(vknews.in): ಹಜ್ರತ್ ಇಮಾಮ್ ಹುಸೇನ್ ರವರ ಸವಾರಿ ಒಂದು ದಾರಿಯಲ್ಲಿ ಸಾಗುತ್ತಿತ್ತು. ಆ ದಾರಿಯ ಬದಿಯಲ್ಲಿ ಬಡ ಭಿಕ್ಷುಕರ ಒಂದು ಗುಂಪು ಕುಳಿತು ಊಟ ಮಾಡುತ್ತಿದ್ದರು. ಇಮಾಮ್ ಹುಸೇನರನ್ನು ನೋಡಿದಾಕ್ಷಣ ಅವರು ಬನ್ನಿ ಊಟ ಮಾಡೋಣವೆಂದು ಕರೆದರು. ಸಹಸ್ರಾರು ಜನರ ಪ್ರೀತಿಗೆ ಒಡೆಯನಾಗಿದ್ದ ಹಜ್ರತ್ ಇಮಾಮ್ ಹುಸೇನ್ ತಕ್ಷಣ ತನ್ನ ಕುದುರೆಯಿಂದ ಇಳಿದು ಅವರ ಜೊತೆ ಕುಳಿತು ಒಂದು ರೊಟ್ಟಿಯ ತುಂಡನ್ನು ತಿಂದರು. ನಾನು ಇಮಾಮ. ನೀವು ಬಡಜನಾಂಗ ಎಂಬ ಅಹಂ ತೋರಲಿಲ್ಲ. ನನ್ನ ಜೊತೆ ಕುಳಿತು ನೀವು ಊಟ ಮಾಡಲು ಅರ್ಹರಿಲ್ಲ ಎಂದು ಹೇಳಲಿಲ್ಲ. ನನಗೆ ಊಟಕ್ಕೆ ಕರೆಯಲು ನಿಮಗೆ ಎಷ್ಟು ಧೈರ್ಯ ಎಂದು ಕೇಳಲಿಲ್ಲ. ಅವರ ಬಟ್ಟೆ ಮತ್ತು ಅವಸ್ಥೆಯನ್ನು ನೋಡಿ ಅವರ ಅಂತಸ್ತಿನ ಲೆಕ್ಕ ಹಾಕಲಿಲ್ಲ. ಬಡವರ ಒಂದೇ ಕೂಗಿಗೆ ಥಟ್ಟನೆ ಕುದುರೆಯಿಂದ ಇಳಿದು ಅವರ ಜೊತೆ ಕುಳಿತುಕೊಂಡರು. ಅವರ ತಿನ್ನುತ್ತಿದ್ದ ತಿಂಡಿಯಲ್ಲಿ ಹುಳುಕು ಹುಡುಕಲಿಲ್ಲ. ಆ ತಿಂಡಿ ಎಷ್ಟು ದಿನಗಳದ್ದೋ ನೋಡಲಿಲ್ಲ. ಅದರ ರುಚಿಯ ಕಡೆ ಗಮನ ಕೊಡಲಿಲ್ಲ. ಜೊತೆಯಲ್ಲೇ ನೆಲದ ಮೇಲೆ ಕುಳಿತರು, ತಿಂಡಿ ತಿಂದರು. ನಂತರ ಅವರನೆಲ್ಲರನ್ನು ಕರೆದುಕೊಂಡು ಹೋಗಿ, ತನ್ನ ಮನೆಯಲ್ಲಿ ಹೊಟ್ಟೆ ತುಂಬ ಊಟ ಮಾಡಿಸಿದರು. ಸಮಾಜಕ್ಕೆ ಸಮಾನತೆ ಮತ್ತು ಪ್ರೀತಿಯ ಪಾಠ ಸಾರಿದರು. ಮೇಲು ಕೀಳು ಎಂಬ ಕಂದರಕ್ಕೆ ಜಾಗವೇ ಕೊಡಲಿಲ್ಲ.
