತನ ಅಹಂಕಾರ ಅತ್ಯಂತ ಅಪಾಯ ಕಾರಿ ಎಂಬುದರಲ್ಲಿ ಅನುಮಾನವಿಲ್ಲ.
ಪ್ರವಾದಿ ಮೂಸಾ ಅಲೈಹಿಸ್ಸಲಾಮರ ಮತ್ತು ಖಳ್ರ್ ಅಲೈಹಿಸ್ಸಲಾಮರ ಸುದೀರ್ಘ ಚರಿತ್ರೆ ಪವಿತ್ರ ಈ ಖುರ್ಆನಿನ ಅಲ್ ಕಹ್ಫ್ ಸೂರತಿನಲ್ಲಿ ಸವಿವರವಾಗಿ ವಿವರಿಸಲಾಗಿದೆ. ಹಝ್ರತ್ ಮೂಸಾ ಅಲೈಹಿಸ್ಸಲಾಮರನ್ನು ತನಗಿಂತ ಪದವಿಯಲ್ಲಿ ಕೆಳಗಿರುವ ಖಳ್ರ್ ಅಲೈಹಿಸ್ಸಲಾಮರೊಂದಿಗೆ ವಿದ್ಯೆ ಕಲಿಯಲು ಹೋಗಬೇಕು ಎಂದು ಅಲ್ಲಾಹು ಆದೇಶಿದ. ಅದರಂತೆ ಮೂಸಾ ಅಲೈಹಿಸ್ಸಲಾಮರು ವಿದ್ಯೆ ಕಲಿಯಲು ಹೊರಟ ಸುದೀರ್ಘ ಚರಿತ್ರೆ ಯನ್ನು ವಿವರಿಸಲಾಗಿದೆ. ಆದರೆ ಈ ಒಂದು ಪರೀಕ್ಷೆಗೆ ಮೂಸಾ ಅಲೈಹಿಸ್ಸಲಾಮರು ಒಳಪಡಲುಂಟಾದ ಕಾರಣಗಳಲ್ಲಿ ಒಂದು ಕಾರಣ ವಿನಯಕ್ಕೆ ವಿರುದ್ಧವಾದ ಮೂಸಾ ಅಲೈಹಿಸ್ಸಲಾಮರ ಬಾಯಿಂದ ಬಂದ ಒಂದು ಮಾತಾಗಿತ್ತು. ಪ್ರವಾದಿ ಮೂಸಾ ಅಲೈಹಿಸ್ಸಲಾಮ್ ಸಹಿತವಿರುವ ಎಲ್ಲಾ ಪ್ರವಾದಿಗಳು ಪಾಪ ಸುರಕ್ಷಿತರೂ ಅತ್ಯಂತ ಸಂಶುದ್ಧರೂ ಆಗಿರುವರು.
ಆದರೆ ಭೂಮಿಯಲ್ಲಿ ಅತ್ಯಂತ ದೊಡ್ಡ ವಿದ್ಯಾವಂತ ಯಾರು ಎಂದು ಒಬ್ಬ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ನಾನೇ ಎಂದು ಉತ್ತರಿಸಿ ಬಿಟ್ಟರು.ಈ ಮಾತು ನೂರಕ್ಕೆ ನೂರು ಸತ್ಯವಾಗಿತ್ತು.ಯಾಕೆಂದರೆ ಅಂದು ಭೂಮಿಯಲ್ಲಿ ಮೂಸಾ ಅಲೈಹಿಸ್ಸಲಾಮರಿಗಿಂತ ವಿದ್ಯಾವಂತರಾಗಿ ಯಾರೂ ಇರಲಿಲ್ಲ.
