ಶಿಡ್ಲಘಟ್ಟ, (ವಿಶ್ವ ಕನ್ನಡಿಗ ನ್ಯೂಸ್) ; ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಶಿಡ್ಲಘಟ್ಟ ತಾಲೂಕಿನಲ್ಲಿ 487 ಮತದಾರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಬಿ ಎನ್ ಸ್ವಾಮಿ ಹೇಳಿದರು.
ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಚುನಾವಣೆ ಅಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಈಗಾಗಲೇ 487 ಮತದಾರರ ಪೈಕಿ 364 ಮತದಾರರಿಗೆ ಮತದಾನದ ಚೀಟಿಯನ್ನು ಹಂಚಿಕೆ ಮಾಡಲಾಗಿದೆ ಎಂದರು.
ಇನ್ನೂ ಬಾಕಿ ಉಳಿದಿರುವ ಮತದಾರರಿಗೆ ಮತದಾನದ ಚೀಟಿಯನ್ನು ಆಯಾ ಬಿಎಲ್ಒಗಳಿಗೆ ನೀಡಲಾಗಿದ್ದು ಕೂಡಲೇ ಅದನ್ನು ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು.
ಜೂನ್ 03 ರಂದು ನಡೆಯುತ್ತಿರುವ ಚುನಾವಣೆಗೆ ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಮತದಾನದ ಕೇಂದ್ರವನ್ನು ತೆರೆಯಲಾಗಿದ್ದು ಮತದಾರರು ಯಾವುದೇ ಆಸೆ ಆಮಿಷಗಳಿಗೆ ಮರುಳಾಗದೆ ನಿರ್ಭೀತಿಯಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ವಿನಂತಿಸಿದರು.
ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದ್ದು ಒಟ್ಟು 487 ಮತದಾರರ ಪೈಕಿ 272 ಪುರುಷರು ಹಾಗೂ 215 ಮಹಿಳಾ ಮತದಾರರಿದ್ದು ಎಲ್ಲರೂ ಮತ ಚಲಾಯಿಸಬೇಕೆಂದು ಕೋರಿದರು.
ಮತದಾರರಿಗೆ ಮತದಾನದ ಕೇಂದ್ರವನ್ನು ಸುಲಭವಾಗಿ ಪತ್ತೆಹಚ್ಚುವ ಸಲುವಾಗಿ ಈ ಬಾರಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದ್ದು ಮತದಾರರು ತಮ್ಮ ಮೊಬೈಲ್ ಫೋನ್ಗಳ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮತದಾನದ ಕೇಂದ್ರವನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದರು.
ವರದಿ : ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.