(www.vknews.in) : ನಮ್ಮ ನೆರೆ ರಾಜ್ಯ ತಮಿಳುನಾಡಿನ ದಾರಿಗಳು, ಹೆದ್ದಾರಿಗಳನ್ನು ಗಮನಿಸುತ್ತಾ ಹೋದೆ. ಬಹಳ ಉತ್ತಮ ಸ್ಥಿತಿಯಲ್ಲಿವೆ. ಅಲ್ಲಲ್ಲಿ ಟೋಲ್ ಗಳು ಸಿಗುವುದು ಸರ್ವೆಸಾಮಾನ್ಯ. ನನ್ನಲ್ಲಿ ಒಂದು ಪ್ರಶ್ನೆ ಉದ್ಭವಿಸಿತು. ಯಾವುದೇ ವಾಹನ ಖರೀದಿಸುವಾಗ ನಾವು ರೋಡ್ ಟ್ಯಾಕ್ಸ್ ಕಟ್ಟುತ್ತೇವೆ. ಪ್ರತಿವರ್ಷ ಅದನ್ನು ನವೀಕರಣ ಸಹ ಮಾಡಿಸುತ್ತೇವೆ. ರಸ್ತೆ ತೆರಿಗೆ ಕಟ್ಟುವ ಕಾರಣ ಎಲ್ಲರಿಗೂ ಗೊತ್ತು. ಸರ್ಕಾರಗಳು ಜನರಿಗಾಗಿ ರಸ್ತೆಗಳ ನಿರ್ಮಾಣ ಮಾಡಿದೆ. ಅದನ್ನು ನಾವು ಬಳಸುತ್ತೇವೆ. ಅದರ ಸುವ್ಯವಸ್ಥೆ ಕಾಪಾಡಲು ಹಣ ಬೇಕು. ಹಣ ಎಲ್ಲಿಂದ ಬರುತ್ತದೆ. ವಾಹನ ಮಾಲೀಕರ ಜೇಬಿನಿಂದ. ಹಾಗಾದರೆ ಟೋಲ್ ಗಳು ಏಕೆ ? ಟೋಲ್ ಹಣ ಯಾರಿಗೆ ಹೋಗುತ್ತದೆ ? ಸರ್ಕಾರಕ್ಕೆ ಮತ್ತು ಗುತ್ತಿಗೆದಾರರಿಗೆ. NICE ರೋಡ್ ಅದಕ್ಕೆ ಒಂದು ಒಳ್ಳೆಯ ಉದಾಹರಣೆ. ರಸ್ತೆಗಳನ್ನು ಸುಸಜ್ಜಿತವಾಗಿ ಇಡಬೇಕಾದ ಜವಾಬ್ದಾರಿ ಯಾರದು ? ಸರ್ಕಾರದ್ದು. ಅದಕ್ಕೆ ಜನರು ಹಣ ಸಹ ಪಾವತಿಸುತ್ತಿದ್ದಾರೆ. ಹಾಗಾದರೆ ಹೊರ ಗುತ್ತಿಗೆದಾರರ ಅವಶ್ಯಕತೆ ಬೇಕಿತ್ತೆ? ಪ್ರಜೆಗಳು ಸರ್ಕಾರಕ್ಕೂ ಸುಂಕ ಕಟ್ಟಬೇಕು. ಗುತ್ತಿಗೆದಾರರಿಗೂ ಸುಂಕ ಕಟ್ಟಬೇಕು. ಈಗ ಫಾಸ್ಟ್ ಟ್ಯಾಗ್ ಪಡೆಯಲೇ ಬೇಕಾದ ಪರಿಸ್ಥಿತಿ ಬಂದಿದೆ.
ಅದರಿಂದ ಸಮಯದ ಉಳಿತಾಯವಾದರೂ ಜನರ ಹಣದಿಂದ ಬದುಕುತ್ತಿರುವವರು ಯಾರು ? ಎಲ್ಲಾದರೂ ನೀವು ಹೊರಡಬೇಕಾದರೆ ಮೊದಲೇ ಫಾಸ್ಟ್ ಟ್ಯಾಗ್ ಅಕೌಂಟಿಗೆ ಹಣ ಜಮಾಯಿಸಬೇಕು. ಇಡೀ ದೇಶದಲ್ಲಿ ಕೋಟ್ಯಂತರ ವಾಹನಗಳು ಹಗಲು ರಾತ್ರಿ ಸಂಚಾರ ಮಾಡುತ್ತಿವೆ. ಅಂದರೆ ಟೋಲ್ ಗಳಿಗೆ ಕೋಟ್ಯಂತರ ರೂಪಾಯಿಗಳು ಸರಾಗವಾಗಿ ವರ್ಗಾವಣೆಯಾಗುತ್ತಿವೆ. ಆ ಡೆಪಾಸಿಟ್ ಹಣದಿಂದ ಯಾರಿಗೆ ಲಾಭ? ಅದರ ಬಡ್ಡಿ ದರ ಏನು ? ಹೊರಗಣ್ಣಿಗೆ ಟೋಲ್ ಗಳು ಸುಗಮ ಪ್ರಯಾಣಕ್ಕೆ ಸಹಾಯವಾದಂತೆ ಕಂಡರೂ ಅದರ ಹಿಂದಿರುವ ವ್ಯಾಪಾರೀಕರಣ ಊಹಿಸಲೂ ಸಾಧ್ಯವಿಲ್ಲ. ಒಂದೊಂದಾಗಿ ಸರ್ಕಾರಿ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಾ ಬಂದರೆ, ಅದರಿಂದ ನಷ್ಟ ಅನುಭವಿಸುವವರು ಸಾಮಾನ್ಯ ಜನರೇ ಹೊರತು ಬಿಸಿನೆಸ್ ಟೈಕೂನ್ ಗಳಲ್ಲ.