ಆದರೆ ನಾನೇ ದೊಡ್ಡ ವಿದ್ಯಾವಂತ ಎಂಬ ಮಾತು ವಿನಯಾಶೀಲರಿಂದ ಅದರಲ್ಲೂ ಪ್ರವಾದಿಗಳಿಂದ ಉಂಟಾಗುವುದು ಭೂಷಣವಲ್ಲದ ಕಾರಣ ಮೂಸಾ ಅಲೈಹಿಸ್ಸಲಾಮರನ್ನು ಈ ಪರೀಕ್ಷೆಗೆ ಒಳಪಡಿಸಲಾಯ್ತು ಎಂದು ಚರಿತ್ರೆ ಹೇಳುತ್ತದೆ. ನೂರಕ್ಕೆ ನೂರು ಸತ್ಯವಾದರೂ ಅಶಿಸ್ತು ಎಂದು ತೋರ ಬಹುದಾದ ಒಂದು ಮಾತನ್ನು ಅಲ್ಲಾಹು ಇಷ್ಟೊಂದು ಗಂಭೀರವಾಗಿ ಪರಿಗಣಿಸಿದರೆ ಇನ್ನು ವಿದ್ಯಾವಂತರು ತೋರುವ ಸ್ಪಷ್ಟ ಅಹಂಕಾರದ ಬಗ್ಗೆ ಹೇಳಬೇಕಿಲ್ಲ ತಾನೆ.
ಅಲ್ಲಾಹನ ಅನುಗ್ರಹಗಳನ್ನು ಅನುಭವಿಸುವ ಮನುಷ್ಯನು ಯಾವಾಗಲೂ ವಿನೀತನಾದ ತನ್ನನ್ನು ಅಲ್ಲಾಹನು ಅವನ ಅಪಾರ ಅನುಗ್ರಹಗಳಿಗೆ ಆಯ್ಕೆ ಮಾಡಿರುವುದನ್ನು ಸ್ಮರಿಸುತ್ತಾ ಅದಕ್ಕೆ ತಕ್ಕಂತೆ ಕೃತಜ್ಞತಾ ಭಾವದಿಂದ ವಿನಯಾಶೀಲನಾಗಿ ಈ ಭೂಮಿಯಲ್ಲಿ ಜೀವಿಸಬೇಕು.ಇದು ಸೃಷ್ಟಿಕರ್ತನಾದ ಅಲ್ಲಾಹನ ನಿಯಮ.
*ಇದರಿಂದಾಗಿಯೇ ಅರ್ಧರಾತ್ರಿಯಲ್ಲಿ ಆರಾಧನಾ ನಿರತರಾಗಿ ಕಾಲುಗಳು ನೀರು ಬಂದು ಊತವುಂಟಾದಾಗ ಸಹಧರ್ಮಿಣಿ ಆಯಿಶಾ ರಲಳಿಯಲ್ಲಾಹು ಅನ್ಹಾರವರು ಕೇಳಿದರು.ಎಲ್ಲಾ ಪಾಪಗಳಿಂದ ವಿಮುಕ್ತಿ ನೀಡಲ್ಪಟ್ಟ ತಾವೇಕೆ ಇಷ್ಟು ಕೃಷ್ಣಪಟ್ಟು ಆರಾಧನಾ ನಿರತರಾಗಬೇಕು. ಇದಕ್ಕೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ ಹೀಗಿತ್ತು. افلا اكون عبدا شكورا ನಾನೊಬ್ಬ ಅತ್ಯಂತ ಕೃತಜ್ಞತೆಯಿರುವ ದಾಸನಾಗುವುದು ಬೇಡವೇ
ಅಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಅಲ್ಲಾಹನ ಅನುಗ್ರಗಳು ನೀಡಲ್ಪಟ್ಟ ಸೃಷ್ಟಿ ಶ್ರೇಷ್ಟರು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರಾಗಿರುತ್ತಾರೆ. ಅತಿ ಹೆಚ್ಚು ಅನುಗ್ರಹಗಳನ್ನು ಪಡೆದ ನಾನು ಅತಿ ಹೆಚ್ಚು ಕೃತಜ್ಞತೆಗಳಿರುವ ಅಲ್ಲಾಹನ ನಿಜವಾದ ದಾಸನಾಗಬೇಕೆಂದಾಗಿದೆ ಪ್ರವಾದಿಯವರ ಭಾವನೆ.
