(www.vknews.in) : ಖ್ಯಾತ ಶಿಲ್ಪಿ ತಾರಹ್ ರಿಂದ ನಿರ್ಮಾಣವಾದ ಎಲ್ಲಾ ವಿಗ್ರಹಗಳು ನೂರಕ್ಕೆ ನೂರು ನಮ್ರೂದನ ರೂಪದ್ದಾಗಿತ್ತು. ಇದರಿಂದ ದಿನದಿಂದ ದಿನಕ್ಕೆ ಆರಾಧಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಒಂದು ದಿನ ನಮ್ರೂದನು ತನ್ನ ಸಿಂಹಾಸನದಲ್ಲಿ ಕುಳಿತಿರುವಾಗ ಸಿಂಹಾಸನವು ತನ್ನಷ್ಟಕ್ಕೇ ಕಂಪಿಸಿತು. ಅಲ್ಲದೆ “ಇಬ್ರಾಹೀಮನ ಅಲ್ಲಾಹನಲ್ಲಿ ವಿಶ್ವಾಸವಿಡದವನಿಗೆ ಪರಾಭವವಿದೆ” ಎಂಬ ಒಂದು ಅಗೋಚರ ಶಬ್ದ ಕೂಡ ಕೇಳಿಸಿತು. ಆಗ ಅಲ್ಲೇ ಹತ್ತಿರದಲ್ಲಿ ಕುಳಿತಿದ್ದ ನಮ್ರೂದನ ಆಪ್ತ ಮತ್ತು ಪ್ರಧಾನಮಂತ್ರಿ ತಾರಹ್ ರಲ್ಲಿ ನಮ್ರೂದನು ಕೇಳಿದನು. “ಈಗ ನಿನಗೇನಾದರೂ ಶಬ್ದ ಕೇಳಿತಾ?” ಆಗ ಆವರು “ಹೌದು ಕೇಳಿತು. ಆದರೆ ಆ ಇಬ್ರಾಹೀಮ್ ಯಾರೆಂದು ನನಗೆ ಗೊತ್ತಿಲ್ಲ” ಎಂದರು.
ಇದರಿಂದ ಬಹಳ ಭಯಭೀತನಾದ ನಮ್ರೂದನು ಕೂಡಲೇ ಬಹಳ ಪ್ರಸಿದ್ದರಾದ ಕೆಲವು ಜ್ಯೋತಿಷ್ಯರನ್ನು ಸಮೀಪಿಸಿ ಸತ್ಯಾಂಶ ಕೇಳಿ ತಿಳಿಯಲು ಕೆಲವು ದೂತರನ್ನು ಕಳುಹಿಸಿದರೂ ಯಾರಿಂದಲೂ ಸರಿಯಾದ ಉತ್ತರ ಸಿಗದೆ ಮರಳಿದರು. ಬಳಿಕ ಇದೇ ಶಬ್ದ ಪಕ್ಷಿ, ಮೃಗ, ಸಸ್ಯ ಇತ್ಯಾದಿಗಳಿಂದಲೂ ಕೇಳ ತೊಡಗಿತು. ಅಲ್ಲದೆ ಒಂದು ದಿನ ಈತನಿಗೆ ತನ್ನ ಮಂತ್ರಿ ತಾರಹರ ಬೆನ್ನಿನಿಂದ ಒಂದು ಚಂದ್ರ ಹೊರಬಂದು ಅದರ ಪ್ರಕಾಶ ಭೂಮಿ ಮತ್ತು ಆಕಾಶದ ಮಧ್ಯೆ ಒಂದು ಗೋಪುರದಂತೆ ನಿಂತಿರುವ ಕನಸು ಕೂಡ ಬಿತ್ತು. ಮಾತ್ರವಲ್ಲ ಆ ವೇಳೆಯಲ್ಲಿ ಆರಾಧನಾಲಯದಲ್ಲಿದ್ದ ಎಲ್ಲಾ ವಿಗ್ರಹಗಳು ಸಂಪೂರ್ಣವಾಗಿ ತಲೆ ಕೆಳಗಾಗಿ ಬೀಳುತ್ತಲೇ ಇತ್ತು.
