ಬಡವನ ಯಾ ಕೂಲಿ ಕಾರ್ಮಿಕನ ರಕ್ತ ಬೇಕು ದಾರಿ ಹೋಕನ ಯಾ ವ್ಯಾಪಾರಿಯ ರಕ್ತ ಬೇಕು ನಿರಪರಾಧಿಯ ಯಾ ಕಾರ್ಯಕರ್ತನ ರಕ್ತಬೇಕು ಜಾತಿ ಧರ್ಮದ ಹೆಸರಿನ ರಕ್ತ ಮಾತ್ರಾ ಇವರಿಗೆ ಬೇಕು
ಕೊಂದು ಹಚ್ಚಿದರು ವೈಷಮ್ಯದ ಕಿಚ್ಚು ಆರ್ತನಾದವ ಕೇಳದಾಯಿತು ಇವರ ಮಚ್ಚು ಹರಿಯಿತು ರಕ್ತದ ಹೊಳೆ ಅಲ್ಲಲ್ಲಿ ಹೆಚ್ಚೆಚ್ಚು ತಲೆಗೆ ಏರಿದಾಗ ಇವರ ಧರ್ಮಾಂಧದ ಹುಚ್ಚು
ತನ್ನವರ ರಕ್ತವು ಹೆಚ್ಚಿಸಲಿದೆ ಪಕ್ಷಕ್ಕೆ ಬೆಂಬಲ ರಕ್ತಸಿಕ್ತ ಸ್ಮರಣಿಕೆ ಮತ ಯಾಚನೆಗೆ ಅನುಕೂಲ ಹೆತ್ತ ಕರುಳು ನರಳಿ ಒದ್ದಾಡುತಿದೆ ವಿಲವಿಲ ಅದನರಿಯಲು ಸಾಯಲಿಲ್ಲವಲ್ಲ ನಿನ್ನ ಯಾವುದೇ ಕುಲ
ತನ್ನವನ ಪ್ರಾಣಕ್ಕೆ ಕೋಟಿ ಕೋಟಿ ಬೆಲೆ ಪರನ ಪ್ರಾಣಕ್ಕೆ ಇರುವುದು ಹುಲ್ಲು ಬೆಲೆ ಕಾಳಿ ಸ್ವಾಮಿಗೂ ಬೇಕು ಹತ್ತು ತಲೆ ಶಾಂತಿ ದೂತರಲ್ಲೂ ವೈರಾಗ್ಯದ ಅಲೆ
ಬಾಯಿ ಚಪಲ ತೀರಿಸಲು ಮಾಧ್ಯಮಗಳ ನೆರವು ಕಿಚ್ಚು ಹತ್ತಿಸಿ ಸ್ಫೋಟಿಸಲು ನೇತಾರರ ಒಲವು ಈ ನಡುವೆ ನರಳಾಡುವ ಜನಸಾಮಾನ್ಯರು ಹಲವು ಕೆಂಡದಲ್ಲೂ ಹರಿಯುತಿದೆ ಇರುವೆಗಳು ಸಾಲು ಸಾಲು
ಮರೆಯಿರಣ್ಣ ದ್ವೇಷ ಸಂಸ್ಕೃತಿಯ ಈ ಕೆಟ್ಟ ಪಯಣ ಶಾಂತಿ ಮಂತ್ರದಿ ಮಾಡುವ ಸಮುದಾಯದ ಮಿಲನ ರಕ್ತ ಬೇಡ ನಮ್ಮೊಳಗೆ ಚಿರಾಯುವಾಗಲಿ ಪ್ರೀತಿ ಭಾವನ ನತದೃಷ್ಟ ಸಹೋದರರಿಗೆ ಹರಸುವ ಕಣ್ಣೀರ ನಮನ
– ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.