ಇದು ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ಸದಾ ಇರಬೇಕಾದ ಭಾವನೆಯಾಗಿದೆ.ಆಗ ಮಾತ್ರ ಅವನು ನಿಜವಾದ ದಾಸನಾಗಲು ಸಾಧ್ಯ.
ಅಲ್ಲಾಹನು ಮನುಷ್ಯನಿಗೆ ನೀಡುವ ಅನುಗ್ರಹಗಳಲ್ಲಿ ಅತ್ಯಮೂಲ್ಯವಾದುದು ವಿದ್ಯೆಯೆಂಬುದರಲ್ಲಿ ತರ್ಕಕ್ಕೆ ಅವಕಾಶವಿಲ್ಲ.ಆದ್ದರಿಂದ ಅತ್ಯಮೂಲ್ಯ ಅನುಗ್ರಹ ಪಡೆದ ವಿದ್ಯಾವಂತನು ಅತ್ಯಂತ ಕೃತಜ್ಞತಾ ಭಾವದಿಂದ ವಿನಯಾಶೀಲರಲ್ಲಿ ಅತಿ ವಿನಯಾಶೀಲನಾಗಬೇಕು. ಆಗ ಮಾತ್ರ ಅವನಿಗೆ ಲಭಿಸಿದ ವಿದ್ಯೆಗೆ ಅವನು ನ್ಯಾಯ ಒದಗಿಸಿದವನಾಗುವುದು. ಇದಕ್ಕೆ ತಪ್ಪಿ ಅವನು ವರ್ತಿಸಿದರೆ ಅದು ಅನ್ಯಾಯದ ಪರಮಾವಧಿ ಯಾಗುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದಲೇ ವಿದ್ಯಾವಂತನ ಅಹಂಕಾರ ಅಕ್ಷಮ್ಯ ಅಪರಾಧವಾಗುವುದು.
ಅಹಂಕಾರವಿಲ್ಲದ,ಅಸೂಯೆಯಿಲ್ಲದ, ವಿವೇಚನೆಯಿಲ್ಲದ, ವಂಚನೆಯಿಲ್ಲದ,ದ್ರೋಹವಿಲ್ಲದ,ಅನ್ಯಾಯ ಅನೀತಿಗಳಿಲ್ಲದ ಶುದ್ಧ ಮನಸ್ಸಿನ ಒಡೆಯನೇ ನೈಜ ವಿದ್ವಾಂಸ.
ಗತಕಾಲದ ವಿದ್ವಾಂಸ ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಈ ಸತ್ಯ ಮನದಟ್ಟಾಗಬಹುದು. ವಿಜ್ಞಾನದ ಸಮುದ್ರಗಳಾಗಿದ್ದ ಪೂರ್ವಿಕ ವಿದ್ವಾಂಸರು ಅತ್ಯಂತ ಕೃತಜ್ಞತಾ ಭಾವವಿದ್ದವರು ಅತ್ಯದ್ಭುತ ವಿನಯಾಶೀಲರೂ ಮನುಷ್ಯ ಜೀವನದ ಎಲ್ಲಾ ವಲಯಗಳಲ್ಲೂ ಅಪ್ರತಿಮ ಮಾರ್ಗದರ್ಶಕರೂ ಆಗಿದ್ದರು. ಇದಕ್ಕೆ ಉದಾಹರಣೆಗಳು ನೂರಾರಲ್ಲ,ಸಾವಿರಾರಲ್ಲ, ಲಕ್ಷೋಪಲಕ್ಷವೂ ಅಲ್ಲ.ಗತಕಾಲದ ವಿದ್ವತ್ ಜಗತ್ತಿನ ಸಂಪೂರ್ಣ ಚರಿತ್ರೆಯ ತೆರೆದಿಟ್ಟ ಪುಸ್ತಕಗಳೇ ಇದಕ್ಕೆ ದೊಡ್ಡ ಸಾಕ್ಷಿ.
