ಮುಲ್ಕಿ (www.vknews.com) : ಜಗತ್ತಿನಲ್ಲಿರುವ ವಿವಿಧ ಧಾರ್ಮಿಕ ಸಮುದಾಯಗಳು ಅವರದ್ದೇ ಆದ ಹತ್ತು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳಿಲ್ಲದ ಜನಾಂಗವೇ ಈ ಜಗತ್ತಿನಲ್ಲಿಲ್ಲ. ಆದರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅದರ ಮೂಲವನ್ನು ಹುಡುಕಿ ಪರಿಹಾರ ಕಂಡು ಕೊಳ್ಳುವವರೇ ಜಗತ್ತಲ್ಲಿ ಉತ್ಕೃಷ್ಟ ಜನಾಂಗವಾಗಿ ರೂಪುಗೊಳ್ಳುತ್ತಾರೆ ಎಂದು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಮುಸ್ಲಿಮರ ಬಗ್ಗೆ ಹೇಳುವುದಾದರೆ ಜಾಗತಿಕವಾಗಿ ಕಳೆದ ಹಲವು ವರ್ಷಗಳಿಂದ ಅವರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೇಶೀಯವಾಗಿಯೂ ಹಲವು ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದಕ್ಕೆ ನಾವು ಬೇರೆಯವರನ್ನು ಧೂಷಿಸಿ ಕಾಲ ಕಳೆಯುವ ಬದಲು ನಮ್ಮನ್ನು ನಾವೇ ಆತ್ಮಾವಲೋಕನಕ್ಕೆ ಗುರಿಪಡಿಸಿ ಪರಿಹಾರ ಮಾರ್ಗ ಕಂಡುಕೊಳ್ಳುವುದು ಸರಿಯಾದ ರೀತಿ ಎಂದು ಅವರು ಅಭಿಪ್ರಾಯ ಪಟ್ಟರು.
ಒಬ್ಬ ಕತ್ತೆ ಸವಾರನಿಗೆ ವಜ್ರವೊಂದು ಬಿದ್ದು ಸಿಕ್ಕಿತು. ಅದನ್ನು ಹೆಕ್ಕಿತೆಗೆದು ಕತ್ತೆಯ ಕಿವಿಗೆ ತೂಗು ಹಾಕಿದ. ಇದನ್ನು ನೋಡಿದ ವಜ್ರ ವ್ಯಾಪಾರಿಯೊಬ್ಬ ಅದನ್ನು ಖರೀದಿಸಲು ಮುಂದಾಗಿ ಬೆಲೆ ಕೇಳಿದ. ಕತ್ತೆ ಸವಾರ ಒಂದು ರೂಪಾಯಿ ಬೆಲೆ ಹೇಳಿದಾಗ ವ್ಯಾಪಾರಿ ಐವತ್ತು ಪೈಸೆಗೆ ಕೇಳಿದ. ಇದನ್ನು ತಿರಸ್ಕರಿಸಿ ಮುಂದೆ ಸಾಗುತ್ತಲೇ ಮತ್ತೊಬ್ಬ ವಜ್ರ ವ್ಯಾಪಾರಿ ಸಿಕ್ಕಿದ. ಆತ ಚೌಕಾಶಿಗಿಳಿಯದೇ ಒಂದು ಸಾವಿರ ರೂಪಾಯಿ ಕೊಟ್ಟು ವಜ್ರ ಖರೀದಿಸಿದ. ಮರಳಿ ಬರುವ ವೇಳೆ ಮೊದಲ ವ್ಯಾಪಾರಿ ಕಾಣ ಸಿಕ್ಕಿ ವಜ್ರದ ಬಗ್ಗೆ ವಿಚಾರಿಸಿದ, ವಜ್ರ ಒಂದು ಸಾವಿರಕ್ಕೆ ಬಿಕರಿಯಾದ ವಿಷಯ ಹೇಳಿದಾಗ ಎಲೈ ಮೂರ್ಖನೇ, ಅದು ಕೋಟಿ ತೂಗುವ ವಜ್ರವಾಗಿತ್ತು. ನೀನು ಮೋಸ ಹೋದೆಯಾ ಎಂದು ಗೇಲಿ ಮಾಡಿದ. ಆಗ ಕತ್ತೆ ಸವಾರ ಹೀಗಂದ, ಅದಕ್ಕೇನಂತೆ?, ನನಗಿಂತ ದೊಡ್ಡ ಮೂರ್ಖ ನೀನೇ ಆಗಿದ್ದೀಯಾ. ನನಗಂತೂ ಅದು ವಜ್ರ ಎಂದು ತಿಳಿದಿರಲಿಲ್ಲ. ನನಗೆ ಸಾವಿರ ರೂ ಸಿಕ್ಕಿದ್ದೇ ಪುಣ್ಯ. ಆದರೆ ಅದು ವಜ್ರವೆಂದೂ ತಿಳಿದೂ ನೀನು ಐವತ್ತು ಪೈಸೆಗೆ ಕೇಳಿದ್ದೀಯಲ್ಲಾ?, ನಿನಗಿಂತ ದೊಡ್ಡ ಮೂರ್ಖ ಯಾರು ? ಎಂದು ಕೇಳಿದ.
