ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ತಾಲ್ಲೂಕಿನ ಡಿ.ಎನ್ ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಪ್ಪಚ್ಚಹಳ್ಳಿಯಿಂದ ಡಿ.ಎನ್ ದೊಡ್ಡಿ ವರೆಗೆ ರಸ್ತೆ ಮಳೆ ಬಂದಾಗಲೆಲ್ಲ ಕೆಸರುಗದ್ದೆಯಾಗುವ ಮೂಲಕ ರಸ್ತೆ ಸಂಚಾರಕ್ಕೆ ಹಾಗೂ ಅಲ್ಲಿನ ಜನರಿಗೆ ದೊಡ್ಡ ಸವಾಲ್ ಆಗಿ ರೂಪವಾಗಿದೆ.
ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಕೆಸರುಗದ್ದೆಯಾಗಿ ರಸ್ತೆಯಲ್ಲಿ ಸಂಚರಿಸಲು ಪರಸಾಹಸ ಪಡುವಂತಾಗಿದೆ. ಡಿ.ಎನ್.ದೊಡ್ಡಿ ಭಾಗದಲ್ಲಿ ವೆಂಕಟಗಿರಿಯಪ್ಪನ ಜಾತ್ರೆ ರಾಜ್ಯದಲ್ಲಿ ಪ್ರಸಿದ್ದಿ ಪಡೆದಿದ್ದು ರಾಜ್ಯದ ಮೂಲೆಮೂಲೆಗಳಿಂದ ಪ್ರವಾಸಿಗರು,ಭಕ್ತಾಧಿಗಳು ಬರಬೇಕಾದರೆ ಇದೇ ರಸ್ತೆಯ ಮೂಲಕವೇ ಬರಬೇಕಾಗುತ್ತದೆ ಎಂಬುದು ಪ್ರಮುಖ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ ಹಾಗೂ ಕರವೇ (ಹೆಚ್.ಶಿವರಾಮೇಗೌಡ ಸಾರಥ್ಯ) ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷರಾದ ದೊಡ್ಡಿ ಪ್ರವೀಣ್ ರವರು ಮಾತನಾಡುತ್ತಾ “ವಪ್ಪಚ್ಚಹಳ್ಳಿಯಿಂದ ಡಿ.ಎನ್.ದೊಡ್ಡಿಯವರೆಗೆ ರಸ್ತೆ ಸರಿಸುಮಾರು 30 ವರ್ಷಗಳಿಂದ ಯಾವುದೇ ಕಾಮಗಾರಿ ಆಗದೇ ಉಳಿದಿರುವುದು ಈ ಭಾಗದ ನಮ್ಮ ಜನರ ದುಸ್ಥಿತಿಯಾಗಿದೆ. ಸದಾ ನಿರಂತರವಾಗಿ ವಾಹನಗಳ ಓಡಾಟದ ಜೊತೆ ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವವರ ಅವಸ್ಥೆ ಹೇಳತೀರಾದು, ಇದನ್ನು ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ, ಶಾಸಕರು, ಅಧಿಕಾರಿಗಳು ಶೀಘ್ರವಾಗಿ ಇತ್ತ ಗಮನ ಹರಿಸಿ, ರಸ್ತೆಗೆ ಡಾಂಬರು ಹಾಕಲು ಕ್ರಮಕೈಗೊಳ್ಳುವ ಮೂಲಕ ಸ್ಪಂದಿಸಬೇಕು ಎಂಬುದು ನಮ್ಮ ಪ್ರೀತಿಯ ಒತ್ತಾಯ” ಎಂದರು.
ಡಿ.ಎನ್.ದೊಡ್ಡಿ ಗ್ರಾಮದ ನವಚೇತನ ಡಾ.ಬಿ.ಆರ್.ಅಂಬೇಡ್ಕರ್ ಯುವ ಸಂಘದ ಪದಾಧಿಕಾರಿಗಳು ಮಾತನಾಡುತ್ತಾ “ಡಿ.ಎನ್ ದೊಡ್ಡಿ ರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಅಪಘಾತ, ಅವಘಡಗಳು ಸಂಭವಿಸುತ್ತಿದೆ. ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದು, ರೈತರು, ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಂತೂ ಕೆಸರಿನ ನಡುವೆಯೇ ಹೋಗುವಂತಾಗಿದೆ. ಈ ಬಗ್ಗೆ ಶಾಸಕರಾಗಲಿ, ತಾಲೂಕು ಆಡಳಿತವಾಗಲಿ,ಸಮಸ್ಯೆ ಸರಿಪಡಿಸದೆ, ಜಾಣ ಕುರುಡು ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ನಮ್ಮೂರಿನ ರಸ್ತೆಗೆ ಡಾಂಬರು ಹಾಕಿ ಜನರ ಒಡಾಟಕ್ಕೆ ಅನುಕೂಲ ಮಾಡಿಕೊಡಿ ಎಂಬ ಒತ್ತಾಯ ನಮ್ಮದು” ಎನ್ನುತ್ತಾರೆ.
ಏನೇ ಆಗಲಿ ಶೀಘ್ರವೇ ನೆನೆಗುದಿಗೆ ಬಿದ್ದ ಈ ಕೆಸರು ಗದ್ದೆ ರಸ್ತೆಯನ್ನು ಕೂಡಲೇ ಕಾಮಗಾರಿ ಪ್ರಾರಂಭಿಸುವ ಮೂಲಕ ಕಾರ್ಯರೂಪಕ್ಕೆ ತಂದು, ದುರಸ್ತಿ ಮಾಡಿ ವಾಹನ ಸವಾರರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯರು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಹಾಗೂ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.