ಹೆಚ್ಚೇಕೆ ವಿಶ್ವಗುರು ವಿದ್ವತ್ತಿನ ಕೇದಾರವಾಗಿರುವ ಲೌಹ್,ಖಲಮ್,ಆಕಾಶ, ಭೂಮಿ,ಗತಕಾಲ, ಭೂತಕಾಲಗಳ ಎಲ್ಲಾ ವಿಜ್ಞಾನಗಳನ್ನು ನೀಡಲ್ಪಟ್ಟ ಅಶ್ರಫುಲ್ ಖಲ್ಖ್ ಮುಹಮ್ಮದ್ ಸಲ್ಲಲ್ಲಾಹು ಆಲೈಹಿ ವಸಲ್ಲಮ್ ರವರ ವಿದ್ವತ್ತಿಗೆ ಸಮಾನತೆಯನ್ನು ತೋರಿಸಲು ಈ ಜಗತ್ತಿನಲ್ಲಿ ಯಾರಿಗಾದರೂ ಸಾಧ್ಯವಾ? ಖಂಡಿತ ಸಾಧ್ಯವಿಲ್ಲ.
فان من جودك الدنيا وضرتها ومن علومك علم اللوح والقلم
ಇಮಾಮ್ ಬೂಸೂರಿ ರಹ್ಮತುಲ್ಲಾಹಿ ಅಲೈಹಿ ಸಹಿತವಿರುವ ಎಲ್ಲಾ ಕವಿಗಳು ಹೇಳಿದ್ದು ಅದನ್ನೇ ಆಗಿದೆ
ಆದರೆ ಆ ಪ್ರವಾದಿಯವರು ಸಮಾನತೆ ಇಲ್ಲದ ಕೃತಜ್ಞತಾ ಭಾವವಿದ್ದವರೂ ವಿನಯಾಶೀಲರೂ ಮಾನವ ಸಮೂಹದ ಎಲ್ಲಾ ವಲಯದಲ್ಲಿ ಸರಿಸಾಠಿಯಿಲ್ಲದ ಪರಿಪೂರ್ಣ ಮಾರ್ಗದರ್ಶಕರೂ ಆಗಿದ್ದರೆಂಬುದಕ್ಕೆ ಬೇರೆ ಉದಾಹರಣೆಯ ಅಗತ್ಯವಿದೆಯೆಂದು ತೋರುವುದಿಲ್ಲ.
ಅದರ ನಂತರ ಹೆಜ್ಜೆ ಹೆಜ್ಜೆಗೂ ಆವರನ್ನು ಹಿಂಬಾಲಿಸಿದ ಅವರ ಅನುಚರರಾದ ಸಹಾಬಿಗಳು ಮಾದರೀ ಯೋಗ್ಯ ವಿದ್ವಾಂಸರಾಗಿ ವಿರಾಜಿಸಿದ್ದರು.
ಅದೇ ರೀತಿ ಇಸ್ಲಾಮಿನ ಇತಿಹಾಸದಲ್ಲಿ ಗತಿಸಿಹೋದ ಗತಕಾಲದ ವಿದ್ವಾಂಸರೆಲ್ಲರೂ ಈ ಪರಂಪರೆಯಲ್ಲಿ ಸೇರುತ್ತಾರೆ.
ಇತಿಹಾಸದಲ್ಲಿ ಪ್ರತ್ಯಕ್ಷ ಗೊಂಡ ಅನೇಕ ಸಿದ್ಧಾಂತಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ತಿದ್ದುಪಡಿ ಹಾಗೂ ಬದಲಾವಣೆಗೆ ಒಳಗಾಗಿ ನರಕಯಾತನೆ ಅನುಭವಿಸುತ್ತಿದ್ದರೆ ಮತ್ತೆ ಕೆಲವು ಹೇಳಹೆಸರಿಲ್ಲದಂತೆ ನಾಮಾವಶೇಷ ಗೊಂಡಿವೆ.
