(www.vknews.com) : ಕಳೆದ ವಾರ ಗಾಲ್ವನ್ ನದಿ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಗಡಿ ಪ್ರದೇಶಕ್ಕೆ ಸಂಬಂಧಿಸಿದ ಕದನದಲ್ಲಿ 20 ರಷ್ಟು ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೀನಾ ಮತ್ತು ಭಾರತದ ನಡುವೆ ಸಂಘರ್ಷ ಇದೇ ಮೊದಲಲ್ಲ, ಈ ಹಿಂದೆ 1999 ರ ಕಾರ್ಗಿಲ್ ಯುದ್ಧದ ನಂತರ, 1962 ಮತ್ತು 1967 ರಲ್ಲೂ ಭಾರತ – ಚೀನಾ ಕದನ ನಡೆದಿತ್ತು ಮಾತ್ರವಲ್ಲ ಅನೇಕ ಸೈನಿಕರು ಪ್ರಾಣತೆತ್ತಿದ್ದರು.
ಈ ವಿಚಾರವಾಗಿ ಚರ್ಚೆಗಳು ಮುಂದುವರಿಯುತ್ತಿದ್ದಾಗ, ಯಾಕಾಗಿ ಈ ಕದನವಾಯ್ತು ಎಂಬುದರ ಕುರಿತು ನಿಖರ ಮಾಹಿತಿಯಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಚೀನಾವು ಭಾರತದ ಭೂಪ್ರದೇಶವನ್ನು ಆಕ್ರಮಿಸಿದ ಕಾರಣ ಭಾರತೀಯ ಸೈನಿಕರು ತಡೆದುದೇ ಗಲಭೆಗೆ ಕಾರಣವೆಂದು ಹೇಳುತ್ತಿದ್ದಾದರೂ, ಈ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಚೀನೀ ಸೈನಿಕರು ಭಾರತದೊಳಗೆ ನುಸುಳಲಿಲ್ಲ ಎಂದು ಪ್ರಸ್ತಾಪಿಸಿದ್ದು ಇನ್ನಷ್ಟು ಗೊಂದಲಕ್ಕೀಡಾಗಿಸಿದೆ. ಭಾರತ ಮತ್ತು ಚೀನಾ ದ ನಡುವೆ ಗಡಿ ವಿವಾದಗಳು ಇನ್ನೂ ನೆಲೆಸಿರುವುದರಿಂದ ಈ ರೀತಿಯ ಕದನಗಳು ನಡೆಯುತ್ತಿದೆ. ಈ ವಿವಾದವನ್ನು ಇತ್ಯರ್ಥಗೊಳಿಸಲು ಇನ್ನೂ ಸಾಧ್ಯವಾಗಲಿಲ್ಲ ಎಂಬುದರ ಕುರಿತು ಭಾರತೀಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಒಂದಷ್ಟು ತಮಾಷೆಯಾಗಿ ಮತ್ತು ಗಂಭಿರವಾಗಿ ಕಂಡ ಒಂದು ವಿಚಾರವೆಂದರೆ ‘ಬಾಯ್ಕಾಟ್ ಚೀನಾ’ ಎಂಬ ಅಭಿಯಾನ. ಭಾರತೀಯ ಸೈನಿಕರನ್ನು ಸಂಹರಿಸಿದ ಕಾರಣವಾಗಿ ಅದಕ್ಕೆ ಪ್ರತೀಕಾರ ನೀಡುವ ಸಲುವಾಗಿ ಚೈನಾದ ವಸ್ತುಗಳನ್ನೆಲ್ಲ ಭಾರತೀಯರು ಬಹಿಷ್ಕರಿಸುವ ಮೂಲಕ ಚೈನಾ ಗೆ ಪಾಠ ಕಲಿಸುವ ತಯ್ಯಾರಿಯಲ್ಲಿದೆ. ಇದಕ್ಕೆ ಪೂರಕವೆಂಬಂತೆ, ಚೀನಾ ತಯಾರಿಸಿದ ಆಟಿಕೆಗಳು, ಇಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ಗಳನ್ನು ಒಡೆದು ಹಾಕುವ ಮುಖಾಂತರ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಹಳ ಆಶ್ಚರ್ಯವಾಗುತ್ತಿದೆ. ಚೀನೀ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ನಿಲುವಿನಲ್ಲಿ ಇಷ್ಟೊಂದು ಅಗಾಧವಾದ ಚರ್ಚೆಗಳು ನಡೆಯುವಾಗ ಸಾಮಾನ್ಯವಾಗಿ ಎಲ್ಲರೂ ಭಾವನಾತ್ಮಕವಾಗಿ ಚಿಂತಿಸಿರಬಹುದು. ಅದರ ಮುಂದುವರಿದ ಭಾಗವೆಂಬಂತೆ ತಮ್ಮಲ್ಲಿರುವ ಚೀನೀ ಪ್ರೊಡಕ್ಟ್ ಗಳನ್ನು ನಶಿಸುವುದು. ಆದರೆ, ಒಂದು ಪ್ರಶ್ನೆ, ಇಲ್ಲಿ ಚೀನಾಕ್ಕೆ ಏನು ಹೊಡೆತ ಬಿದ್ದೀತು? ನಾವು ಹಣ ಕೊಟ್ಟು ಖರೀದಿಸಿದ ಒಂದು ವಸ್ತು ಅದು ನಮ್ಮದು, ಅದರ ಮೌಲ್ಯ ಚೀನಾಕ್ಕೆ ದೊರಕಿಯಾಗಿದೆ, ಭಾರತ ಸರ್ಕಾರಕ್ಕೆ ಅದರ ತೆರಿಗೆಯೂ ಬಂದಿದೆ. ಆಮೇಲೆ ಅದನ್ನು ಒಡೆದು ಹಾಕಿದರೆ ನಷ್ಟ ಯಾರಿಗೆ? ಉದ್ವೇಗದಿಂದ ಪ್ರತಿರೋಧಕ್ಕೆ ಮುಂದಾದಾಗ ಅದರಿಂದ ಪ್ರಯೋಜನವೇನೂ ಇಲ್ಲ. ಇಲ್ಲಿ ಭಾರತದಲ್ಲಿ ಒಟ್ಟಾರೆಯಾಗಿ ನೋಡುವುದಾದರೆ, ದೇಶ14% ರಷ್ಟು ಚೀನಾವನ್ನೇ ಅವಲಂಬಿಸಿದೆ. ಅಂದರೆ, ಚೀನಾದಿಂದ ಭಾರತಕ್ಕೆ ಅಗಾಧ ಪ್ರಮಾಣದಲ್ಲಿ ಆಮದು ನಡೆಯುತ್ತಿದೆ. ಭಾರತದ ಎರಡನೇ ಅತೀ ದೊಡ್ಡ ವ್ಯಾಪಾರ ಪಾಲುದಾರನಾಗಿ ಚೈನಾ ಇದೆ. ಅಂದರೆ, ಭಾರತಕ್ಕೆ ಚೀನಾದಿಂದ ಸುಮಾರು 90 ಸಾವಿರ ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಆಮದು ನಡೆಯುತ್ತಿದೆ. ಆದರೆ, ಚೀನಾದ ವ್ಯಾಪಾರದಲ್ಲಿ ಭಾರತವು ಕೇವಲ 2.1% ರಷ್ಟಿದೆ ಮತ್ತು 2018 ರ ಅಂಕಿಅಂಶಗಳ ಪ್ರಕಾರ 12 ನೇ ಸ್ಥಾನದಲ್ಲಿದೆ.