ಈ ಉದಾಹರಣೆಯನ್ನು ಹೇಳಿದ ಖತೀಬರು, ನಮ್ಮ ಬಳಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಇಸ್ಲಾಂ ಎಂಬ ವಜ್ರ ಇದ್ದೂ ಆ ಬಗ್ಗೆ ನಾವು ಅಜ್ಞಾನರಾಗಿದ್ದೇವೆ. ಇಸ್ಲಾಂ ಎಂದರೆ ಕತ್ತೆಯ ಕಿವಿಗೆ ಆತ ತೂಗುಹಾಕಿದಂತೆ ಕೇವಲ ಪ್ರದರ್ಶನಕ್ಕಿರುವ ಒಂದು ವಸ್ತು ಎಂದು ನಾವು ಗ್ರಹಿಸಿರುವುದೇ ನಮ್ಮ ಮೂರ್ಖತನ ಎನ್ನುತ್ತಾ ಮತ್ತೊಂದು ಉದಾಹರಣೆಯನ್ನು ಜನರ ಮುಂದಿಟ್ಟರು.
ಊರೊಂದರಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಒಬ್ಬಾತ ತನ್ನ ಬಾವಿಯಲ್ಲಿರುವ ಅಲ್ಪ ಸ್ವಲ್ಪ ನೀರನ್ನು ಒಂದಿಬ್ಬರಿಗೆ ಹಂಚುತ್ತಾನೆ. ಇನ್ನೊಬ್ಬ ಟ್ಯಾಂಕರ್ ಮೂಲಕ ನೀರನ್ನು ಕೆಲವರಿಗೆ ವಿತರಿಸುತ್ತಾನೆ. ಆದರೆ ಮತ್ತೊಬ್ಬ ಬುದ್ದಿವಂತ ಪಂಚಾಯಿತಿಯವರನ್ನು ವಿಚಾರಿಸಿ ಅವರನ್ನು ತರಾಟೆಗೆತ್ತಿ ಕೊಂಡು ಖರ್ಚಿಲ್ಲದೇ ನೀರಿನ ಶಾಸ್ವತ ಪರಿಹಾರವನ್ನು ಕಂಡು ಕೊಳ್ಳುತ್ತಾನೆ.
ಹೀಗೇ ಸಮಸ್ಯೆಯ ಮೂಲವನ್ನು ಅರಿತು ಪರಿಹಾರ ಸೂಚಿಸುವ ಇಂತಹ ಮೂರನೇ ಸ್ವಭಾವದ ಬುದ್ದಿವಂತ ಜನರು ನಮ್ಮಲ್ಲಿ ಹೆಚ್ಚು ಹೆಚ್ಚು ಸೃಷ್ಟಿಯಾಗ ಬೇಕೆಂದು ಹೇಳಿದ ಖತೀಬರು, ಮುಸ್ಲಿಮರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ ಸೂಚಿಯಾಗಿ ಪವಿತ್ರ ಗ್ರಂಥ ಕುರಾನ್ ನಮ್ಮ ಮುಂದಿದೆ ಎನ್ನುತ್ತಾ ಇಂದು ಸ್ಥಳೀಯ ಮುಸ್ಲಿಮರು ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಮದುವೆ ಫೀಲ್ಡನ್ನೇ ಉದಾಹರಣೆಯಾಗಿ ತೆಗೆದು ಕೊಂಡು ಕುರಾನ್ ಸೂಚಿಸಿದಂತೆ ನಾವು ಮದುವೆಗಳನ್ನು ಕ್ರಮೀಕರಿಸಿದರೆ ಮದುವೆ ಕ್ಷೇತ್ರದ ಸಮಸ್ಯೆ ತನ್ನಿಂತಾನೆ ನಿವಾರಣೆಯಾಗುತ್ತದೆ ಎಂದರು.