ಇಂದಿನ ನಮ್ಮ ಸುತ್ತಮತ್ತಲ ಸಮಾಜದ ಕಡೆ ಕಣ್ಣು ಹಾಯಿಸಿದರೆ ನೂರಾರು ಹೃದಯಘಾತಕ ಘಟನೆಗಳು ಕಾಣಿಸಿಕೊಳ್ಳುತ್ತವೆ. ಜನರಲ್ಲಿ “ಅಸಾಮಾನತೆ” ಎಂಬ ರೋಗ ತಾಂಡವಾಡುತ್ತಿದೆ. ಜಾತಿ ವ್ಯವಸ್ಥೆ ನಮ್ಮ ಮನಸ್ಸುಗಳಲ್ಲಿ ಬೇರೂರಿದೆ. ಒಂದು ಶುಭ ಸಮಾರಂಭಕ್ಕಾಗಲಿ, ಮದುವೆಗಳಿಗಾಗಲಿ, ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎಂಬುದನ್ನು ಸಂಬಂಧಿಕರ ಸಂಪತ್ತು ನೋಡಿ ನಿರ್ಧರಿಸುತ್ತೇವೆ. ಬಡನೆಂಟರನ್ನು ಕರೆಯುವುದನ್ನು ಬೇಕಂತಲೇ ಮರೆತು ಬಿಡುತ್ತೇವೆ. ಸಂಬಂಧಿಕರನ್ನೇ ಲೆಕ್ಕಿಸದವರು ಪರರ ಬಗ್ಗೆ ಚಿಂತೆ ಮಾಡುತ್ತಾರೆಯೇ ?
ನಮ್ಮ ಮನಸ್ಸುಗಳು ಅಸೂಯೆಯಿಂದ ತುಂಬಿಕೊಂಡಿವೆ. ನಮಗೆ ಸರಿಸಮಾನರು ಯಾರೂ ಆಗಬಾರದು, ಸ್ನೇಹಿತರಾಗಲಿ, ನೆಂಟಸ್ಥರಾಗಲಿ, ಅಕ್ಕಪಕ್ಕದವರಾಗಲಿ ಎಲ್ಲಾ ರೀತಿಯಲ್ಲೂ ನಮ್ಮಿಂದ ಕೆಳಮಟ್ಟದಲ್ಲೇ ಇರಬೇಕು ಎಂಬುದನ್ನು ನಮ್ಮ ಒಳಮನಸ್ಸು ಬಯಸುತ್ತಿರುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಎಲ್ಲಾ ಸಾಮರ್ಥ್ಯ ನಮ್ಮ ಬಳಿ ಇದ್ದರೂ ಸಹಾಯ ಮಾಡಲು ಹೋಗುವುದಿಲ್ಲ. ಸಹಾಯ ಮಾಡಿ ಅವರು ಜೀವನದಲ್ಲಿ ಮುಂದೆಬಂದುಬಿಟ್ಟರೆ ನಮಗೆ ಸವಾಲ್ ಹಾಕುವವರಾಗಿ ಹೋಗುತ್ತಾರಲ್ಲ ಎಂಬ ಭಯ ಮತ್ತು ಅಸೂಯೆ.
