ಜಿದ್ದಾ (www.vknews.com) : ಕೋವಿಡ್ 19 ಲಾಕ್ ಡೌನ್ ನಿಮಿತ್ತ ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಜಿದ್ದಾ, ಮಕ್ಕಾ ಮತ್ತು ಮದೀನಾ ಒಳಗೊಂಡಂತೆ ಪಶ್ಚಿಮ ಪ್ರಾಂತ್ಯದಲ್ಲಿ ಸಂಕಷ್ಟ ಕ್ಕೆ ಸಿಲುಕಿಕೊಂಡಿದ್ದು ಅವರನ್ನು ತವರಿಗೆ ಮರಳಿಕರೆದೊಯ್ಯುವ ಕೆಲಸವನ್ನು ಸರಕಾರ ಕೂಡಲೇ ಪ್ರಾರಂಭಿಸಬೇಕೆಂದು ಇಂಡಿಯನ್ ಸೋಶಿಯಲ್ ಫ಼ಾರಂ, ಜಿದ್ದಾ, ಕರ್ನಾಟಕ ಘಟಕ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿದ ಸಂಘಟನೆಯ ಅಧ್ಯಕ್ಷ ಕಲಂದರ್ ಸೂರಿಂಜೆ, ಪವಿತ್ರ ಮಕ್ಕಾ ಮತ್ತು ಮದೀನಾಗಳಿಗೆ ಉಮ್ರಾ ವಿಸಾದಲ್ಲಿ ಒಂದು ತಿಂಗಳು ಅಥವಾ ಹದಿನೈದು ದಿನಗಳಿಗೆ ಆಗಮಿಸಿದ ಕನ್ನಡಿಗರು ಅನಿಯಮಿತ ಲಾಕ್ ಡೌನ್ ನಿಂದಾಗಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಹಿರಿಯರು, ಕಾಯಿಲೆ ಪೀಡಿತರು ಮತ್ತು ಗರ್ಭಿಣಿ ಸ್ತ್ರೀಯರು ಇದ್ದು ತವರಿಗೆ ಮರಳಲು ಕಾತರರಾಗಿದ್ದಾರೆ. ಅಲ್ಲದೆ ಇವರಲ್ಲಿ ಹಲವರು ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವವರಿದ್ದು ಒಂದು ತಿಂಗಳಿಗೆ ಬೇಕಾಗುವಷ್ಟು ಮಾತ್ರವೇ ಔಷಧಿ ತಂದವರಿದ್ದಾರೆ. ಇದೀಗ ವಿಮಾನ ಯಾನ ಸ್ಥಗಿತಗೊಂಡಿರುವುದರಿಂದ ತವರಿಗೆ ಮರಳಲು ಸಾಧ್ಯವಾಗದೆ ನಿಯಮಿತ ವೈದ್ಯಕೀಯ ಪರೀಕ್ಷೆ ಮಾಡಲಾಗದೆ ಸಿಲುಕಿಕೊಂಡಿದ್ದಾರೆ. ಕ್ಯಾನ್ಸರ್, ಹೃದ್ರೋಗದಂತಹ ಔಷಧವು ಸೌದಿ ಅರೇಬಿಯಾದಲ್ಲಿ ಅತ್ಯಂತ ದುಬಾರಿಯಾಗಿದ್ದು ಇವರು ಅವರು ಅಪಾಯಕಾರಿ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ರಾಜ್ಯ ಸರಕಾರವು ಮಧ್ಯಪ್ರವೇಶಿಸಿ ಜಿದ್ದಾ ಹಾಗೂ ಮದೀನಾ ಮೂಲಕ ಕರ್ನಾಟಕಕ್ಕೆ ತ್ವರಿತವಾಗಿ ವಿಶೇಷ ವಿಮಾನ ಏರ್ಪಡಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಉಮ್ರಾ ವಿಸಾದಲ್ಲಿ ಬಂದ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರವೇ ಹಣ ತರುವುದರಿಂದ ಖರ್ಚು, ವೆಚ್ಚವನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ಜಿದ್ದಾ ಸುತ್ತಮುತ್ತ ಸಣ್ಣಪುಟ್ಟ ಕೆಲಸಮಾಡುವವರು ತಮ್ಮ ಕುಟುಂಬಿಕರನ್ನು