(www.vknews.in) : ಒಂದು ಕೆಜಿ ಅಕ್ಕಿ ಬೆಲೆ ಸುಮಾರು ೭೦೦ ರೂಗಳು. ತರಕಾರಿ ಬೆಲೆ ಸಹ ಗಗನಕ್ಕೇರಿದೆ. ಸರ್ಕಾರಿ ಮತ್ತು ಸರ್ಕಾರೇತರರ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಶಾಲಾಕಾಲೇಜುಗಳು ನಡೆಯುತ್ತಿಲ್ಲ. ಅನ್ನ ಮತ್ತು ಪೆಟ್ರೋಲ್ ಗಾಗಿ ಬೀದಿ ಕಾಳಗಗಳು ನಡೆಯುತ್ತಿವೆ. ಸರ್ಕಾರ ಉರುಳಿ ಹೋಯಿತು. ಹೊಸ ಪ್ರಧಾನಿಯನ್ನು ಆರಿಸಲಾಯಿತು. ಅಂತರರಾಷ್ಟ್ರೀಯ ಸಾಲದ ಹೊರೆಯಲ್ಲಿ ಶ್ರೀಲಂಕಾದ ಸಮಾಧಿಯಾಗುತ್ತಿರುವುದರಲ್ಲಿ ಯಾವ ಸಂದೇಹವೂ ಇಲ್ಲ. ಶ್ರೀಲಂಕಾದಂತಹ ಪರಿಸ್ಥಿತಿ ಭಾರತದಲ್ಲಿ ಉಧ್ಭವ ಆಗುವುದಿಲ್ಲ. ಅಕಸ್ಮಾತ್ ಹಾಗೆಯೇ ಆಗಿ ಹೋದರೆ ಏನು ಗತಿ ..!
ಶ್ರೀಲಂಕಾದ ಜನಸಂಖ್ಯೆ ಕೇವಲ ೨ ಕೋಟಿ. ಆದರೆ ಭಾರತದಲ್ಲಿ ೧೩೫ ಕೋಟಿ ಜನರು ಜೀವನ ಸಾಗಿಸುತ್ತಿದ್ದಾರೆ. ಯಾವ ರೀತಿಯ ಸಮಸ್ಯೆಗಳು ಉಧ್ಭವಿಸಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಒಂದು ಪ್ಯಾಕೇಟು ಅನ್ನಕ್ಕಾಗಿ ಯಾವ ರೀತಿಯ ಪರದಾಟಗಳು ನಡೆದವು ಎಂಬುವುದನ್ನು ನಾವು ಕರೋನ ಕಾಲದಲ್ಲಿ ಕಂಡಿದ್ದೇವೆ. ಆಸ್ಪತ್ರೆಗಳು ಮಾಡಿದ ಹಗಲು ದರೋಡೆಗಳ ಬಗ್ಗೆ ಎಲ್ಲರಿಗೂ ಗೊತ್ತು. ಕರೋನ ಕಾಲದಲ್ಲಿ ಜನರು ತಮ್ಮ ಅನಿವಾರ್ಯ ಅವಶ್ಯಕತೆಗಳಿಗೆ ಮಾಡಿದ ಸಾಲವನ್ನು ಇನ್ನೂ ಭರಿಸುತ್ತಿದ್ದಾರೆ.
ಕರೋನ, ಪ್ರಕೃತಿವಿಕೋಪಗಳು, ರಷ್ಯಾ-ಯುಕ್ರೇನ್ ಯುದ್ಧ ಮತ್ತು ಶ್ರೀಲಂಕಾದ ಪರಿಸ್ಥಿತಿ – ಎಲ್ಲವೂ ೪-೫ ವರ್ಷಗಳಲ್ಲಿ ಪ್ರಪಂಚದ ಆರ್ಥಿಕತೆಯನ್ನು ಅಲುಗಾಡಿಸಿಬಿಟ್ಟಿವೆ. ಮುಂದಿನ ದಿನಗಳಲ್ಲಿ ಚೈನಾ-ತೈವಾನ್, ಉತ್ತರ ಮತ್ತು ದಕ್ಷಿಣ ಕೊರಿಯಾ, ಭಾರತ-ಪಾಕಿಸ್ತಾನ ಅಥವಾ ಇರಾನ್ ದೇಶಗಳಲ್ಲಿ ಯುದ್ಧ ಪ್ರಾರಂಭವಾದರೆ ಪ್ರಪಂಚದ ಸ್ಥಿತಿ ಏನಾಗಬಹುದು…! ಎತ್ತ ನೋಡಿದರೂ ಹಾಹಾಕಾರ ಕಾಣಬಹುದು. ಇಂತಹ ಪರಿಸ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬದುಕಲು ಬೇಕಾದ ಪರ್ಯಾಯ ಮಾರ್ಗಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ.
