ರಿಯಾದ್ (www.vknews. in) : ಖಿದ್ಮಾ ಫೌಂಡೇಶನ್(ರಿ) ಕಳೆದ ಹತ್ತು ವರ್ಷಗಳಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಸಮಾಜ ಸೇವೆ ಹಾಗೂ ಸಮುದಾಯದ ಸಬಲೀಕರಣದ ಉದ್ದೇಶದೊಂದಿಗೆ ಕಾರ್ಯಾಚರಿಸುತ್ತಿದೆ. ಬಡತನ ನಿರ್ಮೂಲನೆ, ಮನೆ ನಿರ್ಮಾಣ, ಶಿಕ್ಷಣ ಮತ್ತು ತರಬೇತಿ, ವೈದ್ಯಕೀಯ ನೆರವು, ಸರ್ಕಾರಿ ಸೌಲಭ್ಯ ಕಲ್ಪಿಸುವುದು, ಸ್ವಯಂ ಉದ್ಯೋಗ ಇಂತಹಾ ಹಲವಾರು ಕಾರ್ಯಕ್ರಮಗಳ ಮತ್ತು ಜಾಗೃತಿ ಅಭಿಯಾನಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದೆ.
ಖಿದ್ಮಾ ಫೌಂಡೇಶನ್ ಸೌದಿ ಅರೇಬಿಯದ ರಿಯಾದ್ ಘಟಕದ ವತಿಯಿಂದ ಐತಿಹಾಸಿಕ 6 ನೇ ವಾರ್ಷಿಕ ಕುಟುಂಬ ಸಮ್ಮಿಲನ ಮತ್ತು 10 ನೇ ವಾರ್ಷಿಕೋತ್ಸವ ಸಮಾರಂಭವನ್ನು ‘KF FEST-2024’ ಎಂಬ ವಿಷಯದ ಮೂಲಕ ರಿಯಾದ್ನ ಅಲ್ ಮನಾಖ್ ಸಭಾಂಗಣದಲ್ಲಿ ಇತ್ತಿಚೆಗೆ ನಡೆಯಿತು. ಹಾಫಿಝ್ ನಸ್ರುಲ್ಲಾ ಕಪ್ತಿಯವರ ಕುರಾನ್ ಪಠಣದೊಂದಿಗೆ ಸಮಾರಂಭ ಪ್ರಾರಂಭವಾಯಿತು.
ಖಿದ್ಮಾ ಫೌಂಡೇಶನ್ ರಿಯಾದ್ ಘಟಕದ ಅಧ್ಯಕ್ಷರಾದ ಅಬ್ದುಲ್ ಸಲಾಂ ಮೌಲಾನಾ ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಸಂಘಟನೆ ನಡೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿದರು. ಖಿದ್ಮಾ ಫೌಂಡೇಶನ್ ನ ಯೋಜನೆ, ಗುರಿಗಳು ಮತ್ತು ಸಾಧನೆಗಳನ್ನು ವಿಡಿಯೋ ದೃಶ್ಯಾವಳಿಗಳ ಮೂಲಕ ಪ್ರಸ್ತುತಪಡಿಸಲಾಯಿತು. ಮುಖ್ಯ ಅತಿಥಿ ಸೌದಿ ಇಂಡಿಯನ್ ಹೆಲ್ತ್ಕೇರ್ ಫೋರಂ, ರಿಯಾದ್ ನ ಉಪಾಧ್ಯಕ್ಷ ಡಾ. ಸೈಯದ್ ಅನ್ವರ್ ಖುರ್ಷೀದ್ ರವರು ತಮ್ಮ ಭಾಷಣದಲ್ಲಿ ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಿದ್ಮಾ ಫೌಂಡೇಶನ್ ರಿಯಾದ್ ಘಟಕದ ಚೇರ್ಮನ್ ಫಝ್ಲು ರೆಹಮಾನ್ ಕೋಲ್ಕಾರ್ ವಹಿಸಿದ್ದರು, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸೌದಿಯಲ್ಲಿ ನೆಲೆಸಿರುವ ಭಾರತೀಯರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಸಮುದಾಯವನ್ನು ಒಗ್ಗೂಡಿಸಲು ಮತ್ತು ಅವರ ಭಿನ್ನಾಭಿಪ್ರಾಯಗಳನ್ನು ಕಡೆಗಣಿಸಲು ಒತ್ತಾಯಿಸಿದರು, ಕುಟುಂಬ ಸಂಬಂಧಗಳನ್ನು ಬಲಪಡಿಸಲು ಪ್ರೋತ್ಸಾಹಿಸಿದರು. ಜೊತೆ ಕಾರ್ಯದರ್ಶಿ ಮೊಹಮ್ಮದ್ ಮುಝಕ್ಕಿರ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಖ್ ವಂದಿಸಿದರು. ಸಂಘಟನೆಯ ಹೊಣೆಗಾರರು, ಸದಸ್ಯರು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಪುರುಷರು ಮತ್ತು ಮಕ್ಕಳಿಗಾಗಿ ಕ್ರಿಕೆಟ್, ಹಗ್ಗಜಗ್ಗಾಟ, ಫುಟ್ಬಾಲ್, ಲೆಮನ್ ವಿತ್ ಸ್ಪೋನ್ ಮುಂತಾದ ಆಟಗಳು ಮತ್ತು ಮಹಿಳೆಯರಿಗಾಗಿ ವಿಶೇಷ ಆಟಗಳು ಆಯೋಜಿಸಲಾಗಿತ್ತು, ಅದೇ ರೀತಿ ರಸಪ್ರಶ್ನೆ ಸ್ಪರ್ಧೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಮತ್ತು ಪುರುಷರಿಗಾಗಿ ಲಕ್ಕಿ ಡ್ರಾಗಳನ್ನು ಸಹ ಏರ್ಪಡಿಸಲಾಗಿತ್ತು.
ವಿಜೇತರು ಅಮೂಲ್ಯವಾದ ಬಹುಮಾನಗಳನ್ನು ಮತ್ತು ಬಂಪರ್ ಬಹುಮಾನಗಳನ್ನು ಪಡೆದರು. ತದನಂತರ ಸಭಿಕರು ಅತ್ಯುತ್ತಮ ರುಚಿಕರವಾದ ಆಹಾರ, ಸಿಹಿತಿಂಡಿಗಳು ಮತ್ತು ಹಣ್ಣು ಹಂಪಲುಗಳನ್ನು ಆನಂದಿಸಿದರು. ಎಲ್ಲಾ ಸ್ವಯಂಸೇವಕರು ಕಠಿಣ ಪರಿಶ್ರಮ, ಸಿದ್ಧತೆ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಎಲ್ಲಾ ಸಂಘಸಂಸ್ಥೆಗಳು ಬೆಂಬಲ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.