ಇನ್ನು WORLD TRADE ORGANIZATION ಒಪ್ಪಂದದ ಪ್ರಕಾರ ಭಾರತಕ್ಕೆ ಏಕಾಏಕಿ ಆಮದನ್ನು ನಿಲ್ಲಿಸುವಂತೆಯೂ ಇಲ್ಲ. ಚೀನಾಕ್ಕೆ ಸಡ್ಡು ಹೊಡೆಯಲು ಚೀನಾದ ವಸ್ತುಗಳನ್ನು ಒಂದೇಸಮನೆ ಬಹಿಷ್ಕರಿಸಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ಒಪ್ಪಂದದ ಪ್ರಕಾರ ಸಾಧ್ಯವಿಲ್ಲ ಮಾತ್ರವಲ್ಲ, ಚೀನಾದ ಬೆಲೆಯಲ್ಲಿ ಬೇರೆ ರಾಷ್ಟ್ರಗಳಿಂದ ವಸ್ತುಗಳು ಲಭ್ಯವೂ ಇಲ್ಲ. ಹಾಗಿರುವಾಗ ಇದು ಭಾರತದ ಆರ್ಥಿಕ ಸ್ಥಿತಿಗತಿಗೆ ದೊಡ್ಡದಾದ ಹೊಡೆತ ಉಂಟಾಗಬಹುದೇ ವಿನಃ ಭಾರತಕ್ಕೆ ಯಾವುದೇ ರೀತಿಯ ಲಾಭವಿರದು. ಕೆಲವರ ವಾದ ಏನಂದರೆ, WTO ಒಪ್ಪಂದದ ಪ್ರಕಾರ ಆಮದು ನಿಲ್ಲಿಸಲು ಸಾಧ್ಯವಿಲ್ಲದ ಕಾರಣ, ಭಾರತೀಯ ಪ್ರಜೆಗಳು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಚೀನಾದ ವ್ಯಾಪಾರಕ್ಕೆ ಹೊಡೆತವಿಟ್ಟು ಆಮದು ಕಡಿಮೆಗೊಳಿಸಬೇಕು ಎನ್ನುವುದು. ಆದರೆ ಇಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆಯೇನೆಂದರೆ, ಭಾರತೀಯರು ಚೀನೀ ವಸ್ತುಗಳ ಬಳಕೆ ನಿಲ್ಲಿಸಿದರೆ, ಅದಕ್ಕೆ ಪರ್ಯಾಯವಾಗಿ ಅದೇ ಬೆಲೆಯ ಭಾರತೀಯ ವಸ್ತುಗಳು ಇದೆಯೇ ಎನ್ನುವುದು? ಅಥವಾ ಬೇರೆ ದೇಶಗಳಿಂದ ಆಮದು ಮಾಡಿ ಇರಿಸಿದೆಯೇ? ಒಟ್ಟಿನಲ್ಲಿ ಲಾಜಿಕ್ ಇಲ್ಲದ ಮಾತುಗಳಿವು.
ಬಾಯ್ಕಾಟ್ ಚೈನಾ ವಿಚಾರವಾಗಿ ಚಾನೆಲೊಂದರ ಸಂದರ್ಶನದಲ್ಲಿ ಚಿತ್ರನಟ ಉಪೇಂದ್ರ ಹೇಳಿದ ಮಾತೊಂದು ಕೇಳಿದೆ; “ನಾವು ವೀರರಾಗಿದ್ದಾಗ ಯಾರೂ ನಮ್ಮ ತಂಟೆಗೆ ಬರಲ್ಲ; ಆದರೆ, ಹೇಡಿಗಳಾಗಿ ಒಳಗೊಳಗೆ ಕಚ್ಚಾಡುತ್ತಿರುವಾಗ ಎಲ್ಲರೂ ನಮ್ಮ ಮೇಲೆರಗಿ ಬರುತ್ತಾರೆ; ಇವಾಗ ಚೈನಾ, ನೇಪಾಳದಂತಹ ದೇಶ ಮಾಡುತ್ತಿರುವುದು ಇದನ್ನೇ..”
