(www.vknews.com) : ಇಂದು ಬೆಳಿಗ್ಗೆ ಸುಮಾರು ಹತ್ತುವರೆ ಸಮಯ ಶುಂಠಿ ಹೊಲದಲ್ಲಿ ಯಾರೋ ಮಾತಾನಾಡಿದ ಹಾಗೆ ಭಾಸವಾಯಿತು ಅರೆ ಏನಿದು ಎಂದು ನಮ್ಮಮನೆಯವರೆಲ್ಲಾ ಇಲ್ಲೆ ಇದ್ದಾರೆ ಯಾರಿರಬಹುದು ಎಂದು ಹೊಲದ ಕಡೆ ಕಣ್ಣು ಹಾಯಿಸಿದರೆ ಯಾರೋ ಇಬ್ಬರು ಶುಂಠಿ ಗದ್ದೆಯಲ್ಲಿ ಎನೋ ಆರಿಸುತ್ತಿದ್ದಾರೆ ಎಂಬುದು ನಿಂತ ಜಾಗದಲ್ಲಿಯೇ ಊಹಿಸಿದೆ ಯಾರು ಅವರು ಎಂದು ವಿಚಾರಿಸೋಣ ಅಂತ ಗದ್ದೆಗೆ ಹೋದೆ ಆ ಅಪರಿಚಿತರಿಗೆ ನಾನು ಅವರ ಹತ್ತಿರ ಹೋಗಿದ್ದು ತಿಳಿಯದೆ ತಮ್ಮದೆ ಆದ ಲೋಕದಲ್ಲಿ ಅಲ್ಲಲ್ಲಿ ಮಣ್ಣಿನಡಿಯಾದ ಶುಂಠಿ ಆರಿಸಿ ತಮ್ಮ ಚೀಲ ತುಂಬುತ್ತಾ ಇದ್ದರು, ನಾನು ಅವರ ಬಳಿ ಹೋದವಳೆ ಯಾರ್ರೀ ನೀವು ಇಲ್ಲಿ ಎನ್ ಮಾಡ್ತಾ ಇದ್ದಿರಾ ಎಂದು ಜೋರು ಧ್ವನಿಯಲ್ಲಿ ಗದರಿಸಿದೆ, ನನ್ನ ಕಂಡ ಕೂಡಲೇ ಓಡಿ ಹೋಗಲೂ ಅತ್ತಿತ್ತ ನೋಡಿದರು. ನಾನು ಕದಿಯೋಕೆ ಬಂದಿದ್ದೀರಾ ಇಲ್ಲಿಗೆ ಎಂದು ಕೇಳುವ ಹೋತ್ತಿಗೆ ಆ ಗಂಡಸು ಗದ್ದೆ ದಾಟಿ ಒಡಲು ಅಣಿಯಾದ, ನಾನು ನಮ್ಮ ಮನೆಗೆ ಕೇಳುವ ಹಾಗೆ ಜೋರಾಗಿ ಕಳ್ಳರು ಅಪ್ಪಾಜಿ ಎಂದು ಕಿರುಚಿದೆ, ಆ ಕೂಡಲೇ ಪಕ್ಕದ ಮನೆಯ ಬಾವ ಮತ್ತು ಅಪ್ಪಾಜಿ ಎಲ್ಲರು ಓಡಿ ಬಂದರೂ ಗದ್ದೆಯಲ್ಲಿ ಶುಂಠಿ ಕದಿತಾ ಇದ್ದರು ಎಂದು ದೂರು ಹೇಳಿದೆ, ಆಗ ಏಯ್ ನಿಲ್ಲೋ ಬೆವರ್ಸಿ ಎಂದು ಕೂಗುತ್ತ ಅವರನ್ನು ಹಿಂಬಾಲಿಸಿ ಹೋದರು ಗದ್ದೆಯ ಉಬ್ಬು ತಗ್ಗಿನಲ್ಲಿ ಓಡಲಾರದೇ ಬಿದ್ದು ಬಿಟ್ಟ.
