(www.vknews.com) : ಪ್ರವಾದಿವರ್ಯರ ಮೊಮ್ಮಗನೇ ಹ. ಇಮಾಮ್ ಹುಸೇನ್(ರ). ಇಸ್ಲಾಂ ಧರ್ಮದಲ್ಲಿ ತನ್ನ ಕಲೀಫರನ್ನು ಜನರು ಆರಿಸುತ್ತಿದ್ದರು. ರಾಜನ ಮಗ ರಾಜನಾಗಬೇಕು ಎಂಬ ಕಾನೂನು ಇಲ್ಲ. ರಾಜ್ಯದ ಅಥವಾ ಸಾಮ್ರಾಜ್ಯದ ಉಸ್ತುವಾರಿ ನೋಡಿಕೊಳ್ಳಲು ‘ಮಜ್ಲಿಸ್-ಎ-ಷೂರ’ ಎಂಬ ಶರಿಅತ್ ವಿದ್ವಾಂಸರು ಇರುತ್ತಾರೆ. ಕಲೀಫ ಶರಿಅತ್ ಕಾನೂನಿನ ಚೌಕಟ್ಟಿನಲ್ಲಿ ಆಡಳಿತ ನಡೆಸಬೇಕು. ಮುಸ್ಲಿಂ ದೇಶದಲ್ಲಿ ಯಾವುದೇ ತೀರ್ಮಾನ ಕಲೀಫ ತೆಗೆದುಕೊಳ್ಳಬೇಕಾದರೆ ‘ಮಜ್ಲಿಸ್-ಎ-ಷೂರ’ ಸಮಿತಿಯಿಂದ ಅಪ್ಪಣೆ ಪಡೆದುಕೊಳ್ಳಬೇಕಾಗುತ್ತದೆ. ತಾನು ಇಚ್ಛಿಸಿದ ಹಾಗೆ ನಡೆಯುವ ಹಾಗಿಲ್ಲ. ಪ್ರವಾದಿವರ್ಯರು ಹ. ಅಬೂಬಕ್ಕರ್ರವರನ್ನು(ರ) ಮೊದಲ ಕಲೀಫರನ್ನಾಗಿ ನೇಮಿಸಿದರು. ಅವರ ನಂತರ ಹ. ಉಮರ್(ರ), ಅವರ ನಂತರ ಹ. ಉಸ್ಮಾನ್(ರ) ಮತ್ತು ಅವರ ನಂತರ ಹ. ಅಲಿರವರು(ರ) ಕಲೀಫರಾದರು.
ಹ. ಉಮರ್(ರ) ಇಸ್ಲಾಮ್ ಸಾಮ್ರಾಜ್ಯವನ್ನು ಬಹಳ ದೂರದ ದೇಶಗಳವರೆಗೂ ಹರಡಿಸಿದರು. ತಾವು ಒಬ್ಬರೇ ಇಡೀ ಸಾಮ್ರಾಜ್ಯದ ಆಗು ಹೋಗುಗಳನ್ನು ನೋಡಿಕೊಳ್ಳುವುದು ಕಷ್ಟಕರವಾಗಿತ್ತು. ಆಗ ಅವರು ಇಸ್ಲಾಂ ಸಾಮ್ರಾಜ್ಯವನ್ನು ಹಲವು ಭಾಗಗಳಾಗಿ ವಿಂಗಡಿಸಿ, ಪ್ರತಿ ಒಂದು ಭಾಗಕ್ಕೆ ಗೌರ್ನರ್ಗಳನ್ನು ನೇಮಿಸಿದರು. ಎಲ್ಲಾ ಪ್ರಾಂತ್ಯಗಳಲ್ಲೂ ಶರಿಅತ್ ಕಾನೂನನ್ನು ಸುಸಜ್ಜಿತವಾಗಿ ಸ್ಥಾಪಿಸಿ ಶಾಂತಿ ನೆಲೆಸಲು ಪ್ರಯತ್ನಿಸಿದರು.
