(www.vknews.com) ; ಕಳೆದ ಕೆಲವು ತಿಂಗಳಿಂದೀಚೆಗೆ ಕರಾವಳಿಯಲ್ಲಿ ಮತ್ತೆ ಅಶಾಂತಿಯ,ಆತಂಕದ ವಾತಾವರಣ ತಲೆದೋರಿದೆ.
ಶಾಲಾ ಕ್ಯಾಂಪಸ್ ನಲ್ಲಿ ಹೆಣ್ಣು – ಗಂಡು ಮಾತಾಡಿದ್ದಕ್ಕೆ ವಿದ್ಯಾರ್ಥಿಗಳು ಪರಸ್ಪರ ಕಾದಾಡಿದರು,ಅಲ್ಲಲ್ಲಿ ವಿಭಿನ್ನ ಸಂಘಟನೆಯ ಯುವಕರು ತಲವಾರು, ತ್ರಿಶೂಲ ಝಲಪಿಸಿ ಹಲ್ಲೆ ಕೊಲೆ ಯತ್ನ ನಡೆಸಿದರು, ಬಸ್ಸು ಯಾತ್ರಿಕರನ್ನು ತಡೆದು ನಿಲ್ಲಿಸಿ ಯಾರ್ಯಾರದೋ ಮಕ್ಕಳನ್ನು ಹಿಡಿದು ಅನೈತಿಕ ಪೋಲೀಸ್ ಗಿರಿ ಮಾಡುವುದರು,ಬಸ್ಸಿನ ಒಂದೇ ಸೀಟಿನಲ್ಲಿ ಕುಳಿತು ಮಾತಾಡಿದ್ದನ್ನು ನೆಪ ಮಾಡಿ ಅಮಾಯಕ ಮಹಿಳೆಯ ವೀಡಿಯೋ ಮಾಡಿ ಹಂಚಿಕೊಂಡರು,
ಸಾರ್ವಜನಿಕ ಭಾಷಣ ಮಾಡುತ್ತಾ ಇನ್ನೊಂದು ಧರ್ಮದವರ ಆಚಾರ ವಿಚಾರಗಳನ್ನು ಮುಂದಿಟ್ಟು ಕಪೋಲ ಕಲ್ಪಿತ ಸುಳ್ಳು ಆರೋಪ ಮಾಡಿ ಅನ್ಯ ಧರ್ಮದವರಲ್ಲಿ ಭಯದ ವಾತಾವರಣ ನಿರ್ಮಿಸಿದರು, ಕಳ್ಳಕಾಕಂದಿರು ಅವರ ಗುರಿ ಸಾಧನೆಗಾಗಿ ಶೃದ್ದಾ ಕೇಂದ್ರಗಳನ್ನು ಹಾಳುಗೆಡವಿದರೆ ತನಿಖೆ ನಡೆಸುವ ಮುನ್ನವೇ ಅದಕ್ಕೆ ಇನ್ನೊಂದು ಧರ್ಮೀರನ್ನು ಹೊಣೆ ಮಾಡಿ ಪ್ರತಿಭಟನೆ ಮಾಡಿ ಅವ್ಯಾಚ್ಯವಾಗಿ ಬಯ್ದು ಬಿಟ್ಟರು , ವಾಹನಗಳನ್ನು ಪುಡಿಗಟ್ಟಿದರು,
ಮತಾಂತರದ ಪುಕಾರು ಎಬ್ಬಿಸಿ ಇಗರ್ಜಿಗಳಿಗೆ ದಾಳಿ ಮಾಡಿದರು.ಇಂತಹ ಹಲವಾರು ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಬಂದಿದೆ.
