(www.vknews.in) ; ಭೂಮಿಯಲ್ಲಿ* ಬದುಕು ಆರಂಬಿಸಿದ ಆದಮರಿಗೆ ಅಲ್ಲಾಹನು *”ನೀನು ಭೂಮಿಯಲ್ಲಿ ಬಹಳ ಕಷ್ಟಪಟ್ಟು ದುಡಿಯಬೇಕಾಗಿದೆ. ನೀನು ಸೋಮಾರಿಯಾದರೆ ನಿನ್ನ ಸಂತತಿಗಳೂ ಹಾಗೆಯೇ ಸೋಮಾರಿಗಳಾಗುವರು.”* ಎಂಬ ಸಂದೇಶ ಕಳುಹಿಸಿದನು. ಕೂಡಲೇ ಅವರಿಬ್ಬರಿಗೆ ವಾಸ ಮಾಡಲು ಒಂದು ಮನೆ ಅಥವಾ ಬಿಡಾರ ಮಾಡಿದರು. ನೀರಿಗೆ ಬೇಕಾಗಿ ಬಾವಿ ತೋಡಿದರು. ನಂತರ ಕೃಷಿ ಮಾಡಲು ಸಜ್ಜಾದರು. ಹಝ್ರತ್ ಜಿಬ್ರೀಲ್ (ಅ) ರವರು ಸ್ವರ್ಗದಿಂದ ಎರಡು ಕೋಣಗಳನ್ನು ಮತ್ತು ಬಿತ್ತನೆ ಮಾಡಲು ಉಷ್ಟ್ರಪಕ್ಷಿಯ ಮೊಟ್ಟೆಯ ಗಾತ್ರದಲ್ಲಿರುವ ಕೆಲವು ಧಾನ್ಯಗಳನ್ನು ಅಂತೆಯೇ ಕೊಟ್ಟು, ಪಿಕಾಸು, ಕತ್ತಿ ಮಾಡಲು ಕಬ್ಬಿಣದ ಅದಿರನ್ನು ಕೂಡ ತಂದಿದ್ದರು. ಗಮನಾರ್ಹ ಸಂಗತಿಯೆಂದರೆ, ಬಿತ್ತನೆ ಮಾಡಲು ತಂದ ಧಾನ್ಯವನ್ನು ನೋಡುವಾಗ ಮೊದಲ ನೋಟಕ್ಕೆ ಸ್ವರ್ಗದಲ್ಲಿ ನಿಷೇಧಿಸಿದ ಹಣ್ಣಿನಂತೆ ಕಾಣುತ್ತಿತ್ತು. ಸುಬ್ಹಾನಲ್ಲಾಹ್! ನೋಡಿದಾಕ್ಷಣ ಹಝ್ರತ್ ಆದಮರು ಬೆಚ್ಚಿಬಿದ್ದು ಏರುದನಿಯಲ್ಲಿ ಬೊಬ್ಬೆಹಾಕಿ ಕೇಳಿದರು. *”ಏನಿದು ಜಿಬ್ರೀಲರೇ.. ನನ್ನನ್ನು ಸ್ವರ್ಗದಿಂದ ಹೊರಹಾಕಲು ಕಾರಣವಾದ ಹಣ್ಣಿನ ಬೀಜವಾ?”* ಹಝ್ರತ್ ಜಿಬ್ರೀಲರು ಹೇಳಿದರು. *”ಅಲ್ಲ. ಭಯಪಡಬೇಡಿ. ಇದು ನಿಮ್ಮ ಮತ್ತು ನಿಮ್ಮ ಸಂತತಿಯ ಮುಂದಿನ ಜೀವನೋಪಾಯಕ್ಕಾಗಿ ಬೇಕಾದ ಆಹಾರವಾಗಿದೆ.”*
*ಜಿಬ್ರೀಲರು* ತಂದ ಕಬ್ಬಿಣವನ್ನು ಅವರೇ ತಂದ ಬೆಂಕಿಯಲ್ಲಿ ಹಾಕಿ ನಯ ಮಾಡಿ ಅದರಿಂದ ಕತ್ತಿ, ಕೊಟ್ಟು, ಪಿಕಾಸು, ಕೊಡಲಿ, ನೇಗಿಲು, ನೊಗ ಇತ್ಯಾದಿ ಸಲಕರಣೆಗಳನ್ನು ಅವರ ಮಾರ್ಗದರ್ಶನದಲ್ಲಿ ಮಾಡಿದರು.