ಹ. ಉಮರ್ ಒಬ್ಬ ದಕ್ಷ ಆಡಳಿತಗಾರ. ಇಡೀ ಸಾಮ್ರಾಜ್ಯದ ಕಲೀಫರಾಗಿದ್ದರೂ ಮನಸ್ಸಿನಲ್ಲಿ ಕಿಂಚಿತ್ತೂ ಅಹಂ ಭಾವನೆ ಇರಲಿಲ್ಲ. ಸದಾ ಪ್ರಜೆಗಳ ಒಳಿತನ್ನೇ ಬಯಸುತ್ತಿದ್ದರು. ದೇವರ ಭಯದಿಂದ ಗಡಗಡ ನಡುಗುತ್ತಿದ್ದರು. ಬಹಳ ಸರಳ ಜೀವಿ. ಪ್ರವಾದಿವರ್ಯರ ಸಂಗತಿ ಅವರನ್ನು ಸಂಪೂರ್ಣವಾಗಿ ಬದಲಿಸಿತ್ತು. ಅವರು ಎಂಥಹ ಮಹಾನುಭಾವರು ಎಂದು ಈ ಒಂದು ಸಣ್ಣ ಉದಾಹರಣೆಯಿಂದ ತಿಳಿಯುತ್ತದೆ. ರಾತ್ರಿಯ ನಮಾಜ್ ಆದಾಕ್ಷಣ ಅವರು ಪ್ರಜೆಗಳ ತೊಂದರೆಗಳನ್ನು ತಿಳಿದುಕೊಳ್ಳಲು ಗುಪ್ತವಾಗಿ ರಾತ್ರಿಯಲ್ಲಿ ಬೀದಿ ಬೀದಿಯಲ್ಲಿ ಅಲೆದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಹೀಗೆ ಒಂದು ರಾತ್ರಿ ಗಸ್ತು ಮಾಡುತ್ತಿರುವಾಗ ಒಂದು ಮನೆಯಿಂದ ಮಕ್ಕಳು ಅಳುವ ಶಬ್ದ ಕೇಳಿಸಿತು. ಹ. ಉಮರ್ ಆ ಮನೆಯತ್ತ ಹೋದರು. ಅಲ್ಲಿ ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಆ ಮನೆಯ ಒಡತಿ ಒಲೆಯ ಮೇಲೆ ನೀರು ಕಾಯಿಸಲು ಇಟ್ಟಿದ್ದಾಳೆ. ಹ. ಉಮರ್(ರ) ಆಕೆಯನ್ನು ವಿಚಾರಿಸಿದಾಗ- “ಮಕ್ಕಳು, ನಮ್ಮ ತಾಯಿ ಏನೋ ಅಡುಗೆ ಮಾಡುತ್ತಿದ್ದಾರೆ ಎಂಬ ಊಹೆಯಲ್ಲಿರಲಿ, ಹಾಗೆಯೇ ಅವರು ನಿದ್ದೆಗೆ ಹೊರಟು ಹೋಗುತ್ತಾರೆ. ಕೇವಲ ಅವರಿಗೆ ಸಮಾಧಾನ ಪಡಿಸಲು ಹೀಗೆ ಮಾಡುತ್ತಿದ್ದೇನೆ. ಮನೆಯಲ್ಲಿ ತಿನ್ನಲು ಏನೂ ಇಲ್ಲ ಎಂದಳು.” ಹ. ಉಮರ್(ರ) ಆಕೆಯನ್ನು ತಮ್ಮ ಜೊತೆ ಕರೆದೊಯ್ದು ‘ಬೈತುಲ್ಮಾಲ್’ನಿಂದ (ಬಡಬಗ್ಗರಿಗಾಗಿ, ಜನರ ಸೇವೆಗಾಗಿ ಸ್ಥಾಪಿಸಲಾಗಿರುವ ಉಗ್ರಾಣ) ಚೀಲದಲ್ಲಿ ಹೊಟ್ಟು ಮತ್ತು ಖರ್ಜೂರಗಳನ್ನು ತುಂಬಿಕೊಂಡು, ಸ್ವತಃ ತಾವೇ ಅದನ್ನು ಹೊತ್ತುಕೊಂಡು ಆಕೆಯ ಮನೆಗೆ ಹೋಗಿ, ಆ ಮಕ್ಕಳನ್ನು ನಾನು ಅಳುತ್ತಾ ನೋಡಿದೆ. ಈಗ ನಗುತ್ತಾ ನೋಡಬೇಕು ಎಂದರು. ಆಕೆ ಆ ಹಿಟ್ಟಿನಿಂದ (ಹಸಿಟ್ಟು) ಚಪಾತಿಗಳನ್ನು ಮಾಡಿ ಮಕ್ಕಳಿಗೆ ಉಣಬಡಿಸಿದಳು. ಮಕ್ಕಳು ಸಂತೋಷದಿಂದ ತಿಂದು ನಕ್ಕರು. ನಮ್ಮ ಕಲೀಫರು ಇಷ್ಟು ಸಹಾಯ ಮಾಡಲಿಲ್ಲ, ನೀವು ನಮಗಾಗಿ ಇಷ್ಟೊಂದು ಸಹಾಯ ಮಾಡಿದಿರಿ ಎಂದಳು. ಆಗ ಹ. ಉಮರ್(ರ) ಮುಗುಳ್ನಗೆ ಬೀರಿ ನಾನೇ ಕಲೀಫ ಎಂದರು. ಆಕೆ ಗಾಬರಿಗೊಂಡಳು. ಭಯ ಪಡಬೇಡ ನನ್ನ ಕರ್ತವ್ಯ ಪಾಲನೆ ಮಾಡಿದೆ ಅಷ್ಟೆ ಎಂದು ಹೇಳಿ ಅಲ್ಲಿಂದ ಹೊರಟರು.