ಒಟ್ಟಿನಲ್ಲಿ ಇಂತಹಾ ಘಟನೆಗಳು ಮತ್ತು ಕನಸುಗಳು ನಿರಂತರವಾಗಿ ಮುಂದುವರಿದಾಗ ತನ್ನ ಆಡಳಿತ ವಲಯದಲ್ಲಿ ವಾಸವಾಗಿದ್ದ ಎಲ್ಲಾ ಕನಸು ವ್ಯಾಖ್ಯಾನ ಹೇಳುವವರನ್ನು, ನಕ್ಷತ್ರ ಶಾಸ್ತ್ರ ಬಲ್ಲವರನ್ನು ಅಂತೆಯೇ ಇತರ ಎಲ್ಲಾ ಗಣ್ಯ ಜ್ಯೋತಿಷ್ಯರನ್ನು ತನ್ನ ದರ್ಬಾರಿಗೆ ಹಾಜರುಪಡಿಸಿ ಅವರಲ್ಲಿ “ನೀವೆಲ್ಲರೂ ನನಗೆ ಈಗ ಬೀಳುತ್ತಿರುವ ಕನಸಿನ ಬಗ್ಗೆ ಮತ್ತು ನಡೆಯುತ್ತಿರುವ ಘಟನೆಯ ಬಗ್ಗೆ ಸರಿಯಾದ ವ್ಯಾಖ್ಯಾನ ಹೇಳದೆ ಮುಚ್ಚಿಟ್ಟರೆ ನಿಮ್ಮನ್ನು ಜೀವಂತವಾಗಿ ಕಾಡು ಮೃಗಗಳಿಗೆ ತಿನ್ನಲು ಕೊಡುತ್ತೇನೆ” ಎಂದು ಹೇಳಿ ಗದರಿಸಿದನು. ಆಗ ಅವರು “ನಿಮಗೆ ಬಹಳ ಆಪ್ತವಾಗಿರುವ ಒಬ್ಬರಿಂದ ಒಂದು ಮಗು ಹುಟ್ಟುವುದು. ಅವರಿಂದ ನಿಮ್ಮ ಅಧಿಕಾರ ಹೋಗಲಿದೆ. ಬಳಿಕ ಅವರು ಜನರೆಡೆಯಲ್ಲಿ ನಿಮಗಿಂತ ಪ್ರಚಾರ ಪಡೆಯುತ್ತಾರೆ” ಎಂದು ವ್ಯಾಖ್ಯಾನ ಹೇಳಿದರು.
ಇದನ್ನು ಕೇಳಿದಾಕ್ಷಣ ಆತ “ನನಗೆ ಬಹಳ ಹತ್ತಿರವಿರುವುದು ನನ್ನ ಮಗ ಕೂಶ್. ಆತನನ್ನು ಕೊಲ್ಲುತ್ತೇನೆ” ಎಂದು ಹೇಳಿ ಆತನನ್ನು ಕೊಂದನು. ಬಳಿಕ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಮುಗ್ಧ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಟ್ಟನು. ನಂತರ ಜ್ಯೋತಿಷ್ಯರಲ್ಲಿ “ನಾನು ಈಗ ಮಾಡಿದ ಕೆಲಸ ಹೇಗಾಗಿದೆ?” ಎಂದು ಕೇಳಿದನು. ಅದಕ್ಕೆ ಅವರು “ಈಗ ನೀವು ಕೊಂದ ಈ ಒಂದು ಲಕ್ಷ ಮಕ್ಕಳಲ್ಲಿ ಆತ ಇಲ್ಲ. ಅವನ ಜನನವಾಗಬೇಕಷ್ಟೇ” ಎಂದು ಉತ್ತರ ಕೊಟ್ಟರು. ಆಮೇಲೆ ಹುಟ್ಟುವ ಎಳೆ ಕೂಸುಗಳನ್ನು ಹುಟ್ಟಿದ ತಕ್ಷಣ ಒಂದೊಂದಾಗಿ ಕೊಲ್ಲಲು ಆಜ್ಞೆ ಹೊರಡಿಸಿದನು.