*ಬಳಿಕ* ಜಿಬ್ರೀಲರು ಸ್ವರ್ಗದಿಂದ ಒಂದು ಕುರಿ ಆಡನ್ನು ತಂದಿದ್ದರು. ಆದಮರು ಅದನ್ನು ದ್ಸಬಹ್ ಮಾಡಿ ಗಡದ್ದಾಗಿ ತಿಂದರು. ಬಳಿಕ ಅದರ ಚರ್ಮದಿಂದ ಉಣ್ಣೆಯನ್ನು ಬೇರ್ಪಡಿಸಿ ತನಗೂ ತನ್ನ ಬಾಳ ಸಂಗಾತಿಗೂ ತಲಾ ಎರಡೆರಡು ಉಡುಪುಗಳನ್ನು ಮಾಡಿದರು. ಮಾಡಿದ ಉಡುಪುಗಳು ಧರಿಸಿದಾಗ ಇಂದಿನ ಹಾಗೆ ಒಳ ವಸ್ತ್ರವಿಲ್ಲದ ಆ ಕಾಲದಲ್ಲಿ ಇಬ್ಬರಿಗೂ ಅದರ ಒರಟು (ದರಗ್) ಚರ್ಮಕ್ಕೆ ಸ್ಪರ್ಶವಾದಾಗ ಬೇಸರದಿಂದ ಇಬ್ಬರ ಕಣ್ಣಿನಲ್ಲಿಯೂ ನೀರು ಹರಿದು ಬಂತು. ಯಾಕೆಂದರೆ, ಇಬ್ಬರೂ ಈ ತನಕ ಸ್ವರ್ಗದಲ್ಲಿ ಉಟ್ಟ ಉಡುಪು ಸ್ವರ್ಗದ ರೇಷ್ಮೆ (ಪಟ್ಟ್) ಉಡುಪಾಗಿತ್ತು. *”ಎಲ್ಲವೂ ನಾವು ಮಾಡಿದ ತಪ್ಪಿಗೆ ನಮಗಿರುವ ಶಿಕ್ಷೆ”* ಎಂದು ಅವರಿಬ್ಬರೂ ಮನದಲ್ಲೇ ಹೇಳಿಕೊಂಡರು.
*ಸ್ವರ್ಗದಿಂದ* ತಂದ ಎತ್ತಿನಿಂದ ಉಳಲು ಹಝ್ರತ್ ಆದಮರು ರೆಡಿಯಾದರು. ಮೊದಲೇ ಹಝ್ರತ್ ಜಿಬ್ರೀಲರ ನಿರ್ದೇಶ ಪ್ರಕಾರ ಮಾಡಿಟ್ಟ ನೊಗ ಮತ್ತು ನೇಗಿಲನ್ನು ಎರಡು ಎತ್ತಿನ ಮೇಲೆ ಕಟ್ಟಿ ಗದ್ದೆ ಉಳಲು ಶುರು ಮಾಡಿದರು. ಬಳಿಕ ಬೀಜ ಬಿತ್ತಿದರು. ಆದರೆ ಇದು ಯಾವಾಗ ರೆಡಿ ಆಗುತ್ತದೆ ಎಂದು ಗೊತ್ತಿಲ್ಲದ ಕಾರಣ ಅವರು ತನ್ನಲ್ಲೇ ಕೇಳಿದರು. *”ಇದು ಬೆಳೆದು, ಕೊಯ್ಯಲು ಸಿಗುವುದು ಯಾವಾಗ? ತಲೆ ಬಿಸಿ ಆಗುತ್ತದೆ. ಒಂದು ರೆಡಿ ಆದರೆ ಸಾಕಿತ್ತು?”* ಅಷ್ಟರಲ್ಲಿ ಒಂದು ಕರೆ ಕೇಳಿಸಿತು. *”ಮಾನವನನ್ನು ಆತುರಪಡುವವನಾಗಿಯೇ ಸೃಷ್ಟಿಸಲಾಗಿದೆ. ಗಡಿಬಿಡಿ ಮಾಡಬೇಡಿ”* ಎಂದು.