ಆದರೆ ಇಸ್ಲಾಮಿನ ಆಶಯ ಆದರ್ಶಗಳು ಈ ಸುದೀರ್ಘ ಹದಿನಾಲ್ಕು ಶತಮಾನಗಳ ಇತಿಹಾಸದಲ್ಲಿ ಒಂದೇ ಒಂದು ತಿದ್ದುಪಡಿಗೆ ಒಳಗಾಗದೆ ತಲೆಯೆತ್ತಿ ನಿಂತಿದ್ದರೆ ಅದಕ್ಕೆ ಮುಖ್ಯ ಕಾರಣ ಈ ನಿಸ್ವಾರ್ಥ ವಿದ್ವಾಂಸರ ಸುದೀರ್ಘ ಕಠಿಣ ಪರಿಶ್ರಮ ಹಾಗೂ ಮಾದರೀ ಯೋಗ್ಯ ಮಾರ್ಗದರ್ಶನ ಮಾತ್ರವಾಗಿದೆ.
ಈ ವಿದ್ವಾಂಸರು ಸಮುದಾಯವನ್ನು ಇಲ್ಲಿ ತನಕ ತಮ್ಮ ಶಿಕ್ಷಣ, ತರಬೇತುಗಳಿಂದ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದಿದ್ದಾರೆ ಒಯ್ಯುತ್ತಲೂ ಇದ್ದಾರೆ. ಹಾಗೂ ತಾವು ಸಂಪಾದಿಸಿದ ವಿದ್ಯೆಗೆ ಸಂಪೂರ್ಣ ನ್ಯಾಯ ಒದಗಿಸಿದವರೂ ಆಗಿರುತ್ತಾರೆ ಎಂಬುದಕ್ಕೆ ಕಾಲವೇ ಸಾಕ್ಷಿ.ಇದು ಅಂತ್ಯದಿನದ ತನಕವೂ ಮುಂದುವರಿಯುತ್ತದೆ.ಸರ್ವಸಮ್ಮತ ಆಡಳಿತಾಧಿಕಾರಿ ಇಮಾಮ್ ಮಹ್ದೀ ರಳಿಯಲ್ಲಾಹು ರವರ ಆಗಮನದವರೆಗೆ…
ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
لا تزال طائفة من أمتي ظاهرين على الحق حتى تقوم الساعة ಈ ಮಾದರೀ ಯೋಗ್ಯ ವಿದ್ವಾಂಸರ ನಾಯಕತ್ವದಲ್ಲಿ ಎಲ್ಲಿಯ ತನಕ ಈ ಸಮುದಾಯ ಮುಂದುವರಿಯುತ್ತದೊ ಅಲ್ಲಿಯವರೆಗೆ ಈ ಸಮುದಾಯ ಸುಭದ್ರ ಹಾಗೂ ಸುರಕ್ಷಿತವಾಗಿರುತ್ತದೆ.
ಆದರೆ ಎಲ್ಲಾ ವಲಯದಲ್ಲೂ ನಕಲಿಗಳಿಗಳಿರುವಂತೆ ಇಲ್ಲಿಯೂ ಕೂಡ ನಕಲಿ ವಿದ್ವಾಂಸ ವೇಷಧಾರಿಗಳು ಮೇಲೈಸತೋಡಗಿರುತ್ತಾರೆ.
ವಿದ್ವಾಂಸರಿಗಿರ ಬೇಕಾದ ವಿದ್ಯಾಸಂಪತ್ತು ಇಲ್ಲ.ವಿದ್ವಾಂಸರ ಗುಣವಿಶೇಷಗಳಾದ ವಿನಯ, ವಿನಮ್ರತೆ, ಸರಳತೆ,ಇದ್ಯಾವುದರ ಗಂಧಗಾಳಿಯೂ ಇಲ್ಲ. ಬರೀ ಹಾವಭಾವಗಳಿಂದ ತಮ್ಮ ಹೊಟ್ಟೆ ಪಾಡಿಗಾಗಿ ಸಮುದಾಯವನ್ನು ಶೋಷಣೆಗೆ. ಒಳಪಡಿಸಲೆಂದೇ ಹುಟ್ಟಿದವರು.ಅವರಿಂದ ಸಮುದಾಯವನ್ನು ಜಾಗೃತಿಗೊಳಿಸಬೇಕಾಗಿದೆ.
ಅವರೆಂದರೆ
ಮುಂದುವರಿಯುತ್ತದೆ.
✍️ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.