ಈ ವೇಳೆಯಲ್ಲಿ ವಿಗ್ರಹಗಳನ್ನು ನೋಡಿಕೊಳ್ಳುತ್ತಿರುವ ಜವಾಬ್ದಾರಿ ಇದ್ದ ತಾರಹರಿಗೆ ವಿಗ್ರಹಾರಾಧನೆ ಕೊಠಡಿಗೆ ಹೋಗುವಾಗಲೆಲ್ಲ ವಿಗ್ರಹಗಳು ಸಂಪೂರ್ಣವಾಗಿ ತಲೆ ಕೆಳಗಾಗಿ ಬಿದ್ದಿರುವುದು ಕಾಣುತ್ತಿತ್ತು. ಹೀಗೆಯೇ ಒಂದು ದಿನ ವಿಗ್ರಹಗಳೆಲ್ಲವೂ ತಲೆಕೆಳಗಾಗಿ ಬಿದ್ದಿರುವ ದೃಶ್ಯ ಕಂಡಾಗ ಭಯದಿಂದ ತಾರಹ್ರವರು ಪತ್ನಿಯ ಬಳಿ ಓಡಿ ಬಂದು ವಿವರ ತಿಳಿಸಿದರು. ಆಗ ಪತ್ನಿ ಹೇಳಿದರು. “ಅದು ಅಲ್ಲಿ ಇರಲಿ. ಈಗ ನನಗೆ ಋತುವಾಗದೆ ತುಂಬಾ ಸಮಯವಾಯಿತು. ನಿನ್ನೆ ಪುನಃ ಆಗಿದೆ. ಆದ್ದರಿಂದ ನೀವೀಗ ನನ್ನೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದರೆ ನಮಗೊಂದು ಮಗು ಹುಟ್ಟಬಹುದು” ಎಂದು. ಆಗ ಪತಿ ತಾರಹರು “ಅಂತಹಾ ವಿಷಯ ಈಗ ಮಾತನಾಡಬೇಡ. ಈಗ ಯಾವ ಸಂಪರ್ಕವೂ ತಾತ್ಕಾಲಿಕವಾಗಿ ಬೇಡ. ಅರಸ ನಮ್ರೂದನು ತಿಳಿದರೆ ನಮ್ಮ ಕತೆ ಮುಗಿಯಬಹುದು” ಎಂದು ಉತ್ತರ ಕೊಟ್ಟು ಅಲ್ಲಿಂದ ಹೆಗಲು ತಪ್ಪಿಸಿದರು.
ಸುಬ್ಹಾನಲ್ಲಾಹ್! ಅಷ್ಟರಲ್ಲಿ ಒಂದು ಅಗೋಚರ ವ್ಯಕ್ತಿಯಿಂದ ಒಂದು ಶಬ್ದ ಕೇಳಿಸಿತು. “ಓ ತಾರಹ್ರವರೇ, ಕೂಡಲೇ ತಮ್ಮ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರಿ. ಅದರಿಂದ ಒಂದು ಪ್ರಕಾಶ ಹೊರಬರಲಿದೆ” ಎಂದು. ಇದನ್ನು ಕೇಳಿದಾಕ್ಷಣ ಅವರು ಭಯದಿಂದ ಓಡತೊಡಗಿದರು. ಆಗ ಮಲಕೊಬ್ಬರು ಬಂದು ಅವರಲ್ಲಿ ಹೇಳಿದರು. “ಎಲ್ಲಿಗೆ ಓಡುತ್ತಿರುವುದು? ನಿಮ್ಮ ಬೆನ್ನಿನಲ್ಲಿರುವ ಪ್ರಕಾಶವನ್ನು ಕೂಡಲೇ ಪತ್ನಿಯೊಂದಿಗೆ ಸಂಪರ್ಕಿಸಿ ಹೊರ ಹಾಕಿ” ಎಂದು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.