*ಬೇರೊಂದು* ಸಂಗತಿಯೆಂದರೆ, ಆದಮರು ಗದ್ದೆ ಉಳುವಾಗ ಆಗಾಗ್ಗೆ ಹಣೆಯಲ್ಲಿ ಬರುವ ಬೆವರನ್ನು ತನ್ನ ಕೈಯಿಂದ ಉಜ್ಜಿ ಉಜ್ಜಿ ತೆಗೆಯುತ್ತಿದ್ದರು. ಇತ್ತ ಗದ್ದೆ ಬದಿಯಲ್ಲಿ ಕುಳಿತ ಸಂಗಾತಿ ಬೀವಿ ಹವ್ವಾರನ್ನು ನೋಡಿ ಪತಿ ಅದಮರು “ಎಲ್ಲವೂ ನಿನ್ನ ಈ ಕಿತಾಪತಿಯಲ್ಲಿ ಹೀಗೆ ಆಯಿತು. ಎಷ್ಟೊಂದು ಸುಂದರ ಬದುಕಾಗಿತ್ತು ಅಲ್ಲಿ ನಮ್ಮದು. ಈಗ ಈ ಕಷ್ಟ ಬೇಕಾ? ಈಗ ಎಲ್ಲಾ ನಾನೇ ಅನುಭವಿಸಬೇಕಲ್ಲವೇ? ಓ ನನ್ನ ಪತ್ನಿ *حوا حوا حوا حوا* ಎಂದು ಹೇಳುತ್ತಿದ್ದರು. ಇಲ್ಲಿ ಪತ್ನಿಯನ್ನು ಕರೆದ *ಹವ್ವಾ ಹವ್ವಾ* ಎಂಬ ಪದ ಕ್ರಮೇಣ ಅದ ಅಲಿಫ್ ಮಾಯವಾಗಿ ಅರಬಿ ಯಲ್ಲಿ *حو حو حو* (ಹೋ ಹೋ) ಎಂದಾಯಿತು. ಆ ಕಾರಣದಿಂದ ಇಂದು ಗದ್ದೆ ಉಳುವ ಯಾವೊಬ್ಬನ ಬಾಯಿಯಲ್ಲೂ ಈ *ಓ ಓ ಓ…..* ಎಂಬ ಮಾತು ಬಾರದೆ ಇರಬಾರದು ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. (ಈ ಲೇಖನ ಓದುವ ಎಲ್ಲರಿಗೂ ಗದ್ದೆ ಉಳುವುದನ್ನು ನೋಡಿದ ಅನುಭವ ಇರುವುದು ಕಡಿಮೆಯಾಗಿರಬಹುದೆಂದು ನನ್ನ ಅನಿಸಿಕೆ)
*ಆದಮರಿಗೆ* ಮಲಕುಗಳು ಸುಜೂದು ಮಾಡುವ ವೇಳೆ ಅವರೊಬ್ಬರು ಎಲ್ಲಾ ತಿಳಿದಿದ್ದ ಒಬ್ಬ ಮಹಾ ಪಂಡಿತರಾಗಿದ್ದರು. ಪಾಕಶಾಸ್ತ್ರದಿಂದ ಹಿಡಿದು ಆಧುನಿಕ ಜಗತ್ತಿನ ತಂತ್ರಜ್ಞಾನದ ತನಕ ಎಲ್ಲವೂ ತಿಳಿದವರಾಗಿದ್ದರು. ಆದರೆ ಸ್ವರ್ಗದಲ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಭೂಮಿಗಿಳಿದಾಗ ಎಲ್ಲವೂ ಮರೆತು ಹೋಯಿತು. ಬಹುಭಾಷಿಯಾದವರು ಎಲ್ಲವನ್ನೂ ಮರೆತು ಏಕ ಭಾಷೆ ತಿಳಿಯುವುವವರಾದರು. ಇಲ್ಲಿ ಬಂದ ಬಳಿಕ ಅವರಿಗೆ ಹೊಸತಾಗಿ ಪಾಕಶಾಸ್ತ್ರವನ್ನು ಕಲಿಸಿ ಕೊಡಲಾಯಿತು. ಆದಮರು ಕೃಷಿ ಮಾಡಿ ಕೊಯ್ದ ಧಾನ್ಯಗಳನ್ನು ಪತ್ನಿ ಹವ್ವಾ ಬುಟ್ಟಿಗೆ ಹಾಕಿ ಶೇಖರಣೆ ಮಾಡಿದರು.
