(www.vknews.in) : ರಜಾ ದಿನ. ನನ್ನ ಸ್ನೇಹಿತನ ಅಂಗಡಿಗೆ ಹೋಗಿದ್ದೆ. ಅವರಿಗೆ ಬಹಳ ಕಸ್ಟಮರ್ಗಳು ಪರಿಚಯ. ಅವರ ಅಂಗಡಿ ಬಿಟ್ಟು ಬೇರೆ ಅಂಗಡಿಗೆ ಹೋಗುವುದಿಲ್ಲ. ನಾನು ನನ್ನ ಸ್ನೇಹಿತನಿಗೆ ಕೇಳಿದೆ – ಏನು ಕಾರಣ, ನಿಮಗೆ ದೂರದಿಂದ ಜನರು ಹುಡುಕಿಕೊಂಡು ಬರುತ್ತಾರಲ್ಲ? ಆಗ ಅವರು ಒಂದು ವಿಷಯವನ್ನು ಪ್ರಸ್ತಾಪಿಸಿದರು. ಪ್ರವಾದಿ ಮುಹಮ್ಮದ್(ಸ) ಸಹಚರರ ಮಧ್ಯೆ ಕುಳಿತಿರುತ್ತಾರೆ. ಮದೀನಾ ಪಟ್ಟಣದ ಓರ್ವ ಹುಚ್ಚಿ ದೂರದಿಂದಲೇ ಸನ್ನೆ ಮಾಡಿ ಪ್ರವಾದಿವರ್ಯರನ್ನು ಕರೆಯುತ್ತಾಳೆ. ಪ್ರವಾದಿವರ್ಯರು ಸಭೆಯಿಂದ ಎದ್ದು ಹೋಗುತ್ತಾರೆ. ಪ್ರವಾದಿವರ್ಯರ ಅನುಯಾಯಿಗಳೆಲ್ಲ ಈ ಹುಚ್ಚು ಮಹಿಳೆಗೆ ಅಷ್ಟೊಂದು ಗೌರವ ಯಾಕೆ ನಮ್ಮ ಪ್ರವಾದಿವರ್ಯರು ಕೊಡುತ್ತಿರುವುದು ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. ಆಕೆ ಕರೆದ ನಂತರ ನಿಲ್ಲುವುದಿಲ್ಲ. ನಡೆದುಕೊಂಡು ಹೋಗುತ್ತಿರುತ್ತಾಳೆ. ಪ್ರವಾದಿವರ್ಯರು ಸಹ ಅವಳ ಹಿಂದೆ ನಡೆಯಲಾರಂಭಿಸುತ್ತಾರೆ. ಮದೀನಾ ಪಟ್ಟಣದಿಂದಾಚೆ ಕಡು ಬಿಸಿಲಿನಲ್ಲಿ ಆಕೆ ಒಂದು ಮೈದಾನದಲ್ಲಿ ಕುಳಿತುಕೊಳ್ಳುತ್ತಾಳೆ. ಪ್ರವಾದಿವರ್ಯರು ಸಹ ಕುಳಿತುಕೊಳ್ಳುತ್ತಾರೆ. ತನ್ನದೇ ಹುಚ್ಚು ಶೈಲಿಯಲ್ಲಿ ಆಕೆ ಮಾತುಗಳನ್ನು ಪ್ರಾರಂಭಿಸುತ್ತಾಳೆ. ಮೈದಾನ, ಕಡು ಬಿಸಿಲು, ಈ ಹುಚ್ಚಿ ನಮ್ಮ ಪ್ರವಾದಿವರ್ಯರನ್ನು ಕರೆದುಕೊಂಡು ಬಂದು ತೊಂದರೆ ಕೊಡುತ್ತಿದ್ದಾಳಲ್ಲ ಎಂಬ ಚಿಂತೆ ಪ್ರವಾದಿವರ್ಯರ ಸಹಚರರಿಗೆ ಕಾಡುತ್ತಿರುತ್ತದೆ. ದೂರದಿಂದಲೇ ಅವರೆಲ್ಲ ಈ ಸನ್ನಿವೇಶವನ್ನು ನೋಡುತ್ತಿರುತ್ತಾರೆ. ಬಹಳ ಹೊತ್ತಾದರೂ ಆಕೆಯ ಮಾತುಗಳು ಮುಗಿಯುವುದಿಲ್ಲ. ಸಹಚರರಿಗೆ ಒಂದು ರೀತಿಯ ಸಂಕಟ.