ತಮಿಳುನಾಡಿನ ಸ್ಥಳೀಯ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿತು. ಮಹಿಳೆಯರಿಗೆ ಉಚಿತ ಪ್ರಯಾಣ. ನನ್ನ ಪಕ್ಕದ ಸೀಟಿನಲ್ಲಿ ಆಸೀನರಾಗಿದ್ದವರಿಗೆ ಕೇಳಿದೆ, ಹೇಗೆ ನಿಮ್ಮ ಮುಖ್ಯಮಂತ್ರಿ, ಸರ್ಕಾರ ಸರಿಯಾಗಿ ನಡೆಸುತ್ತಿದ್ದಾರಾ? ಅವರು ಹೇಳಿದರು, ಪರವಾಗಿಲ್ಲ, ಎಲ್ಲಿ ಹೋದರು ಅದೇ ರಾಜಕೀಯ ಸ್ವಾಮಿ, ಮಹಿಳೆಯರಿಗೆ ಬಸ್ಸುಗಳಲ್ಲಿ ಟಿಕೆಟ್ ಫ್ರೀ ಮಾಡಿರುವುದು ಎಲೆಕ್ಷನ್ ಗಿಮಿಕ್, ಸಿಕ್ಕಾಪಟ್ಟೆ ಬೆಲೆ ಏರಿಕೆಯಾಗಿದೆ, ನಮ್ಮಂಥ ಮಧ್ಯಮ ವರ್ಗದವರಿಗೆ ತೊಂದರೆಯಾಗಿದೆ. ಹಾಗೇ ಮಾತುಗಳು ಮುಂದುವರೆದವು. ಎಲ್ಲಾ ರೀತಿಯಲ್ಲೂ ಬಸ್ಸಿನ ಸ್ಥಿತಿ ಬಹಳ ಕೆಟ್ಟದಾಗಿತ್ತು. ಸಾಮಾನ್ಯ ಭಾಷೆಯಲ್ಲಿ ಡಕೋಟಾ ಬಸ್ ಎಂದರೆ ತಪ್ಪಾಗಲಾರದು. ನಾನು ಕಂಡಕ್ಟರ್ ಸಾಹೇಬರಿಗೆ ಕೇಳಿದೆ, ಬಸ್ಸಿನಲ್ಲಿ ಏನಾದರು ತೊಂದರೆ ಇದೆಯೇ, ಇಷ್ಟೊಂದು ನಿಧಾನವಾಗಿ ಚಲಿಸುತ್ತಿದೆ, ಮುಂದೆ ಹೋಗಲು ಶಕ್ತಿಯೇ ಇಲ್ಲದಂತಿದೆಯಲ್ಲ…! ಅವರು ಹೇಳಿದರು – ತಮಿಳುನಾಡಿನ ನಾಲ್ಕೈದು ದೊಡ್ಡ ಸಿಟಿಗಳಲ್ಲಿ ಮಾತ್ರ ಒಳ್ಳೆ ಕಂಡೀಷನ್ ಬಸ್ಸುಗಳು ಉಂಟು. ಬೇರೆ ಎಲ್ಲಾ ಕಡೆ ಹತ್ತಾರುವರ್ಷಗಳಿಂದ ಜೀರ್ಣೋದ್ಧಾರ ಕಾಣದೆ ಇದೇ ರೀತಿಯ ಬಸ್ಸುಗಳು ಇರುವುದು, ಹೇಗಿದೆ ಹಾಗೆ ಓಡಿಸುಕೊಂಡು ಹೋಗುತ್ತಾ ಇದ್ದೇವೆ.
ನನಗೆ ಆಶ್ಚರ್ಯವಾಯಿತು. ನಮ್ಮ ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ಸುಗಳನ್ನು ಮೀರಿಸುವ ಸಾಟಿ ಎಲ್ಲೂ ಇಲ್ಲ ಎನಿಸಿತು. ಸರ್ಕಾರಗಳು ಯಾವುದೇ ಇರಲಿ. ಒಳ್ಳೆಯ ಬಸ್ಸುಗಳಿಗೆ ಬರ ಇಲ್ಲ. ಟಿಕೆಟ್ ದರಗಳು ಕರ್ನಾಟಕದಲ್ಲಿ ಹೆಚ್ಚು, ತಮಿಳುನಾಡಿನಲ್ಲಿ ಕಡಿಮೆ ಉಂಟು. ಬಹುಶಃ ಬಸ್ಸುಗಳ ದುರ್ವ್ಯವಸ್ಥೆಗೆ ಇದು ಸಹ ಒಂದು ಕಾರಣ ಇರಬಹುದು. ಏನೇ ಇರಲಿ ಪ್ರಾಮಾಣಿಕವಾಗಿ ನಿಗಾ ವಹಿಸಿದರೆ ಎಲ್ಲವನ್ನು ಸುಸಜ್ಜಿತವಾಗಿ, ಸುವ್ಯವಸ್ಥಿತವಾಗಿ, ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು ಎಂಬುವುದು ನನ್ನ ಅನಿಸಿಕೆ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.