(www.vknews.in) : ದಿನಾಂಕ:30-01-2022ನೇ ಭಾನುವಾರದಂದು ಸುರತ್ಕಲ್ ಸಮೀಪದ ಲೈಟ್ಹೌಸ್ ಬೀಚ್ನಲ್ಲಿ ಸುರತ್ಕಲ್ ಘಟಕ ಗೃಹರಕ್ಷಕ ದಳ ಇದರ ವತಿಯಿಂದ ಕಡಲ ತೀರದ ಸ್ವಚ್ಛತಾ ಅಭಿಯಾನ ಬೆಳಗ್ಗೆ 7 ರಿಂದ 9ರ ರವರೆಗೆ ನಡೆಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ದಿನನಿತ್ಯ ಕಡಲತೀರಕ್ಕೆ ವಿಹಾರಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಕಡಲ ತೀರವನ್ನು ಕಲುಷಿತಗೊಳಿಸುತ್ತಿರುವುದು ಬಹಳ ಖೇದಕರ ವಿಚಾರವಾಗಿದೆ. ವಾರಾಂತ್ಯದ ಮೋಜುಮಸ್ತಿಗೆ ಬರುವ ಯುವಕ, ಯುವತಿಯರು ಕಡಲತೀರದಲ್ಲಿ ಪ್ಲಾಸ್ಟಿಕ್ ಬಾಟಲ್, ಕವರ್ಗಳು ಮತ್ತು ಬಿಯರ್ ಬಾಟಲ್ಗಳನ್ನು ಎಸೆಯುವುದು ಅಕ್ಷಮ್ಯ ಅಪರಾಧ. ಕಡಲ ತೀರ ಎನ್ನುವುದು ತ್ಯಾಜ್ಯ ಗುಂಡಿಯಲ್ಲ. ಕಡಲತೀರವನ್ನು ಕಲುಷಿತಗೊಳಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸುರತ್ಕಲ್ ಗೃಹರಕ್ಷಕದಳ ಇದರ ಘಟಕಾಧಿಕಾರಿ ಶ್ರೀ ರಮೇಶ್ ಮತ್ತು ಸುರತ್ಕಲ್ ಘಟಕದ ಸುಮಾರು 20 ಮಂದಿ ಗೃಹರಕ್ಷಕರು ಈ ಅಭಿಯಾನದಲ್ಲಿ ಪಾಲ್ಗೊಂಡರು. ದ.ಕ. ಜಿಲ್ಲಾ ಗೃಹರಕ್ಷಕ ದಳ ನಿರಂತರವಾಗಿ ಕಳೆದ ಎರಡು ವರ್ಷಗಳಿಂದ ಸೋಮೇಶ್ವರ, ಉಳ್ಳಾಲ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು ಹೀಗೆ ಎಲ್ಲಾ ಬೀಚ್ಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡುತ್ತಿದ್ದು, ಕಡಲ ತೀರದ ಸ್ವಚ್ಛತೆಗೆ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವುದು ಇಲ್ಲಿ ಉಲ್ಲೇಖನೀಯ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.