(www.vknews.com) : ಬನಶಂಕರಿಯಲ್ಲಿರುವ ಕರೆಸಂದ್ರದ ಖುದಾದಾದ್ ಮಸೀದಿಗೆ ನಮಾಜ್ ಮಾಡಲು ಆಗಾಗ್ಗೆ ಜನಾಬ್ ನಿಸಾರ್ ಅಹ್ಮದ್ ರವರು ಬರುತ್ತಿದ್ದರು. ಇಮಾಮ್ ಸಾಬ್ ಮತ್ತು ಮೌಜನ್ ಸಾಬ್ ಜೊತೆ ಅವರ ನಂಟು ಬಹಳ ಚೆನ್ನಾಗಿತ್ತು. ನಾನು ಕನ್ನಡ ಬರವಣಿಗೆಯಲ್ಲಿ ಅಷ್ಟು ಪಕ್ವ ವಾಗಿಲ್ಲದಿದ್ದರೂ ಕವನ ಬರೆಯುವ ಆಸೆ. ನನ್ನ ಸ್ನೇಹಿತ ವಿಜಯ್ ಕುಮಾರ್ ರವರಿಗೆ ಕವನ ಬರೆಯುವುದು ಹೇಗೆ ? ಅದಕ್ಕೆ ಏನಾದರು ಷರತ್ತುಗಳು ಇದೆಯೇ ಎಂದು ಕೇಳಿದೆ. ಅವರು ನನ್ನ ಆಸೆಗೆ ರೆಕ್ಕೆಗಳನ್ನು ಬಿಗಿಗೊಳಿಸಲು ಕವನ ಬರೆಯಲು ಇಂಥದ್ದೇ ಅಂತ ಯಾವುದೇ ಕಡ್ಡಾಯ ಶರತ್ತುಗಳಿಲ್ಲ. ನಿಮ್ಮ ಮನಸ್ಸಿನಲ್ಲಿ ಉಕ್ಕಿ ಬರುವ ಭಾವನೆಗಳನ್ನು ಸರಳ ಪದಗಳನ್ನು ಉಪಯೋಗಿಸಿಕೊಂಡೇ ಬರೆಯಿರಿ ಎಂದರು. ಅವರ ಧೈರ್ಯದ ಮಾತುಗಳು ನನ್ನನ್ನು ಹಾಗೆ ಕುಳಿತುಕೊಳ್ಳಲು ಬಿಡಲಿಲ್ಲ. ಸುಮಾರು ೩೦ ಕವನಗಳನ್ನು ಬರೆದೆ. ಅದರ ಮುನ್ನುಡಿಯನ್ನು ನನಗೆ ಆಕಸ್ಮಿಕವಾಗಿ ಪರಿಚಯವಾಗಿ ನನ್ನ ಅಲ್ಪ ಸ್ವಲ್ಪ ಬರವಣಿಗೆಗೆ ರೆಕ್ಕೆಗಳ ಜೊತೆ ಪುಕ್ಕಗಳನ್ನು ಕಟ್ಟಿದ ವ್ಯಕ್ತಿ ಮಾನ್ಯ ಕೃಷ್ಣ ಮೂರ್ತಿ ಗುರುಗಳು.