ಅಷ್ಟರಲ್ಲಿ ತಮ್ಮ ದೊಡ್ಡಪ್ಪ ಅವನ ಹಿಂದೆ ಅವಸರ ಅವಸರವಾಗಿ ಓಡಲು ಮಾಡುತ್ತಿರುವ ಆ ಹೆಂಗಸನ್ನು ಹಿಡಿದು ನಾಲ್ಕು ಪೆಟ್ಟು ಬಾರಿಸಿದ್ದರು, ನಾನು ಅಪ್ಪಾಜಿಯ ಜೊತೆ ಅವನನ್ನು ಹಿಡಿಯಲು ಹೋಗಿದ್ದೆ ಆತ ಬಿದ್ದ ಕೂಡಲೇ ಅವನನ್ನು ಹಿಡಿದು ಕೊಂಡೆವು, ಆತ ಹೇಗಾದರು ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ, ನಾನು ಅಲ್ಲೆ ಪಕ್ಕದಲ್ಲಿ ಇದ್ದ ಒಂದು ಬೇಲಿ ಗೂಟವನ್ನು ಮುರಿದುಕೊಂಡು ಆತನಿಗೆ ಹೋಡೆದೆ ಬಿಟ್ಟೆ, ಆತ ತಪ್ಪಾಯ್ತು ಕ್ಷಮಿಸಿ ಹೊಡಿಬ್ಯಾಡ್ರಿ ಬಿಡ್ರಿ ಎಂದು ಆರ್ತಧ್ವನಿಯಲ್ಲಿ ಹೇಳಿದ, ಆಗ ಅಲ್ಲೇ ಗದ್ದೆ ಪಕ್ಕದ ಬದಿಯಲ್ಲಿ ಇದ್ದ ಮಾವಿನ ಮರಕ್ಕೆ ಇಬ್ಬರನ್ನು ಕಟ್ಟಿಹಾಕಿದರು. ನನ್ನ ತಮ್ಮ ಮತ್ತು ಬಾವ ಅವರಿಗೆ ಹೊಡೆದು ಬುದ್ಧಿ ಕಲೀಸ್ತೀವೀ ಆ ಬೋಳಿಮಕ್ಕಳಿಗೆ. ಕದಿತೀರಾ ಇಲ್ಲಿ ಎಂದು ಕಿರುಚುತ್ತಾ ಹೋದರು ಅಪ್ಪಾಜಿ ಇದ್ದವರು ಹೆಂಗಸಿಗೆ ಹೊಡಿಬೇಡಿ ಎಂದರು. ಆಗ ಅವನಿಗೆ ಪೆಟ್ಟಿನ ಸುರಿಮಳೆಯೇ ಬಿತ್ತು ಆತನಿಂದ ಕೇಳಿಸುತ್ತಿದ್ದಿದ್ದು ಒಂದೇ ಧ್ವನಿ ತಪ್ಪಾಯ್ತು ಕ್ಷಮಿಸಿ ಹೊಡಿಬ್ಯಾಡ್ರಿ ಬಿಡ್ರಿ ಅಂತ ಅಷ್ಟೆ..