ಇದು ಚಿಂತನಾರ್ಹ ಮಾತು, ಯಾಕೆಂದರೆ, ಚೀನಾ ಕೂಡ ಭಾರತದ ದೌರ್ಬಲ್ಯತೆ ಅರಿತೇ ದಾಳಿ ಮಾಡುತ್ತಿದೆ. ಅದನ್ನು ಎದುರಿಸುವ ಶಕ್ತಿ ಭಾರತಕ್ಕಿಲ್ಲ ಎಂಬುವುದೂ ಅವರಿಗೆ ತಿಳಿದಿದೆ. ಒಂದು ವೇಳೆ ನಾವು ಚೀನೀ ವಸ್ತುಗಳಿಗೆ ಸಂಪೂರ್ಣ ನಾಂದಿ ಹಾಡಿದರೂ ಚೀನಾಕ್ಕೆ ದೊಡ್ಡ ಮಟ್ಟಿನ ಹೊಡೆತ ಉಂಟಾಗದು ಎಂಬುದನ್ನು ಮನಗಂಡಿದ್ದಾರೆ. ಹಾಗಿರುವಾಗ ನಾವು ಮೂರ್ಖತನದ ಪ್ರವೃತ್ತಿಯನ್ನು ಮಾಡಿಕೊಳ್ಳುತ್ತಾ, ನಮ್ಮೊಳಗೇ ಕಚ್ಚಾಟ ನಡೆಸುತ್ತಾ, ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜಿಗಿಡುತ್ತೇವೆಯೇ ವಿನಃ ಭಾರತದ ಅಭಿವೃದ್ಧಿಯ ಕಡೆಗೆ ಗಮನವಿರಿಸುವುದಿಲ್ಲ. ಇಲ್ಲಿ ಇವಾಗ ಎಲ್ಲವೂ ವ್ಯಾಪಾರವಾಗಿದೆ. ಶಿಕ್ಷಣ, ರಾಜಕೀಯ, ಆರೋಗ್ಯ ಇಲಾಖೆ… ಹೀಗೆ ಎಲ್ಲವೂ ಲಾಭದ ಹಿಂದೆಯೇ ಓಡುತ್ತಿದೆಯಲ್ಲದೆ ದೇಶಕ್ಕೆ ಸೇವೆ ನೀಡುವುದಕ್ಕಲ್ಲ. ಭಾರತ ಯಾಕೆ ಇನ್ನೂ ಹಿಂದುಳಿದಿದೆ ಎಂದರೆ, ಇಲ್ಲಿ ನೀಡುತ್ತಿರುವ ಶಿಕ್ಷಣಕ್ಕೆ ಮೌಲ್ಯವಿಲ್ಲದ್ದು. ಈಗ, ಸ್ಪರ್ಧಾತ್ಮಕ ಕಲಿಕೆಯಿಂದಾಗಿ ಶಿಕ್ಷಣ ಕ್ಷೇತ್ರ ವ್ಯಾಪಾರ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ. ರಾಜಕೀಯವೂ ಒಂದು ವ್ಯಾಪಾರವೇ. ದೇಶದ, ರಾಜ್ಯದ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸದೇ ಹೆಚ್ಚಿನ ಲಾಭ ಗಳಿಸುವುದರಲ್ಲೇ ರಾಜಕಾರಣಿಗಳು ಮಗ್ನರಾಗಿದ್ದಾರೆ. ಆರೋಗ್ಯ ಕ್ಷೇತ್ರವೂ ಇದೇ ರೀತಿಯಲ್ಲೇ ನಡೆಯುತ್ತಿದೆ.
ನಾವು ಒಂದು ದೇಶಕ್ಕೆ ಬಹಿಷ್ಕಾರ ಹೇಳಬೇಕೆಂದರೆ ನಮ್ಮ ದೇಶ ಅದಕ್ಕಿಂತ ಬಲಿಷ್ಠವಾಗಿರಬೇಕು. ಕನಿಷ್ಠವಾಗಿ ಅದರಿಂದ ಮುಂದೆ ನಮ್ಮ ದೇಶದಲ್ಲಿ ಎದುರಾಗುವ ತೊಂದರೆಗಳನ್ನು ನಿಭಾಯಿಸಲು ದೃಢವಾಗಿರಬೇಕು. ಉತ್ಪಾದನಾ ಕ್ಷೇತ್ರಗಳು ಉತ್ಕೃಷ್ಟವಾಗಿ ಬೆಳೆಯಬೇಕು. ಸ್ವಾವಲಂಬಿಯಾಗಿ ದೇಶ ಮುನ್ನಡೆಸುವ ಆತ್ಮವಿಶ್ವಾಸವಿರಬೇಕು. ಆದರೆ ಇದ್ಯಾವುದೂ ಇಲ್ಲದೆ ಭಾವನಾತ್ಮಕವಾಗಿ ಚಿಂತಿಸಿ ‘ಬಾಯ್ಕಾಟ್ ಚೀನಾ’ ಎಂಬ ಅಭಿಯಾನ ಕೈಗೆತ್ತಿಕೊಂಡರೆ ಅದರಿಂದ ಏನು ಉಪಯೋಗ? ಇಲ್ಲಿ ಉತ್ಪಾದನೆ ಬೆಳೆಯಬೇಕೆಂದರೆ, ಮೊದಲು ನಮ್ಮ ದೇಶವನ್ನು ಹಿತಾಸಕ್ತಿಯಿಂದ ಕಾಯ್ದುಕೊಳ್ಳಬೇಕು. ನಮ್ಮೊಳಗೇ ಕಚ್ಚಾಟಗಳು ನಡೆಯುತ್ತಿದ್ದರೆ, ಜಾತಿ-ಧರ್ಮದ ವಿಂಗಡನೆಯಲ್ಲಿ ಪರಸ್ಪರ ವಿಷ ಕಾರುತ್ತಾ ಆತಂಕದ ವಾತಾವರಣ ಸೃಷ್ಟಿಯಾಗಿದ್ದರೆ ಅಲ್ಲಿ ವಾಣಿಜ್ಯ ಕ್ಷೇತ್ರವು ಹೇಗೆ ಬೆಳೆಯಲು ಸಾಧ್ಯ?
