(www.vknews.com) : ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದು ಭಕ್ತರ ಪ್ರೀತಿ ಪಾತ್ರಕ್ಕೆ ಒಳಗಾಗಿ, ಅಪಾರ ಕನ್ನಡ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಿ, ನಿರ್ಮಲ ಮನಸ್ಸಿನಿಂದ ಸದಾ ಒಂದಿಲೊಂದು ರೀತಿಯ ಸಾಮಾಜಿಕ ಕಳಕಳಿ ಉಳ್ಳ ಮಠಾಧೀಶರು ಹಾಗೂ ಸಾಹಿತಿಗಳಾಗಿ ನಾಡಿನಾದ್ಯಂತ ಚಿರಪರಿಚಿತರಾದವರೆಂದರೆ ಪೂಜ್ಯ. ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು.
ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ವೇದಮೂರ್ತಿ.ಶ್ರೀ. ಕರಬಸಯ್ಯಾ ಹಿರೇಮಠ ಮತ್ತು ಸುಭದ್ರಾಬಾಯಿ ತಾಯಿಯವರ ಉದರದಲ್ಲಿ ದಿನಾಂಕ 1-7-1963 ರಲ್ಲಿ ಜನಿಸಿದ್ದಾರೆ. ಇವರ ಮೂಲನಾಮ ರೇವಣಸಿದ್ದಯ್ಯ ಎಂದಾಗಿದೆ. ಪ್ರಾಥಮಿಕ ಶಿಕ್ಷಣ ಹಾರಕೂಡದಲ್ಲಿ, ಪ್ರೌಢ ಶಿಕ್ಷಣ, ಶರಣಬಸವೇಶ್ವರ ಪ್ರೌಢ ಶಾಲೆ ಕಲಬುರಗಿಯಲ್ಲಿ, ಪದವಿಯನ್ನು 1984ರಲ್ಲಿ ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪೂರೈಸಿದ ಇವರು 1986 ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ರಾಜಯೋಗಿಂದ್ರ ಜಗದ್ಗುರುಗಳು ಅತ್ಯಾನಂದದಿಂದ ಶ್ರೀ ಮಠದಲ್ಲಿ ಪೂಜಾ ಪ್ರಸಾದಕ್ಕೆ ಅನುಕೂಲ ಮಾಡಿಕೊಡುವುದರೊಂದಿಗೆ ಉತ್ತಮ ವಿಚಾರ- ಚಿಂತನೆಗಳು ಬೋಧಿಸಿ, ಪರಿಸರ ಪ್ರಜ್ಞೆ, ಧರ್ಮ ಶಿಕ್ಷಣ, ಸಂಸ್ಕೃತಿ ಸಂವರ್ಧನೆ ಬಲಪಡಿಸುವುದರ ಮೂಲಕ 1996 ಎಪ್ರಿಲ್ 25 ರಂದು ಹಾರಕೂಡ ಹಿರೇಮಠ ಸಂಸ್ಥಾನಕ್ಕೆ ಪಟ್ಟಾಧಿಕಾರ ಹೊಂದಿ ಶ್ರೀ ರೇವಣಸಿದ್ದ ದೇವರು ಶ್ರೀ ಷಟಸ್ಥಲ ಬ್ರಹ್ಮ. ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿ ಗಳಾಗಿ ದಕ್ಷಿಣ ಭಾರತದಲ್ಲಿಯೆ ಕೋಟಿ ಕೋಟಿ ಭಕ್ತರ ಪ್ರೀತಿಯ ಸ್ವಾಮಿಗಳಾಗಿ ಹೆಸರುವಾಸಿಯಾಗಿದ್ದಾರೆ.
