(www.vknews.com) : ಕನ್ನಡ ನಾಡಿನ ಸಂಸ್ಕೃತಿಯ ಬಿಂಬಿಸುವ ಕರಾವಳಿ ಗಂಡು ಕಲೆಯಾದ ಯಕ್ಷಗಾನ ಎಲ್ಲರಿಗೂ ತಿಳಿದಿರುತ್ತದೆ. ಜಾನಪದ ಸೊಗಡನ್ನು ಮಾತಿನ ಮೋಡಿಯನ್ನು ಜ್ಞಾನದ ತಿರುವನ್ನು, ನಾಟ್ಯದ ವೈಭವವನ್ನು, ಸಂಗೀತದ ಇಂಪನ್ನು, ಹಾಸ್ಯದ ಹೊನಲನ್ನು, ದು:ಖ, ಕರುಣಾರಸ, ಶೃಂಗಾರರಸ, ಹಾಸ್ಯರಸ, ವೀರರಸ, ಭಕ್ತಿರಸ, ಗಾಯನ ಮೊದಲಾದ ಲಲಿತಕಲೆಯ ನವರಸಗಳನ್ನು ಯಕ್ಷಗಾನ ಹೊಂದಿದೆ ಎಂದು ತಪ್ಪಾಗಲಾರದು. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನವು ಇಂದು ಸಂಗೀತದ ತಾಳ- ಮೇಳಗಳಿಲ್ಲ, ನಾಟ್ಯ-ಮೃದಂಗಗಳಿಲ್ಲ , ಚಂಡೆಯ ರಿಂಗಣಗಳಿಲ್ಲದೆ ಕೊಲೆಪಾತಕಿ ಮಹಾಮಾರಿ ಕರೋನದಿಂದಾಗಿ ಎಲ್ಲವು ನಿಂತಿವೆ.
ಇಂತಹ ಮನೆಯಲ್ಲೇ ಕುಳಿತು ಕೆಲವು ಕಲಾವಿದರು ಏನು ಮಾಡಿ ತಮ್ಮ ಶ್ರೀಮಂತ ಕಲೆಯನ್ನು ಜನರಿಗೆ ಉಣ ಬಡಿಸುದು ಎಂದು ಯೋಚಿಸುತ್ತಾ ಇರುವಾಗ ಇಲ್ಲಿ ನಾಲ್ವರು ಒಂದಾಗಿ ಭಾಗವತರಿಂದ ಹಾಡಿಸಿ ನಾಟ್ಯ ಮಾಡಿ ಯಕ್ಷ ರಸ ನಿಮಿಷಕ್ಕೆ ಸಾಕ್ಷಿಯಾಗಿದ್ದಾರೆ. ಡಾ. ವೈ ಚಂದ್ರಶೇಖರ ಶೆಟ್ಟಿಯವರ ಕರ ಕುಂಚದಲ್ಲಿ ಸುಮಾರು 20 ವರುಷದ ಹಿಂದೆ “ರಂಗನಾಯಕಿ” ಎಂಬ ಯಕ್ಷಗಾನ ಸಾಲಿಗ್ರಾಮ ಮೇಳದ ರಂಗಮಂಚದಲ್ಲಿ ರಂಗೇರಿತು .
ರಂಗನಾಯಕಿ ಯಕ್ಷಗಾನವು ಜನರ ಮನೆ ಮನದಲ್ಲಿ ಇಂದಿಗೂ ಅಚ್ಚುಳಿಯದೆ ಹೆಸರುವಾಸಿಯಾಗಿತ್ತು. ಆ ಯಕ್ಷಗಾನದ ಒಂದು ಹಾಡು ಕನ್ನಡ ನಾಡಿನ ಇತಿಹಾಸವನ್ನು ಬಿಂಬಿಸುವ ಹಾಡು “ಕನ್ನಡ ಕುಲತಿಲಕ ಎಚ್ಚಮ್ಮ ನಾಯಕ ” ಕನ್ನಡ ರಾಜ್ಯದ ಭಾಗ್ಯ ಸುಧಾರಕ, ರನ್ನ ಪಂಪರ ನಾಡು ಕುಮಾರವ್ಯಾಸರ ಬೀಡು, ಸನ್ನತಾಂಗಿಯರ ರಾಘವಾಂಕರ ನಾಡು ” ಎಂಬ ಸಾಹಿತ್ಯವನ್ನು ಡಾ. ವೈ ಚಂದ್ರಶೇಖರ ಶೆಟ್ಟಿಯವರು ಕನ್ನಡ ನಾಡು ನುಡಿ ಕವಿಗಳ ಬಗ್ಗೆ ಕೇವಲ ನಾಲ್ಕು ಸಾಲಿನ ಪದ್ಯದಲ್ಲಿ ಬಿಂಭಿಸಿದ್ದಾರೆ . ಈ ಹಾಡನ್ನು 20 ವರುಷದ ಹಿಂದೆ ಸಾಲಿಗ್ರಾಮ ರಂಗ ಮಂಚದಲ್ಲಿ ಹಿರಿಯ ಭಾಗವತರಾದ ಹೇರಂಜಾಲು ಗೋಪಾಲ ಗಾಣಿಗರ ಹಾಡಿಗೆ ಶ್ರೀಯುತ ಜಯರಾಮ ಗಾಣಿಗರವರ ರಂಗನಾಯಕಿ ಪಾತ್ರ ಮೈ ಮನ ನೆರವೇರಿಸುವಂತೆ ಪ್ರೇಕ್ಷಕರ ಮನಸೂರೆಗೊಂಡಿತು. ತದನಂತರ ಹಿರಿಯ ಭಾಗವತರಾದ ಶ್ರೀಯುತ ರಾಘವೇಂದ್ರ ಮಯ್ಯ ಹಾಲಾಡಿ ಶ್ರೀಯುತ ಸುಬ್ರಮಣ್ಯ ಯಲಗೊಪ್ಪನವರು ರಂಗನಾಯಕಿಯಾಗಿ ರಂಗದಲ್ಲಿ ದಣಿವರಿಯದೆ ಕುಣಿಸಿ ಪ್ರೇಕ್ಷಕರನ್ನು ರಂಜಿಸಿದರು.