*ಅಡುಗೆ* ಮಾಡಿ ತಿಂದು ಸ್ವಲ್ಪ ಕಳೆದಾಗ ಇಬ್ಬರಗೂ ಹೊಟ್ಟೆಯಲ್ಲಿ ಏನೋ ಗ್ಯಾಸ್ ಉತ್ಪಾದನೆ ಆದಂತಾಯಿತು. ಬಾಯಿಯಿಂದ ತೇಗು ಬರಲು ಶುರುವಾಯಿತು. ಒಟ್ಟಿನಲ್ಲಿ ಏನೋ ಒಂದು ತರ ಶರೀರ ಭಾರವಾಗಲು ತೊಡಗಿತು. ಏನು ಮಾಡಬೇಕೆಂದು ತಿಳಿಯದಾಗ ಮಲಕೊಬ್ಬರು ಬಂದು ಹೇಳಿದರು. *”ಇನ್ನು ಹಾಗೆಯೇ ಕುಳಿತರೆ ಸಾಲದು. ಬಯಲಿಗೆ ಹೋಗಿ ವಿಸರ್ಜನೆ ಮಾಡಬೇಕು”*
*ಮಲಕಿನ* ನಿರ್ದೇಶ ಪ್ರಕಾರ ಇಬ್ಬರೂ ಒಂದು ಜಾಗಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆ ಮಾಡಿದರು. ಬಳಿಕ ಅದೇ ಮಲಕ್ ಅವರಿಗೆ ಅದನ್ನು ನೀರಿನಿಂದ ಶುದ್ಧಿ ಮಾಡುವುದನ್ನು ಕಲಿಸಿ ಕೊಟ್ಟರು. ಅದರೊಂದಿಗೆ ಇಬ್ಬರಿಗೂ ಉಝು ಮಾಡಿ ನಮಾಝ್ ಮಾಡುವುದನ್ನು ಕೂಡ ಕಲಿಸಿ ಕೊಡಲಾಯಿತು. ಮೊದಲ ನಮಾಝ್ ಲುಹರ್ ನಮಾಝ್ ಆಗಿತ್ತು. *ಆದಮರಿಗೆ* ನಮಾಝಿನ ವೇಳೆ ತಿಳಿಯಲು ಇಂದಿನಂತೆ ಗಡಿಯಾರ ಇರಲಿಲ್ಲ. ಅಲ್ಲಾಹನು ಎತ್ತಿನ ಗಾತ್ರದಲ್ಲಿರುವ ಒಂದು ಬಿಳಿ ಬಣ್ಣದ ಹುಂಜವನ್ನು ಕಳುಹಿಸಿದ್ದನು. ನಮಾಝಿನ ಸಮಯವಾಗುವಾಗ ಅದು ತನ್ನ ರೆಕ್ಕೆಯಿಂದ ಬಡಿಯುತ್ತಿತ್ತು. ಅಲ್ಲದೆ *”ಓ ಆದಮರೇ., ನಮಾಝಿನ ಸಮಯವಾಯಿತು. ನಮಾಝ್ ಮಾಡಿ”* ಎಂದು ಏರು ದನಿಯಲ್ಲಿ ಹೇಳುತ್ತಿತ್ತು.
*ಇತ್ತ ಗರ್ಭಿಣಿಯಾದ* ಬೀವಿ ಹವ್ವಾರವರು ತನ್ನ ಎಂಟನೆಯ ತಿಂಗಳಲ್ಲೇ ಎರಡು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದರು. ಅದು ಜಗತ್ತಿನ ಮೊದಲ ಹೆರಿಗೆಯಾಗಿತ್ತು. ಒಂದು ಗಂಡು ಮತ್ತು ಒಂದು ಹೆಣ್ಣು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ಶಿಹಾಬುದ್ದೀನ್ ಅಹ್ಮದ್ ರವರ ನಿಹಾಯತುಲ್ ಅರಬ್ ಮತ್ತು ಇಮಾಮ್ ದುಮೈರಿಯ ಹಯಾತುಲ್ ಹಯವಾನ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.