ಭಾರತದ ಮಟ್ಟಿಗೆ ವಾಣಿಜ್ಯ ಬೆಳೆಯಬೇಕೆಂದರೆ, ಅಭಿವೃದ್ಧಿ ನಡೆಯಬೇಕೆಂದರೆ, ದೇಶ ವಿಕಾಸವಾಗಬೇಕೆಂದರೆ ಮೊಟ್ಟ ಮೊದಲು ಇಲ್ಲಿ ಶಾಂತಿ ನಿರ್ಮಾಣಗೊಳ್ಳಬೇಕು. ಇಲ್ಲಿನ ವಾತಾವರಣ ತಿಳಿಯಾಗಿದ್ದರೆ ಹೂಡಿಕಾದರರು ಭಾರತದ ಕಡೆಗೆ ಧಾವಿಸುತ್ತಾರೆ. ಇಲ್ಲಿ ಅಂತರಾಷ್ಟ್ರೀಯ ಕಂಪೆನಿಗಳು ತಲೆಯೆತ್ತಬಹುದು. ಭಾರತದ ಉತ್ಪಾದನಾ ಕ್ಷೇತ್ರ ಬೆಳೆಯಬಹುದು. ಆಗ ನಮಗೆ ಹೆಚ್ಚಾಗಿ ವಿದೇಶಗಳನ್ನು ಅವಲಂಬಿಸುವ ಅಗತ್ಯತೆ ಬರುವುದಿಲ್ಲ. ಅದಲ್ಲದೆ, ಬರೀ ಬಾಯ್ಕಾಟ್, ಬಹಿಷ್ಕಾರ, ನಿಷೇಧ ಎನ್ನುತ್ತಾ ಬಾಯಿ ಬಡಿಯುತ್ತಿದ್ದರೆ ದೇಶ ಇನ್ನಷ್ಟು ತಳಮಟ್ಟಕ್ಕಿಳಿಯುತ್ತದೆ. ಈಗಾಗಲೇ ಕೊರೋನಾ ಲಾಕ್ ಡೌನ್ ಕಾರಣವಾಗಿ ದೇಶದ ಆರ್ಥಿಕತೆ ತೀರಾ ಹದಗೆಟ್ಟಿದೆ. ಸರಕಾರದ ವೈಫಲ್ಯತೆ ಪದೇ ಪದೇ ವ್ಯಕ್ತವಾಗುತ್ತದೆ. ದೇಶವನ್ನು ಸುಭದ್ರವಾಗಿ ಮುನ್ನಡೆಸುವಲ್ಲಿ ಆಡಳಿತ ಪಕ್ಷ ಸೋಲುತ್ತಿದೆ, (ಅದರ ಬಗ್ಗೆ ಯೋಚಿಸದೇ ರಾಜಕೀಯ ಲಾಭಿಗಾಗಿ ಮಾತ್ರ ಕೆಲಸ ಮಾಡುತ್ತಿದೆ ಅನ್ನಬಹುದು.)