ಇಂದು ಮಹಾಮಾರಿ ಕರೋನದ ಮನೆಯೆ ಮಂತ್ರಾಲಯದ ಸಮಯದಲ್ಲಿ ಭಾಗವತ ಶ್ರೀಯುತ ಪಲ್ಲವ ಗಾಣಿಗರ ಪದಕ್ಕೆ ಮೃದಂಗ ಸಾಥ್ ನಲ್ಲಿ ಶಶಾಂಕ್ ಆಚಾರ್ಯ ಚಂಡೆಯ ರಿಂಗಣದಲ್ಲಿ ಮಂಜುನಾಥ ದೇವಾಡಿಗರ ಕೈಚಳಕ ನೋಡಬಹುದು. ಗೃಹಬಂಧನ ಈ ಸಮಯದಲ್ಲಿ ಯಕ್ಷ ಕನ್ಯೆಯರಾದ ನಾಗಶ್ರೀ ಜಿ. ಎಸ್, ಅರ್ಪಿತಾ ಹೆಗಡೆ, ನೀಹಾರಿಕ ಭಟ್, ಮಾನಸ ಉಪಾಧ್ಯ, ನಾಲ್ಕು ಜನ ಸೇರಿ ಮನೆಯಲ್ಲೇ ನಾಟ್ಯ ವೀಡಿಯೋ ಮಾಡಿ ಇಂದು ಜನ ಸಾಮಾನ್ಯರಿಗೆ ತಲುಪಲು ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿ, ಅಂಗಕ್ಕೊಪ್ಪುವ ಸೀರೆ, ರಂಗಕ್ಕೊಪ್ಪುವ ಕಲೆಯಾ ಯಕ್ಷರಂಗದ ಕೆಲವು ಆಭರಣಗಳನ್ನು ಹಾಕಿ ಯಕ್ಷಗಾನ ಕಲೆಯ ರಂಗ ಚೌಕಟ್ಟಿಗೆ ಚುತಿ ಬಾರದ ರೀತಿಯಲ್ಲಿ ಮನೆಯಲ್ಲೇ ಕುಣಿದಿದ್ದಾರೆ. ಹೀಗೆ ನಮ್ಮ ದೇಶದ ಪಟ್ಟೆ ಜರಿ ಸೀರೆಯನ್ನು ಉಟ್ಟುಕೊಂಡ ಅವರು ದೇಶಿಯ ವಸ್ತುಗಳಿಗೂ ಸಹ ಉತ್ತೇಜನ ಕೊಡಿ ಎಂದು ಯಕ್ಷಗಾನದ ಮೂಲಕ ಜನಸಾಮಾನ್ಯರಿಗೆ ತೋರಿಸಿಕೊಟ್ಟಿದ್ದಾರೆ. ಹಿಂದೆಯೂ ಸಹ ಇಂತಹ ಕಲೆಯನ್ನು ಶ್ರೀಮಂತ ಗೊಳಿಸಲು ಹಲವಾರು ಭಾಗವತರು ತಮ್ಮ ಮನೆಯಲ್ಲೇ ಪದಗಳನ್ನು ಹಾಡಿ ನೋಡುಗರ ಮನಸೂರೆಗೊಂಡಿದ್ದರೆ. ಇಂತಹ ಯಕ್ಷಗಾನವನ್ನು ಈ ರೀತಿಯಾಗಿ ಇನ್ನು ಹಲವು ಪ್ರಯೋಗ ಮಾಡಬೇಕು ಎಂದು ಹೊರಟಿರುವ ಇವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.
– ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.