ಪ್ರವಾದಿವರ್ಯರು ಸಮಾಧಾನದಿಂದ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುತ್ತಾರೆ. ಆಕೆ ತನ್ನ ಎಲ್ಲಾ ಮಾತುಗಳನ್ನು ಮುಗಿಸಿ ಎದ್ದು ನಿಂತಳು. ಆಗ ಮಾತ್ರ ಪ್ರವಾದಿವರ್ಯರು ಸಹ ಎದ್ದು ನಿಂತರು. ನೀನು ಹುಚ್ಚಿ, ಕಡು ಬಿಸಿಲಿನಲ್ಲಿ ಕುಳಿತು ನಿನ್ನ ಮಾತುಗಳನ್ನು ಕೇಳುವುದಿಲ್ಲ ಎಂದು ಹೇಳಲಿಲ್ಲ. ಅವಳು ಹೋಗುವ ತನಕ ವಿನಮ್ರತೆಯಿಂದ ನಡೆದುಕೊಂಡರು. – ಈ ಘಟನೆಯನ್ನು ವಿಸ್ತಾರವಾಗಿ ವಿವರಿಸಿ, ನನ್ನ ಸ್ನೇಹಿತ ನನಗೆ ಕೇಳಿದರು – ನಾವು ನೀವು ಆಗಿದಿದ್ದರೆ ಏನು ಮಾಡುತ್ತಿದ್ದೆವು. ಇದು ಒಳ್ಳೆ ಗಾಚಾರವಾಯಿತಲ್ಲ…, ಸಾಮಾನ್ಯ ಜನರ ಮಾತುಗಳನ್ನೇ ಕೇಳಲು ಮನಸ್ಸಿಲ್ಲ, ಇನ್ನು ಹುಚ್ಚರ ಮಾತುಗಳನ್ನು ಯಾರು ಕೇಳುತ್ತಾರೆ. ಹುಚ್ಚರ ಮಾತುಗಳನ್ನು ಕೇಳುವುದಿರಲಿ ಅವರಿಗೆ ಹತ್ತಿರವೂ ಸೇರಿಸುವುದಿಲ್ಲ. ಅಲ್ಲವೇ ?
ಪ್ರವಾದಿವರ್ಯರು ಇದರಿಂದ ನಮಗೆ ಏನು ಪಾಠ ಹೇಳಿಕೊಟ್ಟರೆಂದರೆ – ಉತ್ತಮ ಕೇಳುಗರಾಗಿ, ಬೇರೆಯವರ ಭಾವನೆಗಳಿಗೆ ಬೆಲೆ ಕೊಡಿ. ಯಾರಿಗೂ ಮೇಲು ಕೀಳು ಎಂಬ ಭಾವನೆಯಿಂದ ನೋಡಬೇಡಿ.
ನನ್ನ ಸ್ನೇಹಿತ ಹೇಳಿದ – ನನ್ನ ಹತ್ತಿರ ಕಸ್ಟಮರ್ ಗಳು ಹೆಚ್ಚಾಗಿ ಬರುತ್ತಾರೆ, ಏಕೆ ಗೊತ್ತೇ ? ನಾನು ಒಳ್ಳೆಯ ಕೇಳುಗನಾಗಿದ್ದೇನೆ. ಕಸ್ಟಮರ್ ಗಳ ಭಾವನೆಗಳಿಗೆ ಸ್ಪಂದಿಸುತ್ತೇನೆ. ವ್ಯಾಪಾರದಲ್ಲಿ ಮೋಸ ಮಾಡುವುದಿಲ್ಲ. ಸತ್ಯ ಹೇಳುತ್ತೇನೆ. ಜನರು ನನ್ನನ್ನು ಇಷ್ಟ ಪಡುತ್ತಾರೆ, ಅದಕ್ಕೆ ನನ್ನ ಬಳಿ ಇರುವ ಸರಕು ಖರೀದಿಸಲು ಬರುತ್ತಾರೆ ಮತ್ತು ಅವರ ಸ್ನೇಹಿತರಿಗೂ ನಮ್ಮ ಅಂಗಡಿ ವಿಳಾಸ ಹೇಳಿ ಕಳುಹಿಸುತ್ತಾರೆ.
ಕಸ್ಟಮರ್ ಗಳಿಗೆ ಸಂಬಂಧಪಟ್ಟ ಯಾವುದೇ ಕ್ಷೇತ್ರವಿರಲಿ, ನೀವು ಉತ್ತಮ ಕೇಳುಗರಾಗಿ, ಪರರ ಭಾವನೆಗಳಿಗೆ ಬೆಲೆ ಕೊಡಿ, ಮಾರುಕಟ್ಟೆಯಲ್ಲಿ ನಿಮ್ಮ ಹೆಸರು ಉತ್ತುಂಗ ದರ್ಜೆಗೆ ಏರುತ್ತದೆ. ನಿಮ್ಮ ಜೊತೆಯಲ್ಲಿ ಬೇರೆಯವರು ಹೇಗೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸಬೇಕೆಂದು ಅಪೇಕ್ಷಿಸುತ್ತೀರೋ ಅದೇ ರೀತಿ ನೀವು ಬೇರೆಯವರೊಂದಿಗೆ ಉತ್ತಮ ಸೇವೆ ಸಲ್ಲಿಸಿ. ವ್ಯಾಪಾರ ವೃದ್ಧಿ ಯಾಗುತ್ತದೆ. ಮನಸ್ಸಿಗೆ ಶಾಂತಿಯೂ ಸಿಗುತ್ತದೆ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.