ವಿಶ್ವಕನ್ನಡಿಗ ನ್ಯೂಸ್(www.vknews.in):ಕೋವಿಡ್ ಬಾಧಿತರಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಸ್ಲಿಂ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ರೋಗಿಯ ಸಮೀಪವಿದ್ದ ವೈದ್ಯೆಯೋರ್ವಳು ಆ ಯುವತಿಗೆ ಪವಿತ್ರ ಶಹಾದತ್ ಹೇಳಿಕೊಟ್ಟು ಈ ಭೂಮಿಯಿಂದ ಬೀಳ್ಕೊಡುವ ಮೂಲಕ ಸುದ್ಧಿಯಾಗಿದ್ದಾರೆ.
ಕೇರಳದ ಪಟ್ಟಾಂಭಿಯ ಸೇವನಾ ಆಸ್ಪತ್ರೆಯ ವೈದ್ಯೆಯಾದ ಡಾ. ರೇಖಾ ಕೃಷ್ಣನ್ ಅವರೇ ಈ ಮಾದರಿ ವೈದ್ಯೆ. ಕೊವಿಡ್ ಪ್ರೊಟೊಕಾಲ್ ಕಾರಣ ಕೊನೆಯ ಗಳಿಗೆಯಲ್ಲಿ ರೋಗಿಯ ಸಮೀಪ ಯಾರೂ ಇಲ್ಲದ ಪರಿಸ್ಥಿತಿಯನ್ನು ಮನಗಂಡ ಇಸ್ಲಾಮಿನ ಕುರಿತು ಪ್ರಾಥಮಿಕ ಜ್ಞಾನವಿದ್ದ ಡಾ.ರೇಖಾ ರೋಗಿಯ ಕಿವಿಯ ಬಳಿ ತೆರಳಿ ಶಹಾದತ್ ಹೇಳಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಈ ಸನ್ನಿವೇಶದ ಕುರಿತು ಮಾತನಾಡಿದ ಡಾ.ರೇಖಾ ‘ಕೊನೆಗಳಿಗೆಯಲ್ಲಿ ಆ ರೋಗಿಯ ಚಡಪಡಿಸುವಿಕೆಯನ್ನು ಗಮನಿಸಿದಾಗ ಆಕೆ ಯಾವುದೋ ಒಂದು ವಸ್ತುವಿಗೆ ಕಾಯುತ್ತಿರುವಂತೆ ಬಾಸವಾಯಿತು. ನಾನು ಈ ಹಿಂದೆ ದುಬೈಯಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಿದ್ದರಿಂದ ಮುಸಲ್ಮಾನರು ಕೊನೆಗಳಿಗೆಯಲ್ಲಿ ಹೇಳಿಕೊಡುವ ಆ ವಾಕ್ಯವು ನನಗೆ ಬಾಯಿಪಾಠವಾಗಿತ್ತು. ನಾನು ಅದೇ ವಾಕ್ಯವನ್ನು ಆ ರೋಗಿಯ ಕಿವಿಯಲ್ಲಿ ಹೇಳಿದ ಕೆಲವೇ ಕ್ಷಣಗಳಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಯಿತು. ಇದರಿಂದಾಗಿ ನನ್ನ ಮನಸ್ಸಿಗೆ ಒಂದೆಡೆ ದುಃಖವು ಇನ್ನೊಂದೆಡೆ ಸಮಾಧಾನವೂ ಆಯಿತು’ ಎಂದು ತನ್ನ ಅನುಭವವನ್ನು ವಿವರಿಸಿದರು.
ಮರಣದ ವೇಳೆಯಲ್ಲೂ, ಶವಸಂಸ್ಕಾರದಲ್ಲೂ ಮಾನವೀಯತೆಯನ್ನು ಮರೆತು ಜಾತಿ ಧರ್ಮವೆಂದು ಬಡಿದಾಡಿಕೊಳ್ಳುವ ಯುವಜನತೆಗೆ ಡಾ.ರೇಖಾರ ಈ ಕಾರ್ಯವು ಪಾಠವಾಗಲಿ.
ಬರಹ:ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.