ಚಿಕ್ಕಬಳ್ಳಾಪುರ, (ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲೆಯಾಗಿ 15 ವಸಂತಗಳ ಸಂಭ್ರಮದಲ್ಲಿರುವ ಚಿಕ್ಕಬಳ್ಳಾಪುರ ಧಾರ್ಮಿಕ, ಐತಿಹಾಸಿಕ, ಶೈಕ್ಷಣಿಕ ಹಾಗೂ ಎಲ್ಲಾ ಮೂಲಸೌಕರ್ಯಗಳನ್ನು ಪಡೆದು ನವ ಕರ್ನಾಟಕದ ನಿರ್ಮಾಣದಲ್ಲಿ ಅತಿ ದೊಡ್ಡ ಬೆಳವಣಿಗೆ ಕಂಡು, ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಕೆ ಸುಧಾಕರ್ ಹೇಳಿದರು.
ನಗರದಲ್ಲಿ ಆಯೋಜಿಸಿದ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಐತಿಹಾಸಿಕ ದಿನವನ್ನು ಇಡೀ ಜಿಲ್ಲೆಯ ಜನರು ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾಜ್ಯವೇ ನಮ್ಮ ಕಡೆ ನೋಡುತ್ತಿದೆ. ಈ ಅದ್ದೂರಿಯ ಹಬ್ಬ ಜಿಲ್ಲೆಯ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇವೆ, ನೀರಾವರಿ ಅಭಿವೃದ್ಧಿಯ ಸಂಕೇತ. *ಟೀನೇಜ್ಗೆ ಎಂಟ್ರಿ ಕೊಟ್ಟಿರುವ ಚಿಕ್ಕಬಳ್ಳಾಪುರದ ಹಲವು ಆಶಯಗಳು ಈಡೇರಿವೆ.* ಆದರೆ ಗುರಿ ನವ ಚಿಕ್ಕಬಳ್ಳಾಪುರದ ನಿರ್ಮಾಣದ ಮೂಲಕ, ನವ ಕರ್ನಾಟಕ ಹಾಗೂ ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವುದು ಆಗಿದೆ ಎಂದು ಹೇಳಿದರು.
20-25 ವರ್ಷಗಳಿಂದ ನೀರಿನ ಬರ ಎದುರಿಸಿದ್ದ ಜಿಲ್ಲೆ ಈಗ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇಡೀ ಜಿಲ್ಲೆಯ ಕೆರೆಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿವೆ. ವೈದ್ಯಕೀಯ ಕಾಲೇಜು ಮೂಲಕ ದಶಕಗಳ ಕನಸು ನನಸಾಗಿದೆ. ರೈತರು, ವಿದ್ಯಾರ್ಥಿಗಳು ಹೀಗೆ ಜಿಲ್ಲೆಯ ಎಲ್ಲಾ ವರ್ಗದ ಜನರು ಸಂತಸದಿಂದ ಇರುವುದರಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ 1,500 ಅಡಿಗಳಿಂದ ನೀರು ತೆಗೆದು ಕಷ್ಟದ ನಡುವೆಯೂ ಜೀವನ ಮಾಡಿದ್ದ ಈ ನಾಡಿನ ರೈತರು ಪ್ರಗತಿಪರರು. ಬೆಂಗಳೂರಿನ ಬೇಡಿಕೆಯ ಶೇ.70 ರಷ್ಟು ತರಕಾರಿಗಳನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರದಿಂದಲೇ ಒದಗಿಸಲಾಗುತ್ತಿದೆ ಅನ್ನುವುದು ನಮ್ಮ ರೈತರ ಹೆಮ್ಮೆ ಎಂದರು.
ಈ ಜಿಲ್ಲೆಯಲ್ಲಿ ಒಂದೂ ನದಿಗಳು ಹರಿಯುವುದಿಲ್ಲ. ಆದರೆ 5 ಪವಿತ್ರ ನದಿಗಳು ಉಗಮವಾಗುತ್ತಿವೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. *2ನೇ ಜಲಿಯನ್ ವಾಲಾಭಾಗ್ ಎಂದು ಕರೆಸಿಕೊಳ್ಳುವ ವಿಧುರಾಶ್ವತ್ಥ* ಐತಿಹಾಸಿಕವಾಗಿದೆ. 2 ಭಾರತ ರತ್ನಗಳು ( ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಪ್ರೋ. ಸಿಎನ್ಆರ್ ರಾವ್) ಇದೇ ನಾಡಿನವರು ಎಂಬುದು ನಮ್ಮ ಹೆಮ್ಮೆ. ತಪಸ್ವಿಗಳು, ಸಾಧು ಸಂತರು ಮೆಟ್ಟಿದ ಈ ನೆಲ ಫಲಪುಷ್ಪಗಳ ಗಿರಿಧಾಮ ಎಂದು ಹೇಳಿದರು.
ಆಧುನಿಕ ಭಗೀರಥ ಬೊಮ್ಮಾಯಿ: ನೀರಾವರಿ ಸಚಿವರಾಗಿದ್ದಾಗ *ಎತ್ತಿನಹೊಳೆ ಯೋಜನೆ ರೂಪಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಜಿಲ್ಲೆಯ *ನಿಜವಾದ ಭಗೀರಥ.* ಅಷ್ಟೇ ಅಲ್ಲ ಈ ಯೋಜನೆಯ ಮೂಲ ವೆಚ್ಚವನ್ನು 13,000 ಕೋಟಿ ರೂ. ನಿಂದ 23,000 ಕೋಟಿ ರೂ.ಗೆ ಏರಿಸಿ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ದಿ.ಶಂಕರ್ನಾಗ್ ಅವರ ಕನಸಾಗಿದ್ದ ನಂದಿಬೆಟ್ಟದ ರೋಪ್ ವೇ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಎಲ್ಲವನ್ನೂ ಮುಂದಿನ 7 ದಿನಗಳಲ್ಲಿ ಹಬ್ಬವನ್ನಾಗಿ ಆಚರಿಸಿಕೊಂಡು, *ಬೆಂಗಳೂರಿಗೆ ಸಹಕಾರವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಲು* ಪ್ರಯತ್ನ ಪಡುವುದಾಗಿ ಅವರು ಹೇಳಿದರು.
ಅದ್ದೂರಿ ಮೆರವಣಿಗೆ: ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಗ್ಗೆ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡಂತೆ ವಿಜೃಂಭಣೆಯ ಮೆರವಣಿಗೆ ನಡೆಯಿತು. ಚಿಕ್ಕಬಳ್ಳಾಪುರದ ಇತಿಹಾಸ, ಕಲಾ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಮೆರವಣಿಗೆ ಜನಮನಸೂರೆಗೊಂಡಿತು.
ವರದಿ ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.