ನೋಟ್ ಬಂದಿ ದಿನಗಳನ್ನು ಸ್ವಲ್ಪ ನೆನಪಿಸಿಕೊಳ್ಳಿ. ನಮ್ಮ ದುಡ್ಡು ನಮ್ಮ ಕೈಗಳಿಗೆ ಸಿಗಲಿಲ್ಲ. ಸರ್ಕಾರ ಏನು ಆದೇಶ ಹೊರಡಿಸುತ್ತದೋ ಅದರಂತೆಯೇ ಎಲ್ಲ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದು. ಮುಂದಿನ ದಿನಗಳಲ್ಲಿ ತಮ್ಮ ಸಂಪೂರ್ಣ ಹಣ ಮತ್ತು ಚಿನ್ನವನ್ನು ಬ್ಯಾಕುಗಳಲ್ಲಿ ಇಟ್ಟರೆ ಏನಾಗಬಹುದು…? ಇಡಬೇಕೇ ಇಡಬಾರದೇ ಎಂಬುವುದು ನಿಮ್ಮ ತರ್ಕಕ್ಕೆ ಬಿಟ್ಟಿದ್ದು. ಕರೋನ ಕಾಲದಲ್ಲಿ ಕೋಟ್ಯಾಂತರ ಜನರು ಕೆಲಸಗಳನ್ನು ಕಳೆದುಕೊಂಡರು. ಎಷ್ಟೋ ಜನರು ಹಳ್ಳಿಗಳಿಗೆ ಪಲಾಯನಗೊಂಡರು. ಮೂರು ವರ್ಷಗಳು ಕಳೆದರೂ ಕೆಲವರು ಮರಳಿ ಪಟ್ಟಣಗಳಿಗೆ ಬರುವ ಮನಸ್ಥಿತಿಯಲ್ಲೇ ಇಲ್ಲ. ಇಲ್ಲೇ ಹೊಲ-ಗದ್ದೆ ನೋಡಿಕೊಂಡರೆ ಸಾಕು, ಗುಲಾಮಗಿರಿಯ ಸಹವಾಸವೇ ಬೇಡ ಎನ್ನುವವರೂ ಇದ್ದಾರೆ.
ನಿಜ ಹೇಳುವುದಾದರೆ ಒಳ್ಳೆಯ ನಿರ್ಧಾರ. ಕೆಲಸ ಕಳೆದುಕೊಂಡರೆ ನಮ್ಮ ಬಳಿ ಪ್ಲಾನ್ ಬಿ ಇರಲಿಲ್ಲ. ಈಗ ಸ್ವಲ್ಪ ಮಟ್ಟಿಗೆ ಪ್ಲಾನ್ ಬಿ ಬಗ್ಗೆ ಜನರು ಯೋಚಿಸಲು ಆರಂಭಿಸಿದ್ದಾರೆ. ಪ್ಲಾನ್ ಬಿ ಯ ಸಿದ್ಧತೆಗಳು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆಪತ್ತು ಕಾಲದಲ್ಲಿ ಬುದ್ಧಿ ಮಂಕಾಗಿ ಹೋಗುತ್ತದೆ. ಮೊದಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ತೊಂದರೆಗಳಿಗೆ ಒಳಗಾಗಲ್ಲ. ಕೆಲಸ, ಮನೆ-ಮಠ – ಎಲ್ಲಾ ಹೋದರೂ ಚಿಂತೆಯಿಲ್ಲ, ಬದುಕಿಕೊಳ್ಳಬಹುದು. ಆದರೆ ಹೊಟ್ಟೆ ಮಾತ್ರ ಕೇಳಲ್ಲ. ಅನ್ನ ಬೇಕು ಎನ್ನುತ್ತದೆ. ದಂಗೆಗಳಲ್ಲಿ, ಕೋಮುಗಲಭೆಗಳಲ್ಲಿ. ಯುದ್ಧಗಳಲ್ಲಿ, ಪ್ರಕೃತಿವಿಕೋಪಗಳಲ್ಲಿ ಎಲ್ಲರೂ ಸಾವು ಬದುಕಿನ ಹೋರಾಟದಲ್ಲಿ ಮುಳುಗಿರುತ್ತಾರೆ.
ಲೂಟಿಕೋರರು ಮತ್ತು ಕಳ್ಳರು ಹೆಚ್ಚಾಗುತ್ತಾರೆ. ಹೆಂಗಸರ ಮತ್ತು ಮಕ್ಕಳ ಸುರಕ್ಷತೆ ಕಷ್ಟಕರವಾಗಬಹುದು. ಮಕ್ಕಳಿಗೆ ಅನ್ನದ ವ್ಯವಸ್ಥೆ ಮಾಡಲೇ ಬೇಕಾಗುತ್ತದೆ. ೭೦೦ ರೂಗಳನ್ನು ಕೊಟ್ಟು ನಾವು ಒಂದು ಕೆಜಿ ಅಕ್ಕಿಯನ್ನು ಕೊಂಡುಕೊಳ್ಳಲು ಸಾಧ್ಯವೇ ? ಸತತ ೫-೬ ವರ್ಷಗಳು ಇದೆ ಪರಿಸ್ಥಿತಿ ಇದ್ದರೆ ಏನು ಮಾಡುವುದು? ಇವೆಲ್ಲಾ ಸುಳ್ಳು ಕಲ್ಪನೆಗಳು , ಅಂಥದ್ದೇನೂ ಆಗುವುದಿಲ್ಲ. ಅಕಸ್ಮಾತ್ ಆಗಿ ಹೋದರೆ ….! ಏನು ಮಾಡುವುದು…?