ಕೋರ್ಟಿನಲ್ಲಿ ನಮ್ಮ ಒಂದು ಸಾಕ್ಷಿಯಿಂದ ವಿಧವೆಗೆ ಬರಬೇಕಾದ ಹಣ ಬರಬಹುದು ಆದರೆ ನಾವು ಹೋಗಲು ತಯಾರಿಲ್ಲ. ನಮ್ಮ ಒಂದು ಫೋನ್ ಕಾಲ್ ನಿಂದ ಒಬ್ಬ ಹುಡುಗನಿಗೆ ಕೆಲಸ ಸಿಗಬಹುದು ನಾವು ಸಹಾಯ ಮಾಡುವುದಿಲ್ಲ. ಆ ಹುಡುಗನ ಬಗ್ಗೆ ವಿಚಾರಿಸಿ ಹೇಳಿ, ನಮ್ಮ ಮಗಳಿಗೆ ಸಂಬಂಧ ಕೇಳುತ್ತಿದ್ದಾರೆ ಎಂದರೆ, ಆ ಹುಡುಗ ವ್ಯಸನಿ, ಒಳ್ಳೆಯವನಲ್ಲ ಎಂದು ಗೊತ್ತಿದ್ದರೂ, ಹುಡುಗ ಬಹಳ ಒಳ್ಳೆಯವನು ಎಂದು ಹೇಳಿ ಮಾಡುವೆ ಮಾಡಿಸಿ ಬಿಡುತ್ತಾರೆ. ನೆಂಟರು ಅಳುವುದನ್ನು ನೋಡಿದರೆ ಒಳಒಳಗೆ ಸಂತೋಷ ಪಡುತ್ತೇವೆ. ಒಂದು ಜಮೀನಿನಲ್ಲಿ ತಕರಾರಿದೆ ಎಂದು ಗೊತ್ತಿದ್ದರೂ, ಒಳಗುಟ್ಟು ಹೇಳದೆ ಟೋಪಿ ಹಾಕಿಸಿಬಿಡುತ್ತೇವೆ. ಪೊಲೀಸರಿಗೆ, ಗುಂಡಾಗಳಿಗೆ ಬುಕ್ ಮಾಡಿಕೊಂಡು ನಾವು ಯಾರನ್ನು ದ್ವೇಷಿಸುತ್ತೋವೋ ಅವರಿಗೆ ತೊಂದರೆಯನ್ನು ಕೊಡಿಸುತ್ತೇವೆ. ಪಾಪ ಆತನಿಗೆ ಇದರ ಬಗ್ಗೆ ಗೊತ್ತೇ ಆಗುವುದಿಲ್ಲ. ಮಂತ್ರವಾದಿಗಳ ಸಹಾಯ ಪಡೆದು ಕುತಂತ್ರಗಳನ್ನು ರೂಪಿಸುತ್ತೇವೆ. ಫೋನ್ ರೆಕಾರ್ಡಿಂಗ್, ವಿಡಿಯೋ ರೆಕಾರ್ಡಿಂಗ್ ಮಾಡಿ ಬ್ಲಾಕ್ ಮೇಲ್ ಮಾಡುತ್ತೇವೆ. ಸಂಬಂಧಗಳಲ್ಲಿ ಬಿರುಕು ಉಂಟು ಮಾಡಿ ಸಂತೋಷ ಪಡುತ್ತೇವೆ. ವ್ಯಾಪಾರ ಲಾಭದಾಯಕವಲ್ಲ ಎಂದು ಗೊತ್ತಿದ್ದರೂ, “ನನ್ ಮಗ ಸಾಯ್ಲಿ, ದುಡ್ಡು ಲಾಸ್ ಆಗ್ಲಿ, ತುಂಬಾ ಮೆರಿತಾವ್ನೆ, ಒಂದು ಗತಿ ಕಾಣಿಸ್ತೀನಿ” ಎಂದು ಮನಸಲ್ಲೇ ಹೇಳಿಕೊಂಡು ಸ್ಕೆಚ್ ಹಾಕುತ್ತೇವೆ. ನೂರಾರು ಸುಳ್ಳು ಹೇಳಿ ಬೋಗಸ್ ಪ್ರಾಡಕ್ಟ್ ಗಳನ್ನು ಮಾರುತ್ತೇವೆ. ನಿಮ್ಮ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಡೆದಿರಬಹುದು. ನೆನಪಿಸಿಕೊಳ್ಳುತ್ತಾ ಹೋಗಿ. ಕೆಲವರಿಗೆ ಕ್ಷಣಿಕ ಲಾಭವಾಗಿರಬಹುದು, ಸಂತೋಷವಾಗಿರಬಹುದು. ಕೆಲವರು ದುಃಖದ ಮಡುವಿನಲ್ಲಿ ತೇಲಿರಬಹುದು. ಕೆಲವರು ಸಮಯದ ಚಕ್ರವ್ಯೂಹ ಸೀಳಿ ಹೊರ ಬಂದಿರಬಹುದು. ಏನೇ ಇರಲಿ ಅಂತ್ಯವಂತು ಖಂಡಿತ.
