(www.vknews.in) : ಒಂದು ದೇಶದ ಅಥವಾ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಮಹತ್ತರದ ಪಾತ್ರ ವಹಿಸುತ್ತದೆ. ಸರ್ಕಾರಗಳು ಮನಸ್ಸು ಮಾಡಿದರೆ ಮರುಭೂಮಿಯನ್ನು ಸಹ ಪ್ರವಾಸಿಗರನ್ನು ಸೆಳೆಯುವ ಸ್ವರ್ಗವನ್ನಾಗಿ ಮಾರ್ಪಡಿಸಬಹುದು. ದುಬೈ ಉದಾಹರಣೆ ನಿಮ್ಮ ಮುಂದಿದೆ. ಅಲ್ಲಿಗೆ ಹೋಗಿ ಬಂದವರು, ಭೂಮಿ ಮೇಲೆ ಹುಟ್ಟಿದ ಮೇಲೆ ಒಮ್ಮೆ ದುಬೈ ನೋಡಲೇ ಬೇಕು, ಇಲ್ಲವಾದಲ್ಲಿ ಜೀವನ ವ್ಯರ್ಥ ಎನ್ನುವವರುಂಟು. ಪ್ರಪಂಚದ ಅನೇಕ ದೇಶಗಳು ತನ್ನ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿವೆ. ಭಾರತ ದೇಶದಲ್ಲಿ ಕೆಲವು ರಾಜ್ಯಗಳು ಮಾತ್ರ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತವೆ. ಎಲ್ಲ ರಾಜ್ಯಗಳಿಗೆ ತನ್ನದೇ ಆದ ಭೌಗೋಳಿಕ,ಚಾರಿತ್ರಿಕ,ಪ್ರಾಕೃತಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿವೆ. ಪ್ರವಾಸಿಗರು ಒಂದು ಪ್ರವಾಸಿ ತಾಣಕ್ಕೆ ಏಕೆ ಬರುತ್ತಾರೆ. ಆ ತಾಣದ ಬಗ್ಗೆ ಅವರ ಮನಸ್ಸಿನಲ್ಲಿ ಏನೋ ಕುತೂಹಲಗಳು ಇರುತ್ತವೆ, ಕನಸುಗಳಿರುತ್ತವೆ. ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಅಲ್ಲಿಯ ಮೂಲನಿವಾಸಿಗಳಿಗಿಂತ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಪ್ರವಾಸಿಗರು ಏನು ಬಯಸುತ್ತಾರೆ ? ತನ್ನ ಸುರಕ್ಷತೆ, ತಂಗಲು ಸುರಕ್ಷಿತ ವಾತಾವರಣ, ಶುಚಿಯಾದ, ರುಚಿಕರ, ಸಾಮಾನ್ಯ ಬೆಲೆಯ ಊಟ, ನಗುನಗುತ್ತಾ ಸ್ಪಂದಿಸುವ ಜನ ಇತ್ಯಾದಿ.
ಪರದೇಶಗಳಿಂದ, ಪರರಾಜ್ಯಗಳಿಂದ ಬಂದವರ ಜೊತೆ ನಯವಾಗಿ ವರ್ತಿಸಿದರೆ, ಅವರು ತಮ್ಮ ಜೊತೆಯಲ್ಲಿ ಸವಿ ನೆನಪುಗಳನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಾರೆ. ಇದರಲ್ಲಿ ಆಟೋ ಡ್ರೈವರ್ ಗಳ,ಟ್ಯಾಕ್ಸಿ ಡ್ರೈವರ್ ಗಳ, ಗೈಡುಗಳ, ಹೋಟೆಲುಗಳ, ವ್ಯಾಪಾರಿಗಳ, ಜನಸಾಮಾನ್ಯರ ಬಹಳ ಮುಖ್ಯ ಪಾತ್ರಗಳು ಉಂಟು. ಪ್ರವಾಸಿಗರನ್ನು ಕಂಡಾಕ್ಷಣ ಮೋಸ ಮಾಡುವ, ಲೂಟಿ ಮಾಡುವ ಮನೋಭಾವ ಉಳ್ಳವರು ದೇಶಕ್ಕೆ ಮತ್ತು ರಾಜ್ಯಕ್ಕೆ ಮಸಿ ಬಳೆಯುತ್ತಿದ್ದಾರೆ ಎಂದರ್ಥ. ಭಾರತ ದೇಶದಲ್ಲಿ ಅನೇಕ ಪ್ರವಾಸಿ ತಾಣಗಳಿವೆ, ಪವಿತ್ರ ಸ್ಥಳಗಳಿವೆ. ಕೋಟ್ಯಂತರ ಜನರು ತಮ್ಮ ಜೀವನ ಸಾಗಿಸಲು ಪ್ರವಾಸಿಗರನ್ನು ಅವಲಂಬಿತರಾಗಿದ್ದಾರೆ. ಪ್ರವಾಸೋದ್ಯಮ ಎಷ್ಟು ಹೆಚ್ಚಾಗಿ ಅಭಿವೃದ್ಧಿಗೊಳ್ಳುತ್ತದೋ, ಅದನ್ನು ನಂಬಿರುವ ಜನರ ಬದುಕು ಸಹ ಅಷ್ಟೇ ಉತ್ತಮಗೊಳ್ಳುತ್ತದೆ. ಶ್ರೀಲಂಕಾದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಭಂಗ ಮಾಡಿದ ಕಾರಣ ಪ್ರವಾಸೋದ್ಯಮ ಕುಸಿಯಿತು. ಪ್ರವಾಸೋದ್ಯಮ ಅವಲಂಬಿತ ಜನರ ಬದುಕು ಮುಳುಗುತ್ತಿರುವ ದೋಣಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳನ್ನು ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಬಳಸಿಕೊಳ್ಳಲಾಗುತ್ತಿದೆ. ಕೇವಲ ತಾಜ್ ಮಹಲ್ ನೋಡಲು ವರ್ಷಕ್ಕೆ ಸುಮಾರು ೭೦ ಲಕ್ಷ್ಯ ಜನರು ಬರುತ್ತಾರೆ. ಕೋಟ್ಯಂತರ ರೂಗಳ ಲಾಭ ಸರ್ಕಾರ ಮತ್ತು ಅಲ್ಲಿನ ಜನರು ಪ್ರವಾಸಿಗರಿಂದ ಪಡೆಯುತ್ತಾರೆ. ಕೋಮುವಾದದಿಂದ ಏನಾದರು ಅನಾಹುತಗಳು ಸಂಭವಿಸಿದರೆ ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಜನರ ಬದುಕು ಏನಾಗಬೇಕು. ಯೋಚಿಸಿದ್ದೀರಾ…!
ಇಂದಿಗೂ ಸಹ ಅನೇಕ ಪ್ರವಾಸಿ ತಾಣಗಳಲ್ಲಿ ಮತ್ತು ಪವಿತ್ರ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲ, ಶೌಚಾಲಯಗಳ ವ್ಯವಸ್ಥೆ ಇಲ್ಲ, ವಾಹನಗಳನ್ನು ನಿಲ್ಲಿಸುವ ಸರಿಯಾದ ವ್ಯವಸ್ಥೆ ಇಲ್ಲ, ಕಸರಹಿತ ರಸ್ತೆ ಚರಂಡಿಗಳಿಲ್ಲ. ಸುಸಜ್ಜಿತ ತಂಗುದಾಣಗಳಿಲ್ಲ, ಪ್ರವಾಸಿಗರಿಂದ ಹಣ ಮಾತ್ರ ಬೇಕು. ಸರ್ಕಾರಗಳು ಮತ್ತು ಪವಿತ್ರ ಸ್ಥಳಗಳ ಪದಾಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ದರ್ಗಾ ಆಗಲಿ ಅಥವಾ ಮಂದಿರ ಆಗಲಿ, ಪ್ರವಾಸಿಗರು ಶಾಂತಿಯಿಂದ ಕುಳಿತುಕೊಳ್ಳಲು ಒಂದು ಸ್ಥಳವನ್ನು ನಿರ್ಧರಿಸಿಟ್ಟಿರಬೇಕು. ಶಾಂತಿಯಿಂದ ಪ್ರಾರ್ಥನೆ ಮಾಡಲು ಸಹ ಒಂದು ಜಾಗ ಇರಬೇಕು. ಸ್ಥಳೀಯ ಸಂಚಾಲಕರು ಬಯಸಿದರೆ ಯಾವ ವ್ಯವಸ್ಥೆ ಬೇಕಾದರೂ ಮಾಡಬಹುದು. ಪ್ರವಾಸಿಗರು ಅತಿಥಿಗೆ ಸಮ. ಅತಿಥಿ ದೇವೋಭವ ಎಂದರೆ ಸಾಲದು, ಅದನ್ನು ಪ್ರಾಯೋಗಿಕವಾಗಿ ತೋರಿಸಬೇಕು.
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.