ಇವರು ಶ್ರೀ ಮಠದ ಏಳಿಗೆಯೊಂದಿಗೆ ಕಲೆ,ಸಾಹಿತ್ಯ, ಸಂಗೀತ,ಶಿಕ್ಷಣ ಪ್ರೇಮಿಯಾಗಿ ‘ ಚೆನ್ನ ಚಿಂತನ’ ಎಂಬ ಒಂದು ಪುಸ್ತಕವು ಬರೆದು ಲೇಖಕರಾಗಿ ಖ್ಯಾತರಾಗಿದ್ದಾರೆ. ತುಂಬ ಮೌಲಿಕ ವಿಚಾರಗಳು ಹೊಂದಿರುವ ಈ ಕೃತಿಯು ಪ್ರಜಾವಾಣಿ ಪತ್ರಿಕೆಯಲ್ಲಿ ಅಂಕಣ ಬರಹವಾಗಿ ಪ್ರಕಟಗೊಂಡು ಅಪಾರ ಜನಮೆಚ್ಚುಗೆಯು ಗಳಿಸಿದೆ. ಮತ್ತು ‘ ಹಡಪದ ಅಪ್ಪಣ್ಣನ ನೂರೊಂದು ವಚನಗಳು’ ಎಂಬ ಕೃತಿಯು ಸಂಪಾದಿಸಿದ್ದಾರೆ. ಈ ಕೃತಿ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಪ್ರಕಟವಾಗಿದೆ. ಹಾಗೂ ‘ ಚನ್ನಚಂದ್ರಾಹಾರ ಎಂಬ ಕವನಸಂಕಲನವು ಬರೆದು ಪ್ರಕಟಿಸಿದ್ದಾರೆ.
ಶ್ರೀಗಳು ಧರ್ಮ,ಸಮಾಜ,ಶಿಕ್ಷಣ ಮತ್ತು ಸಾಹಿತ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ ಧಾರ್ಮಿಕ ತಳಹದಿಯಲ್ಲಿ ಚಿಂಚೋಳಿ, ದುಬಲಗುಂಡಿ, ಸೇಡೊಳ್ ಸರಜವಳಗಾ, ಗದಲೇಗಾಂವ, ತರೂರಿ,ಜೀವಣಗಿ ಶಾಖಾ ಮಠಗಳೊಂದಿಗೆ ಭಕ್ತರ ಒಡನಾಡಿಯಾಗಿ ಗುರುತಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ತುಂಬ ಕಾಳಜಿ ಹೊಂದಿದ ಇವರು ಹಾರಕೂಡ, ಭಾಲ್ಕಿ, ಚಿಂಚೋಳಿ, ಮುಂತಾದ ಕಡೆಗಳಲ್ಲಿ ಶಿಶುವಿಹಾರ, ಪ್ರಾಥಮಿಕ, ಪ್ರೌಢ ಶಾಲಾ ಕಾಲೇಜುಗಳು ನಡೆಸುವಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಶ್ರಮಿಸುತ್ತಿದ್ದಾರೆ. ಮತ್ತು ಸಾಹಿತ್ಯಕವಾಗಿಯು ನಾಡಿನಾದ್ಯಂತ ಹಲವಾರು ಹಿರಿ- ಕಿರಿಯ ಲೇಖಕರ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿ ವರ್ಷ ಶ್ರೀ ಗುರುಲಿಂಗ ಶಿವಾಚಾರ್ಯ ರ ಪುಣ್ಯ ಸ್ಮರಣೆಯ ಅಂಗವಾಗಿ ಅನುಭಾವ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ ನಡೆಸುವುದರೊಂದಿಗೆ ಲೇಖಕರ ಪುಸ್ತಕಗಳು ಬಿಡುಗಡೆ ಮಾಡುತ್ತಾರೆ.