೧. ಎರಡು ಮೂರು ವರ್ಷಕ್ಕೆ ಆಗುವಷ್ಟು ಅಕ್ಕಿ, ರಾಗಿ, ಗೋದಿ, ದವಸಧಾನ್ಯ ಇತ್ಯಾದಿಗಳನ್ನು ಮನೆಗಳಲ್ಲಿ ಜೋಪಾನವಾಗಿ, ಔಷಧಿ ಹಾಕಿ ಹಾಳಾಗದ ಹಾಗೆ ಸಂಗ್ರಹಿಸಿ ಇಡಬೇಕು.
೨. ಪೆಟ್ರೋಲ್ ಸಿಗಲಿಲ್ಲ ಎಂದಿಟ್ಟುಕೊಳ್ಳಿ, ಆಗ ಎತ್ತಿನಬಂಡಿ, ಸೈಕಲ್ಲುಗಳ ಸವಾರಿಯೇ ಗತಿ. ಕತ್ತೆ ಕುದುರೆಗಳು ಪುನಃ ಬಳಕೆಗೆ ಬರಬಹುದು. ಅದರ ಲಾಲನೆ ಪಾಲನೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
೩. ಸಾವಿರ ರೂಗಳನ್ನು ಕೊಟ್ಟರೆ ಒಂದು ವರ್ಷಕ್ಕೆ ಆಗುವಷ್ಟು ಸಾಮಾನ್ಯ ಔಷಧಿಗಳು ಸಿಗುತ್ತವೆ. ಅದರ ಒಂದು ಪೆಟ್ಟಿಗೆ ಮಾಡಿಟ್ಟುಕೊಳ್ಳಬೇಕು.
೪. ಅಡುಗೆ ಅನಿಲ, ಮಿಕ್ಸಿ, ಗ್ರೇನ್ದರ್, ವಿದ್ಯುತ್ಛಕ್ತಿ ಇತ್ಯಾದಿಗಳು ಇಲ್ಲ ಎಂದಿಟ್ಟುಕೊಳ್ಳಿ, ಅದಕ್ಕೆ ಪರ್ಯಾಯವಾಗಿ ಏನು ವ್ಯವಸ್ಥೆಮಾಡಿಕೊಳ್ಳಬೇಕು, ಹಳೆ ಕಾಲದಲ್ಲಿ ಏನು ಮಾಡುತ್ತಿದ್ದರು ಎಂದು ಯೋಚಿಸಿದರೆ ಉಪಾಯಗಳು ಹೊಳೆಯುತ್ತವೆ.
೫. ಪಟ್ಟಣಗಳನ್ನು ಬಿಟ್ಟು ದೂರ ಹೋಗಿ ಸಂಸಾರಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಹೊಲ, ಗದ್ದೆ, ತೋಟಗಳು ಇದ್ದವರು ಒಂದು ಸೂರಿನ ವ್ಯವಸ್ಥೆ ಮಾಡಿಕೊಂಡು, ಬೆಳೆ ಬೆಳೆದುಕೊಂಡು ಬದುಕು ಕಟ್ಟಿಕೊಳ್ಳಬಹುದು. ೫-೬ ವರ್ಷಗಳ ನಂತರ ಪರಿಸ್ಥಿತಿ ಸಾಮಾನ್ಯವಾದರೆ ಪುನಃ ಪಟ್ಟಣಗಳಿಗೆ ಮರಳಿ ಬರಬಹುದು. ನಿಸ್ಸಹಾಯಕ ಜನರ ಗತಿ ಏನು? ಮನುಷ್ಯತ್ವ ಇರುವವರು ಸಹಾಯ ಮಾಡದೇ ಇರಲಾರರು. ಆದರೆ ನಂಬುವುದು ಹೇಗೆ ? ಕರೋನ ಕಾಲ ಎಲ್ಲಾ ಸಂಬಂಧಗಳನ್ನು ಎಳೆಎಳೆಯಾಗಿ ಬಿಚ್ಚಿ ತೋರಿಸಿದೆ.
೬.ಉಳಿದಿದ್ದು ಕಾಲ ಕಲಿಸಿ ಬಿಡುತ್ತದೆ.
ಇದೆಲ್ಲಾ ಭ್ರಮೆ. ಸತ್ಯವಾಗದೆ ಇದ್ದರೆ ಸಾಕು. ಆದರೆ ದೇವರ ಆಟ ಬಲ್ಲವರಾರು. …!
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.