(www.vknews.com) : ಅದು ಈದ್ ನ ಸುದಿನ. ಪ್ರವಾದಿ (ಸ.ಅ.) ರವರು ಎಂದಿನಂತೆ ಈದ್ ನಮಾಝ್ ನಿರ್ವಹಿಸಿ ತನ್ನ ನಿವಾಸಕ್ಕೆ ಮರಳುತ್ತಿದ್ದುದರ ಮಧ್ಯೆ ಸಮಾನ ಪ್ರಾಯದ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಅಲ್ಲೇ ಸ್ವಲ್ಪ ದೂರದಲ್ಲಿ ಓರ್ವ ಪುಟ್ಟ ಬಾಲಕ ಮಾತ್ರ ಏಕಾಂತವಾಗಿ ಏನೋ ಯೋಚಿಸುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿದ ಪ್ರವಾದಿ (ಸ.ಅ.) ನೇರವಾಗಿ ಆ ಬಾಲಕನ ಬಳಿ ತೆರಳುತ್ತಾರೆ. ಬಳಿಕ ಪ್ರವಾದಿ (ಸ.ಅ.) ರವರು ಆ ಮುಗ್ದ ಬಾಲಕನಲ್ಲಿ ಮಗೂ, ನಿನ್ನ ಸಮ ಪ್ರಾಯದ ಗೆಳೆಯರು ಈದ್ ಸಂಭ್ರಮದ ಭಾಗವಾಗಿ ನಕ್ಕು ನಲಿದು ಆಟವಾಡುತ್ತಿರುವಾಗ ನೀನು ಮಾತ್ರ ಯಾಕೆ ದೂರವುಳಿದಿದ್ದೀಯಾ ? ನೀನು ಕೂಡಾ ಅವರೊಂದಿಗೆ ತೆರಳಿ ಈದ್ ನ್ನು ಸಂಭ್ರಮಿಸಬಹುದಲ್ಲವೇ ಎಂದಾಗ ಆ ಪುಟ್ಟ ಬಾಲಕ ಆ ಕ್ಷಣದವರೆಗೆ ಅದುಮಿಟ್ಟ ದುಃಖವನ್ನು ತಡೆಯಲಾರದೆ ಗಳಗಳನೆ ಅತ್ತುಬಿಡುತ್ತಾನೆ, ಆತನ ತುಟಿಯು ಕಂಪಿಸುತ್ತದೆ ಮತ್ತು ಕಣ್ಣುಗಳೆರಡಲ್ಲೂ ಕಣ್ಣೀರು ತುಂಬಿ ಮೃದು ಗಲ್ಲದ ಇಕ್ಕೆಲಗಳಲ್ಲೂ ಕಣ್ಣೀರು ಹರಿಯುತ್ತದೆ. ಇದನ್ನು ಕಂಡ ಪ್ರವಾದಿ (ಸ.ಅ.) ರವರು ದುಃಖತಪ್ತರಾಗುತ್ತಾರೆ.
ಪ್ರವಾದಿ (ಸ.ಅ.) ರವರು ಮಾತು ಮುಂದುವರಿಸುತ್ತಾ ಬಾಲಕನಲ್ಲಿ ಕಾರಣ ಕೇಳಿದಾಗ ಆತ ಮೃದು ಧ್ವನಿಯಲ್ಲಿ ಪ್ರವಾದಿಯವರೇ, ಈದ್ ಸಂಭ್ರಮದ ಭಾಗವಾಗಿ ಹೊಸ ಬಟ್ಟೆ ಖರೀದಿಸಿ ಕೊಡಲು ನನಗೆ ಯಾರೂ ಇಲ್ಲ, ನನ್ನ ತಂದೆಯವರನ್ನು ನಾನು ಈಗಾಗಲೇ ಕಳೆದುಕೊಂಡಿದ್ದೇನೆ. ಬಳಿಕ ಅವುಗಳನ್ನು ಮಡಚಿಟ್ಟು ಈದ್ ನ ಸೂರ್ಯೋದಯಗೊಳ್ಳುವಂತೆಯೇ ಸಿಹಿ ಮುತ್ತೊಂದನ್ನು ನೀಡಿ ಹೊಸ ಬಟ್ಟೆಯನ್ನು ನನಗೆ ಉಡಿಸುತ್ತಿದ್ದ ತಾಯಿಯವರೂ ಕೂಡಾ ತನ್ನ ಇಹಲೋಕದ ಯಾತ್ರೆಯನ್ನು ಈಗಾಗಲೇ ಮುಗಿಸಿ ಎಂದೆಂದಿಗೂ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ ಮತ್ತು ಹೊಸ ಬಟ್ಟೆಯನ್ನು ತೊಟ್ಟು ಪರಸ್ಪರ ಆಲಿಂಗನಗೈದು ಆಟವಾಡಿ ನಕ್ಕು ನಲಿದು ಈದ್ ಸಂಭ್ರಮವನ್ನಾಚರಿಸಲು ನನಗೆ ಒಡಹುಟ್ಟಿದವರು ಯಾರೂ ಇಲ್ಲ ಎಂದಾಗ ಸ್ವತಃ ಅನಾಥನಾಗಿ ಬೆಳೆದು ಅನಾಥನ ನೋವನ್ನುಂಡ ಪ್ರವಾದಿ (ಸ.ಅ.) ರವರು ದುಃಖ ತಡೆಯಲಾರದೆ ಆ ಅನಾಥ ಬಾಲಕನ ಕೈಹಿಡಿದು ಆತನನ್ನು ತನ್ನ ಮನೆಗೆ ಕರೆದೊಯ್ಯುತ್ತಾರೆ.
