ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿಜೆಪಿ ನಾಯಕರಿಗೆ ಸರಕಾರ ನಡೆಸಲೇ ಗೊತ್ತಿಲ್ಲ ಎಂಬುದಕ್ಕೆ ಈಗಿನ ಆರ್ಥಿಕ ಅಸ್ಥಿರತೆ ಹಾಗೂ ಲಂಗು ಲಗಾಮಿಲ್ಲದ ಇಂಧನ ಬೆಲೆ ಏರಿಕೆಯೆ ಸಾಕ್ಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕ ಹಾಗೂ ಪಾಣೆಮಂಗಳೂರು ವಲಯ ಕಾಂಗ್ರೆಸ್ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಮೆಲ್ಕಾರ್ ರಚನಾ ಪೆಟ್ರೋಲ್ ಬಂಕ್ ಮುಂಭಾಗ ಶನಿವಾರ ಬೆಳಿಗ್ಗೆ ನಡೆದ ‘100 ನಾಟೌಟ್’ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಸಂಘಟಿತ ಕಾರ್ಮಿಕರಿಗೆ ಸರಕಾರ ಯಾವುದೇ ಜೀವನ ಭದ್ರತೆ ನೀಡಿಲ್ಲ. ಹೊರತಾಗಿ ಬೆಲೆ ಏರಿಕೆ ಮೂಲಕ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಪ್ರಸ್ತಾವನಗೈದು ಮಾತನಾಡಿದ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣವಾಗಿ ಜನವಿರೋಧಿಯಾಗಿದ್ದು ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯುವ ನೈತಿಕತೆ ಉಳಿಸಿಕೊಂಡಿಲ್ಲ. ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆ ಈಡೇರಿಸುವ ಯಾವುದೇ ಪ್ರಯತ್ನ ನಡೆಸದ ಕೇಂದ್ರ ಸರಕಾರ ಕೇವಲ ದ್ವೇಷ ರಾಜಕಾರಣದಲ್ಲಿ ಕಾಲ ಕಳೆಯುತ್ತಿದ್ದರೆ, ಇತ್ತ ರಾಜ್ಯದ ಅನೈತಿಕ ಸರಕಾರ ಜನರ ಆಶೋತ್ತರಗಳನ್ನು ಮರೆತು ಇತರ ಪಕ್ಷಗಳಿಂದ ವಲಸೆ ಬಂದಿರುವ ಶಾಸಕರ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಬಲಿ ಬಿದ್ದು ಸರಕಾರ ಉಳಿಸುವತ್ತ ಮಾತ್ರ ಚಿತ್ತ ಹರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಹಾಗೂ ಅವರ ಬಿಜೆಪಿ ಸರಕಾರದ ನಡೆಯ ಬಗ್ಗೆ ನಿರಂತರವಾಗಿ ನೀಡುತ್ತಲೇ ಬಂದಿರುವ ಎಚ್ಚರಿಕೆ ಹೇಳಿಕೆಗಳು ಇಂದು ಅಕ್ಷರಶಃ ಇಡೀ ದೇಶಕ್ಕೆ ಅರ್ಥವಾಗುತ್ತಿದೆ. ಮೋದಿ ಅಧಿಕಾರಕ್ಕೇರಿದ ಬಳಿಕ ಗಡ್ಡದಲ್ಲಿ ಆಗಿರುವ ಬದಲಾವಣೆ ಬಿಟ್ಟರೆ ಇನ್ನೇನೂ ಆಗಿಲ್ಲ. ಕೊರೋನಾ ಸಂಕಷ್ಟದ ಕಾಲದಲ್ಲೂ ಜನರ ಸಂಕಷ್ಟ ಅರ್ಥ ಆಗದ ಸರಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದವರು ಮಾರ್ಮಿಕವಾಗಿ ಪ್ರಶ್ನಿಸಿದರು.
ಬಳಿಕ ಪ್ರತಿಭಟನಾಕಾರರು ಇಂಧನ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರ ಹಾಗೂ ತೆರಿಗೆ ನಿಯಂತ್ರಿಸದ ರಾಜ್ಯ ಸರಕಾರದ ವಿರುದ್ದ ಧಿಕ್ಕಾರ ಕೂಗಿದರಲ್ಲದೆ ತಕ್ಷಣ ಇಂಧನ ಬೆಲೆ ನಿಯಂತ್ರಿಸುವಂತೆ ಆಗ್ರಹಿಸಿದರು. ಕೊರೋನಾ ಲಾಕ್ ಡೌನ್ ಮಾರ್ಗಸೂಚಿಗೆ ಗೌರವ ನೀಡಿ ಇದೊಂದು ಸಾಂಕೇತಿಕ ಪ್ರತಿಭಟನೆ ಮಾತ್ರ, ಸರಕಾರ ಜನ ಸಾಮಾನ್ಯರ ಬೇಡಿಕೆಗೆ ಮನ್ನಣೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದು ಉಗ್ರ ಹೋರಾಟವಾಗಿ ಪರಿಣಮಿಸಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪಾಣೆಮಂಗಳೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಕ್ಬಾಲ್ ಜೆಟಿಟಿ, ತಾ ಪಂ ಮಾಜಿ ಸದಸ್ಯ ಶರೀಫ್ ಆಲಾಡಿ, ಇರಾ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಅರುಣ್ ಶೆಟ್ಟಿ, ಸತೀಶ್ ಮೆಲ್ಕಾರ್, ಮಧು ಭಟ್ ಬೊಂಡಾಲ, ಮುತಾಲಿಬ್ ಆಲಡ್ಕ, ನೌಫಲ್ ಬಂಗ್ಲೆಗುಡ್ಡೆ, ರಶೀದ್ ಕತಾರ್, ತನ್ವೀರ್ ಬೋಗೋಡಿ, ಹಬೀಬ್ ಬಂಗ್ಲೆಗುಡ್ಡೆ, ಆಬಿದ್ ಬೋಗೋಡಿ, ಗಫೂರ್ ಜೆಇಟಿ, ನೌಶಾದ್ ತನ್ನಚ್ಚಿಲ್, ಬದ್ರುದ್ದೀನ್ ಆಲಡ್ಕ, ಮುಹ್ಸಿನ್ ಬೋಗೋಡಿ, ಮೊಯಿದಿ ಬೋಗೋಡಿ, ಬ್ಯಾಪ್ಟಿಸ್ಟ್ ಡಿಕುನ್ಹಾ, ರಾಯ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು.
ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ವಂದಿಸಿದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.