ಉಮ್ರಾ ವಿಸಾದಲ್ಲಿ ಕರೆತರುವುದು ಸಾಮಾನ್ಯವಾಗಿದ್ದು ಇವರಲ್ಲಿ ಹಲವರು ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ ಅಥವಾ ಅವರ ವೇತನ ಕಡಿತಗೊಂಡಿದೆ. ಈ ಪರಿಸ್ಥಿಯಲ್ಲಿ ರೂಮು ಬಾಡಿಗೆ ನೀಡಲಾಗದೆ, ದಿನನಿತ್ಯದ ಆಹಾರ ಮತ್ತು ಇತರ ಖರ್ಚಿಗೆ ಹಣವಿಲ್ಲದೆ ಮುಂದಿನ ದಾರಿ ಕಾಣದೆ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಅನಿವಾಸಿ ಕನ್ನಡಿಗರ ನೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಇಂಡಿಯನ್ ಸೋಶಿಯಲ್ ಫ಼ಾರಮ್ ನಿರಂತರವಾಗಿ ಇಂತಹ ಕರೆಗಳನ್ನು ಪಡೆಯುತ್ತಿದೆ. ಸರಕಾರ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಈ ಅನಿವಾಸಿಗಳನ್ನು ಮರಳಿ ಕರೆದೊಯ್ಯುವುದೊಂದೇ ಸಮಸ್ಯೆಗೆ ಇರುವ ಏಕೈಕ ಪರಿಹಾರವಾಗಿದೆ ಎಂದು ಕಲಂದರ್ ತಿಳಿಸಿದ್ದಾರೆ.
ಇನ್ನೊಂದೆಡೆ ಕಾರ್ಮಿಕ ವಿಸಾದಲ್ಲಿ ಸೌದಿ ಅರೇಬಿಯಾಕ್ಕೆ ಬಂದ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವರ ವೇತನ ಕಡಿತಗೊಂಡಿದೆ ಮತ್ತು ಇನ್ನು ಕೆಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಅತ್ಯಧಿಕವಾಗಿ ಕೋವಿಡ್ 19 ವೈರಸ್ ತಗುಲಿಕೊಂಡವರು ಕಾರ್ಮಿಕ ಶಿಬಿರಗಳಲ್ಲಿ ನೆಲೆಸುವ ವಿದೇಶಿಗಳಾಗಿದ್ದಾರೆ. ಪ್ರತೀ ಕ್ಯಾಂಪ್ ಗಳಲ್ಲಿ ನೂರರಿಂದ 6000 ದಷ್ಟು ಮಂದಿ ಕಾರ್ಮಿಕರು ಒಟ್ಟಾಗಿ ವಾಸಿಸುತ್ತಿದ್ದು ಒಂದು ಕೊಠಡಿಯನ್ನು 6 ರಿಂದ ಎಂಟು ಮಂದಿ ಹಂಚಿಕೊಳ್ಳುತ್ತಾರೆ. ಈ ಪರಿಸ್ಥಿತಿಯಲ್ಲಿ ಓರ್ವನಿಗೆ ವೈರಸ್ ತಗುಲಿದರೂ ಶಿಬಿರದಲ್ಲಿ ಉಳಿದ ಕಾರ್ಮಿಕರಿಗೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಕಾರ್ಮಿಕರು ಮಾನಸಿಕ ಭಯ ಮತ್ತು ಆತಂಕದಿಂದ ಜೀವಿಸುವಂತಾಗಿದೆ.
ಇವೆಲ್ಲವನ್ನೂ ಮನಗಂಡು ಕರ್ನಾಟಕ ಸರಕಾರ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಕರೆದೊಯ್ಯುವುದಕ್ಕಾಗಿ ವಿಶೇಷ ವಿಮಾನವನ್ನು ಆರಂಭಿಸುವ ಕೆಲಸವನ್ನು ತ್ವರಿತಗೊಳಿಸಬೇಕು ಎಂದು ಇಂಡಿಯನ್ ಸೋಶಿಯಲ್ ಫ಼ಾರಮ್ ಅಧ್ಯಕ್ಷರು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.