ಪ್ರವಾದಿ (ಸ.ಅ.) ರವರು ನಡೆದ ಘಟನೆಯನ್ನೆಲ್ಲಾ ತನ್ನ ಪ್ರಿಯ ಮಡದಿ ಆಯಿಶಾ (ರ.ಅ.) ರಲ್ಲಿ ವಿವರಿಸಿ ಬಳಿಕ ಆ ಬಾಲಕನೆಡೆಗೆ ತಿರುಗಿ ಮಗೂ, ಇನ್ನು ನೀನು ಅನಾಥನಲ್ಲ, ತಾಯಿಯಾಗಿ ಆಯಿಶಾರನ್ನೂ ಅಕ್ಕಳಾಗಿ ಫಾತಿಮಾರನ್ನೂ ಗೆಳೆಯರಾಗಿ ಹಸನ್ ಮತ್ತು ಹುಸೈನ್ ರನ್ನೂ ಸ್ವೀಕರಿಸು ಎಂದಾಗ ಆ ಬಾಲಕ ತನ್ನ ದುಃಖವನ್ನೆಲ್ಲಾ ಮರೆತು ಸಂತೋಷದ ಕಡಲಲ್ಲಿ ತೇಲಿ ಬಿಡುತ್ತಾನೆ.
ಆತ್ಮೀಯ ಸಹೋದರ ಸಹೋದರಿಯರೇ, ನನ್ನದೊಂದು ಪ್ರಶ್ನೆ ಹದಿನಾಲ್ಕು ನೂರು ವರ್ಷಗಳ ಹಿಂದೆ ಪ್ರವಾದಿ (ಸ.ಅ.) ರವರ ಜೀವನದಲ್ಲಿ ನಡೆದ ನೈಜ ಘಟನೆ ಇಪ್ಪತ್ತೊಂದನೇ ಶತಮಾನದಲ್ಲಿ ಜೀವಿಸುವ ಪ್ರವಾದಿ (ಸ.ಅ.) ರವರ ಅನುಯಾಯಿಗಳಾದ ನಮ್ಮಲ್ಲಿ ಮರುಕಳಿಸೀತೇ ?
2020 – ಅತ್ಯಾಧುನಿಕ ತಂತ್ರಜ್ಞಾನದ ನೆಪವೊಡ್ಡಿ ಮಾನವ ತನ್ನ ಸೃಷ್ಟಿಕರ್ತನನ್ನೇ ಮರೆತು ಹಲವು ಕನಸುಗಳ ಆಶಾಗೋಪುರಗಳನ್ನು ಕಟ್ಟಿ ಆ ಮೂಲಕ ಹಲವು ಯೋಜನೆಗಳನ್ನು ಆರಂಭಿಸಬೇಕೆಂಬ ಗಡುವು ನಿಶ್ಚಯಿಸಿದ ವರ್ಷ. ಅಧಿಕಾರವೆಂಬ ದುರಹಂಕಾರದ ಅಮಲಿನಲ್ಲಿ ತನ್ನನ್ನು ಸರ್ವಶ್ರೇಷ್ಠನೆಂದು ಅಂಗೀಕರಿಸದ ಹೊರತು ತನ್ನ ಕೈ ಬೆರಳುಗಳ ಮುಂದಿರುವ ಬಟನ್ ಒತ್ತಿ ತನ್ನ ಶತ್ರು ರಾಷ್ಟ್ರವನ್ನು ನಿರ್ನಾಮ ಮಾಡುತ್ತೇನೆಂದು ಘರ್ಜಿಸುತ್ತಿದ್ದ ಕಾಲ. ಸಂಪತ್ತಿನ ಅಮಿತ ಶೇಖರಣೆಯಿಂದಾಗಿ ಎಲ್ಲದಕ್ಕೂ ನಾನೇ ಕಾರಣವೆಂದೂ ಎಲ್ಲವೂ ನನ್ನಿಂದಲೇ ಎಂದೂ ಮೌಢ್ಯತೆಯ ಪರಮಾವಧಿಯಲ್ಲೇ ವಿಹರಿಸುತ್ತಿದ್ದ ಶ್ರೀಮಂತ ವರ್ಗ. ಆದರೆ… ?? ಸೃಷ್ಟಿಕರ್ತನಾದ ಅಲ್ಲಾಹನ ಕಡೆಯಿಂದ ನಗ್ನ ನೇತ್ರಗಳಿಗೂ ಗೋಚರಿಸದ ಕೋವಿಡ್ ಎಂಬ ಸಣ್ಣ ವೈರಸ್ ಮನುಷ್ಯನಿಂದ ಎಲ್ಲವನ್ನೂ ಕಸಿದುಕೊಂಡಿತು. ಮನುಷ್ಯನ ಯೋಜನೆಗಳೆಲ್ಲವೂ ಅಡಿಮೇಲಾದುವು, ದೊಡ್ಡಸ್ತಿಕೆಗಳೆಲ್ಲವೂ ಮಣ್ಣು ಪಾಲಾದುವು. ಇವೆಲ್ಲವುಗಳ ಹೊರತಾಗಿಯೂ ಮನುಷ್ಯ ತನ್ನನ್ನು ಸುಧಾರಿಸಿಕೊಳ್ಳಲು ತಯಾರಿಲ್ಲ ಎಂಬಂತಿದ್ದ ಆತನ ಅಸಹನೀಯ ಟ್ರೋಲ್ ಗಳ ಮಧ್ಯೆಯೂ ಜೀವನದ ಕಷ್ಟ ಸುಖಗಳೆರಡರಲ್ಲೂ ಒಟ್ಟಾಗಿ ಬಾಳುತ್ತೇವೆಂಬ ಸಂಕಲ್ಪದಿಂದ ಸತಿ-ಪತಿಗಳು ಪರಸ್ಪರ ಒಬ್ಬರಿಗೊಬ್ಬರು ನಡುದಾರಿಯಲ್ಲಿ ಕೈ ಬಿಟ್ಟು ತಮ್ಮ ಬಾಳ ಪಯಣಕ್ಕೆ ಮುಕ್ತಾಯದ ಗೆರೆ ಬರೆದಾಗ ಸತಿಯನ್ನು ಕಳೆದುಕೊಂಡ ಪತಿ ಹಾಗೂ ಪತಿಯನ್ನು ಕಳೆದುಕೊಂಡ ಸತಿಯ ಅಳುವಿನ ಕೂಗು ಕರುಳನ್ನೇ ಹಿಚುಕುವಂತಿತ್ತು. ಮಕ್ಕಳನ್ನು ಕಳೆದುಕೊಂಡ ಮಾತಾಪಿತರ ದೀನ-ರೋಧನವಂತೂ ಮುಗಿಲು ಮುಟ್ಟುವಂತಿತ್ತು. ಇಡೀ ಕುಟುಂಬದ ಸಂಕಷ್ಟಗಳನ್ನು ತಾನೇ ಹೊತ್ತು ಕುಟುಂಬಕ್ಕೆ ಕೇವಲ ಸುಖ ಮತ್ತು ಸಂತೋಷವನ್ನೇ ಧಾರೆಯೆರೆದ ಕುಟುಂಬದ ಯಜಮಾನನ ಮರಣ ಇಡೀ ಕುಟುಂಬವನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿತು. ಮಾಧ್ಯಮ ವರ್ಗದ ಜನರಂತೂ ಅತ್ತ ಆಹಾರಕ್ಕಾಗಿ ಯಾರಲ್ಲೂ ಕೈ ಚಾಚದೆ ಇತ್ತ ತನ್ನ ಅಸಹಾಯಕತೆಯನ್ನು ಯಾರಲ್ಲೂ ತೋರ್ಪಡಿಸಲೂ ಸಾಧ್ಯವಾಗದೆ ಚಡಪಡಿಸಿದುವು. ಪಶ್ಚಿಮ ಮತ್ತು ಪೂರ್ವಗಳ ಒಡೆಯನಾದ ಅಲ್ಲಾಹ್……. ನಾವು ದುರ್ಬಲರು, ನಾವು ಅಸಹಾಯಕರು, ನೀನು ನೀಡುವ ಪರೀಕ್ಷೆಗಳಿಗೆ ಎದೆಯೊಡ್ಡುವ ಸಾಮರ್ಥ್ಯ ನಮ್ಮಲ್ಲಿಲ್ಲ, ನಮ್ಮಲ್ಲಿ ಕೃಪೆ ತೋರು, ನಮ್ಮ ತಪ್ಪುಗಳನ್ನು ಮನ್ನಿಸಿ ಕೋವಿಡ್ ಎಂಬ ಮಹಾಮಾರಿಯನ್ನು ನೀಗಿಸು ಅಲ್ಲಾಹ್.
ಈ ಸಂದರ್ಭದಲ್ಲಿ ನಾಡಿಗೆ ನಾಡು, ಒಂದು ರಾಜ್ಯಕ್ಕೆ ಇನ್ನೊಂದು ರಾಜ್ಯ, ಒಂದು ರಾಷ್ಟ್ರಕ್ಕೆ ಇನ್ನೊಂದು ರಾಷ್ಟ್ರ ನೀಡಿದ ಸಹಾಯ ಸಹಕಾರವನ್ನು ಮರೆಯುವಂತಿಲ್ಲ. ಅಲ್ಲಾಹನು ಎಲ್ಲರನ್ನೂ ಚೆನ್ನಾಗಿಟ್ಟಿರಲಿ ಎಂಬ ಹೃದಯಾಂತರಾಳದ ಪ್ರಾರ್ಥನೆಯೊಂದಿಗೆ ತಮ್ಮ ಪ್ರಾಣದ ಹಂಗು ತೊರೆದು ಇತರರ ಜೀವ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರ ತಂಡ, ಕುಟುಂಬ ಸದಸ್ಯರುಗಳು ಕೂಡಾ ಅಂತಿಮ ಸಂಸ್ಕಾರಗೈಯ್ಯಲು ಹಿಂದೆ ಮುಂದೆ ನೋಡುತ್ತಿದ್ದಾಗಲೂ ಜಾತಿ-ಮತವೆಂಬ ಬೇದಭಾವವನ್ನೂ ತೋರ್ಪಡಿಸದೆ ಎಲ್ಲರೂ ನಮ್ಮವರೇ ಎಂಬ ಉದಾತ್ತ ಮನೋಭಾವನೆಯನ್ನು ಎತ್ತಿ ಹಿಡಿದ ಹಲವು ಸಂಘಟನೆಗಳ ಮಹಾನ್ ವ್ಯಕ್ತಿಗಳ ಮಹತ್ಕಾರ್ಯವನ್ನು ಈ ಸಂದರ್ಭದಲ್ಲಿ ಮನ ತುಂಬಿ ಶ್ಲಾಘಿಸುತ್ತೇನೆ.
ಕೊನೆಯದಾಗಿ, ಈ ಲೇಖನದ ಮಧ್ಯೆ ನಿಮ್ಮಲ್ಲಿ ನಾನೊಂದು ಪ್ರಶ್ನೆ ಕೇಳಿದ್ದೆ ಪ್ರವಾದಿ (ಸ.ಅ.) ರವರ ಮಾದರಿ ಮರುಕಳಿಸಲಾದೀತೇ ಎಂದು. ಈಗ ಭಿನ್ನವಿಸುತ್ತಿದ್ದೇನೆ. ಈ ವರ್ಷದ ಈದ್ ವಿಶೇಷವಾಗಿರಲಿ. ನಮ್ಮ ಮನೆಯ ಸಮೀಪದ ಮನೆಯ ಸ್ಥಿತಿಗತಿಯನ್ನು ನಾವೇ ಸ್ವತಃ ಅರಿತು ಸ್ವಯಂ ಪ್ರೇರಿತರಾಗಿ, ವಿವಿಧ ಕಾರಣಗಳಿಂದಾಗಿ ಈದ್ ಆಚರಿಸಲು ಸಾಧ್ಯವಾಗದೇ ಇರುವ ಕುಟುಂಬಗಳನ್ನು ಕಂಡು ಹಿಡಿದು ಅವರ ಸ್ವಾಭಿಮಾನಕ್ಕೂ ಧಕ್ಕೆ ಬಾರದ ರೀತಿಯಲ್ಲಿ ನಮ್ಮಿಂದಾಗುವ ಸಹಾಯ ಹಸ್ತ ಚಾಚೋಣ. ಹತಾಶೆಗೊಂಡಿರುವ ಆ ಮುಖದಲ್ಲೂ ಸಂತೋಷದ ಮುಗುಳ್ನಗು ಚಿಗುರೊಡೆಯಲಿ
ಆದರೆ ಒಂದು ಮಾತು : ಅಲ್ಲಾಹನ ಹೊರತು ಯಾರೂ ಅರಿಯದಿರಲಿ.
ತಮ್ಮ ಪ್ರಾರ್ಥನೆಯಲ್ಲಿ ನನ್ನ ನೆನಪಿರಲಿ.
✍️ ಮುಹಮ್ಮದ್ ಕುತುಬುದ್ದೀನ್ ಫಯಾಝ್, ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.