(www.vknews.in) ; ಎಪ್ಪತ್ತರ ದಶಕದ ದಂತ ಚಿಕಿತ್ಸೆಗೂ ಈಗಿನ ದಂತ ಚಿಕಿತ್ಸೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ದಂತ ಚಿಕಿತ್ಸಾ ಪದ್ಧತಿ ಸೌಂದರ್ಯ ವರ್ದಕ ವಿಚಾರಕ್ಕೆ ಹೆಚ್ಚು ಒತ್ತು ನೀಡುತ್ತದೆ. ಹಿಂದೆ ಕೇವಲ ನೋವು ನಿವಾರಣಾ ಚಿಕಿತ್ಸಾ ಪದ್ಧತಿಯಾಗಿ ಬಳಸಲಾಗುತ್ತಿತ್ತು. ಆದರೆ ವೃತ್ತಿಯ ರಾಜ ಧರ್ಮ, ಸೇವಾ ತತ್ವರತೆ ಮತ್ತು ವೈದ್ಯರ ಬದ್ಧತೆ ಈಗಲೂ ಅದೇ ರೀತಿಯಲ್ಲಿ ಮುಂದುವರಿಯುತ್ತಿರುವುದು ಸಂತಸದ ವಿಚಾರ. ವೈದ್ಯರ ಬದ್ಧತೆ ಮತ್ತು ರೋಗಿಗಳ ಬಗೆಗಿನ ಕಾಳಜಿ ಬದಲಾಗಬಾರದು. ಹಾಗಾದರೆ ರೋಗಿ ವೈದ್ಯರ ನಡುವಿನ ಸಂಬಂಧ ಹಳಸಿ ಹೋಗುತ್ತದೆ ಮತ್ತು ದಂತ ಚಿಕಿತ್ಸೆಯ ವ್ಯಾಪಾರೀಕರಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆಗೆಲ್ಲಾ ಊರಿಗೊಬ್ಬನೇ ದಂತ ವೈದ್ಯರಿದ್ದರೆ, ಈಗ ಊರಿನ ತುಂಬಾ ದಂತ ವೈದ್ಯರು ತುಂಬಿದ್ದಾರೆ. ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಗುಣಮಟ್ಟದ ದಂತ ಚಿಕಿತ್ಸೆ ಎಲ್ಲರಿಗೂ ದೊರಕುತ್ತಿರುವುದು ಸಮಾದಾನಕರ ಸಂಗತಿ ಎಂದು ಕಾಸರಗೋಡಿನ ನಿವೃತ್ತ ಹಿರಿಯ ದಂತ ವೈದ್ಯರಾದ 87ರ ಹರೆಯದ ಡಾ|| ಗಣಪತಿ ಭಟ್ ಕುಳಮರ್ವ ಅಭಿಪ್ರಾಯ ಪಟ್ಟರು. ದಂತ ವೈದ್ಯರ ದಿನದಂದು ತಮಗೆ ದೊರೆತ ಸನ್ಮಾನವನ್ನು ಸ್ವೀಕರಿಸಿ ಅವರು ಕಿರಿಯ ದಂತ ವೈದ್ಯರಿಗೆ ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿದ ಇನ್ನೋರ್ವ ಅತಿಥಿ ಡಾ|| ಸುಬ್ರಾಯ ಮೊಗ್ರ ಅವರು ಮಾತನಾಡಿ, ದಂತ ವೈದ್ಯರು ಕಾಲ ಕಾಲಕ್ಕೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಕಾಲ ಬದಲಾದಂತೆ, ಚಿಕಿತ್ಸೆಯ ಸ್ವರೂಪ ಬದಲಾಗುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ದೈನಂದಿನ ದಂತ ಚಿಕಿತ್ಸೆಗೆ ಬಳಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರಕಲು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಹಿರಿಯ ವೈದ್ಯ ಡಾ|| ಕೃಷ್ಣ ಭಟ್ ಗಂಗರ ಮಜಲು ಅವರು ಮಾತನಾಡಿ, ಹಲ್ಲುನೋವಿನ ರೋಗಿಗಳು ನರಳಿಕೊಂಡು ಬಂದಾಗ ಅತ್ಯಂತ ಪ್ರೀತಿಯಿಂದ, ಮಾತನಾಡಿ, ನೋವಿಲ್ಲದೆ ಹಲ್ಲನ್ನು ಕೀಳತಕ್ಕದ್ದು. ಹಾಗೆ ಮಾಡಿದಲ್ಲಿ ರೋಗಿಯ ನೋವು ಶಮನವಾಗಿ ರೋಗಿಗೆ ವೈದ್ಯರ ಮೇಲೆ ಅಪರಿಮಿತ ಗೌರವ ಬರುತ್ತದೆ. ಪ್ರತಿ ರೋಗಿಯಲ್ಲಿಯೂ ದೇವರನ್ನು ಕಾಣಬೇಕು ಎಂದು ಹಿತ ನುಡಿ ನುಡಿದರು. ಖ್ಯಾತ ಬಾಯಿ ಮುಖ ಶಸ್ತ್ರ ಚಿಕಿತ್ಸಕ ಡಾ|| ಸಂಪತ್ತಿಲ ಮಹಾಲಿಂಗ ಶರ್ಮ ಅವರು ಮಾತನಾಡಿ ದಂತ ಚಿಕಿತ್ಸೆಯಲ್ಲಿ ಹೊಸತನವನ್ನು ಅಳವಡಿಸಿ ಕೊಂಡು ರೋಗಿಗೆ ಪರಿಪೂರ್ಣ ಚಿಕಿತ್ಸೆ ಮಾಡಬೇಕು. ದಂತ ವೈದ್ಯರುಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ದಿನಾಂಕ 06-03-2023ನೇ ಸೋಮವಾರದಂದು ಸಂಜೆ 7 ಗಂಟೆಯಿಂದ 9 ರವರೆಗೆ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣದಲ್ಲಿ ಹಿರಿಯ ದಂತ ವೈದ್ಯರಿಗೆ ಸನ್ಮಾನ ಮತ್ತು ದಂತ ವೈದ್ಯರ ದಿನಾಚರಣೆ ನಡೆಯಿತು. ಹವ್ಯಕ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು, ಮಂಗಳೂರು ಹವ್ಯಕ ಸಭಾ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯೇನಪೋಯ ದಂತ ಕಾಲೇಜಿನ ಡೀನ್ ಡಾ|| ಶ್ಯಾನ್ ಭಟ್ ಅರಮನಡ್ಕ ಭಾಗವಹಿಸಿದ್ದರು. ಮಂಗಳೂರು ಹವ್ಯಕ ಸಭಾದ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ಜರುಗಿತು. ಡಾ|| ಶ್ಯಾಮ್ ಭಟ್ ಅರಮನಡ್ಕ ಅವರು ಬದಲಾಗುತ್ತಿರುವ ದಂತ ಚಿಕಿತ್ಸೆ ಮತ್ತು ದಂತ ವೈದ್ಯರ ಸವಾಲುಗಳು ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ದಂತ ವೈದ್ಯರಾದ ಡಾ|| ಗಣಪತಿ ಭಟ್ ಕುಳಮರ್ವ, ಡಾ|| ಕೃಷ್ಣ ಭಟ್ ಗಂಗರ ಮಜಲು, ಡಾ|| ಸುಬ್ರಾಯ ಮೊಗ್ರ (ವಕ್ರ ದಂತ ತಜ್ಞರು), ಡಾ|| ಮಹಾಲಿಂಗ ಶರ್ಮ ಸಂಪತ್ತಿಲ (ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು), ಡಾ|| ಗಣಪತಿ ಭಟ್ ಕುಡುಪು, ಡಾ|| ಶ್ರೀ ಕೃಷ್ಣ ಖಂಡಿಗೆ ಇವರುಗಳಿಗೆ ಸನ್ಮಾನ ನಡೆಸಲಾಯಿತು. ಆದೀಷ್ಟನ್ ಫೌಂಡೇಷನ್, ಪಾರ್ವತಿ ಪ್ರಾಪಟೀಸ್ ಮತ್ತು ಓರಾಮಾಕ್ಸ್ ಇಮೇಜಿಂಗ್ ಇವರ ಪ್ರಾಯೋಜಕತ್ವದಲ್ಲಿ ಈ ಸಮಾರಂಭ ಜರುಗಿತು. ಮಂಗಳೂರು ನಗರದ ಸುಮಾರು 35 ಮಂದಿ ದಂತ ವೈದ್ಯರು ಈ ಸಮಯದಲ್ಲಿ ಹಾಜರಿದ್ದರು.
ದ.ಕ ಕಾಸರಗೋಡು ಹವ್ಯಕ ಮಹಾಸಭಾ ಇದರ ಅಧ್ಯಕ್ಷರಾದ ನಿಡುಗಳ ಕೃಷ್ಣ ಭಟ್ ಮತ್ತು ಹವ್ಯಕ ವಿವಾಹ ವೇದಿಕೆ ಸಂಚಾಲಕಿ ಶ್ರೀಮತಿ ಗೀತಾ ಗಣೇಶ್ ಉಪಸ್ಥಿತರಿದ್ದರು. ಹವ್ಯಕ ಸಭಾ ಮಂಗಳೂರು ಇದರ ಕೋಶಾಧಿಕಾರಿ ಶ್ರೀ ವಸಂತ ಚಂದ್ರ ಅವರು ಸ್ವಾಗತಿಸಿದರು. ಶ್ರೀ ಸುಬ್ರಾಯ ಭಟ್ ವಂದಿಸಿದರು. ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.