ಇದಕ್ಕೆಲ್ಲಾ ಪೀಠಿಕೆ ಎಂಬಂತೆ ಪೋಲೀಸರ ಅನುಮತಿ ಪಡೆದುಕೊಂಡೇ ಸಾರ್ವಜನಿಕರಿಗೆ ತ್ರಿಶೂಲ ವಿತರಿಸಲಾಯಿತು.ಇನ್ನು ಇದನ್ನೆಲ್ಲಾ ನಿಯಂತ್ರಣಕ್ಕೆ ತರಲು ಪೋಲೀಸರಿಗೆ ಸೂಚಿಸ ಬೇಕಿದ್ದ ನಾಡಿನ ದೊರೆ ಅ್ಯಾಕ್ಷನ್ ರಿಯಾಕ್ಷನ್ ಹೇಳಿಕೆ ಕೊಟ್ಟು ಬಿಟ್ಟರು.ಈ ಬಗ್ಗೆ ಮಾತಾಡ ಬೇಕಿದ್ದ ವಿರೋಧ ಪಕ್ಷಗಳು ನಾಡಿನಲ್ಲಿ ಏನೂ ನಡೆದಿಲ್ಲ ಎಂಬಂತೆ ಆರಾಮವಾಗಿ ನಿದ್ದೆ ಮಾಡುತ್ತಿದ್ದಾರೆ.ಇದು ನಮ್ಮ ಕರಾವಳಿ ಜಿಲ್ಲೆಯ ಇಂದಿನ ದುಸ್ತಿತಿ.
ಶಾಂತಿ ನೆಮ್ಮದಿಯನ್ನೇ ಬಯಸುವ ನಾವುಗಳು ಇಂತಹ ಪರಿಸ್ಥಿತಿಯನ್ನು ಕಂಡು ರೋಸಿ ಹೋಗಿದ್ದೇವೆ.ಇಂತಹ ವಿಷ ವರ್ತುಲದಲ್ಲಿ ಕರಾವಳಿಗರು ಬಿದ್ದು ಒದ್ದಾಡುತ್ತಿರುವುದು ಅವರು ಮಾಡಿದ ಯಾವ ತಪ್ಪಿಗಾಗಿ ಎಂದು ಅರ್ಥ ಆಗ್ತಾ ಇಲ್ಲ.ಬೆಲೆ ಏರಿಕೆ,ನಿರುದ್ಯೋಗ, ಆಮೆಗತಿಯ ಅಭಿವೃದ್ದಿ ಕಾರ್ಯ,ಹಾಗೂ ಕೊರೋಣದಂತಹ ದುರಂತದಿಂದ ಜನ ತತ್ತರಿಸುತ್ತಿದ್ದರೂ ಈ ಬಗ್ಗೆ ತಲೆಕೆಡಿಸಿ ಕೊಳ್ಳಲು ಯಾರೂ ಇಲ್ಲದ ಪರಿಸ್ಥಿತಿ.
ಎಲ್ಲಾರೂ ಧರ್ಮವನ್ನು ರಕ್ಷಿಸುವ ಪೈಪೋಟಿಯಲ್ಲಿ ಅಧರ್ಮವೇ ಜಿಲ್ಲೆಯಲ್ಲಿ ವಿಜ್ರಂಭಿಸುವುದಂತೂ ಸುಳ್ಳಲ್ಲ.ಜನರ ಪ್ರತಿಭಟಿಸುವ ಹಕ್ಕನ್ನೂ ಕೂಡಾ ಮೇಲಿನವರ ಒತ್ತಡದಿಂದಾಗಿ ಹತ್ತಿಕ್ಕುವ ಕೆಲಸ ಕಾನೂನು ಪಾಲಕರಿಂದಲೇ ಉಂಟಾಗುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ.ಕೆಲವೊಂದು ಪ್ರಕರಣದಲ್ಲಿ ಪೋಲೀಸರೇನಾದರೂ ಕ್ರಮ ಕೈಗೊಂಡರೆ ಅವರ ಕೈಯ್ಯನ್ನು ಕಟ್ಟಿ ಹಾಕುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿದೆ.ಒಟ್ಟಾರೆ ನೆಮ್ಮದಿ ಮರೀಚಿಕೆಯಾಗಿ ಜನ ಮಾನಸಿಕ ಸ್ಥೈರ್ಯ ಕಳೆದು ಕೊಂಡಿದ್ದಾರೆ.