ಇಲ್ಲಿಯವರೆಗೆ 89 ಕೃತಿಗಳು ಹೊರ ಬಂದಿರುವುದು ನೋಡಿದರೆ ಅವರ ಸಾಹಿತ್ಯದ ಪ್ರೀತಿ , ಕಾಳಜಿ ಇಲ್ಲಿ ಎದ್ದು ತೊರುತ್ತದೆ. ಅಷ್ಟೇಯಲ್ಲದೆ ನಾಡಿನಾದ್ಯಂತ ಉತ್ತಮ ಸಾಹಿತ್ಯ ರಚಿಸಿ ಖ್ಯಾತರಾದ ಹಿರಿಯ ಸಾಹಿತಿಗಳಿಗೆ 2011 ರಿಂದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀ ಮಠದಿಂದ ಕೊಡುವ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಒಂದು ಲಕ್ಷ ರೂಪಾಯಿ ನಗದು, ಒಂದು ತೊಲೆ ಚಿನ್ನದ ಪದಕ ಒಳಗೊಂಡಿದೆ. ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ 2018 ರಿಂದ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀಗಳ ಪಿತಾಮಹ ವೇ.ಶ್ರೀ. ಕರಬಸಯ್ಯಾ ಸ್ವಾಮಿ ಹಿರೇಮಠ ಅವರ ಸ್ಮರಣಾರ್ಥವಾಗಿ 10 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಿದರೆ,ಚಿಂಚೋಳಿ ಶಾಖಾ ಮಠದಿಂದ ಯುವ ಲೇಖಕರಿಗೆ ಚೆನ್ನ ಶ್ರೀ ಪ್ರಶಸ್ತಿ ನೀಡಿ 5 ಗ್ರಾಂ.ಚಿನ್ನ ಪ್ರಶಸ್ತಿ ಫಲಕದೊಂದಿಗೆ ಗೌರವಿಸುತ್ತಿದ್ದಾರೆ. ಅಷ್ಟೇಯಲ್ಲದೆ 2020 ರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ ಮತ್ತು ಭಜನಾ ಸಂಘ ಸಂಸ್ಥೆಗಳಿಗೆ ಭಜನ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ , ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಶ್ರೀ ಚೆನ್ನರತ್ನ ಪ್ರಶಸ್ತಿಯು ನೀಡುತ್ತಿದ್ದಾರೆ. ಮತ್ತು ಪ್ರತಿವರ್ಷ ಹಾರಕೂಡ ಜಾತ್ರೆಯ ಕೊನೆಯ ದಿನದಂದು ಉತ್ತಮ ಜೋಡೆತ್ತು ಪ್ರದರ್ಶನ ಮಾಡಿದ ರೈತರಿಗೆ ಒಂದು ತೊಲೆ ಚಿನ್ನದ ಉಡುಗೊರೆಯು ನೀಡಿ ಗೌರವಿಸುತ್ತಾರೆ.
ಇವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಹಾರಕೂಡ ಮಠದ ಪ್ರಕಾಶನದಿಂದ 40 ಲಕ್ಷ ಖರ್ಚಿನಲ್ಲಿ 15 ವಿಷಯ ವಚನ ಸಂಪುಟಗಳು ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿ ಮಠ ಅವರಿಂದ ಸಂಪಾದಿಸಿ ಪ್ರಕಟಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಕಾರ್ಯ ಸಾಧನೆಗೆ ಮೆಚ್ಚಿ ಗುಲ್ಬರ್ಗ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರೆ ಕರ್ನಾಟಕ ಸರ್ಕಾರ 2019 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ಅಪಾರ ಭಕ್ತ ವರ್ಗ ಹೊಂದಿದ ಇವರಿಗೆ ಗದಲೇಗಾಂವ,ಸೇಡಂ, ಬಸವಕಲ್ಯಾಣದಲ್ಲಿ ಹುಟ್ಟು ಹಬ್ಬದ ನಿಮಿತ್ತವಾಗಿ ಚಿನ್ನದ ಕಿರಿಟವು ತೊಡಿಸಿ ಗೌರವಿಸಿದ್ದಾರೆ.
