ಮಂಗಳೂರು (www.vknews.com) : ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣದಲ್ಲಿ ಮಂಗಳೂರು ಗೋಲಿಬಾರ್ ಘಟನೆಯ ಮರುಸೃಷ್ಟಿಗೆ ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.ಮಂಗಳೂರು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ . ಪೊಲೀಸರು 2019 ಡಿಸೆಂಬರ್ 19ರಂದು ಎನ್.ಆರ್.ಸಿ ಪ್ರತಿಭಟನೆಯ ವೇಳೆ ಇಬ್ಬರು ಪ್ರತಿಭಟನಕಾರರನ್ನು ಗುಂಡಿಟ್ಟು ಕೊಂದಿದ್ದರು ಮತ್ತು ಹಲವು ಮಂದಿ ಗಂಭೀರ ಗಾಯಗೊಳ್ಳುವಂತೆ ಮಾಡಿದ್ದರು. ನಿರಾಯುಧ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಪೊಲೀಸರು ಸೃಷ್ಟಿಸಿದ ಕಹಾನಿ ಭಯಾನಕವಾಗಿತ್ತು. ಪೊಲೀಸ್ ಠಾಣೆ ಧ್ವಂಸಕ್ಕೆ ಯತ್ನ, ಪೊಲೀಸ್ ಠಾಣೆಯ ಶಸ್ತ್ರಾಸ್ತ್ರ ಸಂಗ್ರಹ ಕೊಠಡಿಗೆ ನುಗ್ಗಲು ಯತ್ನ ಮುಂತಾದ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸಿ ತಮ್ಮ ದುಷ್ಕೃತ್ಯಗಳನ್ನು ಮರೆ ಮಾಚಲು ಪ್ರಯತ್ನಿಸಿದ್ದರು. ಉಪ್ಪಿನಂಗಡಿ ಪೊಲೀಸರು ಕೂಡ ಇದೇ ಹಾದಿ ತುಳಿದಿದ್ದಾರೆಯೆ ಎಂಬ ಸಂಶಯ ಮೂಡುತ್ತಿದೆ.
ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಡಿಸೆಂಬರ್ 14ರಂದು ಮುತ್ತಿಗೆ ಹಾಕಿದ ಪ್ರತಿಭಟನಕಾರರ ಮೇಲೆ ಪೊಲೀಸರು ಅಮಾನವೀಯ ರೀತಿಯಲ್ಲಿ ಲಾಠಿ ಚಾರ್ಜ್ ನಡೆಸಿದ್ದರು. ಧಾರ್ಮಿಕ ವಿದ್ವಾಂಸರು ಸೇರಿದಂತೆ ಹಲವು ಯುವಕರು ಗಂಭೀರ ಗಾಯಗೊಂಡಿದ್ದರು. ಪೊಲೀಸರ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನಕಾರರ ಮೇಲೆ ನಡೆಸಿರುವ ದೌರ್ಜನ್ಯ, ಹಲ್ಲೆ ತಮಗೆ ತಿರುಗುಬಾಣವಾಗಲಿದೆ ಎಂದರಿತ ಪೊಲೀಸ್ ಇಲಾಖೆ, ಬಳಿಕ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿದ್ದಾರೆ. ಪೊಲೀಸರ ಮೇಲೆ ಪ್ರತಿಭಟನಕಾರರು ಚೂರಿ ಇರಿದಿದ್ದಾರೆ, ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಆರೋಪದಡಿ ಪ್ರತಿ ದೂರು ದಾಖಲಿಸಿ ಪ್ರತಿಭಟನಾ ಸ್ಥಳದಲ್ಲಿದ್ದವರನ್ನು ಬಂಧಿಸುತ್ತಿರುವ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ನೋಡುವಾಗ ಮಂಗಳೂರು ಗೋಲಿಬಾರ್ ಘಟನೆ ನೆನಪಿಗೆ ಬರುತ್ತದೆ.ಗೋಲಿಬಾರ್ ಬಳಿಕ ಪೊಲೀಸರು ಪ್ರತಿಭಟನಕಾರರ ವಿರುದ್ಧ ಸೃಷ್ಟಿಸಿದ ಕಥೆಯ ಮಾದರಿಯಲ್ಲಿಯೇ ಉಪ್ಪಿನಂಗಡಿ ಪೊಲೀಸರು ಕೂಡ ಹೊಸ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯವರ ಹೇಳಿಕೆಗೂ, ಎಫ್ಐಆರ್ ನಲ್ಲಿ ಉಲ್ಲೇಖಿಸಿರುವ ಅಂಶಗಳಿಗೂ ತಾಳೆಯಾಗುತ್ತಿಲ್ಲ.
ಬಂಧಿತ ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸ್ ವಾಹನಕ್ಕೆ ಹಾನಿ ಮಾಡಿದ್ದಾರೆ ಎಂಬೆಲ್ಲಾ ಸುಳ್ಳು ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಸ್ತವದಲ್ಲಿ ಪ್ರತಿಭಟನಕಾರರು ಶಾಂತಿಯುತವಾಗಿಯೇ ವರ್ತಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಿಂದ ಸ್ಪಷ್ಟಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಎಫ್.ಐ ಸಂಘಟನೆಯ ಮೂವರು ಸ್ಥಳೀಯ ಮುಖಂಡರನ್ನು ವಿಚಾರಣೆಗಾಗಿ ಡಿಸೆಂಬರ್ 13ರ ರಾತ್ರಿ ತಡರಾತ್ರಿ ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರು. ಇವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಬರ್ಬರವಾಗಿ ಲಾಠಿ ಬೀಸಿದ್ದರು. ಇದರಿಂದ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರಿಂದ ಸಾರ್ವಜನಿಕರ ಹಾದಿ ತಪ್ಪಿಸಲು ಪ್ರತಿಭಟನಕಾರರ ವಿರುದ್ಧವೇ ಸುಳ್ಳು ಆರೋಪ ಮಾಡಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.