ಅದೇ ರೀತಿ ಮುಸ್ಲಿಮರ ಬಗ್ಗೆ ತಪ್ಪು ಗ್ರಹಿಕೆಯಿಂದ ಹಿಂದೂ ಬಾಂಧವರಲ್ಲಿ ಕೆಲವರು ಮುಸ್ಲಿಮರ ಬಗ್ಗೆ ಅಸಹಿಷ್ಣುತೆ ಹರಡುತ್ತಿದ್ದು ಈ ಬಗ್ಗೆ ಅಂತವರನ್ನು ಸಂಪರ್ಕಿಸಿ ತಿಳಿಹೇಳುವ ಕೆಲಸ ಮಾಡುವುದೇ ಅಲ್ಲದೇ ಅಕ್ರಮಿಗಳನ್ನು ನ್ಯಾಯಯುತವಾಗಿ ತಡೆಯುವಂತಹ ಕೆಚ್ಚೆದೆಯನ್ನು ಬೆಳೆಸಿಕೊಳ್ಳುವುದೂ ಅನಿವಾರ್ಯವಾಗಿದೆ ಎಂದರು.
ಪರಸ್ಪರ ಸಂವಹನ ನಡೆಸುವ ಮೂಲಕ ಮುಸ್ಲಿಂ ಸಮಾಜದ ಬಗ್ಗೆ ಇತರರಲ್ಲಿ ಮೂಡಿದ ತಪ್ಪು ಕಲ್ಪನೆ ದೂರಮಾಡಲು ಸಾದ್ಯವಾಗುತ್ತದೆ. ಅದೇ ರೀತಿ ಮುಸ್ಲಿಮರಿಗೂ ತಮ್ಮನ್ನು ತಿದ್ದಿ ಕೊಳ್ಳಲು ಅವಕಾಶ ಉಂಟಾಗುತ್ತದೆ ಎಂದ ಖತೀಬರು, ಮುಸ್ಲಿಂ ಉಲಮಾ ಉಮರಾ ನಾಯಕರು ಯಾವತ್ತೂ ಕೂಡಾ ತಮ್ಮವರು ಮಾಡುವ ತಪ್ಪನ್ನು ಸಮರ್ಥನೆ ಮಾಡುವುದಿಲ್ಲ.
ಆದರೆ ನಾವೆಲ್ಲಾ ಬಹಳ ಗೌರವದಿಂದ ಕಾಣುತ್ತಿರುವ ಹಿಂದು ಸ್ವಾಮೀಜಿಗಳಲ್ಲಿ ಬಹುತೇಕರು ರಾಜಕೀಯ ಪ್ರೇರಿತರಾಗಿಯೋ ಅಥವಾ ಸಂಘಟನೆಗಳಿಗೆ ಹೆದರಿಯೋ ಕೆಲವು ಪುಂಡರಿಂದ ಮುಸ್ಲಿಮರಿಗೆ ಆಗುವ ಅನ್ಯಾಯವನ್ನು ಕನಿಷ್ಟ ಪಕ್ಷ ಖಂಡಿಸುವ ಗೋಜಿಗೂ ಹೋಗದಿರುವುದು ದುರದೃಷ್ಟಕರ ಎಂದು ಹೇಳಿದರಲ್ಲದೇ ಪ್ರತಿಯೊಂದು ಸಮಾಜದ ಪುಂಡು ಪೋಕರಿಗಳು ನೆಲದ ಕಾನೂನನ್ನು ಕೈಗೆತ್ತಿಕೊಂಡರೆ ಅದು ದೇಶವನ್ನು ದುರ್ಬಲ ಪಡಿಸುವುದಲ್ಲದೇ ಇದರ ದುಷ್ಪರಿಣಾಮವನ್ನು ಮುಂದಿನ ತಲೆಮಾರು ಅನುಭವಿಸ ಬೇಕಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದರು.
ರಿಪೋರ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.