ಬಾಳೆಹೊನ್ನೂರಿನ ಜಗದ್ಗುರು ರಂಭಾಪುರಿ ಶ್ರೀಗಳು ಶಿವಾಚಾರ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ,ಉತ್ತರ ಪ್ರದೇಶದ ಕಾಶಿ ಜಗದ್ಗುರು ಪೀಠದಿಂದ ಧರ್ಮ ರತ್ನ ನೀಡಿದ್ದಾರೆ. ಉಜ್ಜಯಿನಿ ಪೀಠದಿಂದ ಸದ್ಧರ್ಮ ಶಿಖಾಮಣಿ ಪ್ರಶಸ್ತಿ, ಕಮಲಾಪೂರದಿಂದ ಮನುಕುಲ ರತ್ನ ಪ್ರಶಸ್ತಿ, ಕಲಬುರಗಿಯಿಂದ ದಾಸೋಹ ಜ್ನಾನ ರತ್ನ ಪ್ರಶಸ್ತಿ, ಹುಲಸೂರಿನಿಂದ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ, ಎನ್.ಆರ್.ಜಿ.ಪೌಂಡೆಷನ್ ವತಿಯಿಂದ ಕಲ್ಯಾಣ ಕರ್ನಾಟಕ ಅಧ್ಯಾತ್ಮ ಸಿರಿ ಪ್ರಶಸ್ತಿ, ಮುಂಡರಗಿಯಿಂದ ಜಗದ್ಗುರು ಅನ್ನದಾನೇಶ್ವರ ಪ್ರತಿಷ್ಠಾನದ ಪ್ರಶಸ್ತಿ ಕಲಬುರ್ಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯದಿಂದ ಸ್ವರ ಮಾಧುರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದು ಖ್ಯಾತರಾಗಿದ್ದಾರೆ. 2003 ರಲ್ಲಿ ಇವರ ದಿವ್ಯ ಸಾನಿಧ್ಯದೊಂದಿಗೆ ಹಾರಕೂಡ ಸಂಸ್ಥಾನ ಮಠದ ಆವರಣದಲ್ಲಿ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ನಡೆದು ಬಂದಿದೆ.
ಇವರ ಕುರಿತು ಮುಸ್ಲಿಂ ಸಾಹಿತಿಗಳಾದ ಹುಸೇನ್ ಸಾಬ ಮಾಸ್ತರ್,ಕೊಹಿನೂರಿನ ಮಲಂಗ ಶಾ ಬಾಬಾ, ರಸೂಲ್ ಸಾಬ್ ಬಾಬಾ ,ಲಾಲ ಮಹಮ್ಮದ್ ಶಾ, ನಬಿಲಾಲ,ಎಲ್.ಬಿ.ಕೆ.ಅಲ್ದಾಳ,ಮುಂತಾದವರು ಭಕ್ತಿಯಿಂದ ಸಾಹಿತ್ಯ ರಚಿಸಿದ್ದರೆ .ಮಚ್ಚೇಂದ್ರ ಪಿ.ಅಣಕಲ್ ಅವರು ಹರ ಹರಾ ಹಾರಕೂಡೆಶ್ವೇರ ಎಂಬ ಅಂಕಿತನಾಮದಿಂದ ನೂರಾರು ಅಧುನಿಕ ವಚನಗಳು ಬರೆದಿದ್ದರೆ ಡಾ.ಶಿವಶರಣಯ್ಯಾ ಎಂ.ಮಠಪತಿಯವರು ಹಾರಕೂಡದೀಶ ಶ್ರೀ ಚನ್ನವೀರ ಪ್ರಿಯ ಚನ್ನಬಸವೇಶ್ವರ ಎಂಬ ಅಂಕಿತನಾಮದಿಂದ ಹಲವಾರು ವಚನಗಳು ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರ 57ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಪತ್ರಕರ್ತ, ಸಾಹಿತಿ ಮಾಣಿಕ ಆರ್.ಭುರೆ ಯವರು ನುಡಿಚೆನ್ನ ಎಂಬ ಅಭಿನಂದನಾ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಮುಸ್ಲಿಂರು ದಲಿತರಿಗೆ ಈ ಮಠದಲ್ಲಿ ಸರ್ವಧರ್ಮ ಸಮಾನತೆ ಸಾರಲು ಪೂಜ್ಯ.ಡಾ. ಚನ್ನವೀರ ಶಿವಾಚಾರ್ಯರು ಕಾರಣಿಭೂತರಾಗಿದ್ದಾರೆ.
ಲೇಖನ : ಮಚ್ಚೇಂದ್ರ ಪಿ.ಅಣಕಲ್, ಕಲಬುರಗಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.