ನನ್ನ ಕವನ ಸಂಕಲನಕ್ಕೆ ಬೆನ್ನುಡಿ ಬರೆಯಬೇಕಾಗಿತ್ತು. ಆಗ ನನಗೆ ಹೊಳೆದ ಹೆಸರೇ ಜನಾಬ್ ನಿಸಾರ್ ಅಹ್ಮದ್ ರವರು. ಮಸೀದಿಯ ಮೌಜನ್ ಸಾಹೇಬರನ್ನು ಕರೆದುಕೊಂಡು ಅವರ ಮನೆಗೆ ಹೋದೆ. ಸದ್ಯ ನಮ್ಮದೃಷ್ಟಕ್ಕೆ ಕವಿಗಳು ಮನೆಯಲ್ಲೇ ಇದ್ದರು. ಮೇಲ್ಮಹಡಿ ಮನೆಗೆ ನಮ್ಮನ್ನು ಬರಮಾಡಿಕೊಂಡರು. ಯೋಗಕ್ಷೇಮ ವಿಚಾರಿಸಿದ ನಂತರ ಮಾತು ಮಾತಲ್ಲೇ ನಿತ್ಯೋತ್ಸವದ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಅದರ ಹುಟ್ಟಿನ ಬಗ್ಗೆ ನಾನು ಪ್ರಶ್ನಿಸಿದೆ. ಅವರು ಉತ್ತರಿಸುತ್ತಾ –“ನಾನು ಮನೆಯಲ್ಲಿ ಕುಳಿತಿದ್ದೆ. ಒಂದಿನ ದೂರವಾಣಿ ಕರೆ ಬಂತು. ಆಕಾಶವಾಣಿಯಲ್ಲಿ ಬಿತ್ತರಿಸಲು ಒಂದು ಗೀತೆ ಬೇಕಾಗಿದೆ, ದಯವಿಟ್ಟು ಬರೆದು ಕೊಡಿ. ನಾನು ಒಪ್ಪಿಕೊಂಡೆ. ಸಿಗರೇಟ್ ಹತ್ತಿಸಿದೆ. ಮನೆಯಲ್ಲಿ ಈಕಡೆಯಿಂದ ಆಕಡೆ ಆಕಡೆಯಿಂದ ಈಕಡೆ ತಿರುಗಾಡುತ್ತಾ ಕೆಲವೇ ನಿಮಿಷಗಳಲ್ಲಿ ಬರೆದು ಬಿಟ್ಟೆ. ಆ ಭಾವಗೀತೆ ಇಷ್ಟೊಂದು ಪ್ರಖ್ಯಾತಿ ಪಡೆಯುತ್ತೆ ಅನ್ನುವುದು ನಿಜವಾಗಲೂ ನನಗೆ ಗೊತ್ತಿರಲಿಲ್ಲ. ಎಲ್ಲಾ ನಮ್ಮ ಹಿರಿಯರ ವಲಿಅಲ್ಲಾ ಗಳ ಆಶೀರ್ವಾದ. ಮಾತುಗಳನ್ನು ಮುಂದುವರೆಸುತ್ತಾ ನನ್ನ ಪುಸ್ತಕಗಳನ್ನು ಓದಿದ್ದೀರೋ , ಒಮ್ಮೆ ಓದಿ ಎಂದರು. ಹಾಗೆಯೆ ಮಾತನಾಡುತ್ತ ನಾನು ಬಂದ ವಿಷಯವನ್ನು ಬಿಚ್ಚಿಟ್ಟೆ. ದಯವಿಟ್ಟು ಬೆನ್ನುಡಿ ಬರೆದುಕೊಡಿ ಎಂದೆ. ಅದಕ್ಕೆ ಅವರು ಏನು ಬೇಜಾರು ಮಾಡಿಕೊಳ್ಳಬೇಡಿ ನಾನು ತುಂಬಾ ಬ್ಯುಸಿ ಇದ್ದೇನೆ. ನನ್ನ ಸ್ನೇಹಿತನ ಬಳಿ ಹೋಗಿ , ನಾನು ಕಳಿಸಿದೆ ಅಂತ ಹೇಳಿ , ಅವನೂ ಬಹಳ ಚೆನ್ನಾಗಿ ಬರೆಯುತ್ತಾನೆ ಎನ್ನುತ್ತಾ ಅವರ ಫೋನ್ ನಂಬರ್ ಕೊಟ್ಟರು. ನಾನು ಮತ್ತು ಮೌಜನ್ ಸಾಬ್ ಮಾತುಕತೆ ಮುಗಿಸಿ ಹಿಂತಿರುಗಿದೆವು.
ಇಂದು ಅವರು ಸ್ವರ್ಗವಾಸಿಗಳಾದ ಸುದ್ದಿ ಕೇಳಿ ಬಹಳ ಬೇಸರವಾಯಿತು. ರಂಜಾನ್ ಪುಣ್ಯ ತಿಂಗಳು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಹೆಮ್ಮೆಯ ಕನ್ನಡಿಗ ನಮ್ಮನ್ನು ಅಗಲಿದರೂ ಅವರ ನಿತ್ಯೋತ್ಸವ ಭಾವ ಗೀತೆ ಸದಾ ನಮ್ಮೊಂದಿಗೆ ಹಸಿರಾಗಿ ಉಳಿದಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಲ್ಲಿ ಅವರ ಸವಿ ನೆನಪು ಕಾಡದೆ ಇರದು.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.