ಪ್ರಾಂತ್ಯಗಳ ಗೌರ್ನರ್ ಪದ್ಧತಿ ಹ. ಅಲಿರವರ(ರ) ಕಾಲದಲ್ಲೂ ಜಾರಿಯಲ್ಲಿತ್ತು. ಮುಆವಿಯಾ(ರ) ಎಂಬುವರು ಸಿರಿಯಾದ ಗೌರ್ನರ್ ಆಗಿದ್ದರು. ಅವರ ಮತ್ತು ಹ. ಅಲಿರವರ(ರ) ನಡುವೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿ ಯುದ್ಧ ನಡೆದು ಮುಕ್ತಗೊಂಡಿತು. ಒಳ ಒಳಗೆ ಇಸ್ಲಾಂ ಸಾಮ್ರಾಜ್ಯವನ್ನು ಛಿದ್ರಗೊಳಿಸಲು ಸಂಚುಗಳು ನಡೆಯಲಾರಂಭಿಸಿದವು.
ಹ. ಅಲಿರವರನ್ನು(ರ) ನಮಾಜ್ ಸ್ಥಿತಿಯಲ್ಲಿ ಕೊಲ್ಲಲಾಯಿತು. ಅವರು ಅಮರ ಮರಣ ಹೊಂದಿದ ನಂತರ, ಜನರ ಇಚ್ಛೆಯ ಮೇರೆಗೆ ಹ. ಇಮಾಮ್ ಹುಸೇನ್(ರ) ಕಲೀಫರಾದರು. ರಕ್ತಪಾತ ಮಾಡುವುದು ಬೇಡ ಎಂದು ಹ. ಇಮಾಮ್ ಹುಸೇನ್(ರ) ಹ. ಮುಆವಿಯಾ(ರ) ರವರೊಂದಿಗೆ ಒಪ್ಪಂದ ಮಾಡಿಕೊಂಡರು. ಮುಆವಿಯಾ(ರ) ಸಿರಿಯಾದ ಗೌರ್ನರ್ ಆಗಿಯೇ ಉಳಿದರು. ನನ್ನ ನಂತರ ನನ್ನ ಮಗ ಯಜೀದ್ I ರಾಜನಾಗುವನು ಎಂದು ಘೋಷಿಸಿ ಇಸ್ಲಾಂ ಧರ್ಮದ ಕಲೀಫ ಪದ್ಧತಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆ ಜನರಿಗೂ ಇಷ್ಟವಿರಲಿಲ್ಲ ಮತ್ತು ಹ. ಇಮಾಮ್ ಹುಸೇನ್ರವರಿಗೂ(ರ) ಇಷ್ಟವಿರಲಿಲ್ಲ.
