ನನಗೆ ಮೂಗಿನ ಮೇಲೆಯೇ ಕೋಪ…! ಏನ್ ಮಾಡ್ಲಿ…!
(vknews.in): ಕೋಪ ಒಂದು ಶಕ್ತಿ. ಕೋಪ ಒಂದು ನೋವಿನ ಮುಖವೂ ಹೌದು. ನಮ್ಮ ಮನಸ್ಸಿಗೆ ಹಿತ ನೀಡದ ಸನ್ನಿವೇಶಕ್ಕೆ ಮನಸ್ಸು ಹಲವಾರು ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತದೆ. ಅದು ಉಗ್ರರೂಪದ ಮಾತುಗಳಲ್ಲಾಗಿರಬಹುದು, ಹೊಡೆದಾಟವಾಗಿರವಹುದು, ಕ್ರೌರ್ಯವಾಗಿರಬಹುದು, ಛಲದ ರೂಪದಲ್ಲಾಗಿರಬಹುದು. ನಿರಾಸೆ ಅಥವಾ ಒಂಟಿತನವೂ ಆಗಿರಬಹುದು. ಸನ್ನಿವೇಶಕ್ಕೆ ತಕ್ಕಂತೆ ಅದರ ರೂಪುರೇಷೆ ಬದಲಾಗುತ್ತಿರುತ್ತದೆ. ಕೋಪ ಒಂದು ಮಾನಸಿಕ ಕ್ರಿಯೆ. ನಮ್ಮ ಒಳಗಡೆಯೇ ವಾಸವಾಗಿರುತ್ತದೆ. ಹೊರಬರಸಲು ಸನ್ನಿವೇಶವನ್ನು ಮಾತ್ರ ಕಾಯುತ್ತಿರುತ್ತದೆ ಅಷ್ಟೆ. ಕೋಪ ಎಂಬ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ಹೋದಲ್ಲಿ ಅನಾಹುತಗಳು ಸಂಭವಿಸಬಹುದು. ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡರೆ ಉತ್ತಮ ಫಲಿತಾಂಶಗಳನ್ನು ಸಹ ಪಡೆದುಕೊಳ್ಳಬಹುದು. ಉದಾಹರಣೆಗೆ: ಆರು ಸ್ನೇಹಿತರು ಸೇರಿ ಒಂದು ಹೋಟೇಲಿಗೆ ಹೋಗುತ್ತಾರೆ. ಅವರಲ್ಲಿ ಒಬ್ಬ ಭಾರಿ ತೂಕದವನಾಗಿರುತ್ತಾನೆ. ಬೇಗನೆ ನಡೆಯುವುದು, ಸರಸರನೆ ಕೆಲಸಕಾರ್ಯಗಳನ್ನು ಮಾಡುವುದು ಆತನಿಂದ ಅಷ್ಟೊಂದು ಸರಾಗವಾಗಿ ಮಾಡುವುದು ಸಾಧ್ಯವಾಗುವುದಿಲ್ಲ. ಶರೀರ ಆ ರೀತಿಯಾಗಿ ಬೆಳೆಸಿಕೊಂಡಿರುತ್ತಾನೆ. ಹೋಟೇಲಿನಲ್ಲಿ ತಮಗಿಷ್ಟವಾದ, ರುಚಿಕರವಾದ ತಿಂಡಿತಿನಿಸುಗಳನ್ನು ತಿನ್ನಲು ಎಲ್ಲ ಸ್ನೇಹಿತರು ಪ್ರಾರಂಭಿಸುತ್ತಾರೆ. ಭಾರಿ ತೂಕವುಳ್ಳವನಿಗೆ ಸ್ವಲ್ಪ ಹೆಚ್ಚಾಗಿ ತಿನ್ನುವ ಅಭ್ಯಾಸ. ಅಲ್ಲಿ ತಮಾಷೆಯಲ್ಲೇ ಸ್ನೇಹಿತರ ಕೊಂಕು ಮಾತುಗಳು ಪ್ರಾರಂಭವಾಗುತ್ತವೆ. ಒಬ್ಬ ಹೇಳುತ್ತಾನೆ – ಇವನಿಗೆ ಬರೀ ತಿನ್ನುವುದು, ಮಲಗುವುದು ಮಾತ್ರ ಗೊತ್ತು, ನಮ್ಮ ರೀತಿ ಸದೃಢ ಮತ್ತು ಆಕರ್ಷಕ ಶರೀರ ಇದ್ದಿದ್ದರೆ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದೆ. ಆನೆ ರೀತಿ ಶರೀರ ಬೆಳೆಸಿಕೊಂಡಿದ್ದೀಯ. ಮತ್ತೊಬ್ಬ ಹೇಳುತ್ತಾನೆ – ಅವನ ಸೊಂಟ ನೋಡಿ, ತೊಡೆ ನೋಡಿ, ನನ್ನ ಎರಡು ಕಾಲುಗಳು ಅವನ ಒಂದು ಕಾಲಿಗೆ ಸಮ. ಹೀಗೆ ಅನೇಕ ರೀತಿಯ ಟೀಕೆಗಳನ್ನು ಮಾಡುತ್ತಾ ಸ್ನೇಹಿತನನ್ನು ಗೋಳು ಹಾಕಿಕೊಳ್ಳುತ್ತಾರೆ. ಮನುಷ್ಯ ಅಂದ ಮೇಲೆ ಮನಸ್ಸು ಇರುವುದಿಲ್ಲವೇ. ಸ್ನೇಹಿತರ ಚುಚ್ಚು ಮಾತುಗಳನ್ನು ಕೇಳಿ ಅವನಿಗೆ ಬಹಳ ದುಃಖವಾಗುತ್ತದೆ. ವಿಪರೀತ ಕೋಪ ಬರುತ್ತದೆ. ಆತ ಆಗ ಜಗಳವಾಡುವುದಿಲ್ಲ, ಕೋಪವನ್ನು ಒಂದು ಚೂರು ವ್ಯಕ್ತ ಪಡಿಸುವುದಿಲ್ಲ. ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಹೇಗಾದರೂ ಮಾಡಿ ನಾನು ನನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಇವರಿಗೆಲ್ಲ ಆಶ್ಚರ್ಯವಾಗುವ ರೀತಿಯಲ್ಲಿ ನನ್ನನ್ನು ನಾನು ಮಾರ್ಪಾಡು ಮಾಡಿಕೊಳ್ಳಬೇಕು. ಕೋಪದಲ್ಲಿ ತೆಗೆದುಕೊಂಡ ಧನಾತ್ಮಕ ನಿರ್ಧಾರ ಅವನ ಜೀವನ ಶೈಲಿಯನ್ನೇ ಬದಲಾಯಿಸಿ ಬಿಡುತ್ತದೆ. ವ್ಯಾಯಾಮಕ್ಕೆ ಸೇರಿಕೊಳ್ಳುತ್ತಾನೆ. ಅದರ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಾನೆ. ಎರಡು ವರ್ಷಗಳಲ್ಲಿ ತನ್ನ ಗುರಿಯನ್ನು ಸಾಧಿಸಿಬಿಡುತ್ತಾನೆ. ಆರೋಗ್ಯಕರ ಶರೀರವನ್ನು ನೋಡಿ ಆತನ ಸ್ನೇಹಿತರು ದಂಗಾಗಿ ಬಿಡುತ್ತಾರೆ. ಅಕಸ್ಮಾತಾಗಿ ಸ್ನೇಹಿತರ ಚುಚ್ಚು ಮಾತುಗಳನ್ನು ಕೇಳಿ ಎರಡು ವರ್ಷಗಳ ಹಿಂದೆ ಆತ ಅವರೊಂದಿಗೆ ಜಗಳವಾಡಿ ಕೋಪವನ್ನು ಅಲ್ಲೇ ಉಪಯೋಗಿಸಿ ಬಂದು ಬಿಟ್ಟಿದಿದ್ದರೆ ಆತನಿಗೆ ಅದ್ಭುತವಾದ ಪರಿವರ್ತನೆ ಸಿಗುತ್ತಿರಲಿಲ್ಲ. ಆದರೆ ಆತ ಜಾಣ್ಮೆಯಿಂದ ಕೋಪವನ್ನು ತನ್ನ ಛಲ ಸಾಧಿಸಲು ಬಳಸಿಕೊಂಡ. ಅದರಲ್ಲಿ ಗೆದ್ದ. ನಮ್ಮ ನಿಮ್ಮ ಜೀವನದಲ್ಲಿ ಅನೇಕ ಈ ರೀತಿಯ ಘಟನೆಗಳು ನಡೆದಿರುತ್ತವೆ, ನಡೆಯುತ್ತಿರುತ್ತವೆ. ಆದರೆ ನಾವು ಹೆಚ್ಚಾಗಿ ಕೋಪವನ್ನು ನಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವುದುಂಟು. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ಸಮಯ ವ್ಯರ್ಥವಾಗುತ್ತದೆ. ಅದರ ಜೊತೆಗೆ ಹಣವೂ ಖಾಲಿಯಾಗಬಹುದು.
ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಮಾತುಕತೆಗಳಿಂದ, ಕ್ಷಮಾಪಣೆಗಳಿಂದ ಇತ್ಯರ್ಥ ಮಾಡಿಕೊಳ್ಳಬಹುದು. ಆದರೆ ನಮ್ಮ ಅಹಂ ಒಪ್ಪುವುದಿಲ್ಲ. ಆ ಅಹಂ ಕೋಪದ ರೂಪವನ್ನು ಪಡೆಯುತ್ತದೆ. ತೆಗೆದುಕೊಳ್ಳಬಾರದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತಕ್ಷಣಕ್ಕೆ ಜಯ ಸಿಕ್ಕಿದರೂ ದೀರ್ಘಕಾಲಕ್ಕೆ ಕಂಟಕವಾಗಿ ಉಲ್ಬಣಗೊಳ್ಳಬಹುದು. ಹಿರಿಯರು ತಾಳಿದವನು ಬಾಳಿಯಾನು ಎಂಬ ಗಾದೆ ಮಾತನ್ನು ಹಾಗೆಯೇ ಹೇಳಿಲ್ಲ. ಅದರ ಹಿಂದೆ ಅನುಭವಗಳ ಬೆಟ್ಟಗಳೇ ಉಂಟು. ದ್ವೇಷ ಸಾಧಿಸುವುದು, ಅಸೂಯೆ ಪಡುವುದು, ಮೋಸ ಮಾಡುವುದು ಈ ರೀತಿಯ ಅನೇಕ ಮಾನಸಿಕ ನಕಾರಾತ್ಮಕ ಕೋಪದ ಜಾಲದಲ್ಲಿ ಮನಸ್ಸು ಸಿಕ್ಕಿ ಬಿದ್ದರೆ, ಅಂತಹ ಮನಸ್ಸುಗಳಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ನಮ್ಮ ನಿಮ್ಮ ಮನಸ್ಸುಗಳಲ್ಲಿ ನಕಾರಾತ್ಮಕ ಕೋಪದ ಕಡ್ಡಿಕಳೆಗಳು ಎಷ್ಟು ಬೆಳೆದಿವೆ ಎಂದು ಆಗಾಗ ವಿಮರ್ಶಿಸಿ ಅದನ್ನು ಸರಿಪಡಿಸಿಕೊಂಡರೆ ತೃಪ್ತಿಕರ ಜೀವನ ಸಾಗಿಸುವುದರಲ್ಲಿ ಸಹಾಯವಾಗಬಹುದು.
ಜಯದೇವ ಆಸ್ಪತ್ರೆಯ ಡಾ. ಮಂಜುನಾಥರವರು ಹೇಳುತ್ತಾರೆ – ಶೇ ೨೫ ರಷ್ಟು ಜನರು ಭಾರತದಲ್ಲಿ ಹೃದ್ರೋಗದಿಂದ ಸಾಯುತ್ತಿದ್ದಾರೆ. ಅದರಲ್ಲೂ ಶೇ ೩೦ ರಷ್ಟು ಜನರು ೪೦-೪೫ ವರ್ಷ ವಯಸ್ಸುಳ್ಳವರು. ೧೫-೨೦ ವರ್ಷಗಳ ಹಿಂದೆ ೬೦ ವರ್ಷ ವಯಸ್ಸು ದಾಟಿದವರಿಗೆ ಹೃದಯಘಾತ ಆಗುತ್ತಿತ್ತು. ಮಕ್ಕಳು ತಂದೆತಾಯಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಇಂದು ತಂದೆತಾಯಂದಿರು ತಮ್ಮ ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಲು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಬಹಳ ನೋವಿನ ಸಂಗತಿ. ಮನಸ್ಸಿಗೆ ಬಹಳ ಬೇಸರವಾಗುತ್ತದೆ.
ಕೋಪ ಮಾಡಿಕೊಂಡರೆ ಹೃದಯದ ಬಡಿತ ಹೆಚ್ಚಾಗುತ್ತದೆ. ರಕ್ತದ ಒತ್ತಡ ಹೆಚ್ಚಾಗುತ್ತದೆ. ನೀವು ಶಾಂತಿಯಿಂದ ಇದ್ದರೆ ನಿಮ್ಮ ಬಿ.ಪಿ. ೧೨೦/೮೦ ಇರುತ್ತದೆ. ಅಂದರೆ ಸಾಮಾನ್ಯವಾಗಿರುತ್ತದೆ. ಎರಡು ನಿಮಿಷ ನೀವು ಕೋಪದಲ್ಲಿರಿ ಆಗ ನಿಮ್ಮ ಬಿ.ಪಿ.ಯಲ್ಲಿ ಏರಿಳಿತಗಳಾಗುತ್ತವೆ. ಅದು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೆಮ್ಮದಿಯಂತು ಮೊದಲೇ ಹೋಗುತ್ತದೆ ಆದರೆ ಪ್ರಾಣವೂ ಹೋಗಬಹುದು.
ಕೋಪ ಬಂದರೆ ತಕ್ಷಣ ನೀರು ಕುಡಿಯಿರಿ. ಸ್ವಲ್ಪ ಸಮಾಧಾನವಾಗುತ್ತದೆ. ಆ ಸ್ಥಳದಿಂದ ಹೊರಟು ಹೋಗಿ. ಕೋಪವೆಂಬ ದುಃಖವನ್ನು ನಿಮ್ಮ ನಂಬಿಕಸ್ಥರ ಜೊತೆ ಹೇಳಿಕೊಳ್ಳಿ. ನಾಲ್ಕು ಸಮಾಧಾನದ ಮಾತುಗಳನ್ನು ಹಿರಿಯರಿಂದ ಕೇಳಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಕಾಲ ಬದಲಾಗುತ್ತದೆ. – ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.