ಇನ್ನು ಜನರಿಗೆ ಸರಿಯಾದ ಮಾರ್ಗ ದರ್ಶನ ನೀಡಿ ಶಾಂತಿ ಸುವ್ಯವಸ್ಥೆಗೆ ಪ್ರೇರೇಪಿಸ ಬೇಕಾದ ಬಹುತೇಕ ಪತ್ರಿಕಾ ,ಮೀಡಿಯಾಗಳು ಯಾವುದೋ ರಾಜಕೀಯ ಪಕ್ಷದ ತುತ್ತೂರಿಯಂತೆ ವರ್ತಿಸಿ ಬೆಂಕಿಗೆ ತುಪ್ಪ ಸುರಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.ಧರ್ಮದ ವಾಹಕರಾದ ಸ್ವಾಮೀಜಿಗಳು,ಮೌಲಾನಗಳು,ಪಾದ್ರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ.ನಮ್ಮ ಕರಾವಳಿ ಇನ್ನೂ ಇದೇ ರೀತಿ ಮುಂದುವರಿಯ ಬೇಕಾ?ಅಥವಾ ಇದಕ್ಕೊಂದು ಪರಿಹಾರ ಬೇಕಾ ಎಂಬುದನ್ನು ನಾಡಿನ ಪ್ರಬುದ್ದ ಜನತೆ ತೀರ್ಮಾನಿ ಸ ಬೇಕಿದೆ.ನಾವೆಲ್ಲಾ ನಿರೀಕ್ಷೆ ಇಟ್ಟಂತಹ ಕಾನೂನು ಪಾಲಕರಿಗೆ ಇದನ್ನು ಬದಲಾಯಿಸಲು ಖಂಡಿತ ಸಾಧ್ಯವಿದೆ.ಪ್ರಾಮಾಣಿಕವಾಗಿ ಕಾನೂನು ಜಾರಿ ಮಾಡಿದರೆ ಖಂಡಿತ ಕರಾವಳಿ ಸುವ್ಯವಸ್ಥೆಯನ್ನು ಹೊಂದಲಿದೆ.
ಇದರ ಮೊದಲ ಹಂತವೆಂಬಂತೆ ಪ್ರತೀ ಪಂಚಾಯಿತಿ ಮಟ್ಟದಲ್ಲಿ ಶಾಂತಿ ಸಮಿತಿಯನ್ನು ಆಸ್ತಿತ್ವಕ್ಕೆ ತಂದು ಅದಕ್ಕೆ ಕಾನೂನು ಮಾನ್ಯತೆ ನೀಡಬೇಕು. ಸ್ಥಳೀಯವಾಗಿ ಉಂಟಾಗುವ ಏನಾದರೂ ಚಿಕ್ಕಪುಟ್ಟ ಘಟನೆಯನ್ನು ಮಾತುಕತೆಯ ಮೂಲಕ ಅಲ್ಲಿಗೇ ಮುಗಿಸಿ ಬಿಡುವ ಹೃದಯ ವಿಶಾಲತೆಯನ್ನು ನಾವೆಲ್ಲಾ ರೂಡಿಸಿ ಕೊಳ್ಳಬೇಕು.ಕೊನೆಯದಾಗಿ,ಜಿಲ್ಲೆಯಲ್ಲಿ ಇಷ್ಟೆಲ್ಲಾ ಆತಂಕಕಾರಿ ಬೆಳವಣಿಗೆಗಳು ಉಂಟಾದರೂ ತೊಂಬತ್ತೊಂಬತ್ತು ಶೇಖಡ ಹಿಂದು ಮುಸ್ಲಿಂ ಕ್ರೈಸ್ತ ಬಾಂದವರ ಮಧ್ಯೆ ಇರುವ ಬಾಂದವ್ಯಕ್ಕೆ ಯಾವುದೇ ಬಿರುಕು ಉಂಟಾಗಿಲ್ಲ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥ ಮಾಡಿ ಕೊಳ್ಳಬೇಕು.🍀
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.