(www.vknews.in) : ಇಸ್ಲಾಮಿನ ಪ್ರಾರಂಭದಲ್ಲಿ ಅಂದರೆ ನಮಾಝ್ ಆರಂಭವಾಗಿ ಸುಮಾರು 4 ವರುಷವಾದರೂ ನಮಾಝಿನ ಪ್ರಾರಂಭದಲ್ಲಿ ಕೊಡುವ ಬಾಂಗ್ ಅಥವಾ ಅಝಾನ್ ಕರೆ ಸುನ್ನತ್ತಾಗಿರಲಿಲ್ಲ. ಮಸೀದಿಯಲ್ಲಿ ನಮಾಝಿನ ಸಮಯವಾದರೂ ಬಾಂಗ್ ಕರೆ ಇರಲಿಲ್ಲ. ನಮಾಝಿನ ಸಮಯವಾದರೆ الصلاة جامعة (ಈಗ ನಮಾಝ್ ನಡೆಯಲಿದೆ) ಎಂಬ ಕರೆ ಕೊಡುತ್ತಿದ್ದರು. ಪ್ರವಾದಿ ಮುಹಮ್ಮದ್ ﷺ ರಿಗೆ ಇದೊಂದು ತೃಪ್ತಿಕರ ಸಂಗತಿಯಾಗಿರಲಿಲ್ಲ. ಈ ವಿಷಯದಲ್ಲಿ ಅಲ್ಲಾಹನ ಭಾಗದಿಂದಲೂ ಒಂದು ಸರಿಯಾದ ತೀರ್ಪು ಬರುವುದನ್ನು ಕಾಯುತ್ತಿದ್ದರು. ಅಲ್ಲದೆ ಪ್ರವಾದಿಯವರು ಸ್ವಹಾಬಿಗಳೊಂದಿಗೆ ಹಲವು ಬಾರಿ ಈ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಆಗ ಕೆಲವರು “ನಾವು ಗಂಟೆ ಬಾರಿಸುವ. ಆಗ ಜನರಿಗೆ ಸಮಯ ಗೊತ್ತಾಗುತ್ತದೆ. ” ಎಂದು ಹೇಳಿದರೆ, ಕೆಲವರು ” ಅದು ಸರಿಯಾಗದು. ಅದಕ್ಕಿಂತ ಒಳ್ಳೆಯದು ಕಹಳೆ ಅಥವಾ ವಾದ್ಯ ಊದುವುದು ಓಳಿತು.” ಎಂದು ಅಭಿಪ್ರಾಯ ಪಟ್ಟರು.
ಒಟ್ಟಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಖ್ಯಾತ ಸ್ವಹಾಬಿ ಹಝ್ರತ್ ಅಬ್ದುಲ್ಲಾಹಿ ಬಿನ್ ಝಯ್ದ್ (ರ) ರವರಿಗೆ ಒಬ್ಬ ಹಸಿರು ಬಟ್ಟೆ ಧರಿಸಿದ ವ್ಯಕ್ತಿ ಅವರ ಎದುರಿನಿಂದ ಒಂದು ದೊಡ್ಡ ಗಂಟೆ ಕೈಯಲ್ಲಿ ಹಿಡಿದರು ಕೊಂಡು ಹೋಗುವ ಒಂದು ಕನಸು ಬಿತ್ತು. ಆಗ ಅವರು ಅವರಲ್ಲಿ ಆ ಗಂಟೆಯನ್ನು ಮಾರಾಟ ಮಾಡುತ್ತೀರಾ? ಎಂದು ಕೇಳಿದರು. ಅದಕ್ಕೆ ಅವರು “ನಿಮಗೆ ಗಂಟೆಯ ಅಗತ್ಯವೇನು? ನೀವು ಗಂಟೆ ಖರೀದಿಸಿ ಏನು ಮಾಡುವುದು?” ಎಂದು ಮರು ಪ್ರಶ್ನೆ ಹಾಕಿದರು. ಆಗ ಖರೀದಿಸಲು ಉದ್ದೇಶಿಸಿದ ಸ್ವಹಾಬಿಯು ಅವರಲ್ಲಿ “ಈಗ ನಮ್ಮ ಮಸೀದಿಯಲ್ಲಿ ನಮಾಝಿನ ಸಮಯವಾದರೆ ಜನರಿಗೆ ತಿಳಿಯಪಡಿಸಲು