ಮುಆವಿಯಾ(ರ) ಇಸವಿ 680 ಅಇರಲ್ಲಿ ತೀರಿಕೊಂಡರು. ಮಗ ರಾಜನಾಗಿ ವಂಶಪಾರಂಪರೆ ರಾಜಪದ್ಧತಿಯನ್ನು ಜಾರಿಗೊಳಿಸಿ ಕಿಲಾಫತ್ ಪದ್ಧತಿಯನ್ನು ಮುರಿದನು. ಹ. ಹುಸೇನ್(ರ) ಪ್ರವಾದಿವರ್ಯರ ಮೊಮ್ಮಗನಾದ್ದರಿಂದ, ಜನರ ಒಲವಿಗೆ ಪಾತ್ರನಾಗಿದ್ದರಿಂದ ಜನ ಎಲ್ಲಿ ಇವರನ್ನು ನನ್ನ ರಾಜ್ಯದ ವಿರುದ್ಧ ದಂಗೆ ಏಳುವಂತೆ ಮಾಡಿಬಿಡುತ್ತಾರೋ ಎಂಬ ಭಯದಿಂದ, ತಾನೇ ಅಧಿಪತಿಯಾಗಿರಬೇಕು ಎಂಬ ದುರಾಸೆಯಿಂದ ಹ. ಇಮಾಮ್ ಹುಸೇನ್ರವರನ್ನು(ರ) ನನ್ನ ಕೈಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ನನ್ನನ್ನು ಕಲೀಪನೆಂದು ಪರಿಗಣಿಸಿ ಎಂದು, ಮದೀನಾದ ಗವರ್ನರ್ ವಲೀದ್ನನ್ನು ಕಳುಹಿಸಿ, ಹ. ಇಮಾಮ್ ಹುಸೇನ್(ರ)ರವರ ಮೇಲೆ ಒತ್ತಡ ಹೇರಿದನು.
ಯಜೀದ್ I ಶರಿಅತ್ ಕಾನೂನಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದನು. ಮದ್ಯಪಾನ, ಜೂಜು, ವ್ಯಭಿಚಾರ, ಸುಲಿಗೆ, ಅಣ್ಣ ತಂಗಿ ಮದುವೆಯಾಗಬಹುದೆಂಬ ನಿಲುವು, ಪ್ರವಾದಿವರ್ಯರ ಮಸೀದಿಯಲ್ಲಿ ಕುದುರೆಗಳನ್ನು ಕಟ್ಟಿ, ಅವುಗಳ ಲದ್ದಿಯಿಂದ ಮಸೀದಿಯನ್ನು ಮಲಿನಗೊಳಿಸುವುದು, ಸರ್ವಾಧಿಕಾರ, ದುರಾಡಳಿತ, ಹೆಣ್ಣಿನ ಹುಚ್ಚು- ಇಂತಹ ಅನೇಕ ಪಾಪಗಳಿಂದ ಆತನ ಕೊಡ ತುಂಬಿತ್ತು.
ಪ್ರಾಣ ಹೋದರೂ ಇಂತಹ ಕಿಲಾಫತ್ತನ್ನು ಹ. ಹುಸೇನ್ ಒಪ್ಪಲು ಸಿದ್ಧವಿರಲಿಲ್ಲ. ಎರಡು ದಿನ ಅವರ ಮೇಲೆ ಭಾರಿ ಒತ್ತಡವನ್ನು ಹೇರಲಾಗಿತ್ತು. ಆಗ ಅವರು ಮಕ್ಕಾಗೆ ಹೋಗಿ ವಾಸಿಸತೊಡಗಿದರು.
ಅವರು ಮಕ್ಕಾದಲ್ಲಿದ್ದಾಗ ಕೂಫಾ ಪಟ್ಟಣದಿಂದ, ಅಲ್ಲಿಯ ಜನರಿಂದ ಅನೇಕ ಪತ್ರಗಳು ಬಂದವು. “ನೀವು ಕೂಫಾಗೆ ಬಂದು ನೆಲೆಸಿ, ನಮಗೆ ಸನ್ಮಾರ್ಗ ನೀಡಿ” ಎಂಬುದು ಪತ್ರಗಳ ಸಾರಂಶವಾಗಿತ್ತು. ಆಗ ಹ. ಹುಸೇನ್ರವರು(ರ) ನಿಜಾಂಶ ತಿಳಿದುಕೊಳ್ಳಲು, ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ತಮ್ಮ ದೂತನನ್ನಾಗಿ ಕಳುಹಿಸಿದರು. ಅಲ್ಲಿಯ ಜನ ಸಹೃದಯದಿಂದ ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಬರಮಾಡಿಕೊಂಡರು. ಇದನ್ನು ಗಮನಿಸಿದ ಮುಸ್ಲಿಂ ಬಿನ್ ಅಖೀಲ್ರವರು(ರ) ಹ. ಇಮಾಮ್ ಹುಸೇನ್ರವರಿಗೆ(ರ) ಪತ್ರದ ಮೂಲಕ ಕೂಫಾದ ವಾತಾವರಣ ಉತ್ತಮವಾಗಿದೆ ಎಂದು ತಿಳಿಸಿದರು. ಆದರೆ ಉಬೇದುಲ್ಲಾ ಇಬ್ನ್ ಜಿಯಾದ್ ಕೂಫಾದ ಹೊಸ ಗವರ್ನರ್ ಆದ ನಂತರ ಇಡೀ ವಾತಾವರಣ ಬದಲಾಗಿಹೋಯಿತು. ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಕೊಲೆ ಮಾಡಿಸಲಾಯಿತು. ಅಮ್ರ್ ಬಿನ್ ಸಾಅದ್ ಬಿನ್ ಆಸ್ ಎಂಬ ಸೇನಾಪತಿಯನ್ನು ನೇಮಿಸಿ, ಯಜೀದ್ ಮಕ್ಕಾಗೆ ದೌಡಾಯಿಸಿ, ಹಜ್ ಯಾತ್ರೆಯಲ್ಲಿ ಹ. ಹುಸೇನ್ರವರನ್ನು(ರ) ಕೊಲ್ಲುವಂತೆ ಆಜ್ಞೆ ಮಾಡಿದನು. ಹ. ಹುಸೇನ್ರವರು(ರ) ಹಜ್ನಿಂದ ಒಂದು ದಿನ ಮುಂಚೆ ಜನರಿಗೆ ಉಪದೇಶ ಮಾಡಿ ಈ ಪವಿತ್ರ ಸ್ಥಳದಲ್ಲಿ ರಕ್ತಪಾತ ನಡೆಯುವುದು ಬೇಡ ಎಂದು ಮಕ್ಕಾ ಬಿಟ್ಟು ತೆರಳಿದರು. ಹ. ಇಮಾಮ್ ಹುಸೇನ್ರವರು(ರ) ಕೂಫಾ ಪಟ್ಟಣಕ್ಕೆ ಹೋಗುವ ನಿರ್ಧಾರ ಬಲ ಪಡಿಸಿಕೊಂಡರು. ಹೊರಡುವ ಮುನ್ನ ತನ್ನ ಹಿತೈಷಿಗಳಾದ ಅಬ್ದುಲ್ಲಾ ಇಬ್ನ್ ಅಬ್ಬಾಸ್(ರ) ಮತ್ತು ಅಬ್ಲುಲ್ಲಾ ಇಬ್ನು ಜುಬೇರ್(ರ)ರವರೊಂದಿಗೆ ಮಾತುಕತೆ ನಡೆಯಿತು. ದಯವಿಟ್ಟು ನೀವು ಕೂಫಾ ಪಟ್ಟಣಕ್ಕೆ ಹೋಗಬೇಡಿ ಎಂದು ಇಬ್ಬರೂ ಬೇಡಿಕೊಂಡರು. ನಿಮ್ಮ ನಿರ್ಧಾರ ಹೋಗಲೇಬೇಕೆಂದಿದ್ದರೆ, ಸಂಸಾರದ ಜೊತೆ ಹೋಗಬೇಡಿರಿ ಎಂದರು. ಆದರೂ ಹ. ಹುಸೇನ್(ರ) ತಮ್ಮ ಸಂಸಾರದ ಸಮೇತ ಹೊರಟೇಬಿಟ್ಟರು.
ಕೂಫಾದ ದಾರಿಯಲ್ಲಿ ಯಾತ್ರಿಗಳಿಂದ ತಿಳಿಯಿತು- ಹ. ಮುಸ್ಲಿಂ ಬಿನ್ ಅಖೀಲ್ರವರನ್ನು(ರ) ಕೊಲ್ಲಿಸಲ್ಪಟ್ಟಿದ್ದಾರೆ. ಆಗಲೂ ಹ. ಹುಸೇನ್(ರ) ಹಿಂತಿರುಗಲಿಲ್ಲ. ವಿಷಯ ತಿಳಿದುಕೊಳ್ಳಲು ಖೈಸ್ ಇಬ್ನ್ ಮುಸಹ್ಹರಲ್ ಸೈದವಿ(ರ) ಎಂಬುವರನ್ನು ಕಳುಹಿಸಿದರು. ಅವರನ್ನು ಸಹ ಕೊಲ್ಲಿಸಲಾಯಿತು.
– ಜಬಿವುಲ್ಲಾ ಖಾನ್ ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.