ನಾವು ಏಕೆ ಹೀಗೆ ? ಅದಕ್ಕೆ ಮುಖ್ಯ ಕಾರಣ – ನಾವು ದೇವರನ್ನು ಹೆಸರಿಗೆ ಮಾತ್ರ ನಂಬುತ್ತೇವೆ. ಮನಸಾರೆ ಆತನನ್ನು ಪ್ರೀತಿಸಿದರೆ ಆತನ ಕಾನೂನನ್ನು ಸಹ ಮನಸಾರೆ ಒಪ್ಪಿಕೊಳ್ಳಬೇಕಾಗುತ್ತದೆ. ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ಧರ್ಮ ಸತ್ಯ. ಅದು ಎಂದೂ ತಪ್ಪು ಕೆಲಸಗಳಿಗೆ ಅನುವು ಮಾಡಿಕೊಡುವುದಿಲ್ಲ. ಹಜ್ರತ್ ಇಮಾಮ್ ಹುಸೇನ್ ಅದನ್ನೇ ಮಾಡಿದ್ದು. ತಮ್ಮ ಇಡೀ ಜೀವನ ಧರ್ಮವನ್ನು ಪಾಲಿಸಿದರು. ಸಂಕಷ್ಟದ ಸಮಯ ಬಂದಾಗ ಅಧರ್ಮವನ್ನು ಒಪ್ಪಲಿಲ್ಲ. ಸತ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದರು. ಇದನ್ನೇ ವ್ಯಕ್ತಿತ್ವ ವಿಕಸನದಲ್ಲಿ ಕ್ಯಾರೆಕ್ಟರ್ ಬಿಲ್ಡಿಂಗ್ ಎನ್ನುವುದು. ನನ್ನ ಜೀವನಶೈಲಿ, ಚಾರಿತ್ರ್ಯ ಧರ್ಮಕ್ಕೆ ತಲೆಬಾಗಿದರೆ, ಸುಳ್ಳು ಹೇಳಲು ಸಾಧ್ಯವೇ ಇಲ್ಲ. ಸುಳ್ಳು ಹೇಳದವರು ಮೋಸ ಮಾಡುತ್ತಾರೆಯೇ, ಪರರ ಸ್ವತ್ತು ಲಪಟಾಯಿಸುತ್ತಾರೆಯೇ, ಅನೈತಿಕ ಸಂಬಂಧಗಳನ್ನು ಬೆಳೆಸುತ್ತಾರೆಯೇ, ಬಡ್ಡಿ ವ್ಯಾಪಾರ ಮಾಡುತ್ತಾರೆಯೇ, ವ್ಯಸನಿಗಳಾಗುತ್ತಾರೆಯೇ, ಇಲ್ಲ. ನಮ್ಮ ಕರ್ಮಗಳಿಗೆ ದೇವರು ಸಾಕ್ಷಿಯಾಗಿದ್ದಾನೆ ಎಂಬ ನಂಬಿಕೆ ಇದ್ದರೆ, ಅಲ್ಲಿ ಹೊಣೆಗಾರಿಕೆ ಬರುತ್ತದೆ. ಸರಿ ತಪ್ಪು ಪ್ರತ್ಯೇಕಗೊಳ್ಳುತ್ತವೆ. ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎಂಬ ನಂಬಿಕೆ ಮನಸ್ಸಿನಲ್ಲಿದ್ದರೆ, ನಮ್ಮ ಕರ್ಮಗಳಿಗೆ ಲಂಗುಲಗಾಮು ಇರಲು ಸಾಧ್ಯವೇ ? – ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.