ಕರ್ನಾಟಕದ ದಕ್ಷಿಣ ಕನ್ನಡದ ಉಪ್ಪಿನಂಗಡಿ ಪೆರಿಯಡ್ಕದ 25ರ ಹರೆಯದ ನೌಶಾದ್ ತಮ್ಮ ಕನಸಿನ ಪ್ರಯಾಣ ಮಕ್ಕಾದ ಸುಂದರ ಅನುಭೂತಿಯ ದಿನಗಳಿಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ಉಪ್ಪಿನಂಗಡಿಯಿಂದ ಜನವರಿ 2023 ರಂದು 8640 ಕಿಲೋಮೀಟರ್ಗಳಷ್ಟು ದೂರವಿರುವ ಸೌದಿ ಅರೇಬಿಯಾದ ಮಕ್ಕಾಕ್ಕೆ ಕಾಲ್ನಡಿಗೆಯ ಮೂಲಕ ಆರಂಭಿಸಿರುವ ನೌಶಾದ್ ಇದೀಗ 7800 ಕಿಲೋಮೀಟರ್ಗಳನ್ನು ಕ್ರಮಿಸಿ ಸೌದಿ ರಾಜಧಾನಿ ರಿಯಾದ್ ತಲುಪಿದ್ದು ತಮ್ಮ ಕನಸಿನ ಹಜ್ ಗಾಗಿ ತೆರಳಲು ಅವರು ಕಾಯುತ್ತಿದ್ದಾರೆ.
“ಹಜ್ಗಾಗಿ ಮಕ್ಕಾಕ್ಕೆ ನಡೆದುಕೊಂಡು ಹೋಗುವುದು ನನ್ನ ತಾಯಿಯ ಕನಸಾಗಿತ್ತು ಮತ್ತು ಅವರಿಗೆ ನಡಿಗೆಯ ಮೂಲಕ ಪ್ರಯಾಣ ಸುಲಭವಲ್ಲದ ಕಾರಣ, ಆ ಕನಸನ್ನು ನನ್ನದಾಗಿಸಿಕೊಂಡಿದ್ದೆ.ಕಠಿಣ ಪರಿಶ್ರಮದ ಮೂಲಕ ಕನಸುಗಳನ್ನು ಸಾಧಿಸಬಹುದು ಎಂದು ಯುವಕರನ್ನು ಪ್ರೇರೇಪಿಸಲು ಬಯಸುತ್ತೇನೆ” ಎಂದು ನೌಶಾದ್ ಸಂತಸ ಹಂಚಿಕೊಂಡಿದ್ದಾರೆ ಮತ್ತು ತನ್ನ ಹಿಂದಿನ ಪ್ರೇರಕ ಶಕ್ತಿ ತಾಯಿ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ .
ಹಾಗೆಂದು ,ಈ ಸಾಹಸಮಯ ನಡಿಗೆಯನ್ನು ತನ್ನ ಕನಸಾಗಿಸಿ ನಡೆದ ನೌಶಾದ್ ಹಾದಿ ಸುಗಮವಾಗಿರಲಿಲ್ಲ. 2021 ರಲ್ಲಿ ಕರ್ನಾಟಕದಿಂದ ಕಾಶ್ಮೀರದವರೆಗೆ 3500 ಕಿಲೋಮೀಟರ್ಗಳನ್ನು ಕ್ರಮಿಸುವ ಮೂಲಕ ದಕ್ಕಿಸಿಕೊಂಡ ಆತ್ಮವಿಶ್ವಾಸ ಇವರಿಗೆ ಮಕ್ಕಾದಂತಹ ಸುದೀರ್ಘ ಯಾನಕ್ಕೆ ಮಾನಸಿಕವಾಗಿಯೂ ,ದೈಹಿಕವಾಗಿಯೂ ಅಪಾರ ಧೈರ್ಯ ತಂದಿಟ್ಟಿತು. ಭಾರತದಲ್ಲಿ ಸಂಚರಿಸುದಕ್ಕೂ , ವಿದೇಶಗಳಲ್ಲಿ ಸಂಚರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದನ್ನು ಅರಿತು ಕೊಂಡೇ ಸಾಗಿದ್ದ ನೌಶಾದ್ ರಿಗೆ ವಿದೇಶಗಳಲ್ಲಿ ಅಲ್ಲಿನ ವೀಸಾ,ವೈವಿಧ್ಯಮಯ ಹವಾಮಾನ, ವಿವಿಧ ಕಾನೂನು ಪಾಲಿಸುವಿಕೆ ಹೀಗೆ ವಿವಿಧ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿತ್ತು. ಹವಾಮಾನ ವೈಪರೀತ್ಯ ಮತ್ತು ಭದ್ರತಾ ಕಾಳಜಿಯಿಂದಾಗಿ ಅಧಿಕಾರಿಗಳು ಪಾಕಿಸ್ತಾನದಿಂದ ಓಮನ್ಗೆ ವಿಮಾನವನ್ನು ತೆಗೆದುಕೊಳ್ಳಲು ಸಲಹೆ ನೀಡಿದರು.
ಉಮ್ರಾ ವೀಸಾದಲ್ಲಿ ಸದ್ಯ ವಾಸ್ತವ್ಯ ಹೂಡಿರುವ ಇವರು, ಹಜ್ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದು ಇದು ಪುರಸ್ಕಾರಗೊಳ್ಳುವ ಆಶಾವಾದ ಹೊಂದಿದ್ದಾರೆ. ತನ್ನ ಕನಸಿನ ಹೆಜ್ಜೆಗಳು ನನಸಾದ ಸಂಭ್ರಮದಲ್ಲಿರುವ ನೌಶಾದ್, ಹಜ್ ಎಂಬ ಅನುಭೂತಿಯನ್ನು ಅನುಭವಿಸುವ ಸುವರ್ಣ ಸಂದರ್ಭಕ್ಕೆ ಕಾಯುತ್ತಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.