ಒಂದು ಸೂಕ್ತವಾದ ಸಂವಿಧಾನ ಇಲ್ಲ. ಗಂಟೆ ಸಿಕ್ಕಿದರೆ ಸಮಯವಾದಾಗ ಗಂಟೆ ಬಾರಿಸಿದರೆ ಮಸೀದಿಯ ಆಸುಪಾಸಿನವರಿಗೆ ನಮಾಝಿನ ಸಮಯವಾದದ್ದು ತಿಳಿದು ಮಸೀದಿಗೆ ಬರಲು ಬಹಳ ಅನುಕೂಲವಾಗುತ್ತದೆ.” ಎಂದು ಹೇಳಿದರು. ಅಷ್ಟರಲ್ಲಿ ಆ ವ್ಯಕ್ತಿ ಇವರಲ್ಲಿ “ಇದೆಂತಹಾ ಕೆಲಸ? ನಮಾಝಿಗೆ ಗಂಟೆ ಬಾರಿಸುವುದಾ? ಉಫ್…. ಬಹಳ ನೀಚ ಕೆಲಸ. ಪರವಾಗಿಲ್ಲ. ನಾನು ನಿಮಗೆ ಒಂದು ಒಳ್ಳೆಯ ಉತ್ತಮವಾದ ಮಾರ್ಗ ಹೇಳಿ ಕೊಡುತ್ತೇನೆ.” ಎಂದು ಹೇಳಿ ಇವತ್ತು ನಾವು ಕೊಡುವ ಬಾಂಗಿನ ಪದವನ್ನು ಒಂದೊಂದಾಗಿ ಕನಸಲ್ಲಿ ಹೇಳಿಕೊಟ್ಟರು.
ಕೂಡಲೇ ಅಬ್ದುಲ್ಲಾಹಿ ಬಿನ್ ಝಯ್ದ್ (ರ) ರವರು ಪ್ರವಾದಿ ಮುಹಮ್ಮದ್ ﷺ ರ ಸನ್ನಿಧಿಗೆ ಬಂದು ತನಗೆ ಬಿದ್ದ ಕನಸಿನ ಬಗ್ಗೆ ಹೇಳಿದರು. ಬಿದ್ದ ಕನಸು ಸತ್ಯವೋ ಅಸತ್ಯವೋ ಎಂದು ಗಲಿಬಿಯಾಗುವುದರ ಎಡೆಯಲ್ಲಿ ಅಲ್ಲೇ ಕುಳಿತಿದ್ದ ಹಝ್ರತ್ ಉಮರ್ (ರ) ರವರು ಹೇಳಿದರು. “ನನಗೂ ಕೆಲವು ದಿನಗಳ ಮೊದಲು ಇಂತಹಾ ಒಂದು ಕನಸು ಬಿದ್ದಿತ್ತು. ಆದರೆ ಅದರ ಕನ್ಫರ್ಮೇಶನ್ ಬರಲು ಕಾಯುತ್ತಿದ್ದೆ. ಈಗ ಸತ್ಯ ಕನಸೆಂದು ಸಾಬೀತಾಯಿತು” ಅಷ್ಟರಲ್ಲಿ ಪ್ರವಾದಿಯವರು ಹೇಳಿದರು. “ಇಬ್ಬರಿಗೆ ಒಂದೇ ಕನಸು ಬಿದ್ದಿದ್ದರೆ ಅದು ನಿಜ ತಾನೆ. ಆದ್ದರಿಂದ ತಡಮಾಡದೆ ಈ ವಿಷಯವನ್ನು ಹಝ್ರತ್ ಬಿಲಾಲ್ (ರ) ರವರಿಗೆ ತಲುಪಿಸಿ” ಬಳಿಕ ಅಂದಿನ ಶಬ್ದ ಲೋಕದ ತೇಜಸ್ವಿಯಾದ ಹಝ್ರತ್ ಬಿಲಾಲ್ (ರ) ರವರಿಗೆ ವಿಷಯ ಮುಟ್ಟಿಸಲಾಯಿತು. ನಂತರ ಪ್ರವಾದಿಯವರ ನಿರ್ದೇಶದಂತೆ ಮದೀನಾ ಮಸೀದಿಯ ಮೊದಲ ಮುಅಝಿನ್ (ಮುಕ್ರಿಕ) ಆಗಿ ನೇಮಕಗೊಂಡರು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಹದೀಸ್ ಗ್ರಂಥಗಳಿಂದ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.