ಆ ಹೆಂಗಸಿಗೆ ಅವನು ಗಂಡ ಅಂತೆ, ಸುಮಾರು ನಲವತ್ತೈದರ ವಯಸ್ಸು ಅವಳಿಗೆ, ಗಂಡನಿಗೆ ಹೋಡೆಯುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು, ನನಗೆ ಅವರನ್ನು ನೋಡಿ ಕರುಳು ಕಿವುಚಿದ ಹಾಗೆ ಆಯಿತು, ಬಾವ ಪ್ಲೀಸ್ ಹೊಡಿಯೋದು ಸಾಕು ಬಿಡಿ ಎಂದು ನಾನು ಹೇಳಿದೆ, ಪೋಲಿಸರಿಗೆ ಹೇಳೋಣ ಸಾಕು ಬಿಡಿ ಎಂದು ಹೇಳಿದೆ, ಅಪ್ಪಾಜಿ ಪೋಲಿಸ್ ಗೆ ಪೋನು ಮಾಡ್ತೀನಿ ಅಂತ ಮನೆಗೆ ಹೋದರು, ನಾನು ಅಷ್ಟರಲ್ಲೆ ಅವರ ಬಳಿ ಹೋಗಿ ಯಾವ ಊರು ನಿಮ್ಮದು ಯಾಕೆ ಕದಿಯೋದು, ದುಡಿದು ತಿನ್ನೋಕೆ ಎನು ರೋಗ ನಿಮಗೆ ಎಂದು ಕೇಳಿದೆ. ಆಗ ಆ ಹೆಂಗಸು ನಮ್ಮದು ಕೇರಳ ಕಣ್ರಿ ಇಲ್ಲಿಗೆ ಬಂದಿ ಹನ್ನೆರಡು ವರ್ಷ ಆಯಿತು ಎಂದಳು. ಇಷ್ಟು ದಿನ ಎಲ್ಲಿ ಇದ್ದೀರಿ ಅಂದಾಗ ಕೊಡುರುನಾಗ ಇದ್ವಿ ಅನ್ನುತ್ತಾ ಅವಳು ಹೇಳಲೂ ಶುರು ಮಾಡಿದಳು. ನಾವು ಕೊಡುರು ಅಲ್ಲಿ ಗೌಡ್ರು ಮನೇಲಿ ಶುಂಠಿ ಕೆಲಸ ಮಾಡೋರು “ಈಗ ಗೌಡ್ರಿಗೆ ಶುಂಠಿ ವ್ಯಾಪಾರ ಇಲ್ಲದೆ ತುಂಬಾ ಲಾಸ್ ಆಗಿ ನಮ್ಮನ್ನ ಕೆಲಸದಿಂದ ತೆಗದ್ರು ಅಕ್ಕಾss. ನಮ್ಮ ಊರಿಗೆ ಹೋಗೋಕೆ ಆಗಲ್ಲ ಉಪವಾಸ ಇದೀವ್ರಿ ಎಲ್ಲೂ ಕೆಲಸನೂ ಇಲ್ಲಾರೀ ಇಷ್ಟು ದಿನ ಹೆಂಗೋ ಗಂಜಿ ಕುಡುದು ಇಷ್ಟು ದಿನ ಇದ್ದೀವೀ ಎರಡು ದಿನ ಆಯಿತು ಗಂಜಿನೂ ಇಲ್ಲರೀ, ಈ ಲಾಕ್ ಡೌನ್ ಅಲ್ಲಿ ನಾವು ಎಲ್ಲಿಗೇ ಅಂತ ಹೋಗೋದ್ರೀ ಹೊಟ್ಟೆ ಪಾಡಿಗೆ ಅದುಕ್ಕೆ ಈ ದಂದಾ ಮಾಡಕೆ ಬಂದೀವ್ ರ್ರೀ ಎಂದಳು.
ಹೆಂಗಸು ಕಣ್ಣಿರಿಡುತ್ತಾ, ಅವಳ ಈ ಮಾತಿನಲ್ಲಿ ಎಷ್ಟೂ ಸತ್ಯವೋ ಸುಳ್ಳೋ ಗೋತ್ತಿಲ್ಲ, ಆದರೆ ಅವಳ ಮಾತು ಮನಸ್ಸಿಗೆ ಬೇಸರವನ್ನು ಉಂಟು ಮಾಡಿತ್ತು, ಅದೇ ಕೂಡಲೇ ಅಪ್ಪಾಜಿಯ ದ್ವನಿ ಪೋಲೀಸ್ ಸ್ಟೇಷನ್ ಫೋನ್ ನಂಬರ್ ಇದಿಯಾ ಎಂದು ಮನೆಯಿಂದಲೇ ಕೂಗಿದರು, ಬೇಡ ಬನ್ನಿ ಎಂದು ನಾನು ಕರೆದೆ ಅವರನ್ನು ಕಟ್ಟಿದ ಹಗ್ಗ ಬಿಚ್ಚ ತೊಡಗಿದೆ, ಎಲ್ಲಾರೂ ನನಗೆ ಬೈಯುತ್ತಾ ಇದ್ದಾರೆ, ಯಾಕೆ ಎನು ಆಯಿತೇ ನಿನಗೆ ಎಂದು ಈ ಕಳ್ಳನನ್ ಮಕ್ಕಳನ್ನು ಹಾಗೆ ಬಿಡಬಾರದು ಎಂದು ದೊಡ್ಡಪ್ಪ ಹೇಳಿದರು, ಅಪ್ಪಾ ಬರುವಷ್ಟರಲ್ಲಿ ಅವರ ಕಟ್ಟನ್ನು ಬಿಚ್ಚಿದೆ. ಆಗ ಕುಡಿಯಾಕ ಸ್ವಲ್ಪ ನೀರು ಸಿಗುತ್ತಾ ಎಂದು ಆತ ನೋವಿನ ದ್ವನಿಯಲ್ಲಿ ಕೇಳಿದಾಗ ಕಣ್ಣಿರು ಬರುವಷ್ಟು ಮನಸ್ಸಿಗೆ ಬೇಸರವಾಯಿತು.
