(www.vknews.com) : “2021 ರ ನನ್ನ ಪಯಣ”ವು, ನೋವು ಮತ್ತು ನಲಿವು ಎರಡನ್ನೂ ಸಮತೂಕದಲ್ಲಿ ಕೊಟ್ಟ ವರ್ಷ ಎಂದೇ ಹೇಳಬಹುದು. ಜಗತ್ತಿನ ಎಲ್ಲೆಡೆ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆದು ಇನ್ನೇನು ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲವೂ ಸರಿಯಾಗಿ ಬಿಡುವುವು ಎಂಬ ಆಶಾಭಾವನೆ ಎಲ್ಲರಂತೆ ನನ್ನಲ್ಲಿಯೂ ಇತ್ತು.
ಶಿಕ್ಷಕಿಯಾಗಿದ್ದ ನನಗೆ, ಕೊರೋನಾ ಸಂಕಷ್ಟ ಮುಗಿದ ತಕ್ಷಣ ಕಾಲೇಜು ಎಂದಿನಂತೆ ತೆರೆದುಕೊಳ್ಳುತ್ತದೆ, ಪಾಠ, ಶೈಕ್ಷಣಿಕ ಕಾರ್ಯಕ್ರಮ ಎಲ್ಲವೂ ಮತ್ತೆ ಎಂದಿನಂತೆ ನಡೆಯುತ್ತದೆ ಎಂಬ ತವಕದಿಂದ ಕಾಲೇಜು ಪುನರಾರಂಭಕ್ಕೆ ಕಾಯುತ್ತಿದ್ದೆ, ನಮ್ಮ ವಿದ್ಯಾರ್ಥಿಗಳು ಸಹ ಶಿಕ್ಷಕರನ್ನು ಮುಖಾಮುಖಿ ಬೇಟಿಯಾಗಲು ಆತೊರೆಯುತ್ತಿದ್ದರು. ಕೊನೆಗೂ ಸರ್ಕಾರ ಕಾಲೇಜು ಪುನರಾರಂಭಕ್ಕೆ ಅನುಮತಿಯೇನೋ ಕೊಟ್ಟಿತ್ತು ಆಗ, ನನ್ನ ವೈಯಕ್ತಿಕ ಬದುಕಿನಲ್ಲಿ ಸಂತೋಷದ ಜೊತೆ ನೋವಿನ ಸಂಗತಿಯೂ ಕಾದಿತ್ತು. ಅದೆಂದರೆ,ಮಗುವಿನ ನಿರೀಕ್ಷೆಯಲ್ಲಿದ್ದ ನನಗೆ ತಾಯಿಯಾಗುವ ಶುಭವಾರ್ತೆಯು ದೊರೆತಿರುವುದು ಹಾಗೆಯೇ ಬೇಸರದ ಸಂಗತಿಯೆಂದರೆ,ಮಗುವಿನ ಆರೋಗ್ಯ ದೃಷ್ಟಿಯಿಂದ ಪ್ರಯಾಣವನ್ನು ಆದಷ್ಟು ಕಡಿಮೆಗೊಳಿಸಬೇಕೆಂಬ ವೈದ್ಯರ ಸಲಹೆ.ಈ ಎರಡೂ ವಿಷಯಗಳ ಸಕಾರಾತ್ಮಕವಾಗಿ ತೆಗೆದುಕೊಂಡು ನಾನು, ಪ್ರಯಾಣಕ್ಕೆ ಮುಂದಾಗದೇ ಮನೆಯಲ್ಲೇ ಕೂತು, ಹಾದು ಹೋದ ನೆನಪುಗಳ ಕೆದಕಿ ಹನಿಗವನ , ಕವನವನ್ನು ರಚಿಸುತ್ತಾ ಪ್ರತಿ ದಿನಗಳನ್ನು ಸುಂದರ ಕ್ಷಣಗಳನ್ನಾಗಿ ಮಾರ್ಪಡಿಸಿದೆ.