ಇನ್ನೇನು ಬಿಹಾರ ಚುನಾವಣೆ ಮುಂದಿದೆ. ಮೊನ್ನೆ ಗಡಿಯಲ್ಲಿ ನಡೆದ ಕದನದಲ್ಲಿ ವೀರಮರಣ ಹೊಂದಿದ ಸೈನಿಕರಲ್ಲಿ ಬಹುಪಾಲು ಬಿಹಾರ ಮೂಲದವರೇ. ಹಾಗಿರುವಾಗ ಈ ಘಟನೆಯನ್ನೂ ರಾಜಕೀಯ ಲಾಭಕ್ಕಾಗಿ, ಜನರನ್ನು ಭಾವನಾತ್ಮಕವಾಗಿ ಬಲೆಗೆ ಬೀಳಿಸುವ ಹುನ್ನಾರವೂ ನಡೆಯುತ್ತಿದೆ. ಅದಕ್ಕಾಗಿ ನಿರ್ದಿಷ್ಟ ಪಕ್ಷದ ಬೆಂಬಲಿಗರು ಈ Boycott China ಅಭಿಯಾನಕ್ಕೆ ಮಾನ್ಯತೆ ನೀಡುತ್ತಿರುವುದು. ಇಲ್ಲಿ ಒಟ್ಟಾಗಿ ಎಲ್ಲವನ್ನೂ ರಾಜಕೀಯವಾಗಿ ನೋಡಲಾಗುತ್ತದೆ. ಬರಿಯ ಆಶ್ವಾಸನೆಗಳಷ್ಟೇ ನಡೆಯುತ್ತಿದೆ. ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಹಾಗಿರುವಾಗ, ದೇಶದ ಪ್ರಗತಿ ಸಾಧ್ಯವಾಗುವುದು ಹೇಗೆ? ಸಣ್ಣಪುಟ್ಟ ವಿಚಾರಗಳಿಗೆ ಉದ್ವೇಗಗೊಂಡು ನಮ್ಮೊಳಗೆ ಬಿಕ್ಕಟ್ಟು ಸೃಷ್ಟಿಸಿ, ದೇಶದ, ನಾಡಿನ ಹೀನಾಯ ಪರಿಸ್ಥಿತಿಯನ್ನೂ ಇನ್ನೂ ಬಲಪಡಿಸಿ, ದೇಶವಿಕಾಸಕ್ಕೆ ತೊಂದರೆಗೊಳಿಸುವ ಬದಲು, ನಿರ್ದಿಷ್ಟ ಕಾಲಕ್ಕೆ ಮಾತ್ರ ಸುದ್ದಿಯಾಗುವ ಬಾಯ್ಕಾಟ್ ಗಳ ಹಿಂದೆ ಮುಗಿಬೀಳುವ ಮೊದಲು ದೇಶದ ಉತ್ಪಾದನಾ ಶಕ್ತಿಯನ್ನು ದೃಢಪಡಿಸುವ ಬಗ್ಗೆ ಸಂಕಲ್ಪವಾಗಬೇಕು. ಉತ್ಪಾದನೆ ನಡೆದರಷ್ಟೇ ಹೊರಗಿನ ಅವಲಂಬನೆಯಿಂದ ಹಿಂದೆಸರಿಯಬಹುದು.
ಅದಲ್ಲದೆ, ಇನ್ನೂ ನಾವು ‘ಗೋ ಕೊರೋನಾ..’ ಘೋಷಣೆಯೊಂದಿಗೆ ತಟ್ಟೆ,ಚಪ್ಪಾಳೆ ತಟ್ಟುತ್ತಾ, ದೀಪ ಹಚ್ಚಿ ಪ್ರತಿಭಟಿಸಿದಂತೆ, ಬಾಯ್ಕಾಟ್ ಚೈನಾ ಅನ್ನುತ್ತಾ ಐವತ್ತು ರೂಪಾಯಿ ಬೆಲೆಯ ಚೀನಾ ನಿರ್ಮಿತ ಆಟಿಕೆಯನ್ನು ಒಡೆದು ಹಾಕುವಷ್ಟು ಅವಿವೇಕಿಗಳಾಗಿಯೇ ಮುಂದುವರಿದರೆ, ಇನ್ನೊಂದಷ್ಟು ದಶಕಗಳು ಕಳೆದರೂ ಭಾರತ ಇವತ್ತಿಗಿಂತ ಹೆಚ್ಚು ಪಾತಾಳಕ್ಕಿಳಿಯಬಹುದೇ ವಿನಃ ಅಭಿವೃದ್ಧಿಯಂತೂ ಖಂಡಿತವಾಗಿಯೂ ಸಾಧ್ಯವಿಲ್ಲ.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.