(www.vknews.in) ಹೊಸಪೇಟೆ :ದೇಶದೆಲ್ಲೆಡೆ ವೇಗವಾಗಿ ವಿನಾಶದ ಅಂಚಿಗೆ ಸರಿಯುತ್ತಿರುವ ವನ್ಯಜೀವಿಗಳನ್ನು ಸಂರಕ್ಷಿಸುವ ಮೊದಲು ಅವುಗಳ ನೆಲೆಯನ್ನು ಕಾಪಾಡುವುದು ಇಂದಿನ ತುರ್ತು ಅಗತ್ಯ ಎಂದು ವನ್ಯಜೀವಿ ಸಂಶೋಧಕ ಉಪನ್ಯಾಸಕ ಡಾ.ಸಮದ್ ಕೊಟ್ಟೂರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ಶ್ರೀ.ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ಏರ್ಪಡಿಸಿದ್ದ 68ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಇಂದು ಅರಣ್ಯ ಪ್ರದೇಶಗಳು ಹಾಗೂ ವನ್ಯಜೀವಿಗಳ ಆವಾಸಸ್ಥಾನ ವಿಪರೀತ ವೇಗದಲ್ಲಿ ಕುಗ್ಗುತ್ತಿದೆ. ಹೀಗಾಗಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ. ಇದರಿಂದ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಮನುಷ್ಯನ ಹಾಗೆಯೇ ಭೂಮಿಯ ಮೇಲೆ ಬದುಕಲು ಎಲ್ಲಾ ಜೀವರಾಶಿಗಳಿಗೂ ಸಮಾನ ಹಕ್ಕಿದೆ . ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ವನ್ಯಜೀವಿಗಳನ್ನು ಹಾಗೂ ಅವುಗಳ ವಾಸಸ್ಥಾನವನ್ನು ರಕ್ಷಿಸಲು ಮುಂದಾಗಬೇಕು ಎಂದು ಡಾ.ಸಮದ್ ಕೊಟ್ಟೂರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ಎನ್. ಕಿರಣ್ ಮಾತನಾಡಿ ವಾಜಪೇಯಿ ಮೃಗಾಲಯವು ಇಡೀ ಉತ್ತರ ಕರ್ನಾಟಕದಲ್ಲೇ ಅತ್ಯಂತ ಆಧುನಿಕ ಮೃಗಾಲಯವಾಗಿದೆ. ದಿನೇದಿನೇ ರಾಜ್ಯದ ಎಲ್ಲ ಕಡೆಯಿಂದ ಜನರು ಬರುತ್ತಿದ್ದಾರೆ. ಹುಲಿ ಸಿಂಹ ಚಿರತೆ ಕರಡಿ ಮುಂತಾದ ಪ್ರಾಣಿಗಳೊಂದಿಗೆ ಈಗಾಗಲೇ ನೀರಾನೆ ಹಾಗೂ ಬಬೂನ್ ಗಳು ಈ ಮೃಗಾಲಯದಲ್ಲಿ ಇವೆ. ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆದುಕೊಂಡು ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು. ಉಪ ವಲಯ ಅರಣ್ಯಾಧಿಕಾರಿ ನೀಲಿಮಾ ಯವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು ಹಾಗೂ ವಲಯ ಅರಣ್ಯಾಧಿಕಾರಿ ರಮೇಶ್ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಪ್ರವಾಸಿಗಳು ಹಾಗೂ ಮೃಗಾಲಯದ ಸಿಬ್ಬಂದಿಯವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.