ಅಂತರ್ಜಾಲದಲ್ಲಿ ನಡೆದ ರಾಜ್ಯಶಾಸ್ತ್ರದ ಹಲವು ಕಾರ್ಯಾಗಾರ ಹಾಗೆಯೇ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಮಾಣ ಪತ್ರವನ್ನು ಪಡೆದುಕೊಂಡೆ, ಜೊತೆಗೆ, ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡುತ್ತಾ ಇದ್ದೆ. ಅದಾಗಿ, ಮುಂದಿನ ಸಲ ವೈದ್ಯರಲ್ಲಿ ತಪಾಸಣೆಗೆ ತೆರೆಳಿದಾಗ ಇನ್ನಷ್ಟು ಕಠಿಣ ಪರಿಸ್ಥಿತಿ ನನಗೆ ಬಂದೊದಗಿತ್ತು. ಅದೆಂದರೆ, ಅತೀ ಅವಶ್ಯಕ ಸಂದರ್ಭ ಬಿಟ್ಟು ಉಳಿದ ಸಮಯವನ್ನೆಲ್ಲಾ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿರುವುದು. ಪ್ರಾರಂಭದಲ್ಲಿ ಕಷ್ಟವಾದರೂ, ನಾನು ಆ ಸಮಯನ್ನು ದುರುಪಯೋಗಿಸದೆ, ಹಾಸಿಗೆಯ ಪಕ್ಕದಲ್ಲಿಯೇ ಪುಸ್ತಕ , ಪೆನ್ನುಗಳ ಇಟ್ಟುಕೊಂಡು ಮಲಗಿಕೊಂಡು ವಿಶ್ರಾಂತಿ ಪಡೆದುಕೊಳ್ಳುವ ಜೊತೆಗೆ ಓದುವುದು ಹಾಗೆಯೇ ಭಾವನೆಗಳನ್ನು ಹಾಳೆಯಲ್ಲಿ ಬರೆದಿಡತೊಡಗಿದೆ. ಆದರೂ ವೈದ್ಯರ ಸಲಹೆಯನ್ನು ಚಾಚು ತಪ್ಪದೆ ಪಾಲಿಸಿಯೂ ಕಾರಣಾಂತರಗಳಿಂದ ತಿಂಗಳು ತುಂಬುವ ಮೊದಲೇ ಆಪರೇಷನ್ ಮಾಡಿಸಿಯೇ ಮಗುವನ್ನು ನನ್ನ ಮಡಿಲು ಸೇರಿಸಬೇಕಾಯಿತು. ಆಪರೇಷನ್ನಿಂದಾಗಿ ಮತ್ತೆ ವಿಶ್ರಾಂತಿಯ ಅನಿವಾರ್ಯತೆ ನನಗೆ ಇತ್ತು. ಈ ಸಮಯವನ್ನೂ ಸದುಪಯೋಗಿಸಿ, ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತಳಾದ ಸಂತೋಷವೂ ಅನಂತವಾದದ್ದು. ಜೊತೆಗೆ ಈ ವರ್ಷ ಬ್ಯಾರಿ ಭಾಷೆ ಮೇಲ್ತನೆಯಲ್ಲಿ ಚುಟುಕು ,ಜಡೆ ಕವನ , ಸಣ್ಣ ಕಥೆ , ಪ್ರಕಟವಾಗಿರುವುದು ಹಾಗೆಯೇ ಬ್ಯಾರಿ ವಾರ್ತೆ ಪತ್ರಿಕೆಯಲ್ಲಿ ನನ್ನ ಬರಹ ಮೂಡಿಬಂದಿರುವುದು ಈ ವರ್ಷದ ಉತ್ತಮ ಕ್ಷಣಗಳೆಂದೇ ಹೇಳಬಹುದು.
ನಾನು, 2021 ರ ನನ್ನ ಪಯಣದಲ್ಲಿ, ನನ್ನ ಸಾಮರ್ಥ್ಯ ವ ತೆರೆದಿಟ್ಟ ಕಹಿ ಘಟನೆಗೂ, ಸಿಹಿ ನೆನಪಿಗೆ ಪ್ರತ್ಯಕ್ಷ , ಪರೋಕ್ಷವಾಗಿ ಪಾತ್ರರಾದವರೆಲ್ಲರಿಗೂ ನನ್ನ ಪ್ರೀತಿಯ ನಮನಗಳನ್ನು ಸಲ್ಲಿಸುವೆ.
-ರಮೀಝ.ಯಂ.ಬಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.