ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಪ್ರತಿಯೊಬ್ಬರು ಏಡ್ಸ್ ಖಾಯಿಲೆ ಹೇಗೆ ಹರಡುತ್ತದೆ , ಅದನ್ನು ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ತಿಳಿದುಕೊಂಡರೆ ಏಡ್ಸ್ ಖಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು . ಹದಿ ಹರಿಯದ ವಯಸ್ಸಿನವರಿಗೆ ಏಡ್ಸ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್ . ಗಂಗಾಧರ ಅವರು ತಿಳಿಸಿದರು.
ಇಂದು ನಗರದ ಶ್ರೀ ಟಿ . ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ , ಕೋಲಾರ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳಾದ ಸಿ.ಎಚ್.ಸಿ. ಸಬ್ ಟ್ರಸ್ಟ್ , ಸೌಖ್ಯ ಸಂಮೃದ್ಧಿ ಸಂಸ್ಥೆ , ಐವೈಡಿ ಐಡಿಯು ಸಮ್ಮೇಳನ ಸಂಸ್ಥೆ ಕೋಲಾರ ಮತ್ತು ನರ್ಸಿಂಗ್ ಕಾಲೇಜು , ಪದವಿ ಹಾಗೂ ಪದವಿ ಪೂರ್ವ ಕಾಲೇಜು ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ -2021 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .
ಕಾನೂನು ಸೇವಾ ಪ್ರಾಧಿಕಾರದಿಂದ ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಚಿತ ಕಾನೂನು ನೆರವನ್ನು ನೀಡಲಾಗುತ್ತಿದೆ . ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ . ಏಡ್ಸ್ ಸೋಂಕಿತರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು , ಅದರ ಬಗ್ಗೆ ಅರಿವು ಮೂಡಿಸಿ ಸೌಲಭ್ಯಗಳನ್ನು ಒದಗಿಸುವಂತೆ ಮಾಡಬೇಕು . ಅರೆಕಾಲಿಕ ಸ್ವಯಂ ಸೇವಕಾರರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು .
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ , ಏಡ್ಸ್ ಪ್ರಕರಣವು 40 ವರ್ಷಗಳ ಹಿಂದೆ ಪತ್ತೆಯಾಗಿದೆ . ಆದರೆ ಇದುವರೆಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿದಿಲ್ಲ . ಏಡ್ಸ್ ಖಾಯಿಲೆಯು ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ .
ಸೋಂಕಿತ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬದ ಎಲ್ಲರೂ ನರಳುತ್ತಾರೆ . ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಿತವಾಗಿ ಬದುಕುಕಬೇಕು , ತನ್ನದಲ್ಲದ ತಪ್ಪಿಗೆ ಯಾವುದೇ ವ್ಯಕ್ತಿ ನೋವುಂಡಬಾರದು ಎಂದು ಅವರು ತಿಳಿಸಿದರು ಏಡ್ಸ್ ಖಾಯಿಲೆಯು ಸಂಪೂರ್ಣ ನಿರ್ಮೂಲನೆಯಾಗಬೇಕಾದರೆ ಏಡ್ಸ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು .
ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಬೇಕು . ಪರೀಕ್ಷಿಸಿದ ಹೆಚ್.ಐ.ವಿ ಸೊಂಕಿಲ್ಲದ ರಕ್ತವನ್ನು ತೆಗೆದುಕೊಳ್ಳಬೇಕು . ಗರ್ಭಿಣಿಯರು ಹೆಚ್.ಐ.ವಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯಬಹುದು . ಸೂಜಿ , ಸೀರಂಜ್ಗಳನ್ನು ಸಂಸ್ಕರಿಸಿ ಬಳಸುವುದರಿಂದ ಏಡ್ಸ್ ಖಾಯಿಲೆಯನ್ನು ತಡೆಯಬಹುದು . ಯುವ ಜನತೆ ದುಷ್ಟಚಟಗಳಿಂದ ದೂರವಿದ್ದು ತಮ್ಮನ್ನು ತಾವು ರಕ್ಷಿಸಿಕೊಂಡು ತಮ್ಮ ಕುಟುಂಬವನ್ನು ರಕ್ಷಿಸಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಬೇಕು .
ಪ್ರತಿಯೊಬ್ಬ ಯುವಕ ಯುವತಿಯರು ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಲು ಸಹಾಯ ಮಾಡಬೇಕು ಎಂದು ಅವರು ತಿಳಿಸಿದರು . ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿ ಗೌಡ ಅವರು ಮಾತನಾಡಿ , ಜನರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಬೇಕು .
ಸಾರ್ವಜನಿಕರಲ್ಲಿ ಜ್ಞಾನದ ಬೆಳಕು ಮೂಡಿ ಮೂಡನಂಬಿಕೆ ಅಂತ್ಯವಾಗಿ ದೇಶವು ಅಭಿವೃದ್ಧಿ ಹೊಂದಬೇಕು . ಏಡ್ಸ್ ಖಾಯಿಲೆಯನ್ನು ತಡೆಗಟ್ಟಲು ಜನ ಸಾಮಾನ್ಯರು ಸಹಕರಿಸಬೇಕು . ದೇಶದಲ್ಲಿ ಏಡ್ಸ್ ಪ್ರಕರಣಗಳು ಹೆಚ್ಚಿಗೆ ಕಂಡು ಬರಲು ಬಡತನ ಕಾರಣ , ಬಡತನದಿಂದ ಜನರು ಅಜಾಗೃತರಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ . ಹಳ್ಳಿಗಳಲ್ಲಿ ಜನರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು .
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ || ಎನ್.ಸಿ. ನಾರಾಯಣಸ್ವಾಮಿ ಅವರು ಮಾತನಾಡಿ , ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಯಂತೆ 1988 ರಿಂದ ಪ್ರತಿ ವರ್ಷ ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ . ಏಡ್ಸ್ನಿಂದ ಸೋಂಕಿತ ಹಾಗೂ ಕಳಂಕ ತಾರತಮ್ಯಕ್ಕೊಳಗಾದ ವ್ಯಕ್ತಿಗಳಿಗೆ ನೈತಿಕ ಬೆಂಬಲವನ್ನು ಸೂಚಿಸಲು .
ಮರಣ ಹೊಂದಿದವರ ನೆನಪಿಗಾಗಿ ಮತ್ತು ಎಲ್ಲರೂ ಒಂದಾಗಿ ಏಡ್ಸ್ ವಿರುದ್ಧ ಹೋರಾಡುವಂತೆ ಪ್ರೇರೇಪಿಸುವ ಸಲುವಾಗಿ ಆಚರಿಸಲಾಗುತ್ತಿದೆ . ಈ ವರ್ಷ ಅಸಮಾನತೆಗಳನ್ನು ಕೊನೆಗೊಳಿಸಿ . ಏಡ್ಸ್ನ್ನು ಕೊನೆಗೊಳಿಸಿ , ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು .
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಧಿಕಾರಿಗಳಾದ ಡಾ || ರಮ್ಯಾ ದೀಪಿಕಾ , ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸರ್ವೇಕ್ಷಣಾಧಿಕಾರಿಗಳಾದ ಡಾ || ಚಾರಿಣಿ , ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಹೇಮಾಲತಾ , ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರೇಮಾ , ವಕೀಲರಾದ ಚಲಪತಿ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.