ಅಪ್ಪಾಜಿ ಬಂದವರು ಎನು ಎಂದರು, ಪಾಪ ಅವರನ್ನು ಬಿಡೋಣ ಹೊಟ್ಟೆ ಪಾಡಿಗೆ ಹಾಗೆ ಮಾಡಿದಾರೆ ಅಷ್ಟೆ, ಉಪವಾಸ ಇದಾರೆ ಅಂದೆ. ಅವರಿಗೆಸಿಟ್ಟು ಬಂದಿತು ನಿನಗೆ ತಲೆ ಸಮ ಇದಿಯಾ ಎಂದರು, ನಾನು ಅವರಿಬ್ಬರಿಗೂ ನೀರು ಕೊಟ್ಟು ಪಾಪ ಅಪ್ಪಾಜಿ ಬಿಡು ಹೇಗಾದರು ಬದುಕಲಿ ಎಂದು ಕಾಡಿ ಬೇಡಿದೆ ಅವರ ಮನಸ್ಸು ಕರಗಿತೋ ಎನೋ ಹೋಗಿ ಇನ್ನೊಂದು ಸಾರಿ ಹೀಗೆ ಮಾಡಬೇಡಿ ಎಂದರಷ್ಟೆ. ನಾನು ಅವರಿಗೆ ಬನ್ನಿ ಊಟ ಮಾಡ್ಬೋದು ಎಂದೆ ಬರಲಿಲ್ಲ ಬಾಡ್ರಿ ಎಂದು ಹಾಗೆ ಹೋದರು. ಬಹುಷಃ ಅವರಿಗೆ ನಮ್ಮ ಹೊಡೆತ ಬೈಗುಳಗಳೆ ಹೊಟ್ಟೆ ತುಂಬಿದ್ದವು ಅನ್ನಿಸುತ್ತದೆ…
– ಸಾನಿಕ ಅಹನಿ ಹೊಸನಗರ
ನನಗೆ ಇಲ್ಲಿ ಉಳಿದವರ ಬೈಗುಳ ಯಾರು ಏನೇ ಅಂದರೂ ನನ್ನ ಮನಸು ಆ ಹೊಟ್ಟೆ ಪಾಡಿನ ಕಳ್ಳರ ಬಗ್ಗೆ ಯೋಚಿಸುತ್ತಿತ್ತು..
ಇದೆ ಅಲ್ಲವೇ ನಮ್ಮ ಹಸಿವಿನ ಭಾರತ, ಎಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ, ಇದೆ ತರಹ ಎಷ್ಟೋ ಜನರು ಹಸಿವಿನಿಂದ ಕಂಗೆಟ್ಟು ಯಾವುದೋ ದಂದೆಗಳ ಮೊರೆ ಹೋಗಿದ್ದಾರೆ. ದೇವರೆ ಬಡವರನ್ನು ಹಸಿವಿನಿಂದ ಕಾಪಾಡು.
ಸ್ನೇಹಿತರೆ ಇಂದು ಬಡವರ ಭಾರತ ಹಸಿವಿನಿಂದ ಸಾಯುತ್ತಿದೆ…
-ಸಾನಿಕ ಅಹನಿ ಹೊಸನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.